ಸಾಹಸಸಿಂಹ ವಿಷ್ಣುವರ್ಧನ್ಗೆ ನಾನ್ ವೆಜ್ ಅಭ್ಯಾಸ ಮಾಡಿಸಿದ್ಯಾರು?
ಅಭಿನಯ ಭಾರ್ಗವ ಸಾಹಸಸಿಂಹ ಸಿನಿಮಾ ವಿಷ್ಣುವರ್ಧನ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಸರಳ ವ್ಯಕ್ತಿತ್ವದಿಂದಲೂ ಎಲ್ಲರ ಹಾಟ್ ಫೇವರಿಟ್ ಎನಿಸಿಕೊಂಡಿದ್ದರು. ಸಿನಿಬದುಕಿನಲ್ಲಿ ಸಾಕಷ್ಟು ಏಳುಬೀಳು ಕಂಡರೂ ಸದಾ ನಗುತ್ತಾ ಶಾಂತಚಿತ್ತರಾಗಿ ಇರುತ್ತಿದ್ದರು ದಾದಾ. ಯಾವುದೇ ವಿವಾದಗಳಿಲ್ಲದೇ ಆಜಾತಶತ್ರುವಾಗಿ ಚಿತ್ರರಂಗದಲ್ಲಿ ಉಳಿದುಬಿಟ್ಟರು.
200ಕ್ಕೂ ಅಧಿಕ ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ. ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಕೂಡ ಅವರು ಬಣ್ಣ ಹಚ್ಚಿದ್ದರು. ತಮಿಳಿನಲ್ಲಿ ಹೀರೊ ಆಗಿ ನಟಿಸುವ ಸಾಕಷ್ಟು ಅವಕಾಶಗಳು ಸಿಕ್ಕರೂ ವಿಷ್ಣು ಕನ್ನಡ ಬಿಟ್ಟು ಹೋಗಲಿಲ್ಲ. ಆಗೊಮ್ಮೆ ಈಗೊಮ್ಮೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದರು.

ಕೊನೆ ಕೊನೆಗೆ ಆಧ್ಯಾತ್ಮದತ್ತ ವಿಷ್ಣುಗೆ ಆಸಕ್ತಿ ಹೆಚ್ಚಾಗಿತ್ತು. ಶೂಟಿಂಗ್ ಇಲ್ಲದ ಸಮಯದಲ್ಲಿ ಹೆಚ್ಚು ಬಿಳಿ ಬಣ್ಣದ ಬಟ್ಟೆ ತೊಡುತ್ತಿದ್ದರು. ಯೋಗ, ಧ್ಯಾನ ಎಂದು ಕಾಲ ಕಳೆಯುತ್ತಿದ್ದಾರೆ. ಮಿತಹಾರಿ ಆಗಿದ್ದ ದಾದಾ ಚಿಕ್ಕಂದಿನಿಂದ ಮಾಂಸಾಹಾರವನ್ನು ಸೇವಿಸುತ್ತಿದ್ದರು. ಅವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಆದರೂ ಚಿಕ್ಕಂದಿನಿಂದ ಚಿಕನ್ ತಿನ್ನುವುದು ಅಭ್ಯಾಸವಾಗಿತ್ತು.
ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ವಿಷ್ಣುವರ್ಧನ್ ಬಾಲ್ಯದ ಸ್ನೇಹಿತರು. ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದವರು. ವಿಷ್ಣು ಚಿಕನ್ ತಿನ್ನುವುದನ್ನು ಕಲಿತ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಜೇಂದ್ರ ಸಿಂಗ್ ಬಾಬು ನೆನಪಿಸಿಕೊಂಡಿದ್ದಾರೆ. ವಿಷ್ಣು ತಂದೆ ಎಚ್ಎಲ್ ನಾರಾಯಣ ರಾವ್ ತಂದೆ ನಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. 10-12ನೇ ವಯಸ್ಸಿನಲ್ಲೇ ಅವನು ನಮ್ಮ ಮನೆಗೆ ಬರ್ತಿದ್ದ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಹೀಗೆ ಚಿಕ್ಕಂದಿನಲ್ಲಿ ನಮ್ಮ ಮನೆಗೆ ಬಂದಾಗ ಚೂರು ಚಿಕನ್ ತಿನ್ನುತ್ತಿದ್ದ. ಅವರ ಅಪ್ಪ ಬೇಡ ಅಂತಿದ್ರು. ಆದ್ರು ಬಿಡಲಿಲ್ಲ. ಬಳಿಕ ಭಾರತಿ ಅವರನ್ನು ಮದುವೆ ಆದ ಬಳಿಕ ಚೆನ್ನೈನಲ್ಲಿ ವಿಷ್ಣು ಮನೆಯಲ್ಲಿ ಮಾಂಸಾಹಾರ ಅಡುಗೆ ಮಾಡುತ್ತಿದ್ದರು. ನಾನು- ವಿಷ್ಣು ಗಾಡಿಯಲ್ಲಿ ಹೋಗಿ ಚಿಕನ್, ಮಟನ್, ಫಿಶ್ ಎಲ್ಲಾ ತರ್ತಿದ್ವಿ. ಭಾರತಿ ಅವರು ಚೆನ್ನಾಗಿ ಅಡುಗೆ ಮಾಡ್ತಿದ್ರು. ಅಂಬಿ ಬಂದ್ರೆ ಮತ್ತೊಮ್ಮೆ ಮಾಡುತ್ತಿದ್ದೆವು ಎಂದು ವಿವರಿಸಿದ್ದಾರೆ.
