Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಕ್ಷಿಣ ಭಾರತದ ಮೊದಲ ಸಿನಿಮಾ ನಿರ್ಮಾಣವಾಗಿದ್ದು ಹೇಗೆ?
ದಾದಾ ಸಾಹೇಬ್ ಫಾಲ್ಕೆ 1913 ರಲ್ಲಿ ನಿರ್ಮಿಸಿದ 'ರಾಜಾ ಹರಿಶ್ಚಂದ್ರ' ಭಾರತದ ಮೊದಲ ಸಿನಿಮಾ ಆಗುವುದರ ಜೊತೆಗೆ ಭಾರತದಲ್ಲಿ ಇನ್ನಷ್ಟು ಉತ್ಸಾಹಿಗಳು ಸಿನಿಮಾಗಳನ್ನು ನಿರ್ಮಿಸಲು ಕಾರಣವಾಯಿತು.
ಇಂದು ಬಾಲಿವುಡ್ ಅನ್ನು ಮೀರಿಸಿ ಬೆಳೆಯುತ್ತಿರುವ ದಕ್ಷಿಣ ಭಾರತ ಚಿತ್ರರಂಗ ಪ್ರಾರಂಭವಾಗಿದ್ದು 1917ರಲ್ಲಿ. ಭಾರತದ ಮೊದಲ ಸಿನಿಮಾ ಬಿಡುಗಡೆ ಆಗಿ ಕೇವಲ ನಾಲ್ಕೇ ವರ್ಷದಲ್ಲಿ ದಕ್ಷಿಣ ಭಾರತದ ಮೊದಲ ಸಿನಿಮಾ ನಿರ್ಮಾಣವಾಗಿತ್ತು.
ಭಾರತೀಯ ಚಿತ್ರರಂಗದ ಇತಿಹಾಸ: ಮೊದಲ ಹೆಜ್ಜೆಗಳು ಹೇಗಿದ್ದವು?
ಆರ್.ನಟರಾಜ್ ಮೊದಲಿಯಾರ್ ಎಂಬ ಉತ್ಸಾಹಿ ಯುವಕ 'ಕೀಚಕ ವಧಂ' ಹೆಸರಿನ ಮೊದಲ ದಕ್ಷಿಣ ಭಾರತ ಸಿನಿಮಾವನ್ನು 1917ರಲ್ಲಿ ನಿರ್ಮಾಣ ಮಾಡಿದರು. ಆಗ ಸಿನಿಮಾಕ್ಕೆ ಭಾಷೆ ಇರಲಿಲ್ಲವಾದ್ದರಿಂದ. ಅದನ್ನು ಇಂಥಹುದೇ ಭಾಷೆಯ ಸಿನಿಮಾ ಎಂದು ಹೇಳಲಾಗದು. ಆದರೆ ಸಿನಿಮಾದಲ್ಲಿ ನಟಿಸಿದವರು, ಸಿನಿಮಾ ನಿರ್ಮಾಣ ಮಾಡಿದ ಬಹುತೇಕ ಎಲ್ಲರೂ ಈಗಿನ ತಮಿಳುನಾಡು ಪ್ರಾಂತ್ಯದವರೇ ಆಗಿದ್ದರು.
ಭಾರತೀಯ ಸಿನಿಮಾ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ನಡೆದ ಮುಳ್ಳಿನ ಹಾದಿ
'ಕೀಚಕ ವಧಂ' ಸಿನಿಮಾ ನಿರ್ಮಿಸಿದ ಆರ್.ನಟರಾಜ್ ಮೊದಲಿಯಾರ್ ಅವರನ್ನು ತಮಿಳು ಸಿನಿಮಾ ಪಿತಾಮಹ ಎಂದು ಕರೆಯಲಾಗುತ್ತದೆ. 1885 ರಲ್ಲಿ ಈಗಿನ ತಮಿಳುನಾಡಿನ ವೆಲ್ಲೂರು ಪ್ರದೇಶದಲ್ಲಿ ಜನಿಸಿದ ಇವರು ಚೆನ್ನೈನಲ್ಲಿ ಸೈಕಲ್ ವ್ಯಾಪಾರ ಮಾಡುತಿದ್ದರು. ನಂತರ ಅದೇ ಉದ್ಯಮವನ್ನು ಇನ್ನಷ್ಟು ಬೆಳೆಸಿ ಕಾರು ಹಾಗೂ ಆಟೊಮೊಬೈಲ್ ಬಿಡಿ ಭಾಗಗಳನ್ನು ವಿದೇಶಿ ಸಂಸ್ಥೆಯ ಪಾಲುದಾರಿಕೆಯೊಂದಿಗೆ ಮಾರಲು ಆರಂಭಿಸಿದರು. ಭಾರತದಲ್ಲಿ ಮೊದಲ ಬಾರಿಗೆ ಅಮೆರಿಕದ ಕಾರುಗಳನ್ನು ಮಾರಾಟ ಮಾಡಿದ ಶ್ರೇಯ ಸಹ ನಟರಾಜ್ ಮೊದಲಿಯಾರ್ ಅವರಿಗೆ ಸಲ್ಲಬೇಕು.
