'ವೀರಪ್ಪ ನಾಯ್ಕ' ಚಿತ್ರಕ್ಕೆ ಸಾಹಸಸಿಂಹ ವಿಷ್ಣುವರ್ಧನ್ ಪಡೆದ ಸಂಭಾವನೆ ಎಷ್ಟು?
ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ವೀರಪ್ಪ ನಾಯ್ಕ' ಕನ್ನಡ ಸಿನಿರಸಿಕರು ಎಂದು ಮರೆಯದ ಸಿನಿಮಾ. ಎಸ್. ನಾರಾಯಣ್ ಈ ದೇಶಭಕ್ತಿ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ತ್ರಿವರ್ಣ ಧ್ವಜ ನೇಯುವ ಧಾರಾವಾಡದ ಗರಗ ಊರಿನ ಸುತ್ತಾ ಸುತ್ತುವಂತೆ ಕಥೆಯನ್ನು ಹೇಳಲಾಗಿತ್ತು.
'ವೀರಪ್ಪ ನಾಯ್ಕ' ಚಿತ್ರದಲ್ಲಿ ವಿಷ್ಣು ಗಾಂಧಿವಾದಿಯಾಗಿ ನಟಿಸಿದ್ದರು. ಖಡಕ್ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು. ಈ ಚಿತ್ರಕ್ಕಾಗಿ ಮೊದಲಬಾರಿಗೆ ಫೋಟೊಶೂಟ್ ಮಾಡಿಸಲಾಗಿತ್ತು. ಇದು ವಿಷ್ಣು ಚಿತ್ರವೊಂದಕ್ಕಾಗಿ ಮಾಡಿದ ಮೊದಲ ಫೋಟೊಶೂಟ್ ಆಗಿತ್ತು. ಎಸ್. ನಾರಾಯಣ್ ಮಾಡಿದ್ದ 'ಚೈತ್ರದ ಪ್ರೇಮಾಂಜಲಿ' ಸಿನಿಮಾ ಗೆದ್ದಾಗ ವಿಷ್ಣು ಬಹಳ ಖುಷಿಪಟ್ಟಿದ್ದರು. ಆಗಿನಿಂದಲೇ ಅವರ ನಿರ್ದೇಶನದಲ್ಲಿ ನಟಿಸಲು ಮನಸ್ಸು ಮಾಡಿದ್ದರು.

1995ರಲ್ಲಿ ಕೋಟಿ ರಾಮು ನಿರ್ಮಾಣದಲ್ಲಿ ವಿಷ್ಣುವರ್ಧನ್ಗಾಗಿ ಎಸ್. ನಾರಾಯಣ್ ಸಿನಿಮಾ ಮಾಡಬೇಕಿತ್ತು. ಅದಕ್ಕಾಗಿ 6 ತಿಂಗಳ ಕಾಲ ಕಥೆ ಬರೆದಿದ್ದರು. ಆದರೆ ಅದು ಇಷ್ಟವಾಗದೇ ಆ ಸಿನಿಮಾ ನಿಂತು ಹೋಗಿತ್ತು. 'ವೀರಪ್ಪ ನಾಯ್ಕ' ಚಿತ್ರ ಅದ್ಯಾವ ಪರಿ ಹಿಟ್ ಆಗಿತ್ತು ಅಂದರೆ ಪರಭಾಷಾ ನಾಯಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
'ವೀರಪ್ಪ ನಾಯ್ಕ' ಚಿತ್ರಕ್ಕೆ ವಿಷ್ಣುವರ್ಧನ್ ಎಷ್ಟು ಸಂಭಾವನೆ ಪಡೆದಿದ್ದರು ಎನ್ನುವ ಕುತೂಹಲ ಮೂಡುವುದು ಸಹಜ. ಅದು ಎಸ್. ನಾರಾಯಣ್ ತಮ್ಮದೇ ಬ್ಯಾನರ್ನಲ್ಲಿ ನಿರ್ಮಿಸಿದ ಸಿನಿಮಾ. "ಕಥೆ ಹೇಳಿ ಸಿನಿಮಾ ಮಾಡೋಣ ಎಂದಾಗ ನಾನೇ ನಿರ್ಮಾಪಕ. ನಿಮ್ಮನ್ನು ಇಟ್ಟುಕೊಂಡು ಸಿನಿಮಾ ಮಾಡುವಷ್ಟು ಶಕ್ತಿ ಇಲ್ಲ ಎಂದೆ. ಸಂಭಾವನೆ ಎಷ್ಟು ಕೊಡಬೇಕು ಎಂದಾಗ ಅವರು ಹೇಳಿದ್ದು ಒಂದೇ ಮಾತು. ಕಥೆ ನನಗೆ ಇಷ್ಟವಾದರೆ ಸಾಕು ಸಂಭಾವನೆ ನೀವು ಕೊಟ್ಟಷ್ಟು ತಗೋತ್ತೀನಿ ಎಂದಿದ್ದರು" ಎಂದು ಎಸ್. ನಾರಾಯನ್ ಹೇಳಿದ್ದಾರೆ.

