ಹಾರ್ದಿಕ್ ಪಾಂಡ್ಯ To ಯುವ ; ಈ 07 ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದವರಿವರು..!
ಲವ್ ಮಾಡೋಕೆ ನಾನಾ ವಿಧ. ಯಾರು ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೋ ಅದು ಅವರ ಅವರಿಗಷ್ಟೇ ಗೊತ್ತಿರುತ್ತೆ. ಆದರೆ.. ರೀಲ್ನಲ್ಲಿ ಚಿಗುರೊಡೆಯುವ ಪ್ರೀತಿ ಬಹುತೇಕ ರಿಯಲ್ ಆಗಿರುತ್ತೆ. ಇದಕ್ಕೆ.. ಉದಾಹರಣೆ ಎಂಬಂತೆ ಹೃದಯದಿಂದ ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಅನೇಕರು ಈ ಬಣ್ಣದ ಪ್ರಪಂಚದಲ್ಲಿದ್ದಾರೆ.
ಆದರೆ.. ಇವರೆಲ್ಲರ ನಡುವೆ ಈಗೀಗ ಅದ್ಯಾಕೋ ಕೆಲವರ ಬದುಕಿನಲ್ಲಿ ಅನ್ಯೋನ್ಯತೆಯ ಕೊರತೆ ಕಾಡುತ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ದಾಂಪತ್ಯ ಮುರಿದು ಬೀಳುತ್ತಿದೆ. ಇದಕ್ಕೆ ಈ ವರ್ಷ ದೂರವಾದ ತಾರೆಯರ ಬದುಕೇ ಸಾಕ್ಷಿ. ಹೌದು..2024ರಲ್ಲಿ 07 ತಿಂಗಳು ಉರುಳಿವೆ. ಆದರೆ ಈ 07 ತಿಂಗಳಿನಲ್ಲಿ ಅನೇಕರ ಸಂಸಾರದ ಜಗಳ ಬೀದಿಗೆ ಬಂದಿದೆ. ದಾಂಪತ್ಯ ಮುರಿದು ಬಿದ್ದಿದೆ. ಇದಕ್ಕೆ ನಿನ್ನೆ-ಮೊನ್ನೆಯ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ಒಂದು ಉದಾಹರಣೆ.

ಸೆರ್ಬಿಯಾ ಸುಂದರಿಯ ಮೇಲೆ ಪ್ರೀತಿ ಉಕ್ಕಿ ಹರಿದು ಎರಡೆರಡು ಬಾರಿ ಮದುವೆಯಾಗಿದ್ದ ಹಾರ್ದಿಕ್ ಪಾಂಡ್ಯ, ನಿನ್ನೆ ತಮ್ಮ ಪತ್ನಿ ನತಾಶಾ ಅವರಿಂದ ತಾವು ದೂರವಾಗಿರುವುದಾಗಿ ಅಧಿಕೃತವಾಗಿ ಹೇಳಿದ್ದಾರೆ. ಇಬ್ಬರ ನಡೆ ಹಿಂದೆ ಅನೇಕ ಬಾರಿ ಅನುಮಾನಕ್ಕೆ ಕಾರಣವಾಗಿತ್ತಾದರೂ, ಹಾರ್ದಿಕ್ ಮತ್ತು ನತಾಶಾ ಅವರ ಮಗ ಅಗಸ್ತ್ಯಗೋಸ್ಕರವಾದರೂ ಜೊತೆಯಲ್ಲಿರುತ್ತಾರೆ ಎಂದೇ ಅನೇಕರು ಅಂದುಕೊಂಡಿದ್ದರು. ಆದರೆ, ದುರಾದೃಷ್ಟವಶಾತ್ ಹಾಗಾಗಲಿಲ್ಲ.
ಇನ್ನೂ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಕಥೆ ನಿಮಗೆ ಗೊತ್ತು. 04 ವರ್ಷದ ಹಿಂದೆ ಖುಷಿ ಖುಷಿಯಾಗಿ ಮದುವೆಯಾಗಿದ್ದ ಚಂದನ್ ಮತ್ತು ನಿವೇದಿತಾ ನಗು ನಗುತ್ತಾನೇ ದೂರವಾದರು. ತಮ್ಮ ನಡುವೆ ಹೊಂದಾಣಿಕೆಯ ಕೊರತೆ ಇರುವುದಕ್ಕೆ ನಾವು ದೂರವಾಗುತ್ತಿದ್ದೇವೆ ಎಂದು ಹೇಳಿದರು. ಭಿನ್ನಾಭಿಪ್ರಾಯ, ವರ್ಕ್ ಕಮ್ಮಿಟ್ಮೆಂಟ್ ಹೀಗೆ ಒಂದಿಷ್ಟು ಕಾರಣಗಳನ್ನೂ ನೀಡಿದರು. ಸದ್ಯ ಚಂದನ್ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನಾಯಕನಾಗಿ ಬಡ್ತಿ ಪಡೆದಿದ್ದಾರೆ. ರೀಲ್ಸ್ ಪ್ರಪಂಚದಲ್ಲಿ ನಿವೇದಿತಾ ಕಳೆದುಹೋಗಿದ್ದಾರೆ.

