'ಪ್ರೇಮಲೋಕ' ಸಕ್ಸಸ್ ಬಳಿಕ ರೀಮೆಕ್ 'ರಣಧೀರ' ಮಾಡಿದ್ದು ತಪ್ಪು ಹೆಜ್ಜೆ ಆಗಿತ್ತು- ಹಂಸಲೇಖ
ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ 'ಪ್ರೇಮಲೋಕ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದು ಗೊತ್ತೇಯಿದೆ. ಬಳಿಕ ಇವರಿಬ್ಬರು ಕಾಂಬಿನೇಷನ್ ಆಲ್ಬಮ್ಗಳೆಲ್ಲಾ ಸೂಪರ್ ಹಿಟ್ ಆಗಿತ್ತು. ಮೊದಲ 5 ವಾರ 'ಪ್ರೇಮಲೋಕ' ಸಿನಿಮಾ ಪ್ರೇಕ್ಷಕರ ಬರ ಎದುರಿಸಿತ್ತು. ಬಳಿಕ ದಾಖಲೆ ಪ್ರದರ್ಶನ ಕಂಡಿತ್ತು.
'ಪ್ರೇಮಲೋಕ' ಬೆನ್ನಲ್ಲೇ 'ರಣಧೀರ' ಸಿನಿಮಾ ಮಾಡಿದ್ದರು. ಅದು ಕೂಡ ಹಿಟ್ ಲಿಸ್ಟ್ ಸೇರಿತ್ತು. ಬಾಲಿವುಡ್ 'ಹೀರೊ' ಸಿನಿಮಾದಿಂದ ಸ್ಫೂರ್ತಿ ಪಡೆದು ಈ ಚಿತ್ರ ಮಾಡಿದ್ದರು. ಆದರೆ ಹೊಸದಾಗಿ ಹಾಡುಗಳನ್ನು ಮಾಡಿ ನಾದಬ್ರಹ್ಮ ಗೆದ್ದಿದ್ದರು. ಈ ಬಗ್ಗೆ ವಚನ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಹಂಸಲೇಖ ಮಾತನಾಡಿದ್ದಾರೆ.

ಅಲ್ಲಿಯವರೆಗೆ ಕನ್ನಡದಲ್ಲಿ ಒಂದೇ ತರಹದ ಸಂಗೀತ ಇತ್ತು. ಆದರೆ ಬೇರೆ ಭಾಷೆಗಳಲ್ಲಿ ಬದಲಾಗಿತ್ತು. ಅಂತಹ ಸಮಯದಲ್ಲಿ 'ಪ್ರೇಮಲೋಕ' ಸಿನಿಮಾ ಮಾಡುವಂತಾಯಿತು. ರವಿಚಂದ್ರನ್ ಕೂಡ ನನ್ನಂತೆಯೇ ಚಿಂತಿಸುತ್ತಿದ್ದರು. ಅವರ ವೇಗಕ್ಕೆ ನಾನು ಜೊತೆಯಾದೆ. ಹೊಸತನ ಮೂಡಿ ಬಂತು. ಪ್ರೇಕ್ಷಕರನ್ನು ಕೊಂಚ ಡಿಸ್ಟರ್ಬ್ ಮಾಡಿ ಗಮನ ಸೆಳೆಯುವ ಪ್ರಯತ್ನ ಮಾಡಿ ಗೆದ್ದೆವು. ಹಾಗಾಗಿ 'ಪ್ರೇಮಲೋಕ' ಚಿತ್ರದಲ್ಲಿ ಅಂತಹ ಹಾಡುಗಳು ಬಂತು. ಹಾಡುಗಳ ಮೂಲಕವೇ ಕತೆ ಹೇಳಿದ್ದೆವು ಎಂದು ಹಂಸಲೇಖ ಮೆಲುಕು ಹಾಕಿದ್ದಾರೆ.
'ಪ್ರೇಮಲೋಕ' ಚಿತ್ರ ಮಾಡುವಾಗ ನಾವು 25 ವರ್ಷ ಅಡ್ವಾನ್ಸ್ ಆಗಿದ್ದೆವು ಎಂದು ಹಂಸಲೇಖ ಹೇಳಿದ್ದಾರೆ. "ಸಿನಿಮಾ ಬಿಡುಗಡೆಯಾದಾಗ ಏನ್ರೀ ಇದು ಚಿತ್ರಮಂಜರಿ ತರ ಇದೆ ಅಂದಿದ್ರು. 5 ವಾರ ಕಲೆಕ್ಷನ್ ಆಗಲಿಲ್ಲ. ಆಗ ರವಿಚಂದ್ರನ್ ಅವರಿಗೆ ಹೇಳಿದೆ. ದೂರದರ್ಶನ ಇದೆ. ನಮ್ಮ ಹಾಡುಗಳನ್ನು ಅಲ್ಲಿ ಹಾಕೋಣ ಅಂತ. ಅದೇ ರೀತಿ ದೂರದರ್ಶನದಲ್ಲಿ ಹಾಡುಗಳು ಪ್ರಸಾರವಾಗಿ ಜನಕ್ಕೆ ನಾಡಿಮಿಡಿತ ಗೊತ್ತಾಗಿ ಜನಸಾಗರ ಶುರುವಾಯಿತು. ಹಾಡುಗಳಲ್ಲೇ ಸಿನಿಮಾ ಮಾಡಬೇಕು ಎನ್ನುವ ಯೋಚನೆ ಇವತ್ತಿಗೂ ಯಾರಿಗೂ ಬಂದಿಲ್ಲ" ಎಂದು ನಾದಬ್ರಹ್ಮ ವಿವರಿಸಿದ್ದಾರೆ.