ವಿಷ್ಣು ಕೆಲವು ವಿಚಾರಗಳಲ್ಲಿ ಬಹಳ ಮೂಡಿ ಆಗಿ ಇರುತ್ತಿದ್ದರು ಎಂದು ಹೇಳುತ್ತಾರೆ. ಕೆಲವೊಮ್ಮೆ 6 ತಿಂಗಳ ಕಾಲ ಮಾಂಸಾಹಾರ ಸೇವಿಸಿದರೆ ಮತ್ತೆ ಕೆಲ ತಿಂಗಳು ತಿನ್ನುತ್ತಿರಲಿಲ್ಲವಂತೆ. ಹೀಗೆ ಆಗಾಗ್ಗೆ ಕೆಲ ವಿಚಾರಗಳಲ್ಲಿ ದಾದಾ ಅಭಿರುಚಿ ಬದಲಾಗುತ್ತಿತ್ತು. ಇನ್ನು ಕಾಫಿ ಪ್ರಿಯರಾಗಿದ್ದ ವಿಷ್ಣು ಪದೇ ಪದೆ ಕಾಫಿ ಕುಡಿಯುತ್ತಿದ್ದರು. ಕೆಲ ಸಿನಿಮಾಗಳಲ್ಲಿ ವಿಷ್ಣು ಮಾಂಸಾಹಾರ ತಿನ್ನುವ ಸನ್ನಿವೇಶಗಳು ಇವೆ.
ನಾಯಕ ನಟರಿಗೆ ಫಿಟ್ನೆಸ್ ಬಹಳ ಮುಖ್ಯ. ನಟ ವಿಷ್ಣುವರ್ಧನ್ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಬಹಳ ಸ್ಲಿಮ್ ಆಗಿ ಮೋಡಿ ಮಾಡಿದ್ದರು. ಚಾಕಲೇಟ್ ಹೀರೊ ಆಗಿ ಮಹಿಳಾ ಅಭಿಮಾನಿಗಳ ಮನ ಗೆದ್ದಿದ್ದರು. ನಡುವೆ ಕೆಲ ವರ್ಷ ಕೊಂಚ ದಪ್ಪ ಆಗಿದ್ದರು. ಬಳಿಕ ಮತ್ತೆ ಸಣ್ಣಗಾದ ದಾದಾ ಕೊನೆಯವರೆಗೂ ಅದೇ ಫಿಟ್ನೆಸ್ ಕಾಯ್ದುಕೊಂಡಿದ್ದರು. ತೆರೆಮೇಲೆ ಕಮಾಲ್ ಮಾಡಿದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ವಿಷ್ಣು ಬಹಳ ಕಾಳಜಿ ವಹಿಸುತ್ತಿದ್ದರು. ಎಲ್ಲದಕ್ಕೂ ಇತಿಮಿತಿ ಇರಬೇಕು ಎಂದು ಅವರು ಹೇಳುತ್ತಿದ್ದರು. ಮುಖ್ಯವಾಗಿ ಆಹಾರ ಸೇವಿಸುವ ಬಗ್ಗೆ ಸಂದರ್ಶನವೊಂದರಲ್ಲಿ ದಾದಾ ಮಾತನಾಡಿದ್ದರು. ನಾವು ಮಾಡಿದ್ದು ನಮಗೆ ವಾಪಸ್ ಬರುತ್ತೆ, ಒಳ್ಳೆ ಪರಿಸರದಲ್ಲಿದ್ದರೆ ಒಳ್ಳೆ ಸಹವಾಸ ಇದ್ದರೆ ಒಳ್ಳೆ ವಿಚಾರಗಳು ಬರುತ್ತದೆ. ಮನಸ್ಸಿನ ಸ್ತಿಮಿತತೆ ಎನ್ನುತ್ತಿದ್ದರು.


Click it and Unblock the Notifications











