Year Ender 2024 ; ಈ ವರ್ಷ ಬಿಡುಗಡೆಯಾದ ಈ ಚಿತ್ರಗಳಲ್ಲಿ ನಿಮ್ಮ ನೆಚ್ಚಿನ ಚಿತ್ರ ಯಾವುದು..?
ಕೆಲ ಚಿತ್ರಗಳು ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತವೆ. ಇನ್ನೂ ಕೆಲ ಚಿತ್ರಗಳು ವಿಮರ್ಷಕರ ಗಮನವನ್ನೂ ಸೆಳೆಯುತ್ತವೆ. ಆದರೆ ಪ್ರೇಕ್ಷಕರ ಗಮನವನ್ನು ಸೆಳೆದ ಎಲ್ಲ ಚಿತ್ರಗಳು ಬಾಕ್ಸಾಫೀಸ್ನಲ್ಲಿ ಗೆಲ್ಲುವುದಿಲ್ಲ. ವಿಮರ್ಷಕರ ಚಿತ್ತ ಕದ್ದ ಎಲ್ಲ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋಲುವುದು ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕೆಲ ಚಿತ್ರಗಳು ಈ ವರ್ಷ ವಿಮರ್ಷಕರಿಗೆ ಇಷ್ಟವಾದ ಕೆಲ ಚಿತ್ರಗಳು ಸೋತಿವೆ. ಕೆಲ ಚಿತ್ರಗಳು ಗೆದ್ದಿವೆ. ಇನ್ನೂ ಕೆಲವು ಪ್ರೇಕ್ಷಕರ ಜೊತೆಯಲ್ಲಿ ವಿಮರ್ಷಕರ ಚಿತ್ತವನ್ನು ಕದ್ದಿವೆ. ಈ ಎರಡು ಸಾಲಿನಲ್ಲಿ ನಿಲ್ಲುವ ಐದು ಚಿತ್ರಗಳ ಪಟ್ಟಿ ಇಲ್ಲಿದೆ.
1. ಶಾಖಾಹಾರಿ
ಈ ವರ್ಷದ ಆರಂಭದಲ್ಲಿ ಮಣ್ಣಿನ ಕಥೆಯೊಂದಕ್ಕೆ ಕುತೂಹಲ ಬೆರೆಸಿ ಶುದ್ಧ ಶಾಕಾಹಾರಿ ದುರ್ಗಾ ಪ್ರಸಾದ್ ಹೊಟೇಲ್ನಲ್ಲಿ ಶಾಖಾಹಾರವನ್ನು ಬಡಿಸಿದ್ದ ಸಂದೀಪ್ ಸುಂಕದ್ ಕಥೆಗಾರನಾಗಿ ಇಡೀ ಕಥೆಯನ್ನು ತಿರುವುಗಳಿಂದ ಬೇರೆ ಹಂತಕ್ಕೆ ಕರೆದೊಯ್ದಿದ್ದರು. ಚೊಚ್ಚಲ ಚಿತ್ರದಲ್ಲೇ ಒಂದು ಅಚ್ಚು ಕಟ್ಟಾದ ಚಿತ್ರ ನೀಡುವಲ್ಲಿ ಯಶಸ್ವಿಯಾಗಿದ್ದರು. ನಿರ್ದೇಶನದ ಮೇಲೆ ತಮಗೆ ಇರುವ ಬದ್ಧತೆಯನ್ನು ಕೂಡ ತೋರಿದ್ದರು. ಆ ಮೆಲು ದನಿ, ನಡಿಗೆ, ಹಾವ ಭಾವದಲ್ಲಿನ ಪ್ರಯೋಗ, ರಂಗಾಯಣ್ ರಘು ಅವರ ಜೊತೆ ಗೋಪಾಲ್ ಕೃಷ್ಣ ದೇಶಪಾಂಡೆಯವರ ಸಂಭಾಷಣೆಗಳು ವರ್ಷಾಂತ್ಯವಾದರೂ ಪ್ರೇಕ್ಷಕರ ಹೃದಯದಲ್ಲಿ ಇನ್ನು ಅಚ್ಚಳಿಯದೇ ಉಳಿದಿವೆ.

