ದಾದಾ-ದ್ವಾರ್ಕಿ ದೂರಾಗಿದ್ದೇಕೆ? 'ದ್ರೋಹಿ' ಸಿನಿಮಾ ಮಾಡಿ ವಿಷ್ಣು ತೇಜೋವಧೆಗೆ ಮುಂದಾಗಿದ್ದ ಆಪ್ತಮಿತ್ರ!
ಡಾ. ರಾಜ್ಕುಮಾರ್ ಹಾಗೂ ನರಸಿಂಹರಾಜು ಬಳಿಕ ಕನ್ನಡ ಚಿತ್ರರಂಗದಲ್ಲಿ ಆ ಮಟ್ಟಿಗೆ ಯಶಸ್ವಿಯಾದ ಮತ್ತೊಂದು ಜೋಡಿ ಸಾಹಸಿಂಹ ವಿಷ್ಣುವರ್ಧನ್ ಹಾಗೂ ದ್ವಾರಕೀಶ್. ಇಬ್ಬರೂ ಬರೀ ನಟರಾಗಿರಲಿಲ್ಲ, ಅಥವಾ ನಟ ಹಾಗೂ ನಿರ್ದೇಶಕ-ನಿರ್ಮಾಪಕ ಆಗಿರಲಿಲ್ಲ. ಬದಲಿಗೆ ಆತ್ಮೀಯ ಸ್ನೇಹಿತರಾಗಿಬಿಟ್ಟಿದ್ದರು. ಇಬ್ಬರ ನಡುವೆ ವಯಸ್ಸಿನಲ್ಲಿ ಏಳೆಂಟು ವರ್ಷ ವ್ಯತ್ಯಾಸ ಇದ್ದರೂ ಬಾರೋ, ಹೋಗೋ ಕುಚಿಕುಗಳಾಗಿದ್ದರು.
ವಿಷ್ಣುವರ್ಧನ್ ಚಿತ್ರರಂಗಕ್ಕೆ ಬರುವ ವೇಳೆಗಾಗಲೇ ದ್ವಾರಕೀಶ್ ಹಾಸ್ಯನಟನಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. ಮೊದಲಿಗೆ ದ್ವಾರಕೀಶ್ ಅವರನ್ನು ಅಂಕಲ್ ಎಂದೇ ಸಂಬೋಧಿಸುತ್ತಿದ್ದ ವಿಷ್ಣು, ಬಳಿಕ ಬಹಳ ಆಪ್ತರಾಗಿ ಏಕ ವಚನದಲ್ಲಿ ಕರೆಯುವಷ್ಟರ ಮಟ್ಟಿಗೆ ಬೆರತು ಹೋಗಿದ್ದರು. 'ಕಳ್ಳ-ಕುಳ್ಳ' ಚಿತ್ರದಿಂದ ಶುರುವಾದ ಇವರಿಬ್ಬರ ಸ್ನೇಹ ದಶಕಗಳ ಕಾಲ ಮುಂದುವರೆಯಿತು. ಇಬ್ಬರು ಒಟ್ಟಿಗೆ 15-16 ಸಿನಿಮಾಗಳಲ್ಲಿ ನಟಿಸಿದರು. ಎಲ್ಲವೂ ಹಿಟ್ ಆಗಿತ್ತು.

ದ್ವಾರಕೀಶ್ ನಿರ್ಮಾಣದ ಚಿತ್ರದಲ್ಲಿ ಕೂಡ ಸಾಹಸಸಿಂಹ ವಿಷ್ಣುವರ್ಧನ್ ನಟಿಸುತ್ತಾ ಬಂದರು. ಇಬ್ಬರಿಗೂ ಸಕ್ಸಸ್ ಜೊತೆಯಾಗಿತ್ತು. ಆದರೆ ಬಳಿಕ ಇಬ್ಬರ ನಡುವೆ ಸಂಬಂಧ ಹಳಸಿತ್ತು. ಪದೇ ಪದೆ ಪ್ಯಾಚ್ ಅಪ್ ಆಗುತ್ತಿತ್ತು. ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದರು. ಇಬ್ಬರೂ ಎತ್ತರದ ಸ್ಥಾನಕ್ಕೆ ಏರುತ್ತಿದ್ದಂತೆ ಇಬ್ಬರ ನಡುವೆ ಈಗೋ ಶುರುವಾಯಿತು. ಒಂದ ಹಂತದಲ್ಲಿ ನನ್ನ ಸಿನಿಮಾಗಳಿಗೇ ವಿಷ್ಣುನೇ ಹೀರೊ ಆಗಬೇಕು ಎಂದು ದ್ವಾರ್ಕಿ ಹಠಕ್ಕೆ ಬಿದ್ದರು. ಒಲ್ಲೆ ಎಂದಾಗ ನಾನು ಬೇರೆ ಹೀರೊನಾ ಹುಟ್ಟುಹಾಕುತ್ತೀನಿ ಎನ್ನುವ ಮಟ್ಟಕ್ಕೆ ದ್ವಾರಕೀಶ್ ಕೂಡ ಮೊಂಡುತನ ಮಾಡಿದರು. ಇದು ಪದೇ ಪದೆ ಇಬ್ಬರ ನಡುವೆ ತಿಕ್ಕಾಟಕ್ಕೆ ಕಾರಣವಾಗುತ್ತಿತ್ತು.
