ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದಿದ್ದ ದಾಸ; ಚಾಲೆಂಜಿಂಗ್ ಸ್ಟಾರ್ ನಟಿಸಿದ್ದ ಧಾರಾವಾಹಿಗಳು ಯಾವುವು?
ಅಭಿಮಾನಿಗಳ ಪ್ರೀತಿಯ ದಾಸ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆರ್.ಆರ್ ನಗರದ ನಿವಾಸದ ಬಗ್ಗೆ ದರ್ಶನ್ ಸಂಭ್ರಮ ಮನೆ ಮಾಡಿದೆ. ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಶುಭಾಶಯಕ ಕೋರುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಪುತ್ರ ಆದ್ರು ದರ್ಶನ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಈ ಹಾದಿಯಲ್ಲಿ ಸಾಕಷ್ಟು ನೋವು, ಅವಮಾನ ನುಂಗಿ ಗೆದ್ದು ಬಂದಿದ್ದಾರೆ. ಸೋತಾಗಲೆಲ್ಲಾ ಮತ್ತೆ ಫೀನಿಕ್ಸ್ ರೀತಿ ಎದ್ದು ಬೀಗಿದ್ದಾರೆ. ನೀನಾಸಂನಲ್ಲಿ ಅಭಿನಯದ ಅ ಆ ಇ ಈ ಕಲಿತು ಚಿತ್ರರಂಗಕ್ಕೆ ಬಂದರು. ಲೈಟ್ ಬಾಯ್ ಆಗಿ ಕ್ಯಾಮರಾ ಅಸಿಸ್ಟೆಂಟ್ ಆಗಿ ಖಳನಟನಾಗಿ, ಪೋಷಕ ನಟನಾಗಿ ಕೊನೆಗೆ ಹೀರೊ ಆಗಿ ಸಕ್ಸಸ್ ಕಂಡರು.

ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ದರ್ಶನ್ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಹಲವು ಕಿರುತೆರೆಯಿಂದಲೇ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್, ಸುದೀಪ್, ಗಣೇಶ್, ಯಶ್ ಹೀಗೆ ಲಿಸ್ಟ್ ದೊಡ್ಡದಿದೆ. ದರ್ಶನ್ ಒಂದಲ್ಲ ಎರಡಲ್ಲ ಮೂರು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.
ಕಿರುತೆರೆ ಧಾರಾವಾಹಿಗಳಲ್ಲಿ ಸೌಮ್ಯ ಪಾತ್ರಗಳಲ್ಲೇ ದರ್ಶನ್ ನಟಿಸಿದ್ದರು. ಆದರೆ 'ಮೆಜೆಸ್ಟಿಕ್' ಚಿತ್ರದಲ್ಲಿ ರೌಡಿ ದಾಸನಾಗಿ ಎಲ್ಲರ ಹುಬ್ಬೇರಿಸಿದ್ದರು. ಪಿ. ಎನ್ ಸತ್ಯ ನಿರ್ದೇಶನದ ಆ ಚಿತ್ರದಲ್ಲಿ ದರ್ಶನ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುತ್ತಾ ಬಂದರು. ಆದರೆ ಕಿರುತೆರೆಯಲ್ಲಿ ಸಿಕ್ಕ ಅನುಭವವೇ ತಮ್ಮ ಸಿನಿಕರಿಯರ್ಗೆ ಪ್ಲಸ್ ಆಯ್ತು ಎಂದು ದರ್ಶನ್ ಹಳೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಅಂಬಿಕಾ ಎನ್ನುವ ಧಾರಾವಾಹಿಯಲ್ಲಿ ದರ್ಶನ್ ನಟಿಸಿದ್ದರು ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿದೆ. ಆದರೆ 'ಖಡ್ಡಾ' ಹಾಗೂ 'ಊರ್ವಶಿ' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಬಣ್ಣ ಹಚ್ಚಿದ್ದರು. ಒಟ್ಟಾರೆ 3 ಧಾರಾವಾಹಿಗಳಲ್ಲಿ ನಟಿಸಿದ ಬಳಿಕವೇ ಹೀರೊ ಆಗಿ ಚಿತ್ರರಂಗಕ್ಕೆ ಬಂದರು.
