ಒಂದೇ ಒಂದು ಎಕ್ಸ್ಟ್ರಾ ಇಡ್ಲಿಗಾಗಿ ಅಣ್ಣಾವ್ರು ಆ ಸಿನಿಮಾದಲ್ಲಿ ನಟಿಸೋಕೆ ಒಪ್ಪಿದ್ರು
ನಾಟಕಗಳಲ್ಲಿ ನಟಿಸುತ್ತಿದ್ದ ಮುತ್ತುರಾಜ್ ಚಿತ್ರರಂಗಕ್ಕೆ ಬಂದು ರಾಜಕುಮಾರನಾದರು. ಕನ್ನಡ ಕಣ್ಮಣಿ ಎನಿಸಿಕೊಂಡರು. ಒಂದ್ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದವರು ಲಕ್ಷ ಲಕ್ಷ ಗಳಿಸಿದರು. ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ನಿರ್ಮಾಣದ ಸಿನಿಮಾಗಳು ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದವು. ಆದರೆ ಅದೆಲ್ಲದ್ದಕ್ಕೂ ಮೂಲ ಮುತ್ತುರಾಜನ ಪರಿಶ್ರಮ.
ಗಾಜನೂರಿನಲ್ಲಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಅಣ್ಣಾವ್ರು ಕಷ್ಟದ ಜೀವನದ ನಡೆಸಿದವರು. ಹೊಟ್ಟೆಪಾಡಿಗಾಗಿ ನಟಿಸುತ್ತಿದ್ರು. ತಂದೆ ಅಗಲಿಕೆ ಬಳಿಕ ಇಡೀ ಕುಟುಂಬವನ್ನು ಸಾಕಿ ಸಲಹುವ ಜವಾಬ್ದಾರಿ ಹೆಗಲೇರಿತು. ಮದುವೆ ಬಳಿಕವೇ ಚಿತ್ರರಂಗ ಪ್ರವೇಶಿಸಿದರು. ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ ಬಳಿಕ ಕೂಡ ಏಕಾಏಕಿ ಹಣ ನೋಡಲಿಲ್ಲ. ಚಿತ್ರರಂಗಕ್ಕೆ ಬಂದ ಬಳಿಕ ಕೂಡ ನಾಟಕಗಳಲ್ಲಿ ನಟಿಸುತ್ತಿದ್ದರು. ಒಂದು ಎಕ್ಸ್ಟ್ರಾ ಇಡ್ಲಿ ಕೊಡುತ್ತಾರೆ ಎನ್ನುವ ಕಾರಣಕ್ಕೆ ಒಂದು ಸಿನಿಮಾದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದ ದಿನಗಳು ಇವೆ.

70-80 ವರ್ಷಗಳ ಹಿಂದೆ ಜನ ಜೀವನ ಇಷ್ಟು ಸುಲಭವಾಗಿ ಇರಲಿಲ್ಲ. ಹಣ ಗಳಿಸುವುದು ಕಷ್ಟವಿತ್ತು. ಬಡವರಿಗೆ ಒಂದೊತ್ತಿನ ಊಟ ಹೊಂದಿಸಿಕೊಳ್ಳುವುದು ಕಷ್ಟವಿತ್ತು. ಅಣ್ಣಾವ್ರು ಎಷ್ಟೇ ಎತ್ತರಕ್ಕೆ ಏರಿದರೂ ತಾವು ಬಂದ ದಾರಿಯನ್ನು ಮರೆತವರಲ್ಲ. ತಮ್ಮ ಕಷ್ಟದ ದಿನಗಳನ್ನು ಮಕ್ಕಳ ಬಳಿ ಹೇಳುತ್ತಿದ್ದರು. ತಂದೆ ಹೇಳಿದ ಒಂದು ವಿಚಾರವನ್ನು ಸ್ಚತಃ ಪುತ್ರ ರಾಘವೇಂದ್ರ ರಾಜ್ಕುಮಾರ್ ವೇದಿಕೆಯಲ್ಲಿ ಹೇಳಿದ್ದರು. ಆ ವೀಡಿಯೋ ಈಗ ಸಖತ್ ವೈರಲ್ ಆಗ್ತಿದೆ.
