Independence Day 2024 ; ಲಗಾನ್ To ಮಂಗಲ್ ಪಾಂಡೆ, ದೇಶಪ್ರೇಮ ಬಡಿದೆಬ್ಬಿಸುವ ಅಮೀರ್ ಖಾನ್ ಚಿತ್ರಗಳು..!
ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಅಮೀರ್ ಖಾನ್. ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಅಮೀರ್ ಖಾನ್ ಅವರನ್ನು ಅವರ ಅಭಿಮಾನಿಗಳು ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಯುತ್ತಾರೆ. ಬಹುಶಃ ತಮ್ಮ ಪಾಡಿಗೆ ತಾವೂ ಇದ್ದು, ಕೇವಲ ಒಂದು ಚಿತ್ರದ ಮೂಲಕ ಸುದ್ದಿಯಾಗುವ ಕಲೆ ಅಮೀರ್ ಖಾನ್ಗಷ್ಟೇ ಗೊತ್ತು.
ಯಾಕೆಂದರೆ, ಬಾಲಿವುಡ್ ಒಂದು ಸಿದ್ಧ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಅಮೀರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು. ಇಂಥಾ ಅಮೀರ್ ಖಾನ್ ತಮ್ಮ ಸುಧೀರ್ಘ ವೃತ್ತಿ ಬದುಕಿನಲ್ಲಿ ದೇಶಪ್ರೇಮ ಮೆರೆಯುವ ಸಿನಿಮಾಗಳನ್ನು ಮಾಡಿದ್ದಾರೆ. ಆ ಪೈಕಿ ಆ ಕಾಲದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಲಗಾನ್ ಕೂಡ ಒಂದು.

ಹೌದು, 'ಲಗಾನ್' ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದವರು ಅಮೀರ್ ಖಾನ್. 'ಆಸ್ಕರ್' ಅಂಗಳಕ್ಕೆ ಕೂಡ ಹೋದ ಈ ಚಿತ್ರ ಅನೇಕ ಅಧ್ಯಯನಗಳಿಗೆ ವಸ್ತುವೂ ಆಯಿತು. ಇವತ್ತು ಕೂಡ 'ಲಗಾನ್' ಕಿರುತೆರೆಯಲ್ಲಿ ಬಂದಾಗೆಲ್ಲ ಕಣ್ಣಿನ ರೆಪ್ಪೆ ಅಲುಗಾಡಿಸದೇ ಈ ಚಿತ್ರವನ್ನು ನೋಡುವ ಒಂದು ವರ್ಗ ಇದೆ.
ಅಂದ್ಹಾಗೇ ಲಗಾನ್ ಚಿತ್ರಕ್ಕೂ ಮುನ್ನ ಆಮೀರ್ ಖಾನ್, 'ಸರ್ಫರೋಶ್' ಎಂಬ ಚಿತ್ರ ಮಾಡಿದ್ದರು. ಎಲ್ಲರು ಹೊರಟಿರುವ ದಾರಿಯಲ್ಲಿಯೇ ತಾವೂ ಹೋಗುವುದು ಬೇಡ ಎಂದು ಅಮೀರ್ ಖಾನ್ ನಿರ್ಧಾರ ಮಾಡಿದ್ದು ಈ ಚಿತ್ರದಿಂದಲೇ. 'ಲಗಾನ್' ಚಿತ್ರಕ್ಕೆ ಸಿಕ್ಕ ಗೆಲುವು ಈ ಚಿತ್ರಕ್ಕೆ ಸಿಕ್ಕಿಲ್ಲವಾದರೂ, ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಾ ಪ್ರೇಕ್ಷಕರ ಜೊತೆ ಸಿನಿಮಾ ವಲಯವನ್ನು ಈ ಚಿತ್ರದ ಮೂಲಕ ಬೆರಗುಗೊಳಿಸಿದವರು ಅಮೀರ್ ಖಾನ್.

