Happy New Year 2024: ಹೊಸ ವರುಷ ಹೊಸ ಹುರುಪು.. ಚಂದನವನಕ್ಕೆ ತರಲಿ ಹೊಸ ಹೊಳಪು
ಇನ್ನೇನು ಹೊಸ ವರ್ಷಕ್ಕೆ ಎಲ್ಲರೂ ಸಂಭ್ರಮದಿಂದ ಸ್ವಾಗತ ಕೋರಿಯಾಗಿದೆ. ಪಾರ್ಟಿ, ಕೇಕ್ ಕಟಿಂಗ್, ಹಾಡು, ಡ್ಯಾನ್ಸ್ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿದ್ದೇವೆ. ಕಹಿ - ಸಿಹಿ ನೆನಪುಗಳ 2023ನೇ ವರ್ಷವನ್ನು ಹಿಂದೆ ತಳ್ಳಿದ್ದೇವೆ. ಹೊಸ ಕನಸುಗಳು, ಆಸೆಗಳ ಬೆನ್ನೇರಿ ಹೊರಟಿದ್ದೇವೆ. ಇದೇ ರೀತಿ ಕನ್ನಡ ಸಿನಿಮಾರಂಗವೂ ಹೊಸ ವರ್ಷಕ್ಕೆ ಹೊಸ ಹುರುಪಿನೊಂದಿಗೆ ಪುಟಿದೇಳಲಿ.
2023ರ ಕೊನೆಯಲ್ಲಿ ಬಿಡುಗಡೆಯಾದ ನಟ ದರ್ಶನದ ಅಭಿನಯದ 'ಕಾಟೇರ' ಬಾಕ್ಸ್ ಆಫೀಸ್ ಉಡೀಸ್ ಮಾಡಿ ಸುಲ್ತಾನ ಆಗಿ ಮೆರೆಯುತ್ತಿದೆ. ಜೊತೆಗೆ ಕನ್ನಡ ಸಿನಿಮಾಗಳಿಗೆ ಭದ್ರ ಬುನಾದಿ ಹಾಕಿಕೊಟ್ಟಿದೆ. ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾವೊಂದು ಈ ಮಟ್ಟಿಗೆ ಕರುನಾಡಿನಲ್ಲಿ ಸೌಂಡ್ ಮಾಡುತ್ತಿದೆ. ಇದು ಇತರ ನಿರ್ದೇಶಕ ಮತ್ತು ನಟರಿಗೂ ಸ್ಪೂರ್ತಿಯಾಗಲಿದೆ. ಇದೇ ದಾರಿಯಲ್ಲಿ ಹೊಸ ಸಿನಿಮಾಗಳು ಮೂಡಿಬರಲಿವೆ.

2023 ಸಿಹಿಗಿಂತ ಕಹಿಯನ್ನೇ ಉಂಡ ಸ್ಯಾಂಡಲ್ವುಡ್
ಕಳೆದ ವರ್ಷ ಸ್ಯಾಂಡಲ್ವುಡ್ನಲ್ಲಿ 200ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದಿವೆ. ಇವುಗಳಲ್ಲಿ ನೆನಪಿಸಿಕೊಂಡರೇ ಕನಿಷ್ಠ ಇಪ್ಪತ್ತು ಸಿನಿಮಾಗಳ ಹೆಸರು ನೆನಪಿಗೆ ಬರುವುದಿಲ್ಲ. ಗೆಲುವಿಗಿಂತ ಸೋಲು ಕಂಡ ಸಿನಿಮಾಗಳ ಪಟ್ಟಿಯೇ ತುಂಬಾ ಉದ್ದವಿದೆ. ಕೆಲವು ಸಿನಿಮಾಗಳು ಥಿಯೇಟರ್ನಲ್ಲಿ ಒಂದು ದಿನ ಕೂಡ ಉಳಿಯಲಿಲ್ಲ.