"ಅಪ್ಪಾಜಿ ತಮ್ಮ 3ನೇ ಅಥವಾ 4ನೇ ಸಿನಿಮಾ ಮಾಡುವಾಗ ಒಟ್ಟಿಗೆ ಮೂರ್ನಾಲ್ಕು ಸಿನಿಮಾ ಅವಕಾಶ ಸಿಕ್ಕಿತ್ತಂತೆ.. ನಿರ್ಮಾಪಕರು ಇಷ್ಟು ದುಡ್ಡು ಕೊಡ್ತೀವಿ, ಅಷ್ಟು ದುಡ್ಡು ಕೊಡ್ತೀವಿ ಎಂದು ಮುಂದೆ ಬಂದಿದ್ದರಂತೆ. ಆಗ ದುಡ್ಡು ಇರಲಿ, ಶೂಟಿಂಗ್ ವೇಳೆ ಊಟ ಏನು ಕೊಡ್ತೀರಾ ಹೇಳಿ ಎಂದಿದ್ದರಂತೆ.. ಆಗ ಶೂಟಿಂಗ್ ಸಮಯದಲ್ಲಿ ಬೆಳಗ್ಗೆ ತಿಂಡಿಗೆ 2 ಇಡ್ಲಿಗಿಂತ ಹೆಚ್ಚು ಕೊಡುತ್ತಿರಲಿಲ್ಲವಂತೆ. ಯಾರೋ ನಿರ್ಮಾಪಕರೊಬ್ಬರು ಬೆಳಗ್ಗೆ 3 ಇಡ್ಲಿ ಕೊಡ್ತೀವಿ ಅಂದ್ರಂತೆ.. ಅದಕ್ಕೋಸ್ಕರ ಆ ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ರಂತೆ.. 3 ಇಡ್ಲಿಗೋಸ್ಕರ ಸಿನ್ಮಾ ಒಪ್ಕೊಂಡೆ ಕಂದ" ಎಂದು ಅಪ್ಪಾಜಿ ಹೇಳ್ತಿದ್ರು ಎಂದು ರಾಘಣ್ಣ ನೆನಪಿಸಿಕೊಂಡಿದ್ದರು.
ಊಟ ಇಲ್ಲದೇ ಬೆಳೆದವನು ನಿಮ್ಮ ಅಪ್ಪ.. ಮನೆಗೆ ಬಂದಾಗ ಏನ್ರೀ ಒಂದು ಇಡ್ಲಿಗೋಸ್ಕರ ಸಿನ್ಮಾ ಒಪ್ಕೊಂಡ್ರಾ ಅಂದ್ಲು ಪಾರ್ವತಿ.. ಅದಕ್ಕೆ ನಾನು ಹೌದಲ್ವಾ ಪಾರ್ವತಿ, ತಿನ್ನೋಕೆ ನಾನು ಬಂದಿರೋದು, ನಾನೇನು ಹೆಸರು ಮಾಡೋಕೆ ಬಂದಿಲ್ಲ. ಹೊಟ್ಟೆಪಾಡಿಗಾಗಿ ಸಂಪಾದನೆ ಮಾಡಲು ಬಂದಿದ್ದು.. ಜನ ನನ್ನ ಕರ್ಕೊಂಡ್ ಹೋಗ್ತಿದ್ದಾರೆ. ಮುಂದೆ ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿದ್ದಾಗ ಎಲ್ಲರಿಗೂ ಸರಿಯಾಗಿ ಅಡುಗೆ ಮಾಡಿ ಹಾಕಬೇಕು ಎನ್ನುತ್ತಿದ್ರು.. ಬಂದಿದ್ದೆಲ್ಲಾ ಮಾಡಿ ಹಾಕ್ತಿದ್ರೆ, ಮುಂದೆ ನಾವು ಅಡುಗೆ ಕೆಲಸಕ್ಕೆ ಹೋಗ್ಬೇಕು ಅಂತ ಅಮ್ಮ ಹೇಳಿದ್ರಂತೆ.. ಅಯ್ಯೋ ಮಾಡೋಣ ನಡಿ, ಅಡುಗೆ ಮಾಡ್ಕೊಂಡು ಜೀವನ ಮಾಡೋಣ ಎಂದಿದ್ರಂತೆ ಅಪ್ಪಾಜಿ ಎಂದು ರಾಘಣ್ಣ ಮೆಲುಕು ಹಾಕಿದ್ದರು.