ವಿಷ್ಣು-ದ್ವಾರ್ಕಿ ಕೆಲವೊಮ್ಮೆ ಭಿನ್ನಾಭಿಪ್ರಾಯಗಳ ನಡುವೆಯೇ ಸಿನಿಮಾಗಳಲ್ಲಿ ನಟಿಸಿದ ಉದಾಹರಣೆಗಳು ಇವೆ. ಹೆಚ್ಚು ಸ್ನೇಹ ಇರುವ ಕಡೆ ಜಗಳಗಳು ಇರುತ್ತದೆ ಎನ್ನುವಂತೆ ಇಬ್ಬರೂ ಆಗಾಗ್ಗಾ ಜಗಳ ಮಾಡಿ ಮತ್ತೆ ಒಂದಾಗುತ್ತಿದ್ದರು. ಹೀಗೆ ಶೀತಲ ಸಮರದ ನಡುವೆಯೇ 'ರಾಯರು ಬಂದರು ಮಾವನ ಮನೆಗೆ' ಸಿನಿಮಾ ಮಾಡಿ ಗೆದ್ದರು. ಬಳಿಕ 'ಕಿಲಾಡಿಗಳು' ಚಿತ್ರ ಮಾಡಿದವರು 10 ವರ್ಷಗಳ ನಂತರ 'ಆಪ್ತಮಿತ್ರ' ಚಿತ್ರಕ್ಕೆ ಜೊತೆಯಾದರು. ಇಬ್ಬರ ನಡುವೆ ಯಾವುದೇ ದೊಡ್ಡ ಗಲಾಟೆ ಆಗುತ್ತಿರಲಿಲ್ಲವಾದರೂ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು ಎನ್ನುವರಿದ್ದಾರೆ.
ಕೆಲ ಸಂದರ್ಶನಗಳಲ್ಲಿ ಕೂಡ ದ್ವಾರಕೀಶ್ ತಮ್ಮ ಹಾಗೂ ವಿಷ್ಣು ನಡುವಿನ ವೈಮನಸ್ಸಿಗೆ ಕಾರಣ ಏನು ಎನ್ನುವುದನ್ನು ಹೇಳಿಕೊಂಡಿದ್ದಾರೆ. ವಿಷ್ಣು ಕಾಲ್ಶೀಟ್ ಸಿಗದ ಸಮಯದಲ್ಲಿ ಹೊಸ ಕಲಾವಿದರನ್ನು ಪರಿಚಯಿಸಲು ದ್ವಾರಕೀಶ್ ಆರಂಭಿಸಿದರು. ಹೊಸಬರನ್ನು ಪರಿಚಯಿಸುವಂತೆ ಪುಟ್ಟಣ್ಣ ಕಣಗಾಲ್ ಹೇಳುತ್ತಿದ್ದರು ಎಂದು ದ್ವಾರಕೀಶ್ ಹೇಳುತ್ತಿದ್ದರು. ಆದರೆ ವಿಷ್ಣುವರ್ಧನ್ ಮೇಲಿನ ಮುನಿಸಿಗೆ ಹೊಸಬರಿಗೆ ಅವಕಾಶ ಕೊಡುತ್ತಿದ್ದರು. ಹಾಗಾಗಿಯೇ ಸಾಕಷ್ಟು ನಷ್ಟ ಅನುಭವಿಸುವಂತಾಯಿತು.
1991ರಲ್ಲಿ ದ್ವಾರಕೀಶ್ 'ಗೌರಿ ಕಲ್ಯಾಣ' ಎನ್ನುವ ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಹರ್ಷವರ್ಧನ್ ಎಂಬ ಹೊಸ ನಟನನ್ನೂ ಹೀರೊ ಮಾಡಿದ್ದರು. ವಿಷ್ಣು'ವರ್ಧನ್'ಗೆ ಪರ್ಯಾಯವಾಗಿ ಹರ್ಷವರ್ಧನ್ನ ಕರೆತಂದಿದ್ದರು ಎಂದು ಕೆಲವರು ಮಾತನಾಡಿಕೊಂಡಿದ್ದರು. ಇನ್ನು ವಿಷ್ಣುಗೆ ಟಾಂಗ್ ಕೊಡಲು 'ಹೊಸ ಕಳ್ಳ ಹಳೇ ಕುಳ್ಳ' ಟೈಟಲ್ನಲ್ಲಿ ಸಿನಿಮಾ ಮಾಡಿದ್ದರು ಎನ್ನುವ ವಾದವೂ ಇದೆ. ಚಿತ್ರದಲ್ಲಿ ಶಶಿಕುಮಾರ್ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು.

