Independence Day 2025: ದೇಶಭಕ್ತಿ ಸಾರುವ ಈ ಕನ್ನಡ ಚಿತ್ರಗಳನ್ನು ಮನೆಯಲ್ಲೇ ನೋಡಿ
ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಎಲ್ಲೆಲ್ಲೂ ಸಂಭ್ರಮಾಚರಣೆ ಮನೆ ಮಾಡಿದ್ದು ತ್ರಿವರ್ಣ ಧ್ವಜ ಹಾರಾಡುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ತ್ಯಾಗ ಹಾಗೂ ಬಲಿದಾನ ಸ್ಮರಿಸಲಾಗುತ್ತಿದೆ. ದೇಶಭಕ್ತಿ ಸಾರುವ ಕನ್ನಡ ಸಿನಿಮಾಗಳು, ಕನ್ನಡ ಗೀತೆಗಳನ್ನು ಜನ ನೆನಪು ಮಾಡಿಕೊಳ್ಳುತ್ತಿದ್ದಾರೆ.
ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ಹೇಗಿತ್ತು? ನಮ್ಮ ವೀರ ಯೋಧರು ಹೇಗೆ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು, ಸ್ವಾತಂತ್ರ್ಯ ನಂತರ ಕೂಡ ಗಡಿಯಲ್ಲಿ ನಮ್ಮ ಸೈನಿಕರು ಪ್ರಾಣದ ಹಂಗು ತೊರೆದು ಹೇಗೆ ದೇಶ ಕಾಯುತ್ತಿದ್ದಾರೆ ಎನ್ನುವ ವಿಚಾರಗಳನ್ನು ಸಿನಿಮಾಗಳಲ್ಲಿ ಕಣ್ಣಿಗೆ ಕಟ್ಟುವಂತೆ ಹೇಳಲಾಗಿದೆ. ಅಂತಹ ಸಿನಿಮಾಗಳು ಅಭೂತಪೂರ್ವ ಯಶಸ್ಸು ಕಂಡಿವೆ. ಇವತ್ತಿಗೂ ದೇಶಭಕ್ತಿ ಸಾರುವ ಸಿನಿಮಾಗಳು ನಿರ್ಮಾಣವಾಗುತ್ತಲೇ ಇದೆ.

ದಶಕಗಳ ಹಿಂದೆ ತೆರೆಕಂಡ ಇಂತಹ ದೇಶಭಕ್ತಿ ಸಿನಿಮಾಗಳನ್ನು ಇವತ್ತಿನ ತಲೆಮಾರಿನ ಕೆಲವರು ನೋಡಿರುವುದಿಲ್ಲ. ಆದರೆ ಉಚಿತವಾಗಿ ಅಂತಹ ಸಿನಿಮಾಗಳನ್ನು ಯೂಟ್ಯೂಬ್ನಲ್ಲಿ ವೀಕ್ಷಿಸಬಹುದಾಗಿದೆ. ಸಂಪೂರ್ಣ ಸಿನಿಮಾಗಳು ಯೂಟ್ಯೂಬ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ವೀರ ಸಿಂಧೂರ ಲಕ್ಷ್ಮಣ
ದರ್ಶನ್ ಹೀರೊ ಆಗಿ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಜೀವನಾಧರಿತ ಕಥೆಯನ್ನು ತೆರೆಗೆ ತರುವ ಪ್ರಯತ್ನಗಳು ನಡೀತಿದೆ. ಆದರೆ ದಶಕಗಳ ಹಿಂದೆಯೇ ಹುಣಸೂರು ಕೃಷ್ಣಮೂರ್ತಿಯವರು ಸಿಂಧೂರ ಲಕ್ಷ್ಮಣನ ಕಥೆಯನ್ನು ತೆರೆಗೆ ತಂದಿದ್ದರು. ಅವತ್ತಿನ ಕಾಲಕ್ಕೆ ಆತನ ಕಥೆ ನಾಟಕ ರೂಪದಲ್ಲಿ ಪ್ರದರ್ಶನ ಕಾಣುತ್ತಿತ್ತು. 1977ರಲ್ಲಿ ಇದನ್ನು ಸಿನಿಮಾ ಮಾಡಿದ್ದರು. ಬಸವರಾಜ್ ಚಿತ್ರದಲ್ಲಿ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದರು. ಕೆ. ಎಸ್ ಅಶ್ವಥ್, ಸುಧೀರ್ ಸೇರಿ ರಂಗಭೂಮಿ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದರು.

