ಬಂಗಾರದ ಮನುಷ್ಯ ಸೋಲುವುದು ಖಚಿತ ಎಂದು ಹೇಳಿದ್ದು ಯಾರು ? ಕಸ್ತೂರಿ ನಿವಾಸ ಬಗ್ಗೆ ಎದ್ದಿದ್ದೇಕೆ ಅಪಸ್ವರ..?
ಬಂಗಾರದ ಮನುಷ್ಯ.. ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆಯನ್ನ ಬರೆದ ಸಿನಿಮಾ. ಕರುನಾಡಿನೆಲ್ಲೆಡೆ ಅತ್ಯದ್ಭುತವಾದ ಪ್ರದರ್ಶನವನ್ನ ಕಂಡು, ಮರು ಬಿಡುಗಡೆಯಲ್ಲಿಯೂ ದಾಖಲೆ ಬರೆದ ಬಂಗಾರದ ಮನುಷ್ಯ ಚಿತ್ರವನ್ನ ನೋಡಿ ಅದೆಷ್ಟೋ ವಿದ್ಯಾವಂತ ಯುವಕರು, ತಮ್ಮ ತಮ್ಮ ಊರುಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು. ಅಷ್ಟರಮಟ್ಟಿಗೆ, ಯುವಜನತೆ ಮೇಲೆ ಪ್ರಭಾವ ಬೀರಿದ್ದ ಈ ಬಂಗಾರದ ಮನುಷ್ಯ ಚಿತ್ರ ಯಾವುದೇ ಕಾರಣಕ್ಕೂ ಗೆಲ್ಲಲ್ಲ, ಸೋಲು ಖಚಿತ ಎಂಬ ಭವಿಷ್ಯವಾಣಿಯನ್ನ ಅನೇಕರು ಆ ಕಾಲಕ್ಕೆ ಹೇಳಿದ್ದರು ಎಂದರೆ ನೀವು ನಂಬ್ತೀರಾ. ನಂಬ್ಲೆಬೇಕು. ಯಾಕೆಂದರೆ ಇದು ಸತ್ಯ.
ಹೌದು, ಅಸಲಿಗೆ ಬಂಗಾರದ ಮನುಷ್ಯ ಚಿತ್ರ ಬಿಡುಗಡೆಗೆ ಮುನ್ನ ಚಿತ್ರರಂಗದ ಕೆಲ ವಿತರಕರು ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಅಪಸ್ವರ ಎತ್ತಿದ್ದರು. ಯಾಕೆಂದರೆ.. ಊಟದ ತಟ್ಟೆಯ ಮುಂದೆ ಕುಳಿತ ಡಾ.ರಾಜ್ ಅಂದರೆ ರಾಜೀವಪ್ಪ , ಇನ್ನೇನು ತುತ್ತನ್ನ ಬಾಯಿಗೆ ಇಡಬೇಕೆನ್ನುವಷ್ಟರಲ್ಲಿಯೇ, ವಜ್ರಮುನಿ ಅವರು 'ತಿನ್ನೋದು ನಮ್ಮ ಅನ್ನ , ಉಡೋದು ನಮ್ಮ ಬಟ್ಟೆ...' ಎಂದು ಹೇಳಿ ಬಿಡುತ್ತಾರೆ. ಇದರಿಂದ .. ಘಾಸಿಗೊಳಗಾಗುವ ರಾಜ್ ತಟ್ಟೆಗೆ ನಮಸ್ಕಾರ ಮಾಡಿ, ಚಪ್ಪಲಿಯನ್ನೂ ಹಾಕಿಕೊಳ್ಳದೆ ಮನೆಯಿಂದ ಹೊರಡುತ್ತಾರೆ. ತೋಟಕ್ಕೆ ಬಂದು ಮಣ್ಣನ್ನು ಕೈಗೆತ್ತಿಕೊಂಡು, ಕಣ್ಣಿಗೆ ಒತ್ತಿಕೊಂಡು ' ನೀನು ನಂಬಿದವರಿಗೆ ಎಂದೆಂದೂ ಕೈ ಬಿಡುವುದಿಲ್ಲ, ನನ್ನನ್ನು ಕಾಪಾಡಿದಂತೆ, ನಮ್ಮ ಅಕ್ಕ ಮತ್ತು ಮಕ್ಕಳನ್ನು ಕಾಪಾಡು ತಾಯೇ...' ಎಂದು ಕೈ ಮುಗಿಯುತ್ತಾರೆ. ಒಂಟಿಯಾಗಿ ಹೊರಟು ಬಿಡುತ್ತಾರೆ.

