"ಅವತ್ತು ಫ್ರೀಯಾಗಿ ಟಿಕೆಟ್ ಕೊಟ್ರು ಜನ ನಮ್ಮ ಸಿನ್ಮಾ ನೋಡ್ಲಿಲ್ಲ, ರಕ್ಷಿತ್ ಶೆಟ್ಟಿ ಅತ್ತಿದ್ದ"
ಚಿತ್ರರಂಗದಲ್ಲಿ ಸಕ್ಸಸ್ ಅಷ್ಟು ಸುಲಭವಾಗಿ ಸಿಗಲ್ಲ. ಒಂದು ಬ್ರೇಕ್ ಸಿಕ್ಕ ಮಾತ್ರಕ್ಕೆ ಕಷ್ಟಗಳೆಲ್ಲಾ ಮುಗೀತು ಎನ್ನುವುದಕ್ಕೆ ಸಾಧ್ಯವಿಲ್ಲ. ಸತತ ಪರಿಶ್ರಮದ ಜೊತೆಗೆ ಅದೃಷ್ಟವೂ ಕೈ ಹಿಡಿಯಬೇಕು. ಸಿನಿಮಾ ಹಿನ್ನೆಲೆ ಇಲ್ಲದೇ ಬರುವವರು ಎದುರಿಸುವ ನೋವು ಅವಮಾನ ಅಷ್ಟಿಷ್ಟಲ್ಲ. ರಿಷಬ್ ಶೆಟ್ಟಿ ಕೂಡ ಸಾಕಷ್ಟು ಸೋಲುಗಳನ್ನು ಎದುರಿಸಿ ಇಂದು ಗೆದ್ದು ನಿಂತಿದ್ದಾರೆ.
ಸಹ ನಿರ್ದೇಶಕನಾಗಿ ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಬಂದವರು. ನೀರಿನ ಕ್ಯಾನ್ ಮಾರಿದ್ದಾರೆ, ಹೋಟೆಲ್ ಆರಂಭಿಸಿ ಕೈ ಸುಟ್ಟುಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಕೆಲಸ ಮಾಡಿದ್ದಾರೆ. ಆಫೀಸ್ ಬಾಯ್ ಆಗಿ, ಡ್ರೈವರ್ ಆಗಿ ಕೆಲಸ ಮಾಡಿದ ದಿನಗಳು ಇವೆ. ಸದ್ಯ 'ಕಾಂತಾರ'-1 ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಎಲ್ಲೆಲ್ಲೂ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ಸಿಗದೇ ಜನ ಪರದಾಡುತ್ತಿದ್ದಾರೆ. ದುಪ್ಪಟ್ಟು ಹಣ ಕೊಟ್ಟು ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಆದರೆ ಒಂದ್ಕಾಲದಲ್ಲಿ ಫ್ರೀಯಾಗಿ ಟಿಕೆಟ್ ಕೊಟ್ರು ಜನ ಬಂದು ರಿಷಬ್ ಶೆಟ್ಟಿ ಸಿನಿಮಾ ನೋಡಲು ಸಿದ್ಧರಿರಲಿಲ್ಲ.

ಹೌದು.. ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು. 'ತುಗ್ಲಕ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸುವಂತಾಗಿತ್ತು. ಅಂತೂ ಇಂತೂ ಸಿನಿಮಾ ತೆರೆಗೆ ಬಂದಿತ್ತು. ಆದರೆ ಫಸ್ಟ್ ವೀಕೆಂಡ್ನಲ್ಲೇ ಜನ ಬರದೇ ಸಿನಿಮಾ ಸೋತಿತ್ತು. ಆಗ ರಕ್ಷಿತ್ ಶೆಟ್ಟಿ ಕೆಜಿ ರಸ್ತೆಯ ತ್ರಿಭುವನ್ ಚಿತ್ರಮಂದಿರದಲ್ಲಿ ಗಳಗಳನೆ ಅತ್ತಿದ್ದರು. ಈ ವಿಚಾರವನ್ನು 'ಗೋಲ್ಡನ್ ಗ್ಯಾಂಗ್' ಕಿರುತೆರೆ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ನೆನಪಿಸಿಕೊಂಡಿದ್ದರು. 'ಕಾಂತಾರ- 1' ಆರ್ಭಟದ ನಡುವೆ ಈ ವೀಡಿಯೋ ವೈರಲ್ ಆಗ್ತಿದೆ.