ಬಳಿಕ 'ರಣಧೀರ' ಸಿನಿಮಾ ಬಗ್ಗೆ ಹಂಸಲೇಖ ಮಾತನಾಡಿದ್ದಾರೆ. "ಆ ಚಿತ್ರಕ್ಕೆ ನನ್ನ ಕೊಡುಗೆ ಬಹಳ ಇದೆ. 'ಪ್ರೇಮಲೋಕ' ಬಳಿಕ ರೀಮೆಕ್ 'ರಣಧೀರ' ಮಾಡಬಾರದಿತ್ತು ನಾವು. ತಪ್ಪು ಹೆಜ್ಜೆ ಅದು. ಆದರೆ ವೀರಸ್ವಾಮಿ ನಿರ್ಧಾರ ತೆಗೆದುಕೊಂಡುಬಿಟ್ಟಿದ್ದರು. ಹಿಂದಿ ಸಿನಿಮಾ ನೋಡಿ ಸಂಭಾಷಣೆ ಬರೀರಿ, ನೀವೇ ಸಹ ನಿರ್ದೇಶಕರಾಗಿ ಸಂಗೀತ ಕೂಡ ಮಾಡಿ. ಹಿಂದಿ ಮ್ಯೂಸಿಕ್ ಬಳಸಿಕೊಳ್ಳಿ ಅಂದ್ರು. ನಾನು ಸಂಗೀತ ಮಾಡಲ್ಲ ಅಂದೆ. ಸ್ವಂತ ಮಾಡ್ತೀನಿ, ಇಲ್ಲ ಅಂದ್ರೆ ಬೇಡ ಎಂದೆ. ನಮ್ಮಿಬ್ಬರ ನಡುವೆ ವಾದ ನಡೀತು. ಬಳಿಕ ಮಗ ಬಂದ್ರು. ಹಂಸಲೇಖ ಹೇಳಿದಂತೆ ಮಾಡುವುದಾದರೆ ಇಟ್ಟುಕೊಳ್ಳೋಣ, ಇಲ್ಲದಿದ್ದರೆ ಅವ್ರನ್ನು ಬಿಟ್ಟುಬಿಡೋಣ ಅಂದ್ರು. ಹಾಗಾಗಿ ಹೊಸ ಹಾಡುಗಳನ್ನು ಮಾಡಿದ್ದೆವು" ಎಂದು ಮೆಲುಕು ಹಾಕಿದ್ದಾರೆ.
'ಲಂಬಿ ಜುದಾಯಿ' ಸಾಂಗ್ ಇದೆ. ಅದನ್ನಾದರೂ ಹಾಕಪ್ಪಾ ಅಂದ್ರು ವೀರಸ್ವಾಮಿ.. ಸಾಧ್ಯವಿಲ್ಲ ಎಂದೆ. ನಿಮ್ಮ ಮಗ ಯಂಗ್ಸ್ಟರ್.. ಅವ್ರು ಅಳ್ತಾ ಕೂರುವುದು ಸರಿಯಾಗಲ್ಲ ಅಂದೆ. ವೀರಸ್ವಾಮಿ ಕೋಪಗೊಂಡಿದ್ರು. ಕೊನೆಗೆ ಒಂದು ಕಾನ್ಸೆಪ್ಟ್ ಮಾಡಿ 'ಏನ್ ಹುಡ್ಗಿರೋ ಯಾಕಿಂಗಾಡ್ತಿರೋ' ಅಂತ ಸಾಂಗ್ ಮಾಡಿ ಅದರಲ್ಲಿ ಆ ಟ್ಯೂನ್ ಬರುವಂತೆ ಮಾಡಿ ಅವ್ರನ್ನು ಸಮಾಧಾನಪಡಿಸಿದ್ದೆ" ಎಂದು ಹಂಸಲೇಖ ವಿವರಿಸಿದ್ದಾರೆ.
ಒಂದ್ಕಾಲದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಿ ಗೆದ್ದ ರವಿಚಂದ್ರನ್ ಹಾಗೂ ಹಂಸಲೇಖ ಜೋಡಿ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. 'ಪ್ರೀತ್ಸೋದ್ ತಪ್ಪಾ' ಸಿನಿಮಾ ಬಳಿಕ ನಂತರ ಒಟ್ಟಿಗೆ ಕೆಲಸ ಮಾಡಲಿಲ್ಲ. ಆಗ ಸ್ವತಃ ರವಿಚಂದ್ರನ್ ಸಂಗೀತ ನಿರ್ದೇಶಕರಾಗಿ ತಮ್ಮ ಸಿನಿಮಾಗಳಿಗೆ ಕೆಲಸ ಮಾಡಲು ಆರಂಭಿಸಿದ್ದರು. ಬಳಿಕ ಇಬ್ಬರೂ ಮತ್ತೆ ಒಂದಾಗಿ ಕೆಲಸ ಮಾಡಿದ್ದರು. ಈಗ ಹಂಸಲೇಖ ಸಿನಿಮಾ ನಿರ್ದೇಶಕರಾಗುತ್ತಿದ್ದಾರೆ.


Click it and Unblock the Notifications