ಕೇವಲ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನ ವಿಚಾರ ಮಾತ್ರ ಕರುನಾಡಿನಲ್ಲಿ ಈ ವರ್ಷ ಸದ್ದು ಮಾಡಲಿಲ್ಲ. ದೊಡ್ಮನೆಯ ಕುಡಿ ಯುವರಾಜ್ ಕುಮಾರ್ ಮತ್ತು ಅವರ ಪತ್ನಿ ಶ್ರೀದೇವಿ ಅವರ ಮನಸ್ತಾಪ ಕೂಡ ಚರ್ಚೆಯಾಯಿತು. ಆದರೆ.. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಂತೆ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಗಂಭೀರತೆಯನ್ನು ಗ್ರಹಿಸುವಲ್ಲಿ ವಿಫಲವಾಗಿದ್ದು .. ಇಬ್ಬರ ವೈಯಕ್ತಿಕ ವಿಚಾರಗಳು ಬೀದಿಗೆ ಬಂದು ಸಾರ್ವಜನಿಕರ ಬಾಯಿ ಸೇರಿದ್ದು ದುರ್ದೈವ. ಅಂದ್ಹಾಗೇ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಅವರ ವಿಚ್ಛೇದನದ ಅರ್ಜಿ ವಿಚಾರಣೆ ಇನ್ನೂ ನಡೆಯುತ್ತಿದೆ.
ಇನ್ನೂ.. ಈ ವರ್ಷ ಬಾಲಿವುಡ್ನ ಹಿರಿಯ ಜೀವ ಧಮೇಂದ್ರ ಮತ್ತು ಹೇಮಾಮಾಲಿನಿಯ ಮಗಳು ಇಶಾ ಡಿಯೋಲ್ ಕೂಡ ಸಂಸಾರ ನೌಕೆಯಿಂದ ಇಳಿದರು. ಈ ವರ್ಷದ ಆರಂಭದಲ್ಲಿಯೇ ಉದ್ಯಮಿ ಭರತ್ ತಕ್ತಾನಿ ಜೊತೆ ತಮ್ಮ ಹನ್ನೆರಡು ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು-ನೀರು ಬಿಟ್ಟರು. ಈ ಇಬ್ಬರಿಗೆ ಇಬ್ಬರು ಮಕ್ಕಳಿದ್ದಾರೆ.

ಸೂರ್ಯವಂಶ, ಓ ನನ್ನ ನಲ್ಲೆ, ಸೇರಿ ಹಿಂದಿಯಲ್ಲಿ ಹತ್ತಾರು ಸಿನಿಮಾ ಮಾಡಿರುವ ಇಶಾ ಕೊಪ್ಪಿಕರ್ ಕೂಡ ಕಳೆದ ವರ್ಷದ ಅಂತ್ಯದಲ್ಲಿ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದರು. ಹೋಟೆಲ್ ಉದ್ಯಮಿ ಟಿಮ್ಮಿ ನಾರಂಗ್ ಅವರಿಗೆ ಸೋಡಾಚೀಟಿ ನೀಡಿದರು. ಇವರಿಗೆ ರಿಯಾನ್ನ ಅನ್ನೋ 9 ವರ್ಷದ ಮಗಳು ಇದ್ದಾರೆ.
ಹಿಂದಿಯ ಕಿರುತೆರೆಯ ನಾಯಕಿ ಮತ್ತು ಬಿಗ್ ಬಾಸ್ ಸ್ಫರ್ಧಿ ದಿಲ್ಜೀತ್ ಕೌರ್ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು ಕೂಡ ಇದೇ ವರ್ಷದಲ್ಲಿ. ದಿಲ್ಜೀತ್ ಕೌರ್ ಮತ್ತು ನಿಖಿಲ್ ಪಟೇಲ್ ಅವರ ಸಂಸಾರ ಕೂಡ ಬೀದಿ ರಂಪವಾಗಿದ್ದು ದುರಂತ. ಇನ್ನೂ ಇಬ್ಬರು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಲೇ ಇದ್ದಾರೆ.

ಇವರೆಲ್ಲರ ಸಾಲಿಗೆ ಈ ವರ್ಷ ಅಂತ್ಯವಾಗುವುದರೊಳಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಕೂಡ ಸೇರಿಕೊಳ್ಳುವ ಎಲ್ಲ ಲಕ್ಷಣ ಸದ್ಯಕ್ಕೆ ಹೆಚ್ಚಾಗಿವೆ. ಎಲ್ಲರಂತೆ ಈ ಮುದ್ದಾದ ಜೋಡಿ ಕೂಡ ದೂರವಾಗಬಾರದು ಅನ್ನುವ ಪ್ರಾರ್ಥನೆಯನ್ನು ಇವರ ಅಭಿಮಾನಿ ಬಳಗ ಸದ್ಯಕ್ಕೆ ಮಾಡುತ್ತಿದೆ.ಒಟ್ನಲ್ಲಿ ಸಂಸಾರ ಮಾಡುವುದೆಂದರೆ ಸರಿಗಮ ಹಾಡಿದ ಹಾಗಲ್ಲ. ಸಂಸಾರ ನಡೆಸುವುದೊಂದು ಸಾಧನೆ. ಈ ಹಾದಿಯಲ್ಲಿ ಸಂಪೂರ್ಣ ಯಶಸ್ಸು ಕಾಣುವವರು ಕಡಿಮೆ. ಇದಕ್ಕೆ ಈ ತಾರೆಯರ ಬದುಕೇ ಸಾಕ್ಷಿ.


Click it and Unblock the Notifications











