"ನನಗೆ ಮಕ್ಕಳು ಬೇಡ, ಕಾರಣ ಏನಂದ್ರೆ": ಹಿತಾ ಚಂದ್ರಶೇಖರ್
ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ. ಆಗೊಮ್ಮೆ ಈಗೊಮ್ಮೆ ಒಳ್ಳೆ ಪಾತ್ರಗಳು ಸಿಕ್ಕಾಗ ಬಣ್ಣ ಹಚ್ಚುತ್ತಾರೆ. ಸದ್ಯ ಯುವ ರಾಜ್ಕುಮಾರ್ ನಟನೆಯ 'ಯುವ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಯುವ ಸಹೋದರಿ ಪಾತ್ರದಲ್ಲಿ ಹಿತಾ ಕಾಣಿಸಿಕೊಂಡಿದ್ದಾರೆ.
4 ವರ್ಷಗಳ ಹಿಂದೆ ನಟ ಕಿರಣ್ ಜೊತೆ ಹಿತಾ ಹಸೆಮಣೆ ಏರಿದ್ದರು. ಇಬ್ಬರೂ ಪರಸ್ಪರ ಒಪ್ಪಿ ಪೋಷಕರ ಅನುಮತಿ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿತಾ ಪತಿ ಕಿರಣ್ ಶ್ರೀನಿವಾಸ್ ಸಹ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸಂದರ್ಶವೊಂದರಲ್ಲಿ ಹಿತಾ ಮಕ್ಕಳು ಮಾಡಿಕೊಳ್ಳುವುದು, ತಾಯ್ತನದ ಬಗ್ಗೆ ಮಾತನಾಡಿದ್ದಾರೆ.

ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಸಂದರ್ಶದಲ್ಲಿ ಹಿತಾ ಚಂದ್ರಶೇಖರ್ ಭಾಗಿ ಆಗಿದ್ದಾರೆ. ಈ ವೇಳೆ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮಕ್ಕಳು ಮಾಡಿಕೊಳ್ಳುವ ವಿಚಾರದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನನಗೆ ಮಕ್ಕಳ ಬೇಡ ಎನಿಸುತ್ತದೆ. ನಾನು ಕಿರಣ್ ಈ ವಿಚಾರದ ಬಗ್ಗೆ ಮದುವೆಗೂ ಮುನ್ನ ಮಾತನಾಡಿದ್ದೆವು" ಎಂದಿದ್ದಾರೆ.
"ನನಗೆ ತಾಯಿಯಾಗಬೇಕು, ಮಕ್ಕಳು ಮಾಡಿಕೊಳ್ಳಬೇಕು ಎನ್ನುವ ಫೀಲಿಂಗ್ ಇಲ್ಲ. ಅವನಿಗೂ ಅದನ್ನು ಹೇಳಿದ್ದೆ. ಜಗತ್ತಿನಲ್ಲಿ ಏನೆಲ್ಲಾ ನಡೀತಿದೆ. ಈ ಜಗತ್ತಿಗೆ ನಾನು ಇನ್ನೊಂದು ಮಗು ತರಬೇಕಾ? ಎನ್ನುವ ಪ್ರಶ್ನೆ ಇತ್ತು. ಅವನಿಗೂ ಅದೇ ಅಭಿಪ್ರಾಯ ಇತ್ತು. ಪೇರೆಂಟಿಂಗ್ ಎಂಜಾಯ್ ಮಾಡೋಕೆ ನಮ್ಮದೇ ಮಗು ಆಗಿರಬೇಕಾ? ಅಥವಾ ಮಗುನೇ ಆಗಿರಬೇಕು ಅಂತ ಇಲ್ಲ. ಒಂದು ನಾಯಿ ಮರಿಯನ್ನು ಕೂಡ ಮಗು ಅಂತ ಸಾಕಬಹುದು" ಎಂದು ಹಿತಾ ಹೇಳಿಕೊಂಡಿದ್ದಾರೆ.

ವಯಸ್ಸಾದ ಮೇಲೆ ಏನು ಮಾಡ್ತೀಯಾ? ಆಮೇಲೆ ಯಾರು ನೋಡಿಕೊಳ್ತಾರೆ ಎಂದು ಕೇಳುತ್ತಾರೆ. ಎಷ್ಟೋ ಜನ ಅವರ ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಾ? ಮಗ, ಮಗಳು ಎಲ್ಲೋ ಅಮೆರಿಕಾದಲ್ಲಿ ಇರ್ತಾರೆ. ಅಪ್ಪ, ಅಪ್ಪ ಇಲ್ಲಿ ಇರ್ತಾರೆ. ಮಕ್ಕಳು ಮಾಡಿಕೊಂಡರೆ ಅದರಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆಯೂ ಬರುತ್ತದೆ. ಇಲ್ಲಿ ಯಾರಿಗೂ ಸಮಯ ಕೊಡಲು ಆಗುತ್ತಿಲ್ಲ. ಯಾರಿಗೂ ಇಲ್ಲಿ ಸಮಯ ಇಲ್ಲ"
"ಅಪ್ಪ ಅಥವಾ ಅಮ್ಮ ಒಬ್ಬರೆ ಇದ್ದರೆ ಅವರನ್ನು ನೋಡಿಕೊಳ್ಳುವುದು ಯಾರು. ತಾಯಿ ಮಗಳು ಇಬ್ಬರೇ ಇದ್ದಾಗ ಮಗಳು ಮದುವೆಯಾಗಿ ಗಂಡನ ಮನೆಗೆ ಹೋದರೆ ತಾಯಿ ಒಬ್ಬರೆ ಜೀವನ ನಡೆಸಬೇಕಾಗುತ್ತದೆ. ಇದನ್ನೆಲ್ಲಾ ನೋಡಿದಾಗ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಾರೆ ಎನ್ನುವ ಗ್ಯಾರೆಂಟಿ ಇದ್ಯಾ? ನೀವು ಮಕ್ಕಳು ಮಾಡಿಕೊಳ್ಳಬೇಡಿ ಎಂದು ನಾನು ಹೇಳಲ್ಲ. ಅದು ನಿಮ್ಮ ಆಯ್ಕೆ" ಎಂದಿದ್ದಾರೆ.
ಹೆಮ್ಮೆಯ ವಿಷಯ ಏನು ಅಂದ್ರೆ ನಾನು ಈ ವಿಚಾರ ಅಪ್ಪ, ಅಮ್ಮನಿಗೂ ಹೇಳಿದ್ದೀನಿ. ಅವರು ಸಪೋರ್ಟ್ ಮಾಡುತ್ತಾರೆ. ಸಾಮಾನ್ಯವಾಗಿ ಮಕ್ಕಳು ಮಾಡಿಕೊಳ್ಳುವಂತೆ ಪೋಷಕರು ಒತ್ತಡ ಹಾಕುತ್ತಾರೆ. ನಮ್ಮ ಅಮ್ಮ ಅಪ್ಪ ನನ್ನ ಆಲೋಚನೆ ಅರ್ಥ ಮಾಡಿಕೊಂಡಿದ್ದಾರೆ. ಸಾಕು ಉಳಿದವರ ಕಥೆ ಬೇಡ. ನಮ್ಮ ಮಾವ(ಕಿರಣ್ ತಂದೆ) ಕೂಡ ಎಂದೂ ಪ್ರಶ್ನೆ ಮಾಡಲಿಲ್ಲ" ಎಂದು ಹಿತಾ ವಿವರಿಸಿದ್ದಾರೆ.


Click it and Unblock the Notifications











