Don't Miss!
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- News ಎನ್ಡಿಎ ಸೇರಿದ ಪ್ರಫುಲ್ ಪಟೇಲ್ ಮೇಲಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಿಬಿಐ ಎಳ್ಳುನೀರು!
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಓಂ' ಚಿತ್ರ ಸೃಷ್ಟಿಸಿದ ಅಪರೂಪದ ದಾಖಲೆಗಳು ಹಾಗೂ ಆಸಕ್ತಿಕರ ಸಂಗತಿಗಳು
ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಮತ್ತು ಪ್ರೇಮಾ ಅಭಿನಯದ 'ಓಂ' ಚಿತ್ರ ಬಿಡುಗಡೆಯಾಗಿ 25 ವರ್ಷ ತುಂಬಿದೆ. ಈ ಗಳಿಗೆಯನ್ನು ಅಭಿಮಾನಿಗಳು ಸಂಭ್ರಮಿಸಲು ಅನೇಕ ಕಾರಣಗಳಿವೆ. ಇಡೀ ಭಾರತೀಯ ಚಿತ್ರರಂಗವನ್ನು ಅಚ್ಚರಿಗೆ ದೂಡಿದ ಚಿತ್ರವಿದು. ರೌಡಿಸಂ ಮತ್ತು ಪ್ರೇಮ ಕಥೆಯ ಸಂಘರ್ಷವನ್ನು ಹೀಗೂ ಹೇಳಬಹುದು ಎಂದು ಭಾರತೀಯ ಚಿತ್ರರಂಗಕ್ಕೆ ತೋರಿಸಿದ ಚಿತ್ರವಿದು.
Recommended Video
ಇದನ್ನು ಬಳಿಕ ದೇಶದ ಎಲ್ಲ ಭಾಷೆಗಳ ಸಿನಿಮಾರಂಗಗಳೂ ಅಳವಡಿಸಿಕೊಂಡವು. ಇದಕ್ಕೆ 'ಓಂ' ಚಿತ್ರವೇ ಸ್ಫೂರ್ತಿ ಎನ್ನುವುದು ಉತ್ಪ್ರೇಕ್ಷೆಯಲ್ಲ. ಬಿಡುಗಡೆಯಾಗಿ ಕಾಲು ಶತಮಾನ ಕಳೆದರೂ 'ಓಂ' ಚಿತ್ರದ ಕುರಿತಾದ ಚರ್ಚೆ ಮತ್ತು ಅದರ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ ಎನ್ನುವುದೇ ಚಿತ್ರ ಮೂಡಿಸಿದ ಪರಿಣಾಮ ಎಂತಹದು ಎನ್ನುವುದಕ್ಕೆ ಸಾಕ್ಷಿ. ಈ ಚಿತ್ರದ ಹಿಂದೆ ಅನೇಕ ವಿಶೇಷತೆಗಳು ಮತ್ತು ದಾಖಲೆಗಳಿವೆ. ಮುಂದೆ ಓದಿ...
ಇಬ್ಬರಿಗೂ ರಾಜ್ಯ ಪ್ರಶಸ್ತಿ
ಈ ಚಿತ್ರದ ಅಭಿನಯಕ್ಕೆ 'ಸತ್ಯ' ಪಾತ್ರದ ಶಿವರಾಜ್ ಕುಮಾರ್ ಮತ್ತು 'ಮಧು' ಪಾತ್ರದ ಪ್ರೇಮಾ ಇಬ್ಬರೂ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದುಕೊಂಡರು. ಒಂದೇ ಚಿತ್ರದ ಅಭಿನಯಕ್ಕೆ ನಾಯಕ-ನಾಯಕಿಯರಿಬ್ಬರೂ ಪ್ರಶಸ್ತಿ ಪಡೆದುಕೊಂಡ ಅಪರೂಪದ ಸಾಧನೆ ಇದು. ಉಪೇಂದ್ರ ಅವರಿಗೆ ಅತ್ಯುತ್ತಮ ಚಿತ್ರಕಥೆ, ಬಿ.ಸಿ. ಗೌರಿಶಂಕರ್ ಅವರಿಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಕೂಡ ಲಭಿಸಿತು.
