45 ಲಕ್ಷ ರೂ. ಸೆಟ್, ಒಂದೇ ದಿನ ಶೂಟಿಂಗ್, ಚಿನ್ನದ ಅಂಬಾರಿ ದೃಶ್ಯಗಳನ್ನು ಸೆರೆ ಹಿಡಿದಿದ್ದೇಗೆ?
ನಾಡಿನೆಲ್ಲಡೆ ದಸರಾ ಸಂಭ್ರಮ ಮನೆ ಮಾಡಿದೆ. ಚಿತ್ರರಂಗದಲ್ಲೂ ಹಬ್ಬದ ಸಂಭ್ರಮ ಇದೆ. ಇನ್ನು ದಸರಾ ಅಂದರೆ ಮೈಸೂರು ಜಂಬೂ ಸವಾರಿ ಮರೆಯೋಕೆ ಸಾಧ್ಯವಿಲ್ಲ. ಇದೇ ಜಂಬೂ ಸವಾರಿ ಹಿನ್ನೆಲೆಯಲ್ಲಿ ಕನ್ನಡದಲ್ಲಿ 'ನವಗ್ರಹ' ಸಿನಿಮಾ ಬಂದಿತ್ತು.
2008ರಲ್ಲಿ ಬಂದಿದ್ದ ಆಕ್ಷನ್ ಥ್ರಿಲ್ಲರ್ 'ನವಗ್ರಹ' ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಆದರೆ ಚಿತ್ರತಂಡ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಹಣದ ಆಸೆಗೆ ಕಳ್ಳರು ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿಯನ್ನೇ ಕದಿಯುವುದು, ಕೊನೆಗೆ ಅದೇ ದುರಾಸೆಯಿಂದ ಎಲ್ಲರೂ ಸಾಯುತ್ತಾರೆ. ಕನ್ನಡದ ಖ್ಯಾತ ಖಳನಟರ ಮಕ್ಕಳು 'ನವಗ್ರಹ' ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು ವಿಶೇಷ.

ದಿನಕರ್ ತೂಗುದೀಪ ನಿರ್ದೇಶನದ 'ನವಗ್ರಹ' ಚಿತ್ರದಲ್ಲಿ ದರ್ಶನ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್, ತರುಣ್ ಸುಧೀರ್, ಧರ್ಮ ಕೀರ್ತಿರಾಜ್ ಸೇರಿದಂತೆ ದೊಡ್ಡ ತಾರಾಗಣವಿತ್ತು. ತಮ್ಮದೇ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ದರ್ಶನ್ ಸಿನಿಮಾ ನಿರ್ಮಿಸಿದ್ದರು. ಎಕ್ಸಿಕ್ಯೂಟಿಪ್ ಪ್ರೊಡ್ಯೂಸರ್ ಆಗಿ ಹೊಂಬಾಳೆ ಫಿಲ್ಮ್ಸ್ ವಿಜಯ್ ಕಿರಗಂದೂರ್ ಇದ್ದರು. ಇವತ್ತಿಗೂ ದಸರಾ, ಮೈಸೂರು ಜಂಬೂ ಸವಾರಿ ಎಂದಾಕ್ಷಣ ಕನ್ನಡ ಸಿನಿರಸಿಕರಿಗೆ 'ನವಗ್ರಹ' ಸಿನಿಮಾ ನೆನಪಾಗುತ್ತದೆ.
'ನವಗ್ರಹ' ಸಿನಿಮಾ ನಿರ್ಮಾಣದ ಹಿಂದೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಮುಖ್ಯವಾಗಿ ಅಂಬಾರಿ ಕದಿಯುವುದು ಹಾಗೂ ಅದನ್ನು ತೆರೆಗೆ ತಂದ ಪರಿ. 750 ಕೆಜಿ ಚಿನ್ನದ ಅಂಬಾರಿ ಮೇಲೆ ಚಾಮುಂಡಿ ತಾಯಿ ಮೂರ್ತಿಯನ್ನು ಇಟ್ಟು ಜಂಬೂ ಸವಾರಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಆದರೆ ಅಂಬಾರಿಯನ್ನು ಚಿತ್ರೀಕರಣಕ್ಕೆ ಕೊಡಲ್ಲ. ಥೇಮ್ ಅಂಬಾರಿಯನ್ನೇ ಹೋಲುವ ಮರದ ಅಂಬಾರಿಯನ್ನು ನಿರ್ಮಿಸಿ ಚಿತ್ರೀಕರಣ ನಡೆಸಲಾಗಿತ್ತು.