ವಿಷಾದಭಾವದ ಈ ದೃಶ್ಯ ನೋಡಿದ ವಿತರಕರು, ರಾಜಕುಮಾರ್ ಅವರನ್ನು ನಮ್ಮ ಜನ ಹೀಗೆ ನೋಡಲು ಸುತಾರಾಂ ಇಷ್ಟ ಪಡುವುದಿಲ್ಲ. ಚಿತ್ರದ ಕೊನೆಯ ದೃಶ್ಯ ಬದಲಾಯಿಸಬೇಕು, ಇಲ್ಲದಿದ್ದರೆ ಸಿನಿಮಾ ಸೋಲುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರಾಜ್ ಕುಮಾರ್ ಅವರ ಎದುರೇ ಈ ಮಾತನ್ನ ಹೇಳುತ್ತಾರೆ ಕೂಡ. ಆದರೆ.. ರಾಜ್ ಕುಮಾರ್ ಮಾತ್ರ ಈ ಮಾತನ್ನ ಒಪ್ಪುವುದಿಲ್ಲ. ಯಾಕೆಂದರೆ.. ಕತೆ ಬಯಸಿದಂತೆ ದೃಶ್ಯಗಳು ಇರಬೇಕು ಅನ್ನುವುದು ರಾಜ್ ಕುಮಾರ್ ಅವರ ನಿಲುವಾಗಿತ್ತು.
ಇನ್ನೂ ನಿರ್ದೇಶಕ ಸಿದ್ದಲಿಂಗಯ್ಯನವರಂತೂ ಪಟ್ಟುಬಿಡದ ವ್ಯಕ್ತಿ. ವಿತರಕರ ಮಾತನ್ನ ಒಪ್ಪದ ಸಿದ್ದಲಿಂಗಯ್ಯ ಅವರು ಸಿನಿಮಾದ ಅಂತ್ಯ ಹೀಗೇ ಇರಬೇಕು ಎಂದರು. ರಾಜಕುಮಾರ್ ಅವರು ಕೂಡ ನಿರ್ದೇಶಕರ ತೀರ್ಮಾನವೇ ಅಂತಿಮ ಎಂದು ಬಿಟ್ಟರು. ಮುಂದೆ ಆಗಿದ್ದು ಇತಿಹಾಸ.
ಬಂಗಾರದ ಮನುಷ್ಯ ಬಿಡುಗಡೆಯಾದ ಮೇಲೆ ಉಂಟು ಮಾಡಿದ ಪರಿಣಾಮದಿಂದ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರ ದೃಷ್ಟಿಕೋನ ತಪ್ಪು ಎಂದು ಸಾಬೀತಾಯಿತು. ಸಿನಿಮಾ ನೋಡಿದ ಅನೇಕರು ಚಿತ್ರದಿಂದ ಮತ್ತು ಡಾ.ರಾಜ್ ಪಾತ್ರದಿಂದ ಪ್ರಭಾವಕ್ಕೊಳಗಾಗಿ ಕೃಷಿಗೆ ಆದ್ಯತೆ ಕೊಟ್ಟು ನಗರದ ವೃತ್ತಿ ಬಿಟ್ಟು ಹಳ್ಳಿಗೆ ಮರಳಿದರು. ಬೆಂಗಳೂರಿನ ಒಂದು ಚಿತ್ರಮಂದಿರದಲ್ಲಿ ಸತತ ಎರಡು ವರ್ಷ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ ಸಿನಿಮಾದಿಂದ, ರಾಜಕುಮಾರ್ ಅವರನ್ನು ಅಭಿಮಾನಿಗಳು ಮುಂದೆ ಬಂಗಾರದ ಮನುಷ್ಯ ಎಂದೇ ಕರೆಯುವಂತಾಯಿತು.

ಕೇವಲ ಬಂಗಾರದ ಮನುಷ್ಯ ಮಾತ್ರ ಅಲ್ಲ ಕಸ್ತೂರಿ ನಿವಾಸ ಚಿತ್ರದ ಸಂದರ್ಭದಲ್ಲಿಯೂ ಕೂಡ ಇಂತಹದ್ದೇ ಅಭಿಪ್ರಾಯ ವ್ಯಕ್ತವಾಗಿತ್ತು. ಕಸ್ತೂರಿ ನಿವಾಸ ಸಿನಿಮಾದ ಅಂತ್ಯದ ಬಗ್ಗೆಯೂ ನಾನಾ ಮಾತು ಕೇಳಿ ಬಂದಿತ್ತು. ಯಾಕೆಂದರೆ ಕಸ್ತೂರಿ ನಿವಾಸದಲ್ಲಿ ರಾಜಕುಮಾರ್ ನಿರ್ವಹಿಸಿದ ಪಾತ್ರವು ನಿಧನವಾಗುವುದರ ಮೂಲಕ ಚಿತ್ರ ಅಂತ್ಯವಾಗುತ್ತದೆ. ರಾಜಕುಮಾರ್ ಅವರನ್ನು ಹೀಗೆ ನೋಡಲು ಜನರು ಇಚ್ಛಿಸುವುದಿಲ್ಲ. ಈ ಸಿನಿಮಾ ಸೋಲುತ್ತದೆ ಎಂದು ಪ್ರಥಮ ಖಾಸಗಿ ಪ್ರದರ್ಶನದ ದಿನ ಕೆಲವರು ಬಲವಾಗಿ ವಾದವನ್ನ ಮಾಡಿದ್ದರು.
