ಅಣ್ಣಾವ್ರನ್ನು ಏಳೆಂಟು ಬಾರಿ ಭೇಟಿ ಆಗಿದ್ದೀನಿ, ಅವತ್ತಿನ ಆ ಘಟನೆ ಮರೆಯೋಕ್ಕಾಗಲ್ಲ; ವಿನೋದ್ ರಾಜ್
ಡಾ. ರಾಜ್ ಕುಮಾರ್ ಹಾಗೂ ನಟಿ ಲೀಲಾವತಿ ನಡುವಿನ ಸಂಬಂಧದ ಬಗ್ಗೆ ರವಿ ಬೆಳಗೆರೆ ಬರೆದ 'ರಾಜ್ ಲೀಲಾ ವಿನೋದ' ಪುಸ್ತಕ ವಿವಾದಕ್ಕೆ ಕಾರಣವಾಗಿದ್ದು ಗೊತ್ತೇಯಿದೆ. ನಟಿ ಲೀಲಾವತಿ ಗಂಡ ಯಾರು? ವಿನೋದ್ ರಾಜ್ ಅವರ ತಂದೆ ಯಾರು? ಎನ್ನುವ ಪ್ರಶ್ನೆಗಳು ಕೇಳುವುದಕ್ಕೆ ಕೊಂಚ ಕಸಿವಿಸಿ ಎನಿಸಿದರೂ ಈ ಪ್ರಶ್ನೆಗಳು ಕನ್ನಡ ಚಿತ್ರರಂಗದಲ್ಲಿ ಎಬ್ಬಿಸಿದ ವಿವಾದ ಅಷ್ಟಿಷ್ಟಲ್ಲ.
ಡಾ.ರಾಜ್ ಕುಮಾರ್ ಪುತ್ರ ವಿನೋದ್ ರಾಜ್ ಎನ್ನುವ ವದಂತಿ ಪದೇ ಪದೆ ಚಿತ್ರರಂಗದಲ್ಲಿ ಚರ್ಚೆ ಹುಟ್ಟು ಹಾಕುತ್ತಲೇ ಇದೆ. ರಾಜ್ ಕುಮಾರ್, ಲೀಲಾವತಿ ಹಾಗೂ ಬಾಲಕ ವಿನೋದ ರಾಜ್ ಇರುವ ಮುಖಪುಟದ 'ರಾಜ್ ಲೀಲಾ ವಿನೋದ' ಪುಸ್ತಕ ಕೂಡ ವಿವಾದ ಹುಟ್ಟು ಹಾಕಿತ್ತು. ಇದೇ ವಿಚಾರಗಳ ಬಗ್ಗೆ ವಿನೋದ್ ರಾಜ್ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. Beyond Limits ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನೆಗಳು ಎದುರಾಗಿದೆ. ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಸಂದರ್ಶನ ಮಾಡಿದ್ದಾರೆ.

'ರಾಜ್ ಲೀಲಾ ವಿನೋದ' ಪುಸ್ತಕದ ಬಗ್ಗೆ ನಾನು ಏನು ಮಾತಾಡಲ್ಲ, ನೋ ಕಾಮೆಂಟ್ಸ್ ಎಂದು ವಿನೋದ್ ರಾಜ್ ಹೇಳಿದ್ದಾರೆ. ಅಮ್ಮ, ನಾನು ಹೇಳುವುದೆಲ್ಲಾ ಆ ಪುಸ್ತಕದಲ್ಲಿ ಹೇಳಿದ್ದೀವಿ. ಈಗ ಅಮ್ಮ ಕೂಡ ಇಲ್ಲ. ಉಳಿದಿರುವುದು ನಾನು ಒಬ್ಬ ಮಾತ್ರ ಎಂದಿದ್ದಾರೆ. ನನಗೆ ಎಲ್ಲಕ್ಕಿಂತ ಕನ್ನಡ ಚಿತ್ರರಂಗದ ಭವಿಷ್ಯ, ಯುವ ನಟನ ಭವಿಷ್ಯ ಮುಖ್ಯ ಎಂದಿದ್ದಾರೆ.