'ರಾಜಾ ಹರಿಶ್ಚಂದ್ರ' ಸಿನಿಮಾ ವೀಕ್ಷಿಸಿದ ನಟರಾಜ ಮೊದಲಿಯಾರ್
ದಾದಾ ಸಾಹೇಬ್ ಫಾಲ್ಕೆಯವರ 'ರಾಜಾ ಹರಿಶ್ಚಂದ್ರ' ಸಿನಿಮಾ ವೀಕ್ಷಿಸಿ ನಟರಾಜ್ಗೆ ಸಿನಿಮಾಗಳ ಬಗ್ಗೆ ಆಸಕ್ತಿ ಕೆರಳಿತು. ಅದೇ ಸಮಯದಲ್ಲಿ ಬ್ರಿಟನ್ನಿಂದ ಬಂದಿದ್ದ ಚಿತ್ರತಂಡವೊಂಡು ಲಾರ್ಡ್ ಕರ್ಜನ್ ಬಗ್ಗೆ ಡಾಕ್ಯುಮೆಂಟರಿಯೊಂದನ್ನು ಚಿತ್ರೀಕರಿಸುತ್ತಿತ್ತು. ಅದರಲ್ಲಿ ಒಬ್ಬರಾದ ಸ್ಟಿವರ್ಟ್ ಸ್ಮಿತ್ ಅವರ ಪರಿಚಯ ಮಾಡಿಕೊಂಡ ನಟರಾಜ್ ಅವರಿಂದ ಚಿತ್ರೀಕರಣ, ಪ್ರೊಸೆಸಿಂಗ್ ಇನ್ನಿತರೆ ವಿಷಯಗಳನ್ನು ಅರಿತುಕೊಂಡರು. ನಂತರ 1917ರಲ್ಲಿ ಚೆನ್ನೈನ ಮಿಲ್ಲರ್ಸ್ ರಸ್ತೆಯಲ್ಲಿ 'ಇಂಡಿಯನ್ ಸಿನಿಮಾ ಕಂಪೆನಿ' ಹೆಸರಲ್ಲಿ ದಕ್ಷಿಣ ಭಾರತದ ಮೊದಲ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದರು.
ತಂಜಾವೂರಿನ ಧನಿಕರಿಂದ ಸಾಲ ಪಡೆದ ನಟರಾಜ್
ವಿಲಿಯಮ್ಸನ್ 35 ಎಂಎಂ ಕ್ಯಾಮೆರಾ ಖರೀದಿಸಿ ರೀಲುಗಳು, ಪ್ರೊಸೆಸಿಂಗ್ ಪರಿಕರಗಳನ್ನು ಖರೀದಿಸಿದ ನಟರಾಜ ಮೊದಲಿಯಾರ್, ತಂಜಾವೂರಿನ ಧನಿಕ ಮೂಪನಾರ್ ಅವರಿಂದ 1500 ರು. ಸಾಲ ತಂದು ಸಿನಿಮಾ ನಿರ್ಮಾಣ ಆರಂಭಿಸಿದರು. ನಂತರ ಅವರನ್ನೇ ಸಿನಿಮಾಕ್ಕೆ ನಿರ್ಮಾಣ ಪಾಲುದಾರರನ್ನಾಗಿ ಸಹ ಸೇರಿಸಿಕೊಂಡರು. ಆಗಿನ ಖ್ಯಾತ ರಂಗಕರ್ಮಿ ಪಮ್ಮಾಲ್ ಮೊದಲಿಯಾರ್ ಸಲಹೆಯಂತೆ ಮಹಾಭಾರತದ ವಿರಾಟ ಪರ್ವದಲ್ಲಿ ಬರುವ 'ಕೀಚಕ ವಧೆ' ಕುರಿತು ಸಿನಿಮಾ ಮಾಡುವ ಯೋಜನೆ ರೂಪಿಸಿಕೊಂಡರು.