'ನೀ ತಂದ ಕಾಣಿಕೆ' ಸಿನಿಮಾ ಸೋಲಿನ ಬಳಿಕ ದ್ವಾರಕೀಶ್ ನಂಬಿಕೆಗೆ ಅರ್ಹ ವ್ಯಕ್ತಿಯಲ್ಲ" ಎಂದು ವಿಷ್ಣುವರ್ಧನ್ ಹೇಳಿದ್ದಾಗಿ ಹಿರಿಯ ಪತ್ರಕರ್ತ ಹಿರಿಹರಪುರ ಮಂಜುನಾಥ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದೇ ಸಮಯದಲ್ಲಿ "ವಿಷ್ಣು ಇಲ್ಲದೇ ನಾನು ಸಿನಿಮಾ ಮಾಡಿ ಗೆಲ್ಲಬಲ್ಲೆ, ನನಂಥಹ ನಿರ್ಮಾಪಕರನ್ನು ಎದುರಾಕಿಕೊಂಡು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ತಾನೋ ನೋಡೋಣ" ಎಂದು ದ್ವಾರಕೀಶ್ ಹೇಳಿದ್ದಾರೆ ಅವರು ಹೇಳಿಕೊಂಡಿದ್ದಾರೆ.
ಬಳಿಕ 'ದ್ರೋಹಿ' ಎನ್ನುವ ಟೈಟಲ್ನಲ್ಲಿ ದ್ವಾರಕೀಶ್ ಒಂದು ಸಿನಿಮಾ ಘೋಷಣೆ ಮಾಡಿದ್ದರು. " ಇದು ರೀಮೇಕ್ ಅಲ್ಲ, ಕಾದಂಬರಿ ಅಲ್ಲ, ನನ್ನ ಜೀವನದಲ್ಲಿ ನಾ ಕಂಡದ್ದು ನಡೆದದ್ದು" ಎಂದು ಪೋಸ್ಟರ್ನಲ್ಲಿ ಹಾಕಿಸಿದ್ದರು. ವಿಷ್ಣುವರ್ಧನ್ ತೇಜೊವಧೆಗೆ ಆ ಸಿನಿಮಾ ಘೋಷಣೆ ಮಾಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಬಳಿಕ ಅಂತಹ ಯಾವುದೇ ಸಿನಿಮಾ ಬರಲಿಲ್ಲ.
ವಿಷ್ಣು-ದ್ವಾರ್ಕಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆಯೇ 'ಆಪ್ತಮಿತ್ರ' ಚಿತ್ರೀಕರಣ, ರಿಲೀಸ್ ಕೂಡ ನಡೆಯಿತು ಎನ್ನುವ ಗುಸುಗುಸು ಕೂಡ ಆಗ ಕೇಳಿಬಂದಿತ್ತು. ಕೇಳಿದಾಗಲೆಲ್ಲಾ ನಾನು ಯಾಕೆ ಕಾಲ್ಶೀಟ್ ಕೊಡಬೇಕು ಅಂತ ವಿಷ್ಣು, ನನಗೆ ಯಾಕೆ ವಿಷ್ಣು ಸಿನಿಮಾ ಮಾಡಲ್ಲ ಎಂದು ದ್ವಾರಕೀಶ್ ಹಗ್ಗಜಗ್ಗಾಡಿದ್ದರಿಂದಲೇ ಇಬ್ಬರೂ ಪದೇ ಪದೆ ಮುನಿಸಿಕೊಳ್ಳುತ್ತಿದ್ದರು. ದಾದಾ ಅಗಲಿಕೆ ಬಳಿಕ ಸುದೀಪ್ ಹೀರೊ ಆಗಿ 'ವಿಷ್ಣುವರ್ಧನ' ಟೈಟಲ್ನಲ್ಲಿ ದ್ವಾರಕೀಶ್ ಸಿನಿಮಾ ನಿರ್ಮಿಸಿದ್ದರು.
ಒಟ್ನಲ್ಲಿ ಕನ್ನಡ ಚಿತ್ರರಂಗದ ಸಾಹಸಸಿಂಹ ಹಾಗೂ ಪ್ರಚಂಡ ಕುಳ್ಳ ಜೊತೆಯಾಗಿ ಕನ್ನಡ ಸಿನಿರಸಿಕರನ್ನು ರಂಜಿಸಿದರು. 'ಕಿಟ್ಟು-ಪುಟ್ಟು', 'ಸಿಂಗಾಪುರದಲ್ಲಿ ರಾಜಾ-ಕುಳ್ಳ', 'ಗುರು-ಶಿಷ್ಯರು' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದರು.


Click it and Unblock the Notifications