'ಓಂ' ಸಿನಿಮಾ ಸಂಭ್ರಮ: ಶಿವಣ್ಣ-ಉಪೇಂದ್ರ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಗಿಫ್ಟ್
ತೆಲುಗಿನಲ್ಲಿಯೂ ಉಪ್ಪಿ ನಿರ್ದೇಶನ
'ಓಂ' ಚಿತ್ರದ ತೆಲುಗು ಹಿಂದಿಗೂ ರೀಮೇಕ್ ಆಗಿತ್ತು. ತೆಲುಗಿನಲ್ಲಿ ಕೂಡ ಪ್ರೇಮಾ ನಾಯಕಿಯಾಗಿ ನಟಿಸಿದರು. 'ಓಂಕಾರಂ' ಹೆಸರಿನ ಚಿತ್ರದಲ್ಲಿ ಕೋಟೆ ಪ್ರಭಾಕರ್, ಟೆನ್ನಿಸ್ ಕೃಷ್ಣ ಕೂಡ ನಟಿಸಿದರು. ಹಂಸಲೇಖ ಸಂಗೀತದ ಹಾಡುಗಳನ್ನೇ ಅಲ್ಲಿ ಬಳಸಲಾಗಿತ್ತು. ಆದರೆ 'ಹೇ ದಿನಕರ' ಹಾಡನ್ನು ಬಳಸಲಿಲ್ಲ. ಅದರ ಬದಲು 'ಅಂಜದ ಗಂಡು' ಚಿತ್ರದ 'ಏಕೆ ಹೀಗಾಯ್ತೋ' ಹಾಡನ್ನು ಬಳಸಿಕೊಳ್ಳಲಾಯ್ತು. ಉಪೇಂದ್ರ ಅವರೇ ತೆಲುಗಿನಲ್ಲಿ ನಿರ್ದೇಶಿಸಿದ್ದರು.
ಹಿಂದಿಯಲ್ಲಿ ಅನಧಿಕೃತ ರೀಮೇಕ್!
ಹಿಂದಿಯಲ್ಲಿ ಸನ್ನಿ ಡಿಯೋಲ್ 'ಅರ್ಜುನ್ ಪಂಡಿತ್' ಹೆಸರಿನ ಚಿತ್ರದಲ್ಲಿ ನಟಿಸಿದರು. ಆದರೆ ಇದನ್ನು ಓಂ ರೀಮೇಕ್ ಎಂದು ಅಧಿಕೃತವಾಗಿ ಘೋಷಿಸಲಿಲ್ಲ. ಹಿಂದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಪ್ರೇಮಾ ನಟಿಸಿದ್ದ ಪಾತ್ರವನ್ನು ಜೂಹಿ ಚಾವ್ಲಾ ನಿರ್ವಹಿಸಿದರು. ವಿಶೇಷವೆಂದರೆ ಮೊದಲು 'ಓಂ' ಚಿತ್ರದಲ್ಲಿಯೇ ಜೂಹಿ ಚಾವ್ಲಾ ನಟಿಸುತ್ತಾರೆ ಎನ್ನಲಾಗಿತ್ತು.
ಟ್ರೆಂಡ್ ಸೃಷ್ಟಿಸಿದ 'ಓಂ' ಚಿತ್ರಕ್ಕೆ 25 ವರ್ಷ: ಅಭಿಮಾನಿಗಳ ಸಂಭ್ರಮ
ನೈಜ ರೌಡಿಗಳ ನಟನೆ
ನಿಜ ಜೀವನದಲ್ಲಿ ರೌಡಿಗಳಾಗಿದ್ದವರು ಅನೇಕರು 'ಓಂ' ಚಿತ್ರದಲ್ಲಿ ನಟಿಸಿದ್ದರು. ಇಂತಹ ಪ್ರಯೋಗ ಮಾಡಿದ ಮೊದಲ ಸಿನಿಮಾ ಇದು. ಕಪಾಲಿ ಚಿತ್ರಮಂದಿರದಲ್ಲಿಯೇ ಇದು 30 ಬಾರಿ ಬಿಡುಗಡೆಯಾಗಿದೆ. ಸಿನಿಮಾವೊಂದು ಒಂದೇ ಚಿತ್ರಮಂದಿರದಲ್ಲಿ ಇಷ್ಟು ಬಾರಿ ಬಿಡುಗಡೆಯಾದ ಬೇರೆ ನಿದರ್ಶನವಿಲ್ಲ.
20 ವರ್ಷದ ಬಳಿಕ ಉಪಗ್ರಹ ಹಕ್ಕು ಮಾರಾಟ
ಸಾಮಾನ್ಯವಾಗಿ ಚಿತ್ರಗಳು ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಅದರ ಉಪಗ್ರಹ ಪ್ರಸಾರ ಹಕ್ಕು ಮಾರಾಟವಾಗುತ್ತದೆ. ಆದರೆ ಓಂ 1995ರಲ್ಲಿ ಬಿಡುಗಡೆಯಾಗಿದ್ದರೂ ಅದರ ಸ್ಯಾಟಲೈಟ್ ಹಕ್ಕು ಮಾರಾಟವಾಗಿದ್ದು 2015ರಲ್ಲಿ. ಅದೂ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿತ್ತು.
