ಗಣೇಶನನ್ನು ಉಪೇಂದ್ರ ಬಾವಿಗೆ ಹಾಕುವ ಸನ್ನಿವೇಶ ಚಿತ್ರೀಕರಣಗೊಂಡಿದ್ದು ಎಲ್ಲಿ?
ರಿಯಲ್ ಸ್ಟಾರ್ ಉಪೇಂದ್ರ ಇಷ್ಟದ ದೇವರು ವಿಘ್ನ ವಿನಾಶಕ ಗಣೇಶ. ಪ್ರತಿವರ್ಷ ಅವರ ಮನೆಯಲ್ಲಿ ಬಹಳ ಸಂಪ್ರದಾಯಬದ್ಧವಾಗಿ ಗೌರಿ ಗಣೇಶ ಹಬ್ಬ ಆಚರಿಸುತ್ತಾರೆ. ಗಣಪನಿಗೂ ತಮ್ಮ ಕುಟುಂಬಕ್ಕೂ ಒಳ್ಳೆ ನಂಟಿದೆ ಎಂದು ಖುದ್ದು ಉಪ್ಪಿ ಹೇಳಿರುವುದು ಇದೆ. ನಿಜ ಹೇಳಬೇಕು ಅಂದ್ರೆ ಉಪೇಂದ್ರ ಹೀರೊ ಆಗಿ ಪರಿಚಿತರಾಗುವ ಸನ್ನಿವೇಶದಲ್ಲೂ ಗಣೇಶನೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದ.
25 ವರ್ಷಗಳ ಹಿಂದೆ ಉಪ್ಪಿ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 'ಎ' ಚಿತ್ರವನ್ನು ನಿರ್ದೇಶಿಸಿ ತಾವೇ ನಟಿಸಿದ್ದರು. ಆ ಚಿತ್ರದ ಮೊದಲ ಸನ್ನಿವೇಶದಲ್ಲೇ ಗಣೇಶನನ್ನು ನೀರಿಗೆ ಹಾಕಿ, ದೇವರಿಲ್ಲ, ಇದ್ದರೆ ಯಾಕೆ ಎಲ್ಲರಿಗೂ ಕಷ್ಟ ಕೊಡುತ್ತಿದ್ದ. ನಾನೇ ದೇವರು, ನನಗೆ ಪೂಜೆ ಮಾಡಿ 'ಐಯಾಮ್ ಗಾಡ್ ಗಾಡ್ ಈಸ್ ಗ್ರೇಟ್' ಎಂದು ವಿಭಿನ್ನ ರೀತಿಯಲ್ಲಿ ರಿಯಲ್ ಸ್ಟಾರ್ ಎಂಟ್ರಿ ಕೊಟ್ಟಿದ್ದರು. ಗಣೇಶ ಹಬ್ಬ ಬಂತು ಅಂದ್ರೆ ಸಾಕು ಈ ಸನ್ನಿವೇಶ ನೆನಪಾಗುತ್ತದೆ.

ಗಣೇಶ ಹಬ್ಬದ ದಿನ ದೇವಸ್ಥಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆಗೆ ಸಿದ್ಧತೆ ನಡೆದಿರುತ್ತದೆ. ಅಲ್ಲಿಗೆ ಗನ್ ಹಿಡಿದು ಎಂಟ್ರಿ ಕೊಡುವ ಸೂರ್ಯ(ಉಪೇಂದ್ರ) ಏನ್ ತಮಾಷೆ ಮಾಡ್ತಿದ್ದೀಯಾ? ಆಟ ಆಡ್ತಿದ್ದೀಯಾ? ದೇಶದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ನೀನು ಮಜಾ ತೆಗೆದುಕೊಳ್ತಿದ್ದೀಯಾ? ನಿನಗೆ ಎಷ್ಟು ಖರ್ಚು ಮಾಡಿ ಪೂಜೆ. ಕೆಟ್ಟವರನ್ನು ಸಾಯಿಸ್ಬಿಡು, ಒಳ್ಳೆಯವರನ್ನು ಚೆನ್ನಾಗಿಡು ತಗೋ ಎಂದು ಗನ್ ಕೊಡಲು ಹೋಗುವ ಸನ್ನಿವೇಶ ಅದು.
ನಿನಗೆ ಲೈಮ್ಟೈಮ್ ಬೇಕು, ನಿನಗಿಂತ ನಮ್ಮ ಸೈಂಟಿಸ್ಟ್ಗಳು ವಾಸಿ. ನೀನು ಗಜಮುಖ. ವೀರಪ್ಪನ್ ಸಾವಿರ ಆನೆಗಳನ್ನು ಸಾಯಿಸಿದ. ಏನ್ ಮಾಡ್ದೆ ನೀನು. ಬರೀ ಡವ್ಗಳು ನಿಂದು. ವರ್ಷಕ್ಕೆ ಎರಡು ದಿನ ಬಂದು ಆರ್ಕೇಸ್ಟ್ರಾ ಮಾಡ್ಕೊಂಡು ಡ್ಯಾನ್ಸ್ ಮಾಡ್ಕೊಂಡು ಹೋಗ್ತೀಯಾ. ನೀನು ಇಲ್ಲಿರಬಾರ್ದು ಅಂತ ಗಣೇಶ ಮೂರ್ತಿಯನ್ನು ಬಾವಿಗೆ ಎಸೆದು ಗಣೇಶ ಹೋದ ಎಂದು ಬಂದು ಮೂರ್ತಿ ಇದ್ದ ಜಾಗದಲ್ಲಿ ಕೂರುತ್ತಾರೆ.
ನಾನೇ ದೇವರು ಎಂದು ಪೂಜೆ ಮಾಡಿಸಿಕೊಂಡು ಇನ್ಮುಂದೆ ಈ ಕೆಲಸ ಮಾಡಬೇಡ ಎಂದು ಅರ್ಚಕರನ್ನು ಬೆದರಿಸಿ ಓಡಿಸಿಬಿಡುತ್ತಾನೆ. ಸಮಾಜ ತಪ್ಪುಗಳಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ಕೋಪವನ್ನು ದೇವರ ಮೇಲೆ ತೋರಿಸಿಕೊಳ್ಳುವ ಪರಿಯನ್ನು ಉಪ್ಪಿ ಈ ಸನ್ನಿವೇಶದಲ್ಲಿ ತೋರಿಸಿದ್ದರು. ಅಂದಹಾಗೆ ಅದು ಸಿನಿಮಾದೊಳಗಿನ ಸಿನಿಮಾ ಸನ್ನಿವೇಶ. ಹಾಗಾಗಿ ಉಪೇಂದ್ರ ಸಿನಿಮ್ಯಾಟಿಕ್ ಲಿಬರ್ಟಿ ತಗೊಂಡು ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದರು.