ಆದರೆ, ಸ್ಟಾರ್ ನಟರ ಸಿನಿಮಾಗಳು ಬಂದಿದ್ದೂ ತೀರಾ ಕಡಿಮೆಯೇ. ಯಶ್, ಮುರಳಿ, ಧ್ರುವ ಸರ್ಜಾ, ಸುದೀಪ್, ವಿಜಯ್ ಸಿನಿಮಾಗಳು ತೆರೆಗೆ ಬರಲೇಯಿಲ್ಲ. ಇನ್ನು, ಶಿವರಾಜ್ ಕುಮಾರ್, ದರ್ಶನ್, ಧನಂಜಯ್, ಗಣೇಶ್ ಮತ್ತು ಉಪೇಂದ್ರ ಅವರ ಸಿನಿಮಾಗಳು ಬಂದ ಕಾರಣ ಕನ್ನಡಿಗರು ಸಿನಿಮಾ ಥಿಯೇಟರ್ಗೆ ಬಂದರು. ಅದೂ ಕಡಿಮೆಯೇ. ಆದರೆ, ವರ್ಷದ ಕೊನೆಗೆ ಬಂದ 'ಕಾಟೇರ' ಗೆದ್ದಿದೆ. ಜನರನ್ನು ಚಿತ್ರಮಂದಿರಗಳಿಗೆ ಎಳೆಯುತ್ತಿದೆ. ಇದೇ ಸಂಭ್ರಮದಲ್ಲಿ ಕನ್ನಡ ಸಿನಿರಂಗ ಹಳೇ ವರ್ಷಕ್ಕೆ ಬೈ ಬೈ ಹೇಳಿ ಹೊಸ ವರ್ಷವನ್ನು ಸ್ಯಾಂಡಲ್ವುಡ್ ಕೂಡ ಬರಮಾಡಿಕೊಳ್ತಿದೆ.
ಹೊಸ ವರ್ಷ...ಹೊಸ ಭರವಸೆ...
ಕಳೆದ ವರ್ಷ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಈ ವರ್ಷ ಯಶಸ್ಸು ಕಾಣಲು ಸ್ಯಾಂಡಲ್ವುಡ್ ಸಿದ್ಧವಾಗಿದೆ. ಕಳೆದ ವರ್ಷವೇ ಘೋಷಣೆಯಾಗಿರುವ ಒಂದಷ್ಟು ಸಿನಿಮಾಗಳು ಭಾರೀ ನಿರೀಕ್ಷೆ ಮೂಡಿಸಿವೆ. ಮ್ಯಾಕ್ಸ್, ರಿಷರ್ಡ್ ಆಂಟೋನಿ, ಬಘೀರ, ಮಾರ್ಟಿನ್, ಕೆಡಿ, ಭೀಮ, ಯುಐ, ಉತ್ತರಕಾಂಡ, ಬ್ಯಾಚುಲರ್ ಪಾರ್ಟಿ, ಕಾಂತಾರ ಅಧ್ಯಾಯ ಒಂದು ಹೇಗೆ ಸಾಕಷ್ಟು ಸಿನಿಮಾಗಳು ಘೋಷಣೆಯಾಗಿವೆ. ಅದರಲ್ಲಿ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳು. ಹೊಸಬರ ಸಿನಿಮಾಗಳು ಬಹಳಷ್ಟಿವೆ.
ಈ ಸಿನಿಮಾಗಳೇಲ್ಲಾ ಮುಂದಿನ ವರ್ಷ ಬಿಡುಗಡೆಯಾದರೇ ಕನ್ನಡ ಪ್ರೇಕ್ಷಕರು ಮತ್ತೆ ಥಿಯೇಟರ್ಗಳ ಕಡೆ ಮುಖ ಮಾಡುತ್ತಾರೆ. ಇಲ್ಲದೇ ಇದ್ದರೇ ಕಳೆದ ವರ್ಷದಂತೆಯೇ ಅನ್ಯ ಭಾಷಾ ಸಿನಿಮಾಗಳ ಕಡೆಗೆ ವಾಲುತ್ತಾರೆ. ಅದಕ್ಕೆ ಬೆಂಗಳೂರಿನ ಮಲ್ಟಿಫ್ಲೆಕ್ಸ್ಗಳಲ್ಲಿ ಈಗಾಗಲೇ ಕನ್ನಡಕ್ಕಿಂತ ಬೇರೆ ಭಾಷೆಯ ಸಿನಿಮಾಗಳಿಗೆ ಮಣೆ ಹಾಕುತ್ತಿರುವುದು ಸಾಕ್ಷಿ.