ಮೈಸೂರಿನಲ್ಲಿ ಹುಟ್ಟಿ ಬೆಳೆದ ದಿನಕರ್ ಕಾಲೇಜು ದಿನಗಳಲ್ಲಿ ಸ್ನೇಹಿತರ ಜೊತೆ ಮಾತನಾಡುತ್ತಾ ಅಂಬಾರಿ ಕದ್ದರೆ ಲೈಫ್ ಸೆಟ್ಲ್ ಅಲ್ವಾ? ಎಂದು ತಮಾಚೆಯಾಗಿ ಮಾತನಾಡಿದ್ದರಂತೆ. ಬಳಿಕ ನಿರ್ದೇಶಕರಾದ ಮೇಲೆ ಅದೇ ಕಾನ್ಸೆಪ್ಟ್ನಲ್ಲಿ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. ಅಂದುಕೊಂಡಂತೆ ಸಿನಿಮಾ ತೆರೆಗೆ ತಂದರು.
ಮೈಸೂರು ಅರಮನೆಯಲ್ಲಿ ಕೂಡ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಸಿಗುವುದಿಲ್ಲ. ಸರ್ಕಾರದ ಸುರ್ಪದಿಯಲ್ಲಿ ಇರುವ ಅರಮನೆಯಲ್ಲಿ ಯಾವುದೇ ಖಾಸಗಿ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೆ ರಾಜರಿಗೆ ಸೇರಿದ ಅರಮನೆ ಹಿಂಭಾಗದ ಮ್ಯೂಸಿಮ್ ಸೇರಿ ಒಂದಷ್ಟು ಸ್ಥಳಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಗುತ್ತದೆ. ಅಂಬರೀಶ್ ಅವರ ಸಹಾಯದಿಂದ ಅಲ್ಲಿ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿತ್ತು ಎಂದು ದಿನಕರ್ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಹಿಂದೆ ಹೇಳಿಕೊಂಡಿದ್ದರು.
ಸಿಂಹ ಘರ್ಜನೆ, ಸುರಂಗ ಮಾರ್ಗದ ಸೆಟ್ ನಿರ್ಮಿಸಿದ್ದೆವು. ಬರೋಬ್ಬರಿ 45 ಲಕ್ಷ ರೂ. ಖರ್ಚು ಮಾಡಿ ಆ ಕಾಲಕ್ಕೆ ಆ ಸೆಟ್ ಹಾಕಿದ್ದೆವು. ಆದರೆ ಕೇವಲ 24 ಗಂಟೆಗಳಲ್ಲಿ ಚಿತ್ರೀಕರಣ ಮುಗಿಸಿಬಿಟ್ಟೆ. ಇದನ್ನು ಕೇಳಿ ದರ್ಶನ್ ಹಾಗೂ ನಮ್ಮಮ್ಮ ಶಾಕ್ ಆಗಿದ್ದರು. ಅಲ್ಲಾ 45 ಲಕ್ಷ ರೂ. ಸೆಟ್ ಹಾಕಿ ಇಷ್ಟು ಬೇಗ ಶೂಟಿಂಗ್ ಮುಗೀತಾ? ಈ ಹಣದಲ್ಲಿ ಒಂದು ಮನೆ ಕಟ್ಟಬಹುದು. ಅಂಥಾದ್ರಲ್ಲಿ ಒಂದೇ ದಿನ ಚಿತ್ರೀಕರಣ ಅಷ್ಟೇನಾ? ಎಂದು ದರ್ಶನ್ ಹೇಳಿದ್ದಾಗಿ ದಿನಕರ್ ನೆನಪಿಸಿಕೊಂಡಿದ್ದರು.
ಇನ್ನು ಚಿತ್ರದಲ್ಲಿ ಅಂಬಾರಿಯೇ ಹೈಲೆಟ್. ಅಂಬಾರಿಯ ಕೆಲ ಫೋಟೊಗಳನ್ನು ತೋರಿಸಿ ಆರ್ಟ್ ಡೈರೆಕ್ಟರ್ಗೆ ಮರದ ಅಂಬಾರಿ ನಿರ್ಮಿಸಿಕೊಡಲು ಹೇಳಿದ್ದೆ. ಸುಂದರ್ ಎನ್ನುವ ಹಿರಿಯ ಆರ್ಟ್ ಡೈರೆಕ್ಟರ್ ಚೆನ್ನೈನಿಂದ ಕಾರ್ಪೆಂಟರ್ಗಳನ್ನು ಕರೆಸಿ ಒರಿಜಿನಲ್ ಅಂಬಾರಿ ರೀತಿಯ ಮರದ ಅಂಬಾರಿ ಮಾಡಿಕೊಟ್ಟರು. ಗಾತ್ರ, ಡಿಸೈನ್, ಬಣ್ಣ ಎಲ್ಲವೂ ಪರ್ಫೆಕ್ಟ್ ಎನ್ನುವಂತೆ ಅಂಬಾರಿ ಸಿದ್ಧವಾಗಿತ್ತು ಎಂದು ದಿನಕರ್ ಹೇಳಿದ್ದರು.
ಚಿತ್ರದಲ್ಲಿ ಪೊಲೀಸರನ್ನು ಯಾಮಾರಿಸಲು ಐದಾರು ಮರದ ಅಂಬಾರಿಗಳನ್ನು ನಿರ್ಮಿಸಿ ಊರೆಲ್ಲಾ ಸುತ್ತಾಡಿಸುವ ಸನ್ನಿವೇಶವೂ ಇದೆ. ಹೀಗೆ ಇಡೀ ಚಿತ್ರದಲ್ಲಿ ಅಂಬಾರಿಯೇ ಕೇಂದ್ರ ಬಿಂದುವಾಗಿತ್ತು. ಆ ದೃಶ್ಯಗಳನ್ನು ಬಹಳ ಸೊಗಸಾಗಿ ತೆರೆಗೆ ತರಲಾಗಿತ್ತು. ಪ್ರೇಕ್ಷಕರು ಒಪ್ಪುವಂತೆ ದೃಶ್ಯಗಳು ಮೂಡಿ ಬಂದಿದ್ದವು. ಇವತ್ತಿಗೂ ದರ್ಶನ್ ಅಭಿಮಾನಿಗಳು 'ನವಗ್ರಹ' ಸೀಕ್ವೆಲ್ ಮಾಡುವಂತೆ ಕೇಳುತ್ತಲೇ ಇದ್ದಾರೆ.


Click it and Unblock the Notifications