ರಾಜೇಶ್ ರಾಮನಾಥ್ ಸಂಗೀತದಲ್ಲಿ 'ವೀರಪ್ಪ ನಾಯ್ಕ' ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿತ್ತು. ಅದರಲ್ಲೂ 'ಭಾರತಾಂಬೆ ನಿನ್ನ ಜನುಮದಿನ' ಹಾಡು ಇವತ್ತಿಗೂ ಜನಜನಿತ. ಕನ್ನಡದಲ್ಲಿ ದೇಶಭಕ್ತಿ ಗೀತೆ ಅಂದಾಗ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅಂತಾದೊಂದು ಅದ್ಭುತ ಸಾಹಿತ್ಯ, ಸಂಗೀತ ಈ ಹಾಡಿನದ್ದು.
'ವೀರಪ್ಪ ನಾಯ್ಕ' ಚಿತ್ರದ 6 ಹಾಡುಗಳನ್ನು ಎಸ್. ಪಿ ಬಾಲಸುಬ್ರಮಣ್ಯಂ ಹಾಡಿದ್ದರು. ನಿರ್ದೇಶಕ ಎಸ್. ನಾರಾಯಣ್ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. 'ಭಾರತಾಂಬೆ ನಿನ್ನ ಜನ್ಮದಿನ' ಹಾಡು ಬರೆಯಲು ಎಷ್ಟು ಸಮಯ ಹಿಡಿಸಿತು ಎಂದರೆ ಕೇವಲ 10 ನಿಮಿಷ ಎಂದು ಎಸ್. ನಾರಾಯಣ್ ತಿಳಿಸಿದ್ದಾರೆ.
ನಾನು ಸಾಮಾನ್ಯವಾಗಿ ಎಲ್ಲಾ ಹಾಡುಗಳನ್ನು 10-15 ನಿಮಿಷದಲ್ಲಿ ಬರೆದುಬಿಡ್ತೀನಿ. 'ವೀರಪ್ಪ ನಾಯ್ಕ' ಕಥೆ ಮಾಡಿಕೊಂಡಾಗಲೇ ಇಂತಾದೊಂದು ಹಾಡು ಇರಬೇಕು ಎಂದುಕೊಂಡೆ. ಕಥೆ ಮಾಡಿಕೊಳ್ಳುವ ಸಮಯದಲ್ಲೇ 'ಭಾರತಾಂಬೆ ನಿನ್ನ ಜನ್ಮದಿನ' ಹಾಡಿನ ಪಲ್ಲವಿ ಸಿದ್ಧವಾಗಿಬಿಟ್ಟಿತ್ತು. ಬಳಿಕ ಹಾಡು ಬರೆಯಬೇಕು ಎಂದಾಗ 10 ನಿಮಿಷದಲ್ಲಿ ಚರಣ ಬರೆದು ಮುಗಿಸಿದೆ ಎಂದು ಮಾಹಿತಿ ನೀಡಿದ್ದಾರೆ.
'ವೀರಪ್ಪ ನಾಯ್ಕ' ಬಳಿಕ ಎಸ್. ನಾರಾಯಣ್ ಮತ್ತೆ ವಿಷ್ಣುವರ್ಧನ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಬೇಕು ಎಂದುಕೊಂಡರು. ಮೊದಲ ಚಿತ್ರದಲ್ಲಿ ಹಿಂದೆಂದೂ ನೋಡಿರದ ಪಾತ್ರದಲ್ಲಿ ಸಾಹಸಸಿಂಹನನ್ನು ತೋರಿಸಿ ಗೆದ್ದಿದ್ದರು. ಬಳಿಕ 'ಸಂಗೊಳ್ಳಿ ರಾಯಣ್ಣ' ಹಾಗೂ 'ಮದಕರಿ ನಾಯಕ' ಜೀವನಾಧರಿತ ಸಿನಿಮಾ ಮಾಡಲು ಪ್ರಯತ್ನಿಸಿದ್ದರು. ಚಿತ್ರಕಥೆ ಸಹ ಸಿದ್ಧವಾಗಿತ್ತು. ಆದರೆ ಯಾಕೋ ಅದು ಸಾಧ್ಯವಾಗಲಿಲ್ಲ. ಕೊನೆಗೆ 'ಸೂರ್ಯವಂಶ' ಚಿತ್ರಕ್ಕೆ ಈ ಜೋಡಿ ಜೊತೆಯಾಗಿತ್ತು.


Click it and Unblock the Notifications