ವರ್ಷಕ್ಕೆ ಒಂದೆರಡು ಸಿನಿಮಾ ಬೇಕೆ ಬೇಕು!
ಹೌದು ಕನ್ನಡ ಸಿನಿಮಾ ರಂಗ ಉಳಿಯಬೇಕು ಎಂದರೇ ಸ್ಟಾರ್ ನಟರು ವರ್ಷಕ್ಕೆ ಕನಿಷ್ಠ ಎರಡು ಸಿನಿಮಾ ಮಾಡಲೇಬೇಕು. ನೆಚ್ಚಿನ ನಟನ ಸಿನಿಮಾಗಾಗಿ ಕಾದು ಕುಳಿತ ಅಭಿಮಾನಿಗಳು ಬೇಜಾರಾಗಿ ಬೇರೆ ಸಿನಿಮಾಗಳತ್ತ ಹೋಗುವು ಸಹಜ. ಕೆಜಿಎಫ್ ಬಿಡುಗಡೆಯಾಗು ಮೂರು ವರ್ಷವಾದರೂ ಯಶ್ ಇನ್ನೂ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಸುದೀಪ್, ಧ್ರುವ, ಶ್ರೀ ಮುರುಳಿ ಕತೆ ಕೂಡ ಹಾಗೆ ಇದೆ. ಹೀಗಾಗಿ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಮಾಡಿ ಎಂಬುದು ಅಭಿಮಾನಿಗಳ ಅಂಬೋಣ.
ಇನ್ನು ಮುಂದಿನ ವರ್ಷ ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರುವುದು ಅನುಮಾನ. ಏಕೆಂದರೆ ಯಶ್ ನಟನೆಯ ಟಾಕ್ಸಿಕ್ ಘೋಷಣೆಯಾಗಿರುವುದೇ ಈಗ. ಅದು ಶೂಟಿಂಗ್ ಮುಗಿಸಿ ಬಿಡುಗಡೆಯಾಗಲು ತುಂಬಾ ಸಮಯ ಬೇಕು. ರಿಷಬ್ ಶೆಟ್ಟಿ ಅವರ ಕಾಂತಾರ ಘೋಷಣೆಯಾಗಿದೆ. ಆದರೆ ಬಿಡುಗಡೆ ಈಗಲೇ ಇಲ್ಲ. ರಕ್ಷಿತ್ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.
ಹೀಗಾಗಿಯೇ ಹೊಸ ವರ್ಷದಲ್ಲಿ ಕನ್ನಡ ಸಿನಿಮಾ ರಂಗದಲ್ಲಿಯೂ ಹೊಸ ಬದಲಾವಣೆ ಬರಲಿ. ಮಹಿಳಾ ಕೇಂದ್ರಿತ ಸಿನಿಮಾಗಳ ಕೊರತೆ ನೀಗಲಿ. ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಬರ ಕಾಡದಿರಲಿ. ಹೊಸಬರ ಸಿನಿಮಾಗಳಿಗೆ ಸ್ಟಾರ್ ನಟರು ಸಾಥ್ ನೀಡಲಿ..ಪ್ಯಾನ್ ಇಂಡಿಯಾ ಸಿನಿಮಾ ಜೊತೆಗೆ ನಮ್ಮ ಮಣ್ಣಿನ ಸಿನಿಮಾಗಳು ಬರಲಿ... ಈ ನಿಟ್ಟಿನಲ್ಲಿ ನಟರು ಕೂಡ ಯೋಚಿಸಲಿ ಎಂಬುದು ನಮ್ಮ ಹಾರೈಕೆ.


Click it and Unblock the Notifications