'ಓಂ' ಶೀರ್ಷಿಕೆಗೆ ಕಾರಣವಾದ ಘಟನೆ
ಇದುವರೆಗೂ ಓಂ ಚಿತ್ರ 632ಕ್ಕೂ ಹೆಚ್ಚು ಸಲ ಮರು ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದಲ್ಲಿ ಬೇರೆ ಯಾವ ಸಿನಿಮಾ ಕೂಡ ಇಷ್ಟು ಬಾರಿ ಬಿಡುಗಡೆಯಾಗಿಲ್ಲ. 'ಓಂ' ಚಿತ್ರಕ್ಕೆ ಮೊದಲು ಇರಿಸಿದ್ದ ಹೆಸರು 'ಸತ್ಯ ಅಲಿಯಾಸ್ ಸತ್ಯಮೂರ್ತಿ'. ನಾಯಕನ ಪಾತ್ರದ ಹೆಸರನ್ನೇ ಇರಿಸಲಾಗಿತ್ತು. ಆದರೆ ಸ್ಕ್ರಿಪ್ಟ್ ಮೇಲೆ ಡಾ. ರಾಜ್ ಕುಮಾರ್ 'ಓಂ' ಎಂದು ಬರೆದಿದ್ದನ್ನು ನೋಡಿದ ಉಪೇಂದ್ರ ಅವರ ಮನಸಲ್ಲಿ ಈ 'ಓಂ' ಚಿತ್ರದ ಹೆಸರೇ ಏಕೆ ಆಗಬಾರದು ಎನಿಸಿ ಶೀರ್ಷಿಕೆ ಬದಲಿಸಿದರು.
ರಾಘವೇಂದ್ರ ರಾಜ್ ಕುಮಾರ್ ಮಕ್ಕಳು
ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಶಿವರಾಜ್ ಕುಮಾರ್ ಮತ್ತು ಪ್ರೇಮಾ ಅಂಗಡಿಯೊಂದರಲ್ಲಿ ಇಬ್ಬರು ಮಕ್ಕಳನ್ನು ಎತ್ತಿಕೊಂಡಿರುವ ದೃಶ್ಯವಿದೆ. ಈ ಇಬ್ಬರು ರಾಘವೇಂದ್ರ ರಾಜ್ ಕುಮಾರ್ ಅವರ ಮಕ್ಕಳಾದ ವಿನಯ್ ರಾಜ್ ಕುಮಾರ್ ಮತ್ತು ಯುವ ರಾಜ್ ಕುಮಾರ್. ಈ ಇಬ್ಬರೂ ಈಗ ಕನ್ನಡ ಚಿತ್ರರಂಗದ ನಾಯಕ ನಟರಾಗಿ ಬೆಳೆದಿದ್ದಾರೆ.
ಮೊದಲು ಆಯ್ಕೆಯಾಗಿದ್ದು ಕುಮಾರ್ ಗೋವಿಂದ್
ಈ ಕಥೆಗೆ ಉಪೇಂದ್ರ ಅವರ ಮೊದಲ ಆಯ್ಕೆ ಇದ್ದದ್ದು ಕುಮಾರ್ ಗೋವಿಂದ್. ಆದರೆ ಚಿತ್ರಕಥೆ ರೂಪಿಸುವಾಗ ಶಿವರಾಜ್ ಕುಮಾರ್ ಸೂಕ್ತ ನಟ ಎಂದು ಉಪೇಂದ್ರ ಅವರು ನಟ ಹೊನ್ನವಳ್ಳಿ ಕೃಷ್ಣ ಮೂಲಕ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದರು. ಕಥೆ ಕೇಳಿದ ರಾಜ್ ಕುಮಾರ್ ಹತ್ತೇ ನಿಮಿಷದಲ್ಲಿ ಅದನ್ನು ಒಪ್ಪಿಕೊಂಡಿದ್ದರಂತೆ. ಅಷ್ಟೇ ಅಲ್ಲದೆ, 50 ಸಾವಿರ ಮುಂಗಡ ನೀಡಿ, ನಮ್ಮ ಬ್ಯಾನರ್ನಲ್ಲಿಯೇ ಸಿನಿಮಾ ಮಾಡಿ ಎಂದು ಹೇಳಿದ್ದರಂತೆ.