ಹುಟ್ಟಿದ ಊರನ್ನು ಅಣ್ಣಾವ್ರು ಸದಾ ನೆನಪಿಸಿಕೊಳ್ತಿದ್ರು. ಕೊನೆಯ ದಿನಗಳಲ್ಲಿ ಗಾಜನೂರಿಗೆ ಹೋಗಲು ಸಾಧ್ಯವಾಗ್ತಿಲ್ಲ ಎಂದು ಬಹಳ ಬೇಸರಗೊಂಡಿದ್ದರು ಎಂದು ರಾಘಣ್ಣ ಹೇಳಿದ್ದರು. "ವೀರಪ್ಪನ್ ನನ್ನ ಕಿಡ್ನ್ಯಾಪ್ ಮಾಡ್ಬಿಟ್ಟು ಒಂದು ಅನ್ಯಾಯ ಮಾಡಿಬಿಟ್ಟ. ಏನಂದ್ರೆ ಮತ್ತೆ ನಾನು ಹುಟ್ಟೂರಿಗೆ ಹೋಗದಂತೆ ಮಾಡ್ಬಿಟ್ಟ. ಆ ಮನುಷ್ಯನನ್ನು ಕೇಳ್ಕೊಂಡ್ರಂತೆ ನನ್ನ ಎಲ್ಲಿಂದ ಕರ್ಕೊಂಡ ಬಂದೋ ಅದೇ ಗಾಜನೂರಲ್ಲಿ ಬಿಟ್ಬಿಡು.. ಬೆಂಗಳೂರಿಗೆ ಹೋದ್ರೆ, ಪಾರ್ವತಿ ಮತ್ತೆ ಹುಟ್ಟೂರಿಗೆ ಕರ್ಕೊಂಡ್ ಹೋಗಲ್ಲ ಅಂದಿದ್ರಂತೆ.. ಒಮ್ಮೆ ಬಲವಂತಕ್ಕೆ ಭಾರೀ ಭದ್ರತೆ ಜೊತೆ ಅಮ್ಮ ಗಾಜನೂರಿಗೆ ಅಪ್ಪಾಜಿನ ಕರ್ಕೊಂಡ್ ಹೋಗಿದ್ರು.. ಸುತ್ತಾ ಗನ್ ಹಿಡಿದ ಪೊಲೀಸರು.. ನಾನು ಪಕ್ಷಿಯಾಗಿ ಅಲ್ಲಿಗೆ ಹೋಗ್ಬೇಕು ಅಂದೆ. ರೆಕ್ಕೆಪುಕ್ಕ ಕಿತ್ತು ಕರ್ಕೊಂಡ್ ಬಂದಂಗಾಯ್ತು.. ಅವತ್ತು ವೀರಪ್ಪನ್ ಗನ್ ಹಿಡ್ಕೊಂಡು ನಿಂತಿದ್ದ, ಇವತ್ತು ಪೊಲೀಸರು ಗನ್ ಹಿಡ್ಕೊಂಡಿದ್ದಾರೆ, ಇದೆಂಥ ಬಂಧನಕ್ಕೆ ಸಿಕ್ಕಿಬಿಟ್ಟೆ, ನನಗೆ ಮುಕ್ತಿ ಯಾವಾಗ? ಎಂದು ಅಪ್ಪಾಜಿ ಹೇಳಿದ್ರು" ಎಂದು ರಾಘಣ್ಣ ವಿವರಿಸಿದ್ದರು.


Click it and Unblock the Notifications