ಇನ್ನೂ ಯಾವ ಇಮೇಜ್ಗೆ ಜೋತು ಬೀಳದೇ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಅಮೀರ್ ಖಾನ್, 'ರಂಗ್ ದೇ ಬಸಂತಿ' ಚಿತ್ರವನ್ನು ಒಪ್ಪಿಕೊಂಡಾಗ ಅಮೀರ್ ಖಾನ್ ಅವರ ಪತ್ನಿ ಕಿರಣ್ ರಾವ್ ಅವರೇ ಖುದ್ದು ತಕರಾರು ತೆಗೆದಿದ್ದರು. ಆದರೆ, ಅಮೀರ್ ಖಾನ್ ಅವರಿಗೆ ತಮ್ಮ ನಿಲುವು ಮತ್ತು ಆಯ್ಕೆಯ ಬಗ್ಗೆ ನಂಬಿಕೆ ಇತ್ತು. ಚಿತ್ರ ತೆರೆಗೆ ಬಂದಾಗ ಅದು ನಿಜವೂ ಆಯಿತು. ಪ್ರೇಕ್ಷಕರ ಮನ ಗೆಲ್ಲುವುದಲ್ಲದೇ ಚಿತ್ರ ಹತ್ತಾರು ದಾಖಲೆ ಬರೆಯಿತು. ದೇಶಪ್ರೇಮ ಬಡಿದೆಬ್ಬಿಸಿತು.
'ಸರ್ಫರೋಶ್', 'ಲಗಾನ್', 'ರಂಗ್ ದೇ ಬಸಂತಿ' ಮಾತ್ರವಲ್ಲ 'ಮಂಗಲ್ ಪಾಂಡೆ' ಚಿತ್ರವನ್ನೂ ಕೂಡ ಮಾಡಿದರು ಅಮೀರ್ ಖಾನ್. ಆದರೆ, ಸ್ವಾತಂತ್ರ್ಯ ಹೋರಾಟದ ಕತೆಯನ್ನು ಹೊಂದಿದ್ದ 'ಮಂಗಲ್ಪಾಂಡೆ - ದಿ ರೈಸಿಂಗ್' ಸಿನಿಮಾ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ವಿಫಲವಾಯಿತು. ಹಾಗಂಥ ಅಮೀರ್ ಖಾನ್ ಎದೆಗುಂದಲಿಲ್ಲ. ಕಾಲಾನು ನಂತರ 1795ರ ಕಾಲಘಟ್ಟದ ಸ್ವಾತಂತ್ರ್ಯ ಸಂಗ್ರಾಮದ ಸುತ್ತ ಹೆಣೆದ 'ಫಿಕ್ಷನ್' ಸಿನಿಮಾ 'ಥಗ್ಸ್ ಆಫ್ ಹಿಂದೂಸ್ತಾನ್' ಮಾಡಿದರು. ಆದರೆ, ಪೈರೇಟ್ಸ್ ಆಫ್ ಕೆರೆಬಿಯನ್ ಛಾಯೆ ಹೊಂದಿದ್ದ ಈ ಸಿನಿಮಾ ಕೂಡ ಸೋಲನ್ನು ಕಂಡಿತ್ತು.

ಹೀಗೆ ಕಾಲ ಕಾಲಕ್ಕೆ ದೇಶಪ್ರೇಮದ ಕಥೆಯನ್ನು ಹೊಂದಿರುವ ಚಿತ್ರಗಳನ್ನು ಮಾಡುತ್ತಾನೇ ಬಂದ ಅಮೀರ್ ಖಾನ್, 'ಸತ್ಯಮೇವ ಜಯತೇ' ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಾಮಾಜಿಕ ಸಮಸ್ಯೆಗಳ ಮೇಲೆ ಈ ಮೂಲಕ ಬೆಳುಕು ಚೆಲ್ಲುವ ಪ್ರಯತ್ನವನ್ನು ಮಾಡಿದರು. ಈ ಮೂಲಕ ಸ್ಟಾರ್ವೊಬ್ಬರಿಗೆ ಇರಬೇಕಾದ ಸಾಮಾಜಿಕ ಮುಖದ ಪರಿಚಯವನ್ನೂ ಮಾಡಿಸಿದರು.
ಇಷ್ಟೇ ಅಲ್ಲ ತಮ್ಮ ಸಮಕಾಲೀನರೆಲ್ಲ ರಿಯಾಲಿಟಿ ಶೋಗಳ ಮೂಲಕ ಚಾಲ್ತಿಯಲ್ಲಿರಲು ಹರಸಾಹಸ ಮಾಡುತ್ತಿದ್ದ ಸಮಯದಲ್ಲಿ ಅಮೀರ್ ಖಾನ್ ಮೇಧಾ ಪಾಟ್ಕರ್ ನೇತೃತ್ವದ 'ನರ್ಮದಾ ಬಚಾವೊ ಆಂದೋಲನ'ದಲ್ಲಿ ಭಾಗಿಯಾದರು. 'ಅಣ್ಣಾ ಹಜಾರೆ ಹೋರಾಟ'ಕ್ಕೆ ಜೈ ಎಂದರು. 'ಜನಲೋಕಪಾಲ್ ಜಾರಿಯಾಗಬೇಕು ಎಂದು ಒತ್ತಾಯಿಸಿದವರು ಅಮೀರ್ ಖಾನ್.


Click it and Unblock the Notifications