ಸಿನಿಮಾ ಪ್ರೊಸೆಸಿಂಗ್ ಆಗಿದ್ದು ಬೆಂಗಳೂರಿನಲ್ಲಿ
ಸಿ.ರಂಗವಡಿವೇಲು ಎಂಬ ನಟರಾಜ್ ಮೊದಲಿಯಾರ್ರ ಗೆಳೆಯ ಚಿತ್ರಕತೆ ಬರೆಯುವಲ್ಲಿ ಸಹಾಯ ಮಾಡಿದರು. ಸಿನಿಮಾದಲ್ಲಿ ಕೀಚಕನಾಗಿ ನಟ ರಾಜು ಮೊದಲಿಯಾರ್ ಹಾಗೂ ದ್ರೌಪದಿಯಾಗಿ ಜೀವರತ್ನಮ್ಮನನ್ನು ಆಯ್ಕೆ ಮಾಡಿದರು ನಟರಾಜ್. 1917ರಲ್ಲಿ 'ಕೀಚಕ ವಧಂ' ಸಿನಿಮಾಕ್ಕೆ 35,000 ಹಣ ಖರ್ಚು ಮಾಡಲಾಗಿತ್ತು. ಕೋಡ್ಯಾಕ್ ಸಂಸ್ಥೆಯಿಂದ ಸಿನಿಮಾ ರೀಲ್ಗಳು ಇತರೆ ಪರಿಕರಗಳನ್ನು ಲಂಡನ್ನಿಂದ ತರಿಸಿಕೊಳ್ಳಲಾಗಿತ್ತು. ಸಿನಿಮಾವನ್ನು 37 ದಿನಗಳವರೆಗೆ ಚಿತ್ರೀಕರಣ ಮಾಡಲಾಯಿತು. ಈ ಸಿನಿಮಾದ ಪ್ರೊಸೆಸಿಂಗ್ ನಡೆದಿದ್ದು ಬೆಂಗಳೂರಿನಲ್ಲಿ. ಇಲ್ಲಿನ ತಣ್ಣನೆಯ ವಾತಾವರಣ ಸಿನಿಮಾ ಪ್ರೊಸೆಸಿಂಗ್ಗೆ ಸೂಕ್ತವಾದುದು ಎಂದು ಇಲ್ಲಿಯೇ ಲ್ಯಾಬ್ ತೆರೆದಿದ್ದರು ನಟರಾಜ್. ಪ್ರತಿ ವಾರಾಂತ್ಯಕ್ಕೆ ರೀಲ್ಗಳನ್ನು ಬೆಂಗಳೂರಿಗೆ ತಂದು ಇಲ್ಲಿ ಪ್ರೊಸೆಸಿಂಗ್ ಮಾಡಿ ಸೋಮವಾರ ಮತ್ತೆ ಚಿತ್ರೀಕರಣಕ್ಕೆ ಮರಳುತ್ತಿದ್ದರು. ಹೀಗೆ ಮಾಡಿ 37 ದಿನಗಳಲ್ಲಿ ಚಿತ್ರೀಕರಣ ಮುಗಿಸಿದರು ನಟರಾಜ್ ಮೊದಲಿಯಾರ್.
