Year Ender 2024 : ಈ ಐವರಲ್ಲಿ ಈ ವರ್ಷ ನಿಮ್ಮ ಹೃದಯ ಗೆದ್ದ ಪೋಷಕ ನಟ ಯಾರು ?
ಒಂದು ಸಿನಿಮಾ ಯಾರೋ ಒಬ್ಬರ ಪಾಲ್ಗೊಳ್ಳುವಿಕೆಯಿಂದ ಆಗುವಂಥಾದ್ದಲ್ಲ. ಅದರಲ್ಲಿ ಡೈರೆಕ್ಟರ್, ಹೀರೋ, ಕ್ಯಾಮೆರಾದಿಂದ ಮೊದಲ್ಗೊಂಡು ಲೈಟ್ ಬಾಯ್ಗಳ ತನಕ ನೂರಾರು ಮಂದಿಯ ಶ್ರಮವಿರುತ್ತೆ. ನಿರ್ದೇಶನ, ಕ್ಯಾಮೆರಾ, ಕಲಾ ನಿರ್ದೇಶನ, ಎಡಿಟಿಂಗ್, ಸಂಗೀತ, ಸಾಹಸ ನಿರ್ದೇಶನ... ಇಂಥಾ ಅದೆಷ್ಟೋ ವಿಭಾಗಗಳ, ಅದೆಷ್ಟೋ ಜನರ ಬೆವರ ಹನಿಗಳು ತಾಕದಿದ್ದರೆ ಯಾವ ಚಿತ್ರವೂ ತಯಾರಾಗೋದಿಲ್ಲ. ಇವರೆಲ್ಲರ ಜೊತೆ ಚಿತ್ರವೊಂದಕ್ಕೆ ಪೋಷಕ ಕಲಾವಿದರು ಕೂಡ ಮುಖ್ಯ. ನಾಯಕ-ನಾಯಕಿಯರಷ್ಟು ಪ್ರಾಮುಖ್ಯತೆ ತಮಗೆ ಸಿಗದಿದ್ದರೂ ಕೊಡಲಾದ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಇವರು ಮಾಡುತ್ತಾರೆ. ಜನರ ಹೃದಯವನ್ನು ಗೆಲ್ಲುತ್ತಾರೆ. ಹೀಗೆ ಈ ವರ್ಷ ತಮ್ಮ ಅಭಿನಯದಿಂದ ಎಲ್ಲರ ಹೃದಯ ಗೆದ್ದ ಕನ್ನಡದ ಪೋಷಕ ನಟರ ಪಟ್ಟಿ ಈ ಕೆಳಗಿನಂತೆ ಇದೆ.
1. ಸಾಧು ಕೋಕಿಲಾ
ಸಿಂಪಲ್ ಸುನಿ ನಿರ್ದೇಶನದ, ವಿನಯ್ ರಾಜ್ ಕುಮಾರ್ ಅಭಿನಯದ ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲಿ ಸಾಧುಕೋಕಿಲಾ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ಹಲವು ಏರಿಳಿತಗಳನ್ನೊಂದಿದ್ದ ಈ ಚಿತ್ರದಲ್ಲಿ ಸಾಧು ಕೋಕಿಲಾ ಅವರು ಸಾಧು ಕೋಕಿಲಾ ಆಗಿಯೇ ಕಾಣಿಸಿಕೊಂಡಿದ್ದರು. ತಮ್ಮ ಹಾಸ್ಯದ ಮೂಲಕ ಮನರಂಜಿಸಿದ್ದರು. ಇವರ ಈ ಪಾತ್ರ ಅನೇಕರಿಗೆ ಇಷ್ಟವಾಗಿತ್ತು ಕೂಡ.