"ಕಿರುತೆರೆ, ಬೆಳ್ಳಿತೆರೆ ಎಂದು ವಿಭಾಗಿಸಿ ನೋಡಬಾರದು. ಯಾಕಂದರೆ ನಮಗೆ ಸ್ಮಾಲ್ ಸ್ಕ್ರೀನ್ ಸ್ಕೂಲ್ ಇದ್ದಂತೆ. ಯಾಕಂದರೆ ಅಲ್ಲಿ ದೊಡ್ಡ ದೊಡ್ಡ ಡೈಲಾಗ್ಸ್ ಇರುತ್ತದೆ. ಮೂಮೆಂಟ್ಸ್ ಇರುತ್ತದೆ. ಅದನ್ನು ಸಿನಿಮಾದಲ್ಲಿ ಬಂದು ಅಷ್ಟು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಯಾವುದಾದರೂ ಪ್ರಾಪರ್ಟಿ ಇದ್ದರೆ ಅದನ್ನು ಬಳಸುವುದು ಹೇಗೆ ಅನ್ನೋದು ಗೊತ್ತಾಗುತ್ತದೆ. ಕೆಲವೊಮ್ಮೆ ಡೈಲಾಗ್ಸ್ ಮರೆಯುತ್ತೇವೆ ಅಥವಾ ಪೊಷೀಷನ್ ಮರೆತುಬಿಡ್ತೀವಿ. ಎರಡು ಒಟ್ಟಿಗೆ ಮಾಡುವುದನ್ನು ಅಲ್ಲಿ ಮಾತ್ರ ಕಲಿಯಲು ಸಾಧ್ಯ."
"ಟಿವಿ ಧಾರಾವಾಹಿಗಳು ನನಗೆ ಬಹಳ ಸಹಾಯಕವಾಯಿತು. ಯಾಕಂದರೆ 3 ಧಾರಾವಾಹಿಗಳಲ್ಲಿ ನಟಿಸಿದ್ದರಿಂದ ಅದು ಸಹಾಯಕವಾಯಿತು. ಧಾರಾವಾಹಿಗಳಲ್ಲಿ ನಟಿಸುತ್ತಿದ್ದವನ್ನು ಕರ್ಕೊಂಡು ಬಂದು ಹೀರೊ ಮಾಡೋದು ಅಷ್ಟು ಸುಲಭ ಅಲ್ಲ. 'ಭೂತಯ್ಯನ ಮಕ್ಕಳು' ಸಿನಿಮಾ ಮಾಡ್ತಿದ್ದೆ. 'ಮೆಜೆಸ್ಟಿಕ್' ಸಿನಿಮಾ ಮಾಡ್ತಿದ್ದೀವಿ ಅಂತ ಪಿ. ಎನ್ ಸತ್ಯ ನನ್ನ ಕರೆದರು. ಅವತ್ತು ನನ್ನನ್ನು ನೋಡಿ ನಿರ್ಮಾಪಕರು, ನಿರ್ದೇಶಕರು ನೀವೇ ನಮ್ಮ ಸಿನಿಮಾ ಹೀರೊ ಅಂದ್ರು. ಅದು ಹೇಗೆ ಅಂತ ಗೊತ್ತಿಲ್ಲ" ಎಂದಿದ್ದರು.
"ನಾನು ಆವರೆಗೆ ಯಾವುದೇ ದೊಡ್ಡ ಪಾತ್ರ ಯಾವುದು ಮಾಡಿರಲಿಲ್ಲ. ಸಣ್ಣ ಪುಟ್ಟ ಪಾತ್ರ ಮಾಡಿದ್ದೆ. 'ಅಂಬಿಕಾ' ಹಾಗೂ 'ಊರ್ವಶಿ' ಧಾರಾವಾಹಿಗಳಲ್ಲಿ ಕೂಡ ಸೌಮ್ಯ ಪಾತ್ರಗಳನ್ನೇ ಮಾಡಿದ್ದೆ. ಅದನ್ನು ನೋಡಿ 'ಮೆಜೆಸ್ಟಿಕ್' ರಗಡ್ ಪಾತ್ರ ಕೊಟ್ಟಿದ್ದು ಆಶ್ಚರ್ಯ ಎನಿಸುತ್ತದೆ" ಎಂದು ದರ್ಶನ್ ವಿವರಿಸಿದ್ದರು.


Click it and Unblock the Notifications