ಮಹಾತ್ಮಾ ಗಾಂಧಿ ಪುತ್ರ ಟೈಟಲ್ ಕಾರ್ಡ್ ಬರೆದಿದ್ದರು
ಸಿನಿಮಾದ ಟೈಟಲ್ ಕಾರ್ಡ್ ಇಂಗ್ಲೀಷ್, ಹಿಂದಿ, ತಮಿಳು ಭಾಷೆಗಳಲ್ಲಿ ಬರೆಯಲಾಗಿತ್ತು. ಇಂಗ್ಲೀಷ್ ನಟರಾಜ್ ಅವರೇ ಬರೆದರೆ, ತಮಿಳಿನ ಟೈಟಲ್ ಅನ್ನು ವೈದ್ಯರೊಬ್ಬರು ಬರೆದರು. ಹಿಂದಿ ಟೈಟಲ್ ಅನ್ನು ಮಹಾತ್ಮಾ ಗಾಂಧಿ ಪುತ್ರ ದೇವದಾಸ್ ಗಾಂಧಿ ಬರೆದಿದ್ದು ವಿಶೇಷ. ಸಿನಿಮಾವು ಮೊದಲಿಗೆ ಮದ್ರಾಸ್ನ ಎಲಿಫೆನ್ಸ್ಟೋನ್ ಚಿತ್ರಮಂದಿರದಲ್ಲಿ ಬಿಡುಗಡೆ ಆಯ್ತು. ಸಿನಿಮಾವು ದೊಡ್ಡ ಹಿಟ್ ಆಯಿತು. 35,000 ಖರ್ಚು ಮಾಡಿದ್ದ ಸಿನಿಮಾವು ಮದ್ರಾಸ್ ಒಂದರಲ್ಲೇ 50,000 ಗಳಿಸಿತು. ಆ ನಂತರ ಇದೇ ಸಿನಿಮಾವನ್ನು ಸಿಲೋನ್, ಬರ್ಮಾ, ಮಲಯಾ ರಾಷ್ಟ್ರ, ಸಿಂಗಪೂರ್ಗಳಲ್ಲಿ ಪ್ರದರ್ಶಿಸಲಾಯಿತು. ಅಲ್ಲಿಯೂ ಸಿನಿಮಾ ಮೆಚ್ಚುಗೆಗೆ ಪಾತ್ರವಾಯಿತು.
ಮಗನ ಸಾವಿನಿಂದ ಆಘಾತ ಅನುಭವಿಸಿ ನಿವೃತ್ತಿಯಾದ ನಟರಾಜ್
'ಕೀಚಕ ವಧಂ' ಸಿನಿಮಾದ ಯಶಸ್ಸಿನಿಂದ ಪ್ರೇರೇಪಿತಗೊಂಡ ನಟರಾಜ್ ಮೊದಲಿಯಾರ್ ಆ ನಂತರ ಕೆಲವು ಸಿನಿಮಾಗಳನ್ನು ನಿರ್ದೇಶನ, ನಿರ್ಮಾಣ ಮಾಡಿದರು. 'ದ್ರೌಪದಿ ವಸ್ತ್ರಾಪಹರಣ', 'ಮಹಿ ರಾವಣ', 'ಲವ-ಕುಶ', 'ಕಲಿಂಗ ಮರ್ದನ', 'ರುಕ್ಮಿಣಿ ಸತ್ಯಭಾಮ', 'ಮಾರ್ಕಂಡೇಯ' ಸಿನಿಮಾಗಳನ್ನು ನಟರಾಜ್ ನಿರ್ಮಿಸಿದರು. ತಮ್ಮ ಮಗ ಅಗ್ನಿ ಅವಘಡವೊಂದರಲ್ಲಿ ನಿಧನ ಹೊಂದಿದ ಬಳಿಕ ವ್ಯವಹಾರ, ಸಿನಿಮಾ ನಿರ್ಮಾಣ ಎಲ್ಲದರಿಂಗಲೂ ವಿರಕ್ತಿ ಪಡೆದು ಸುಮ್ಮನಾಗಿಬಿಟ್ಟರು. ಕೊನೆಗೆ 1971ರಲ್ಲಿ ನಿಧನರಾದರು. ಆದರೆ ದಕ್ಷಿಣ ಭಾರತ ಸಿನಿಮಾ ರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ನಟರಾಜ್ ಮೊದಲಿಯಾರ್ ಸ್ಪೂರ್ತಿಯಿಂದಲೇ ತೆಲುಗು ಹಾಗೂ ಮಲಯಾಳಂನಲ್ಲಿ ಮೊದಲ ಸಿನಿಮಾಗಳು ನಿರ್ಮಾಣಗೊಂಡವು ಎಂಬುದು ವಿಶೇಷ.