2. ಇಬ್ಬನಿ ತಬ್ಬಿದ ಇಳೆಯಲಿ
ಅಲ್ಲೊಂದು, ಇಲ್ಲೊಂದು ತಿರುವುಗಳನ್ನು ಕಾಣುತ್ತಾ ನಿಶ್ಯಬ್ದ ನದಿಯಂತೆ ಹರಿಯುವ ಚಿತ್ರಗಳಿಗೆ ಅತ್ಯುತ್ತಮ ಉದಾಹರಣೆಯಂತೆ ಈ ವರ್ಷ ತೆರೆಗೆ ಬಂದ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರ ಕೂಡ ಈ ವರ್ಷ ಪ್ರೇಕ್ಷಕರ ಜೊತೆ ವಿಮರ್ಷಕರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯ್ತು. ಚಂದ್ರಶೇಖರ್ ಬೆಳ್ಯಪ್ಪ ನಿರ್ದೇಶನದ ಈ ಚೊಚ್ಚಲ ಚಿತ್ರದಲ್ಲಿ ವಿಹಾನ್ ಹೊಸ ರೂಪ ತಾಳಿದ್ದರು. ಅಂಕಿತಾ ಅಮರ್ ತಮ್ಮ ಪಾತ್ರವನ್ನು ಅಕ್ಷರಶಃ ಜೀವಿಸಿದ್ದರು. ಮಯೂರಿ ತಮ್ಮ ಧ್ವನಿ ಮತ್ತು ನಟನೆಯಿಂದ ಸೆಳೆದಿದ್ದರು.
3. ಬ್ಲಿಂಕ್
ಕಣ್ಣು ಮಿಟುಕಿಸುವುದರಲ್ಲಿ, ಜಗತ್ತು ಬದಲಾಗಬಹುದು, ಹಣೆಬರಹವನ್ನು ಪುನಃ ಬರೆಯಬಹುದು ಮತ್ತು ಜೀವನವನ್ನು ಶಾಶ್ವತವಾಗಿ ಬದಲಾಯಿಸಬಹುದು ಎನ್ನುವುದನ್ನು ನಿರೂಪಿಸಿದ ಬ್ಲಿಂಕ್ ಕೂಡ ಅನೇಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯ್ತು. ಶ್ರೀನಿಧಿ ಬೆಂಗಳೂರು ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ 1996, 2001, 2021, 2035 ರ ನಡುವಿನ ಪ್ರಯಾಣಕ್ಕೆ ಕೈಗನ್ನಡಿ ಹಿಡಿಯುವ ಪ್ರಯತ್ನ ಮಾಡಲಾಗಿತ್ತು. ದೀಕ್ಷಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಮೂಲಕ ಪ್ರೇಕ್ಷಕರ ತಲೆಗೆ ಒಂಚೂರು ಕೆಲಸವನ್ನು ನೀಡುವ ಪ್ರಯತ್ನವನ್ನು ಮಾಡಿದ್ದರು ನಿರ್ದೇಶಕ ಶ್ರೀನಿಧಿ

4. ಹೆಜ್ಜಾರು
ಟಿವಿ ಧಾರಾವಾಹಿಗಳ ಹಿನ್ನೆಲೆಯಿಂದ ಬಂದ ಹರ್ಷಪ್ರಿಯಾ, ಹೆಜ್ಜಾರು ಚಿತ್ರದ ಮೂಲಕ ಈ ವರ್ಷ ಬೆಳ್ಳಿಪರದೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಂಡರು. ಮೊದಲ ಪ್ರಯತ್ನದಲ್ಲಿಯೇ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಮೂರು ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ, ಭಗತ್ ಆಳ್ವ, ಶ್ವೇತಾ ಡಿಸೋಜಾ, ಮುನಿರಾಜು ಮತ್ತು ನವೀನ್ ಕೃಷ್ಣ ಮುಂತಾದವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
5. ಮರ್ಯಾದೆ ಪ್ರಶ್ನೆ
ಸುನೀಲ್ ರಾವ್, ರಾಕೇಶ್ ಅಡಿಗ ಮತ್ತು ಪೂರ್ಣಚಂದ್ರ ಮೈಸೂರು ಅಭಿನಯಿಸಿದ್ದ ಮರ್ಯಾದೆ ಪ್ರಶ್ನೆ ಕೂಡ ಈ ವರ್ಷದ ಅಚ್ಚರಿಗಳಲ್ಲೊಂದು. ಆರ್ಜೆ ಪ್ರದೀಪಾ ಬರೆದ ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಕಥೆ- ವ್ಯಥೆಯನ್ನು ನಾಗರಾಜ್ ಸೋಮಾಯಾಜಿಗೆ ಅಚ್ಚು ಕಟ್ಟಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದರು. ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಕಸುವು ಇತ್ತು.ಲೋಕಲ್ ಏರಿಯಾಗಳಲ್ಲಿನ ಫ್ರೆಂಡ್ಶಿಪ್ ಮತ್ತು ಹೈಕ್ಲಾಸ್ ಜನರ ಫ್ರೆಂಡ್ಶಿಪ್ ಯಾವ ರೀತಿ ಇರುತ್ತದೆ ಎಂಬ ತುಲನೆ ಕೂಡ ಮಾಡಿದ್ದ ನಿರ್ದೇಶಕರು ಸಂಬಂಧ, ಸ್ನೇಹ ಕುರಿತ ಭಾವತೀವ್ರತೆಯನ್ನು ಕಟ್ಟಿಕೊಡುವುದರ ಜೊತೆಗೆ ಒಂದು ಅತ್ಯುತ್ತಮ ಸಂದೇಶವನ್ನು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ.

ಹೀಗೆ ಈ ವರ್ಷ ತೆರೆಗೆ ಬಂದ ಈ 5 ಚಿತ್ರಗಳಲ್ಲಿ ಈ ವರ್ಷ ನಿಮಗೆ ಇಷ್ಟವಾದ ಚಿತ್ರ ಯಾವುದು ? ಫಿಲ್ಮಿಬೀಟ್ ವೆಬ್ಸೈಟ್ ಪೋಲ್ನಲ್ಲಿ ನೀವು ವೋಟ್ ಮಾಡಿ. ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂದು ಆಯ್ಕೆ ಮಾಡಿ. ನಿಮ್ಮ ಸ್ನೇಹಿತರೊಂದಿಗೆ ಫಿಲ್ಮಿಬೀಟ್ ಪೋಲ್ ಶೇರ್ ಮಾಡಿ ಮತ್ತು ನಿಮ್ಮ ನೆಚ್ಚಿನ ಸಿನಿಮಾ, ಕಲಾವಿದರು, ತಂತ್ರಜ್ಞರನ್ನು ಗೆಲ್ಲಿಸಿ.


Click it and Unblock the Notifications