ಅಣ್ಣಾವ್ರನ್ನು ಚಿಕ್ಕಂದಿನಲ್ಲಿ ನಾಲ್ಕೈದು ಬಾರಿ ಭೇಟಿ ಆಗಿದ್ದೀನಿ. ದೊಡ್ಡವನಾದ ಮೇಲೆ ಕೂಡ ಒಂದೆರಡು ಬಾರಿ ಭೇಟಿ ಮಾಡಿದ್ದೆ. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಒಮ್ಮೆ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. 'ಬೊಂಬಾಟ್ ರಾಜ ಬಂಡಲ್ ರಾಣಿ' ಸಿನಿಮಾ ಚಿತ್ರೀಕರಣದ ವೇಳೆ ಕಂಠೀರವ ಸ್ಟುಡಿಯೋದಲ್ಲಿ ಸಿಕ್ಕಿದ್ರು. ಅವತ್ತು ನಡೆದ ಘಟನೆ ಕಣ್ಣಿಗೆ ಕಟ್ಟಿದಂತಿದೆ. ಸಾಕಷ್ಟು ಜನ ಅಭಿಮಾನಿಗಳು ಬಂದು ಅವರ ಬಳಿ ಆಟೋಗ್ರಾಫ್ ತೆಗೆದುಕೊಳ್ಳುತ್ತಿದ್ರು. ಈ ವೇಳೆ ಒಬ್ರು ಅಲ್ಲೇ ಬಿದ್ದಿದ್ದ ಸಿಗರೇಟ್ ಪೇಪರ್ ತಂದು ಆಟೋಗ್ರಾಫ್ ಕೇಳಿದ್ರು, ಅಣ್ಣಾವ್ರು ಬೈದುಬಿಟ್ರು ಎಂದು ವಿನೋದ್ ರಾಜ್ ಮೆಲುಕು ಹಾಕಿದ್ದಾರೆ.
ಸಿಗರೇಟ್ ಪ್ಯಾಕ್ ಯಾಕೆ, ನಿನ್ ಕೆರಾ ಕೊಡು ಅದರ ಮೇಲೂ ಆಟೋಗ್ರಾಫ್ ಹಾಕ್ತೀನಿ ಅಂದ್ರು, ಅಷ್ಟರಮಟ್ಟಿಗೆ ಅವತ್ತು ಅಣ್ಣಾವ್ರಿಗೆ ಕೋಪ ಬಂದಿತ್ತು. ಹಳ್ಳಿ ಶೈಲಿಯಲ್ಲಿ ಗದರಿದ್ದರು. ಆ ಘಟನೆ ಮರೆಯೋಕೆ ಸಾಧ್ಯವಿಲ್ಲ ಎಂದು ವಿನೋದ್ ರಾಜ್ ನಕ್ಕಿದ್ದಾರೆ. ತಾಯಿ ಲೀಲಾವತಿ ಹಾದಿಯಲ್ಲಿ ವಿನೋದ್ ರಾಜ್ ಕೂಡ ಚಿತ್ರರಂಗ ಪ್ರವೇಶಿಸಿದ್ದರು. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ ಡ್ಯಾನ್ಸ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಆದರೆ ದೊಡ್ಡಮಟ್ಟದ ಯಶಸ್ಸು ಸಿಗಲಿಲ್ಲ.
1987ರಲ್ಲಿ 'ಡ್ಯಾನ್ಸ್ ರಾಜ ಡ್ಯಾನ್ಸ್' ಸಿನಿಮಾ ಮೂಲಕ ವಿನೋದ್ ರಾಜ್ ಚಿತ್ರರಂಗಕ್ಕೆ ಬಂದಿದ್ದರು. ದ್ವಾರಕೀಶ್ ಸಿನಿಮಾ ನಿರ್ಮಿಸಿ ನಿರ್ದೇಶನ ಮಾಡಿದ್ದರು. ಬಳಿಕ 'ಕೃಷ್ಣ ನೀ ಕುಣಿದಾಗ', 'ಕಾಲೇಜ್ ಹೀರೊ', ಮಹಾಭಾರತ, 'ದಳವಾಯಿ', 'ಸ್ನೇಹಲೋಕ', 'ವಂದೇ ಮಾತರಂ', 'ಪಾಂಡವ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಲೀಲಾವತಿ ನಿರ್ಮಾಣದ 'ಯಾರದು' ವಿನೋದ್ ರಾಜ್ ನಟಿಸಿದ ಕೊನೆಯ ಸಿನಿಮಾ ಆಗಿತ್ತು.


Click it and Unblock the Notifications