ಮುತ್ತಿನ ಹಾರ
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಮುತ್ತಿನ ಹಾರ' ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಲೀಡ್ ರೋಲ್ಗಳಲ್ಲಿ ನಟಿಸಿದ್ದರು. ಒಬ್ಬ ವೀರ ಸೈನಿಕನ ಕಥೆ ಚಿತ್ರದಲ್ಲಿದೆ. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಸೈನಿಕರು ದೇಶದ ಗಡಿಯನ್ನು ಕಾಯುತ್ತಿದ್ದಾರೆ. ಅಂತಹ ಸೈನಿಕರಿಗೆ ನಮನ ಸಲ್ಲಿಸುವಂತಹ ಸಿನಿಮಾ ಇದು. ಚಿತ್ರದಲ್ಲಿ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣು ನಟನೆ ಅದ್ಭುತವಾಗಿತ್ತು. ಹಂಸಲೇಖ ಸಂಗೀತ, ಸಾಹಿತ್ಯದ ಹಾಡುಗಳನ್ನು ಮರೆಯೋದಕ್ಕೆ ಸಾಧ್ಯವಿಲ್ಲ.
ವೀರಪ್ಪ ನಾಯ್ಕ
ಎಸ್. ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಮತ್ತೊಂದು ಅದ್ಭುತ ಸಿನಿಮಾ 'ವೀರಪ್ಪ ನಾಯ್ಕ'. ವಿಷ್ಣುವರ್ಧನ್ ಈ ಚಿತ್ರದಲ್ಲಿ ಗಾಂಧಿವಾದಿಯ ಪಾತ್ರದಲ್ಲಿ ನಟಿಸಿದ್ದಾರೆ. ತನ್ನ ಮಗನೇ ಸಮಾಜಕ್ಕೆ ದೇಶಕ್ಕೆ ಕಂಟಕ ಎಂದು ಗೊತ್ತಾದಾಗ ಹಿಂದು ಮುಂದು ನೋಡದೇ ಆತನನ್ನು ಕೊಂದು ಜೈಲು ಸೇರುವ ದೇಶಭಕ್ತನ ಪಾತ್ರ ಇದು. ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. 'ಭಾರತಾಂಬೆ ನಿನ್ನ ಜನುಮದಿನ' ಹಾಡನ್ನು ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಗುನುಗದೇ ಇರಲು ಸಾಧ್ಯವಿಲ್ಲ.
ಸಂಗೊಳ್ಳಿ ರಾಯಣ್ಣ
ನಾಗಣ್ಣ ನಿರ್ದೇಶನದಲ್ಲಿ ಬಂದಿದ್ದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ದರ್ಶನ್ ನಟಿಸಿದ್ದರು. ಆದರೆ 1967ರಲ್ಲಿ ರಾಯಣ್ಣನ ಕಥೆಯನ್ನು ತೆರೆಗೆ ತಂದಿದ್ದರು. ಬಿ. ಟಿ. ಅಥಣಿ ಗುರುಬಾಲ ನಿರ್ದೇಶನದ ಚಿತ್ರದಲ್ಲಿ ರಾಯಣ್ಣನ ಪಾತ್ರಕ್ಕೆ ವಿ. ಎಸ್ ಪಾಟೀಲ್ ಬಣ್ಣ ಹಚ್ಚಿದ್ದರು. ಈ ಚಿತ್ರದ ಬೆಳ್ಳನೆ ಬೆಳಗಾಯಿತು ಹಾಡನ್ನು ಲತಾ ಮಂಗೇಶ್ಕರ್ ಹಾಡಿದ್ದರು. ಮತ್ತೊಂದು ಹಾಡಿಗೆ ಆಶಾ ಬೊನ್ಲೆ ದನಿಯಾಗಿದ್ದರು. ಎರಡೂ ಸಿನಿಮಾಗಳನ್ನು ಯೂಟ್ಯೂಬ್ನಲ್ಲಿ ನೋಡಬಹುದು.
ಕಿತ್ತೂರು ರಾಣಿ ಚೆನ್ನಮ್ಮ
1962ರಲ್ಲಿ ಬಂದಿದ್ದ 'ಕಿತ್ತೂರು ರಾಣಿ ಚೆನ್ನಮ್ಮ' ಚಿತ್ರದಲ್ಲಿ ಚೆನ್ನಮ್ಮನ ಪಾತ್ರಕ್ಕೆ ಬಿ. ಸರೋಜಾ ದೇವಿ ಬಣ್ಣ ಹಚ್ಚಿದ್ದರು. ಮಲ್ಲಸಜ್ಜನ ಪಾತ್ರದಲ್ಲಿ ಡಾ. ರಾಜ್ಕುಮಾರ್ ಮಿಂಚಿದ್ದರು. ಬಿ. ಆರ್ ಪಂತುಲು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಸರೋಜಾ ದೇವಿ ಡೈಲಾಗ್ಗಳನ್ನು ಇಂದಿಗೂ ಮರೆಯೋಕೆ ಸಾಧ್ಯವಿಲ್ಲ.
ಇನ್ನುಳಿದಂತೆ ಶಿವರಾಜ್ಕುಮಾರ್ ನಟನೆಯ 'AK 47' ಹಾಗೂ 'ಹಗಲುವೇಷ', ಸಿಪಿ ಯೋಗೇಶ್ವರ್ ನಟನೆಯ 'ಸೈನಿಕ' ಮತ್ತು 'ಮೈಸೂರು ಮಲ್ಲಿಗೆ' ರೀತಿಯ ದೇಶಪ್ರೇಮದ ಕಥೆ ಹೇಳುವ ಕನ್ನಡ ಸಿನಿಮಾಗಳನ್ನು ಯೂಟ್ಯೂಬ್ನಲ್ಲಿ ನೋಡಬಹುದು.


Click it and Unblock the Notifications