ರಾಜ್ ಕುಮಾರ್ಗೆ ಹೆದರಿದ್ದ ರೌಡಿಗಳು!
ಜೇಡರಹಳ್ಳಿ ಕೃಷ್ಣ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ತನ್ವೀರ್ ಮುಂತಾದ ನಿಜ ಜೀವನದ ರೌಡಿಗಳು ನಟಿಸಿದ್ದರು. ಶೂಟಿಂಗ್ ವೇಳೆ ಡಾ. ರಾಜ್ ಕುಮಾರ್ ಸೆಟ್ಗೆ ಬರುತ್ತಾರೆ ಎಂದು ತಿಳಿದಾಗ ನಿಜ ಜೀವನದ ರೌಡಿಗಳು ಅವರ ಎದುರು ಕಾಣಿಸಿಕೊಳ್ಳಲು ಹೆದರಿದ್ದರಂತೆ.
ಕಾಗದವೇ ಸ್ಫೂರ್ತಿ
ಉಪೇಂದ್ರ ಅವರ ಸ್ನೇಹಿತ ಪುರುಷೋತ್ತಮ್ ಎಂಬುವವರು ಬರೆದ ಕಾಗದ 'ಓಂ' ಚಿತ್ರಕ್ಕೆ ಸ್ಫೂರ್ತಿಯಾಗಿತ್ತು. ಕಾಲೇಜು ದಿನದಲ್ಲಿಯೇ ಉಪ್ಪಿ ಈ ಕಥೆ ಸಿದ್ಧಪಡಿಸಿದ್ದರು. ಸಿನಿಮಾ ವೃತ್ತಿ ಬದುಕು ಆರಂಭಿಸುವ ಮುನ್ನ ಉಪೇಂದ್ರ ಸುಮಾರು ಹತ್ತು ಕಥೆಗಳನ್ನು ಬರೆದಿದ್ದರು. ಅದರಲ್ಲಿ 'ಓಂ' ಕೂಡ ಒಂದು.
ರಾಜ್ ಕುಮಾರ್ ಬೇಡಿಕೆಯಂತೆ ಹಾಡು
'ಓಂ' ಚಿತ್ರರಂಗದ ಹಿಟ್ ಹಾಡುಗಳಲ್ಲಿ 'ಹೇ ದಿನಕರ' ಹಾಡೂ ಒಂದು. ಸಾರ್ವಕಾಲಿಕ ಹಿಟ್ ಗೀತೆಗಳಲ್ಲಿ 'ಹೇ ದಿನಕರ'ಕ್ಕೆ ಕಾಯಂ ಸ್ಥಾನವಿದೆ. ಆದರೆ ಆರಂಭದಲ್ಲಿ ಈ ಹಾಡನ್ನು ಅಳವಡಿಸುವ ಉದ್ದೇಶ ಉಪೇಂದ್ರ ಅವರಿಗೆ ಇರಲಿಲ್ಲ. ಶಿವರಾಜ್ ಕುಮಾರ್ ಪಾತ್ರದ ಆರಂಭಕ್ಕೆ ಒಂದು ಪೂಜ್ಯ ಭಾವನೆ ಸಿಗಲು ಹಾಡು ಬೇಕು ಎಂದು ರಾಜ್ ಕುಮಾರ್ ಸೂಚಿಸಿದ್ದರು. ಅದಕ್ಕೆ ಅನುಗುಣವಾಗಿ ಹಂಸಲೇಖ ಈ ಹಾಡು ಸೃಷ್ಟಿಸಿದ್ದರು.
ಓಂ ವಿಡಿಯೋ ಗೇಮ್
ಮತ್ತೊಂದು ವಿಶೇಷವೆಂದರೆ 'ಓಂ' ಚಿತ್ರವನ್ನು ಇಟ್ಟುಕೊಂಡು 'ಓಂ ಗೇಮ್' ಎಂಬ ಮೊಬೈಲ್ ವಿಡಿಯೋ ಗೇಮ್ ಕೂಡ ಸಿದ್ಧವಾಗಿತ್ತು. ಏಳು ಯುವಕರು ಸೇರಿ ಈ ಸಾಹಸಮಯ ವಿಡಿಯೋ ಗೇಮ್ ಸೃಷ್ಟಿಸಿದ್ದರು. 'ಓಂ' ಚಿತ್ರದ ಮಾದರಿಯಲ್ಲಿಯೇ ಈ ಗೇಮ್ ಇದೆ.