"ನಾವು ಅಂದುಕೊಂಡಂತೆ 'ತುಗ್ಲಕ್' ಸಿನ್ಮಾ ಆಗಿರಲಿಲ್ಲ. ಮೊದಲಿಗೆ ರಕ್ಷಿತ್ ಶೆಟ್ಟಿ ಸಹ ನಿರ್ಮಾಪಕ ಎಂದುಕೊಂಡಿದ್ದ. ಆದರೆ ಸಿನ್ಮಾ ಶುರುವಾಗಿ ನಿರ್ಮಾಪಕರು ಕೈಕೊಟ್ಟ ಮೇಲೆ ಇಡೀ ಸಿನಿಮಾ ತಾನೇ ನಿರ್ಮಿಸುವಂತಾಯಿತು. ಸಾಲ ಸೋಲ ಮಾಡಿ ಸಿನಿಮಾ ಮಾಡಿದ್ದ. ಕೊನೆ ಕೊನೆಗೆ ಒಬ್ಬನೇ ಪೋಸ್ಟ್ ಪ್ರೊಡಕ್ಷನ್ ಮಾಡಿ ಮುಗಿಸಿದ್ದ. ಸಿನ್ಮಾ ರಿಲೀಸ್ ಆಯ್ತು. ಫಸ್ಟ್ ಡೇ ಸಿನಿಮಾ ನೋಡೋಕೆ ಜನ ಬರಲಿಲ್ಲ. ಅವತ್ತು ತ್ರಿಭುವನ್ ಥಿಯೇಟರ್ನಲ್ಲಿ ನಮ್ಮ ಚಿತ್ರತಂಡ ಮಾತ್ರ ಇತ್ತು" ಎಂದು ರಿಷಬ್ ಶೆಟ್ಟಿ ಮೆಲುಕು ಹಾಕಿದ್ದರು.
"ಫ್ರೀಯಾಗಿ ನೋಡಲಿ ಎಂದು ಕೆಲವರಿಗೆ ಟಿಕೆಟ್ ಕೊಟ್ವಿ. ಅವ್ರು ಬರಲಿಲ್ಲ. ಅದೇ ಟಿಕೆಟ್ ಅನ್ನು ಮಾರುವುದಕ್ಕೆ ಒಬ್ಬ ಟ್ರೈ ಮಾಡ್ತಿದ್ದ. ಮೊದಲ ದಿನ ಹೀಗಿತ್ತು ಪರಿಸ್ಥಿತಿ. ಎರಡನೇ ದಿನ, ಮೂರನೇ ದಿನವೂ ಜನ ಬರಲಿಲ್ಲ. ಭಾನುವಾರ ಗೊತ್ತಾಯಿತು. ಈ ಸಿನಿಮಾ ಓಡಲ್ಲ ಅಂತ. ಆಗ ತ್ರಿಭುವನ್ ಥಿಯೇಟರ್ ಸೆಕೆಂಡ್ ಫ್ಲೋರ್ನಲ್ಲಿ ಕೂತು ರಕ್ಷಿತ್ ಶೆಟ್ಟಿ ಅತ್ತಿದ್ದ. ಕರಿಯರ್ ಮುಗೀತು, ದುಡ್ಡು ಹೋಯ್ತು, ಮುಂದೆ ಛಾನ್ಸ್ ಸಿಗಲ್ಲ, ಅಂದುಕೊಂಡಿದ್ದ. ಅವತ್ತು ಇವನೊಟ್ಟಿಗೆ(ರಕ್ಷಿತ್ ಶೆಟ್ಟಿ) ನಿಲ್ಲಬೇಕು ಅನಿಸಿತು. ನಾನು ಅದಾಗಲೇ ಸಾಕಷ್ಟು ಕಷ್ಟಪಟ್ಟಿದ್ದೆ. ಅಲ್ಲಿಂದ ಮುಂದೆ ಇಬ್ಬರೂ ಒಟ್ಟಾದೆವು" ಎಂದು ರಕ್ಷಿತ್ ಶೆಟ್ಟಿ ವಿವರಿಸಿದ್ದರು.
ಬಳಿಕ 'ಉಳಿದವರು ಕಂಡಂತೆ' ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದರು. ಆ ಚಿತ್ರದಲ್ಲಿ ರಿಷಬ್ ಶೆಟ್ಟಿ ಒಂದು ಪಾತ್ರ ಮಾಡಿದ್ದರು. ನಂತರ ರಕ್ಷಿತ್ ಶೆಟ್ಟಿ ನಟಿಸಿದ 'ರಿಕ್ಕಿ' ಚಿತ್ರಕ್ಕೆ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದರು. 'ರಿಕ್ಕಿ' ಚಿತ್ರ ಬಂದಾಗಲೂ ಥಿಯೇಟರ್ ಸಿಗದೇ ರಿಷಬ್ ಶೆಟ್ಟಿ ಪರದಾಡಿದ್ದರು. ಅವರಿವರ ಕೈಕಾಲು ಹಿಡಿದು ಮಂಗಳೂರಿನಲ್ಲಿ ಒಂದು ಶೋ ಪಡೆದಿದ್ದಾಗಿ ಟ್ವೀಟ್ ಮಾಡಿದ್ದರು. ಆ ಟ್ವೀಟ್ ಕೂಡ ಈಗ ವೈರಲ್ ಆಗ್ತಿದೆ. ಅದೇ ವರ್ಷ 'ಕಿರಿಕ್ ಪಾರ್ಟಿ' ಸಿನಿಮಾ ಕೂಡ ಮಾಡಿ ಗೆದ್ದರು.


Click it and Unblock the Notifications











