'ಶಬ್ಧವೇದಿ' ಹಾಡಿನ ಸ್ಫೂರ್ತಿ ಪಡೆದು 'ಅಯ್ಯ' ಚಿತ್ರದ ಹಾಡು ಮಾಡಿದ್ವಿ; ಓಂ ಪ್ರಕಾಶ್ ರಾವ್
ದರ್ಶನ್ ಹಾಗೂ ರಕ್ಷಿತಾ ನಟನೆಯ 'ಅಯ್ಯ' ಸಿನಿಮಾ ಹಿಟ್ ಆಗಿತ್ತು. ಬೇರೆ ಭಾಷೆಯ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಓಂಪ್ರಕಾಶ್ ರಾವ್ ಈ ಸಿನಿಮಾ ಕಟ್ಟಿಕೊಟ್ಟಿದ್ದರು. ಅಚ್ಚರಿ ಎನ್ನುವಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದರು.
ಹಂಸಲೇಖರಿಂದ ದೂರಾದ ಬಳಿಕ ರವಿಚಂದ್ರನ್ ತಮ್ಮ ಸಿನಿಮಾಗಳಿಗೆ ತಾವೇ ಮ್ಯೂಸಿಕ್ ಮಾಡಲು ಆರಂಭಿಸಿದ್ದರು. 'ನಾನು ನನ್ನ ಹೆಂಡ್ತೀರು' ಚಿತ್ರಕ್ಕೆ ಮೊದಲ ಬಾರಿ ಟ್ಯೂನ್ ಹಾಕಿದ್ದರು. ತಾವೇ ನಿರ್ದೇಶಿಸಿ ನಟಿಸಿದ 'ಮಲ್ಲ' ಚಿತ್ರಕ್ಕೂ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದರು. 'ಮಲ್ಲ' ಚಿತ್ರ ಗೆಲ್ಲುತ್ತದೆ ಎಂದು ಮೊದಲು ಹೇಳಿದ್ದವರೆ ಓಂಪ್ರಕಾಶ್ ರಾವ್ ಅಂತೆ. ಈ ವಿಚಾರವನ್ನು Keerthi ENT Clinic ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ನೆನಪಿಸಿಕೊಂಡಿದ್ದಾರೆ.

'ಅಯ್ಯ' ಚಿತ್ರಕ್ಕೆ ರವಿಚಂದ್ರನ್ ಸರ್ ಅವರಿಂದ ಮ್ಯೂಸಿಕ್ ಮಾಡಿಸ್ತೀನಿ ಅಂದಾಗ ಯಾರು ನಂಬಲಿಲ್ಲ. ಆದರೆ ನಾನು ಕೇಳಿದಾಗ ಅವರು ಬಂದು ಮಾಡಿಕೊಟ್ಟರು ಎಂದು ಓಂಪ್ರಕಾಶ್ ರಾವ್ ಹೇಳಿದ್ದಾರೆ. ನಾನು ನಿರ್ದೇಶಿಸಿದ 'ಸಾಹುಕಾರ' ಚಿತ್ರದಲ್ಲಿ ರವಿ ಸರ್ ನಟಿಸಿದ್ದರು. ಬಳಿಕ 'ಮಲ್ಲ' ಸಿನಿಮಾ ಬಂದಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಪ್ರೀಮಿಯರ್ ಶೋ ಹಾಕಿದ್ದರು. ನಿರ್ಮಾಪಕ ರಾಮು ಸೇರಿದಂತೆ ಅವರ ಆಪ್ತರೆಲ್ಲಾ ಸಿನಿಮಾ ನೋಡಿ ಚೆನ್ನಾಗಿಲ್ಲ ಎಂದುಬಿಟ್ಟಿದ್ದರು. ನಾನು ಮಾತ್ರ ಮಲ್ಲ ಮತ್ತೊಂದು 'ಪುಟ್ನಂಜ' ಆಗುತ್ತೆ ಎಂದಿದ್ದೆ ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.
