ಅಣ್ಣ ಹಾಕಿಕೊಟ್ಟ ₹4 ಕೋಟಿ ಬ್ಯುಸಿನೆಸ್ ಲಾಸ್ ಮಾಡಿಬಿಟ್ಟೆ; ಗಣೇಶ್ ಸಹೋದರ ಪಶ್ಚಾತ್ತಾಪ
ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ ಯಶಸ್ಸು ಮಾತ್ರ ಸಿಗಲಿಲ್ಲ. 'ನಮಕ್ಹರಾಮ್' ಎಂಬ ಸಿನಿಮಾ ಮೂಲಕ ಮಹೇಶ್ ಬಣ್ಣದಲೋಕಕ್ಕೆ ಬಂದರು. ಬಳಿಕ ಎರಡ್ಮೂರು ಸಿನಿಮಾ ಮಾಡಿದ್ರು ಪ್ರಯೋಜನ ಆಗಲಿಲ್ಲ. 'ಮಗ್ಗಿ ಪುಸ್ತಕ' ಎಂಬ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿದ್ದಾರೆ. ಈ ವಾರ ಸಿನಿಮಾ ಬಿಡುಗಡೆಯಾಗಿದೆ.
ಅಣ್ಣ ಬೇಡ ಎಂದು ಹೇಳಿದ್ರು ಕೇಳದೇ ಚಿತ್ರರಂಗಕ್ಕೆ ಬಂದೆ. ಅಣ್ಣ ಹಾಕಿಕೊಟ್ಟ ಬ್ಯುಸಿನೆಸ್ ಬಿಟ್ಟು ಬಂದು ತಪ್ಪು ಮಾಡಿದ್ನಾ ಎನಿಸುತ್ತದೆ ಎಂದು ಮಹೇಶ್ ಹೇಳಿದ್ದಾರೆ. 'ಮಗ್ಗಿ ಪುಸ್ತಕ' ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೋ ಸಂದರ್ಶನದಲ್ಲಿ ಮಹೇಶ್ ಮಾತನಾಡಿದ್ದಾರೆ. ತಮ್ಮ ಸಿನಿಜರ್ನಿ ಬಗ್ಗೆ ನೆನಪಿಸಿಕೊಂಡಿದ್ದಾರೆ. ಬಣ್ಣದಲೋಕದಲ್ಲಿ ಸಾಧಿಸಿ ತೋರಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಅಣ್ಣನ ಜೊತೆ ಜೊತೆಗೆ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದನ್ನು ವಿವರಿಸಿದ್ದಾರೆ.

ಎಸ್ಎಸ್ಎಲ್ಸಿ ಮುಗಿಸಿ ಪಿಯುಸಿ ಓದು ಅರ್ಧಕ್ಕೆ ಬಿಟ್ಟು ಎಂಟಿಆರ್ ಸಂಸ್ಥೆಯಲ್ಲಿ ಸೇಲ್ ಬಾಯ್ ಆಗಿ ಕೆಲಸ ಮಾಡಲು ಮಹೇಶ್ ಆರಂಭಿಸಿದ್ದರು. 'ಮುಂಗಾರುಮಳೆ' ಸಿನಿಮಾ ಹಿಟ್ ಬಳಿಕ ಅಣ್ಣ ಎಂಟಿಆರ್ ಹೋಲ್ಸೇಲ್ ಡಿಸ್ಟ್ರಿಬ್ಯೂಷನ್ ಬ್ಯುಸಿನೆಸ್ ಹಾಕಿಕೊಟ್ಟದ್ದರು. ವರ್ಷಕ್ಕೆ ನಾಲ್ಕೈದು ಕೋಟಿ ರೂ. ವ್ಯವಹಾರ ನಡೆಯುತ್ತಿತ್ತು. ನನ್ನ ತಪ್ಪು ನಿರ್ಧಾರದಿಂದ ಅದನ್ನು ಬಿಟ್ಟೆ ಎಂದು ಮಹೇಶ್ ಮೆಲುಕು ಹಾಕಿದ್ದಾರೆ. ಚಿತ್ರರಂಗದಲ್ಲಿ ಇದ್ದ ಕಷ್ಟಗಳು ಅಣ್ಣನಿಗೆ ಗೊತ್ತಿತ್ತು. ಹಾಗಾಗಿ ಸಿನಿಮಾ ಸಹವಾಸ ಬೇಡ ಎಂದು ಬ್ಯುಸಿನೆಸ್ ಹಾಕಿಕೊಟ್ಟರು. ಆದರೆ ಆಫೀಸ್ ಬಂದ್ ಮಾಡಿ ಚಿತ್ರರಂಗದ ಕಡೆ ಬಂದೆ ಎಂದು ಮಹೇಶ್ ವಿವರಿಸಿದ್ದಾರೆ.