ಆದರೆ ರಾಜಕುಮಾರ್ ಅವರಿಗೆ ಹಾಗನ್ನಿಸಿರಲಿಲ್ಲ. ನಿರ್ದೇಶಕರು ಸರಿಯಾಗಿಯೇ ಯೋಚಿಸಿರುತ್ತಾರೆ ಎಂಬ ನಂಬಿಕೆ ಅವರದಾಗಿತ್ತು. ಇನ್ನೂ ಚಿತ್ರದ ಕ್ಲೈಮ್ಯಾಕ್ಸ್ ಖುದ್ದು ರಾಜ್ ಕುಮಾರ್ ಅವರಿಗೆ ಇಷ್ಟವಾಗಿತ್ತು. ತುಂಬಾನೇ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಎಂಬ ಭಾವನೆ ರಾಜ್ ಕುಮಾರ್ ಅವರಲ್ಲಿತ್ತು. ಆದರೂ...ತರ್ಕಬದ್ಧ ನೋಟದ ವಾಸ್ತವಿಕ ವಿಶ್ಲೇಷಕರಾಗಿದ್ದ ರಾಜ್ ಸಹೋದರ ವರದಪ್ಪ ಅವರ ಅಭಿಪ್ರಾಯ ತಿಳಿದುಕೊಳ್ಳುವ ಬಯಕೆ ರಾಜ್ ಅವರದ್ದು. ಆದರೆ ಆ ದಿನ ಬೇರೆ ಕೆಲಸದ ಪ್ರಯುಕ್ತ, ವರದಪ್ಪನವರು ಖಾಸಗಿ ಪ್ರದರ್ಶನಕ್ಕೆ ಗೈರಾಗಿದ್ದರು. ಈ ಕಾರಣಕ್ಕೆ ಖಾಸಗಿ ಪ್ರದರ್ಶನ ಮುಗಿಸಿ ಮನೆಗೆ ಬಂದ ರಾಜ್, ವರದಪ್ಪನವರಿಗೆ ಎಲ್ಲವನ್ನೂ ವಿವರಿಸಿದರು. ವ್ಯಕ್ತವಾದ ಅಭಿಪ್ರಾಯವನ್ನೂ ಹೇಳಿದರು. ಅಣ್ಣನಿಂದ ಎಲ್ಲ ಕೇಳಿಸಿಕೊಂಡು ನಾನೊಂದ್ಸಾರಿ ಸಿನಿಮಾ ನೊಡ್ತೀನಿ ಇರಪ್ಪ ಎಂದ ವರದಪ್ಪನವರು, ನಿರ್ಮಾಪಕ-ನಿರ್ದೇಶಕರಿಗೆ ತಿಳಿಸಿ ಸಿನಿಮಾ ನೋಡಿದರು. ಆ ನಂತರ ಯಾರು ಏನೇ ಹೇಳಲಿ, ಕಸ್ತೂರಿ ನಿವಾಸ ಸಿನಿಮಾ ನೂರು ದಿನ ಪ್ರದರ್ಶನ ಕಾಣುವುದು ನಿಶ್ಚಿತ ಎಂದು ವರದಪ್ಪ ಅವರು ತಂಡಕ್ಕೆ ಹೇಳಿದರು. ಅಂತ್ಯ ಬದಲಾಯಿಸೊ ಅಗತ್ಯವಿಲ್ಲ ಎಂದು ಖಚಿತವಾಗಿ ಹೇಳಿದರು. ವರದಪ್ಪನವರ ಮಾತು ನಿಜವಾಯಿತು. ಕಸ್ತೂರಿ ನಿವಾಸ ರಾಜ್ ವೃತ್ತಿ ಜೀವನದ ಮತ್ತೊಂದು ಮೈಲಿಗಲ್ಲಾಯಿತು.


Click it and Unblock the Notifications