2. ರಂಗಾಯಣ ರಘು
ಈ ವರ್ಷ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದ ಕೆಲವೇ ಕೆಲ ಕನ್ನಡದ ಚಿತ್ರಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಚಿತ್ರ ಕೂಡ ಒಂದು. ಪ್ರೀತಿಯ ಮಗನಾಗಿ, ಮೆಚ್ಚಿದ ಹುಡುಗಿಗಾಗಿ ಪ್ರೀತಿಯ ಸರ್ಕಸ್ ಮಾಡುವ ಪ್ರೇಮಿಯಾಗಿ ಈ ಚಿತ್ರದಲ್ಲಿ ಜನ ಮನವನ್ನು ಗಣೇಶ್ ಗೆದ್ದಿದ್ದರೆ, ರಂಗಾಯಣ ರಘು ಆಗಾಗ ಭೂಮಿದೇವ್ರು ಆಗಿ ಕಾಣಿಸಿಕೊಂಡಿದ್ದರು. ತೆಲುಗು ಮಿಶ್ರಿತ ಕನ್ನಡ ಮಾತನಾಡುವ ಮೂಲಕ ನಕ್ಕು ನಗಿಸಿದ್ದರು
3. ಅಚ್ಯುತ್ ಕುಮಾರ್
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಘೀರ ಈ ವರ್ಷ ಗೆದ್ದ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದರೆ ತಂದೆಯ ಪಾತ್ರವನ್ನು ಅಚ್ಯುತ್ ಕುಮಾರ್ ನಿರ್ವಹಿಸಿದ್ದರು. ಎಂದಿನಂತೆ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದಿದ್ದರು.
4. ರವಿಶಂಕರ್ - ಉಪಾಧ್ಯಕ್ಷ
ಹತ್ತು ವರ್ಷಗಳ ಹಿಂದೆ ಶರಣ್ ಅಭಿನಯದಲ್ಲಿ ಅಧ್ಯಕ್ಷ ಚಿತ್ರ ತೆರೆಗೆ ಬಂದಿತ್ತು. ಚಂದ್ರಶೇಖರ್ ಗೌಡ ಪಾತ್ರದಲ್ಲಿ ಶರಣ್ ಮಿಂಚಿದ್ದರೆ ಶಿವರುದ್ರೇಗೌಡನ ಪಾತ್ರದಲ್ಲಿ ರವಿಶಂಕರ್ ಅಬ್ಬರಿಸಿದ್ದರು. ಉಪಾಧ್ಯಕ್ಷನ ಪಾತ್ರದಲ್ಲಿ ಚಿಕ್ಕಣ್ಣ ನಕ್ಕು ನಗಿಸಿದ್ದರು. ಈ ವರ್ಷ ಈ ಅಧ್ಯಕ್ಷನ ಚಮತ್ಕಾರ ಪುನರಾವರ್ತನೆ ಆಯ್ತು. ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾದ ಚಿಕ್ಕಣ್ಣ ಪ್ರೇಕ್ಷಕರನ್ನು ಮತ್ತೊಮ್ಮೆ ಮೋಡಿ ಮಾಡಿದರು. ಅಧ್ಯಕ್ಷ ಚಿತ್ರದಲ್ಲಿ ಈ ಹಿಂದೆ ಮಿಂಚಿದಂತೆ ಗತ್ತು -ಗಾಂಭೀರ್ಯದ ಪಾತ್ರದಲ್ಲಿ ರವಿಶಂಕರ್ ಜನ ಮನ ಗೆದ್ದರು
5. ಗೋಪಾಲಕೃಷ್ಣ ದೇಶಪಾಂಡೆ
ಶಾಖಾಹಾರಿ ಚಿತ್ರದಲ್ಲಿ ರಂಗಾಯಣ ರಘು ಅವರಂತಹ ಘಟಾನುಘಟಿ ಪ್ರತಿಭೆ ಎದುರು ಸರಿ ಸಮಾನವಾಗಿ ತೆರೆಯನ್ನು ಆಕ್ರಮಿಸಿಕೊಂಡವರು ಗೋಪಾಲ್ ಕೃಷ್ಣ ದೇಶಪಾಂಡೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಈ ಚಿತ್ರದಲ್ಲಿ ಇವರ ಆಕ್ಟಿಂಗ್ ಅದ್ಭುತ. ಒಂದು ಕಡೆ ಬಗೆಹರಿಯದ ಕೊಲೆ ಪ್ರಕರಣ ಮತ್ತೊಂದು ಕಡೆ ಊರಿನಲ್ಲಿರುವ ಪತ್ನಿಯ ಅನಾರೋಗ್ಯ. ಇವೆರಡರ ನಡುವೆ ಅಸಹಾಯಕವಾಗಿ ನಿಲ್ಲುವ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ್ ಪಾತ್ರದಲ್ಲಿ ಅತ್ಯಮೋಘವಾಗಿ ಅಭಿನಯಿಸಿ ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿದ್ದರು ಗೋಪಾಲ್ ಕೃಷ್ಣ ದೇಶಪಾಂಡೆ


Click it and Unblock the Notifications