ಅಂದಹಾಗೆ ಹಲಸೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಈ ಗಣೇಶ ಮೂರ್ತಿಯ ಸನ್ನಿವೇಶವನ್ನು ಸೆರೆಹಿಡಿಯಲಾಗಿತ್ತು. ಸದಾ ವಿಭಿನ್ನವಾಗಿ ಚಿಂತಿಸುವ ಅದನ್ನೇ ಸಿನಿಮಾಗಳಲ್ಲಿ ತೋರಿಸುವ ಉಪ್ಪಿ ಈ ಸನ್ನಿವೇಶಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಚಿತ್ರೀಕರಣ ನಡೆಸಿದ್ದರು. ಸಂಪ್ರದಾಯಬದ್ಧವಾಗಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.
ಮೊದಲಿಗೆ ಉಪ್ಪಿ ತಮಗೆ ಬೇಕಾದ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಂಡಿದ್ದರು. ಬಳಿಕ ಗಣೇಶ ವಿಸರ್ಜನೆಯನ್ನು ತಮ್ಮ ಚಿತ್ರಕ್ಕೆ ಹೇಗೆ ಬೇಕೋ ಹಾಗೆ ವಿಭಿನ್ನವಾಗಿ ಮಾಡಿ ಚಿತ್ರೀಕರಣ ಮಾಡಲಾಗಿತ್ತು. ಚಿತ್ರಕ್ಕೆ ಸಹಾಯಕರಾಗಿ ಕೆಲಸ ಮಾಡಿದ್ದ ರಾಜಾರಾಮ್ ಅವತ್ತಿನ ಚಿತ್ರೀಕರಣವನ್ನು ನೆನಪಿಸಿಕೊಂಡಿದ್ದಾರೆ. ಫಿಲ್ಮಿಬೀಟ್ ಜೊತೆ ಈ ಬಗ್ಗೆ ಮಾತನಾಡಿದ್ದಾರೆ.
ಉಪೇಂದ್ರಗೆ ಗಣೇಶ ಇಷ್ಟದ ದೇವರು. ಗಣೇಶನಿಂದ ಅವನಿಗೆ ಒಳ್ಳೆಯದೇ ಆಗಿದೆ. ಆದರೆ ಸಿನಿಮಾ ಬಂದಾಗ ಇಂಡಸ್ಟ್ರಿಯವರು ಗಣೇಶನನ್ನು ಬಾವಿ ಹಾಕ್ಬಿಟ್ಟ, ಹಾಗೆ ಹೀಗೆ ಅಂತ ಮಾತನಾಡಿಕೊಂಡಿದ್ದರು. ಪ್ರತಿ ಗಣೇಶ ಹಬ್ಬಕ್ಕೆ ಅವನಿಗೆ ಏನಾದರೂ ಒಳ್ಳೆಯದು ಆಗುತ್ತದೆ. ಈ ಬಾರಿ ರಜನಿಕಾಂತ್ ಜೊತೆ ನಟಿಸೋ ಅವಕಾಶ ಸಿಕ್ಕಿದೆ ಎಂದು ರಾಜರಾಮ್ ಹೇಳಿದ್ದಾರೆ.
ಆಗ ಸೆನ್ಸಾರ್ ಸಮಸ್ಯೆ ಏನು ಆಗಲಿಲ್ಲ. ಕಾರಣ ಸಾಮಾನ್ಯವಾಗಿ ಜನ ದೇವರು ಏನಾದ್ರೂ ಕಷ್ಟ ಕೊಟ್ಟಾಗ ಮನಸ್ಸಿನಲ್ಲಿರುವ ನೋವನ್ನು ಇದೇ ರೀತಿ ತೋಡಿಕೊಳ್ಳುತ್ತಾರೆ. ಅದನ್ನೇ ಸ್ವಲ್ಪ ದೊಡ್ಡದಾಗಿ ಸಿನಿಮಾದಲ್ಲಿ ತೋರಿಸಲಾಗಿತ್ತು. ಸಾಲದ್ದಕ್ಕೆ ಇದು ಚಿತ್ರವೊಂದರ ಸನ್ನಿವೇಶ ಅಂತ್ಲೇ ಸಿನಿಮಾದಲ್ಲಿ ತೋರಿಸಿದ್ದೆವು ಎಂದಿದ್ದಾರೆ.


Click it and Unblock the Notifications