ಮಹೇಶ್ ಮಾತನಾಡಿ "ನನಗೆ ಚಿತ್ರರಂಗಕ್ಕೆ ಬರುವ ಮನಸ್ಸು ಇರಲಿಲ್ಲ. ಆದರೆ ಸಂಗಡಿಗರು ಬಂದು ಕೇಳ್ತಿದ್ರು. ಸಿನಿಮಾ ಮಾಡೋಣ, ನೀವೇ ಹೀರೊ ಎನ್ನುತ್ತಿದ್ದರು. ನಾನು ಚಿತ್ರರಂಗದಲ್ಲಿ ಪಟ್ಟ ಕಷ್ಟ ತಮ್ಮನಿಗೆ ಬೇಡ ಅಂತ ಬ್ಯುಸಿನೆಸ್ ಹಾಕಿಕೊಟ್ಟರು. ನಾನು ದಡ್ಡನ ತರ ಬ್ಯುಸಿನೆಸ್ ಹಾಳು ಮಾಡ್ಕೊಂಡೆ. 4 ಕೋಟಿ ಟರ್ನ್ಓವರ್ ಇತ್ತು. ಅದನ್ನು ಬಿಟ್ಟು ಬಂದೆ. ಆ ಕೊರಗು ಇವತ್ತಿಗೂ ಇದೆ. ಇವತ್ತಿಗೂ ಅಣ್ಣನೇ ನಮಗೆ ರೋಲ್ ಮಾಡೆಲ್" ಎಂದಿದ್ದಾರೆ.
'ನಮಕ್ಹರಾಮ್' ಬಳಿಕ 'ಮಹಾರುದ್ರಂ', 'ಮಹಾಯುದ್ಧ' ಎಂಬ ಸಿನಿಮಾಗಳಲ್ಲಿ ಮಹೇಶ್ ನಟಿಸಿದ್ದರು. 'ಬೌಂಡರಿ' ಎಂಬ ಮತ್ತೊಂದು ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತು. 'ಮಗ್ಗಿ ಪುಸ್ತಕ' ಮಹೇಶ್ ನಟನೆಯ 5ನೇ ಸಿನಿಮಾ. ಗಣೇಶ್ ಅವರಿಗೆ ಮಹೇಶ್ ಜೊತೆಗೆ ಮತ್ತೊಬ್ಬ ಕಿರಿಯ ಸಹೋದರ ಕೂಡ ಇದ್ದಾರೆ.
ನೆಲಮಂಗಲದ ಬಳಿಯ ಅಡಕಮಾರನಹಳ್ಳಿ ಹುಟ್ಟೂರು. ಬಸವಣ್ಣದೇವರ ಮಠದಲ್ಲಿ ಓದಿ ಬೆಳೆದಿದ್ದು. ಖಾಸಗಿ ಕಂಪನಿಯಲ್ಲಿ ಕಿರಿಯ ಸಹೋದರ ಸೂರಜ್ ಕೃಷ್ಣ ಕೆಲಸ ಮಾಡಿಕೊಂಡಿದ್ದರು. ಅವರನ್ನು ಬಣ್ಣದಲೋಕ ಕೈಬೀಸಿ ಕರೆದಿತ್ತು. 'ನಾನೇ ರಾಜ' ಎಂಬ ಚಿತ್ರದಲ್ಲಿ ಸೂರಜ್ ನಟಿಸಿದ್ದರು. ಆದರೆ ಸಿನಿಮಾ ಗೆಲ್ಲಲಿಲ್ಲ. ಹಾಗಾಗಿ ಮತ್ತೆ ಹುಟ್ಟೂರಿಗೆ ಮರಳಿದ್ದಾರೆ. ಅಣಬೆ ವ್ಯಾಪಾರ ಮಾಡಿಕೊಂಡಿದ್ದಾರೆ.
ಎಚ್. ಸಿ ಮಹೇಶ್ ಬರೆದ 'ಅವನಿ' ಎಂಬ ಕಾದಂಬರಿ ಆಧರಿಸಿ 'ಮಗ್ಗಿ ಪುಸ್ತಕ' ಸಿನಿಮಾ ನಿರ್ಮಾಣವಾಗಿದೆ. 'ಸರ್ಕಾರಿ ಹಿರಿಯಪ್ರಾಥಮಿಕ ಶಾಲೆ' ಚಿತ್ರದಲ್ಲಿ ನಟಿಸಿದ್ದ ರಂಜನ್ ಸಜ್ಜು, ಶ್ರೀರಕ್ಷಾ ಮುಖ್ಯಭೂಮಿಕೆಯಲ್ಲಿದ್ದಾರೆ. ರಂಗಾಯಣ ರಘು, ಗಿರಿಜಾ ಲೋಕೇಶ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮಂಗಳೂರು, ಮೈಸೂರು, ನಂಜನಗೂಡ, ಹೆಚ್. ಡಿ ಕೋಟೆ ಹಾಗೂ ಬೆಂಗಳೂರು ಸುತ್ತಾಮುತ್ತಾ ಚಿತ್ರದ ಚಿತ್ರೀಕರಣ ನಡೆದಿದೆ. ನಂದಕುಮಾರ್ ಛಾಯಾಗ್ರಹಣ ಹಾಗೂ ಯಶಸ್ ನಾಚಪ್ಪ ಸಂಗೀತ ಚಿತ್ರಕ್ಕಿದೆ.


Click it and Unblock the Notifications