ಎಲ್ಲರೂ 'ಮಲ್ಲ' ಸಿನಿಮಾ ಚೆನ್ನಾಗಿಲ್ಲ, ಓಡಲ್ಲ ಅಂದ್ರು. ನಾನು ಮಾತ್ರ ಸೂಪರ್ ಹಿಟ್ ಆಗುತ್ತೆ ಎಂದು ಭವಿಷ್ಯ ನುಡಿದಿದ್ದೆ. ಈ ವಿಚಾರ ರವಿ ಸರ್ಗೆ ಗೊತ್ತಾಗಿತ್ತು. ಮುಂದೆ ನಾನು ಹೇಳಿದಂತೆ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ರವಿ ಸರ್ ಹಾಗೂ ನನ್ನ ನಡುವೆ ಒಡನಾಟ ಹೆಚ್ಚಾಗಿತ್ತು. ಇದೇ ಕಾರಣಕ್ಕೆ 'ಅಯ್ಯ' ಚಿತ್ರಕ್ಕೆ ಅವರಿಂದ ಸಂಗೀತ ಮಾಡಿಸೋಣ ಎಂದುಕೊಂಡೆ. ಯಾರು ನಂಬಲಿಲ್ಲ. ಅವ್ರು ಬಂದು ನಿಮ್ಮ ಚಿತ್ರಕ್ಕೆ ಮ್ಯೂಸಿಕ್ ಮಾಡ್ತಾರಾ ಅಂದಿದ್ರು. ಕೆಲಸಗಾರ ಕರೆದ್ರೆ ಕನಸುಗಾರ ಬರಲ್ವಾ? ಅಂದೆ. ನಾನು ಹೋಗಿ ಕೇಳಿದಾಗ ಸರಿ ಕಣೋ ಮಾಡೋಣ ಎಂದುಬಿಟ್ಟರು.
'ಅಯ್ಯ' ಚಿತ್ರಕ್ಕೆ ರವಿ ಸರ್ ಒಳ್ಳೆ ಹಾಡುಗಳು ಮಾಡಿಕೊಟ್ರು.. ಕೊನೆಗೆ ಟೈಟಲ್ ಸಾಂಗ್ ಬಗ್ಗೆ ಚರ್ಚೆ ಶುರುವಾಯ್ತು.. ಏನ್ ಮಾಡೋಣ ಅಂತ ಕೇಳಿದ್ರು. ಏನಿಲ್ಲಾ ಸರ್, 'ಶಬ್ಧವೇದಿ' ಚಿತ್ರದಲ್ಲಿ 'ಬಾರೋ ಬಾರೋ ಶ್ರೀಕೃಷ್ಣ ಬಾರೋ' ಹಾಡು ಇದೆ. ಅದೇ ಸ್ವಲ್ಪ ರಿವರ್ಸ್ ಮಾಡಿದ್ರೆ ಹೇಗಿರುತ್ತೋ ಹಾಗೆ ಬೇಕು ಅಂದೆ. ಅದೇ 'ಅಯ್ಯ' ಟೈಟಲ್ ಸಾಂಗ್ ಆಯ್ತು ಎಂದು ಓಂ ಪ್ರಕಾಶ್ ರಾವ್ ನಕ್ಕಿದ್ದಾರೆ.
ಕಥೆ ರೆಡ್ಡಿ ಇಲ್ಲದೇ 'ಅಯ್ಯ' ಸಿನಿಮಾ ಆರಂಭಿಸಿಬಿಟ್ಟಿದ್ವಿ. ದರ್ಶನ್ ಅವರು ಅಲ್ಲಿವರೆಗೆ ಪೊಲೀಸ್ ಆಫೀಸರ್ ಪಾತ್ರ ಮಾಡಿರಲಿಲ್ಲ. ಸರಿ ಉತ್ತರ ಕರ್ನಾಟಕದ ಕಥೆ, ದರ್ಶನ್ ಅವರು ಪೊಲೀಸ್ ಎಂದು ಕಥೆ ಆರಂಭಿಸಿದೆವು. ಇಂಟ್ರೊಡಕ್ಷನ್ ಸೀನ್ ಶೂಟ್ ಕೂಡ ಮಾಡಿಬಿಟ್ವಿ ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ. 10 ಸಿನಿಮಾಗಳಿಂದ ಕದ್ದು 'ಅಯ್ಯ' ಸಿನಿಮಾ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
'ಅಯ್ಯ' ಚಿತ್ರದ 'ಕೆಟ್ಟೊದೆ ಕೆಟ್ಟೊದೆ' ಸಾಂಗ್ ಸಾಹಿತ್ಯ ಕೊನೆ ಕ್ಷಣದಲ್ಲಿ ಬದಲಾಯಿಸಿದ್ದನ್ನು ಕೆ. ಕಲ್ಯಾಣ್ ಈ ಹಿಂದೆ ಹೇಳಿದ್ದರು. ಸೆನ್ಸಾರ್ ಸಮಸ್ಯೆಯಿಂದ ಅದಾಗಲೇ ಚಿತ್ರೀಕರಣ ಮಾಡಿದ್ದ ಹಾಡಿಗೆ ಸಾಹಿತ್ಯ ಬದಲಿಸಿ, ಎಡಿಟ್ ಮಾಡಿ ರಿಲೀಸ್ ಮಾಡಿದ್ದನ್ನು ಅವರು ವಿವರಿಸಿದ್ದರು. ರವಿ ಸರ್ ಒಪ್ಪಿಗೆ ಮೇರೆಗೆ ಸಾಹಿತ್ಯ ಬದಲಿಸಿದ್ದಾರೆ ತಿಳಿಸಿದ್ದರು.


Click it and Unblock the Notifications