'ರಾಜ್'ಗೂ ಮೊದಲು 'ಕಸ್ತೂರಿ ನಿವಾಸ' ಈ ನಟ ಮಾಡಬೇಕಿತ್ತು! ಆ ಹೀರೋ ರಿಜೆಕ್ಟ್ ಮಾಡಿದ್ದೇಕೆ?
1971ರಲ್ಲಿ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಚಿತ್ರ ಕಸ್ತೂರಿ ನಿವಾಸ. ರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಮೈಲಿಗಲ್ಲು, ಕೀರ್ತಿ ತಂದುಕೊಟ್ಟ ಅತ್ಯುತ್ತಮ ಚಿತ್ರ. ದೊರೆ-ಭಗವಾನ್ ಈ ಚಿತ್ರ ನಿರ್ದೇಶನ ಮಾಡಿದ್ದರು.
ಇಂದಿಗೂ ರಾಜ್ ಕುಮಾರ್ ಅವರ ದಿ ಬೆಸ್ಟ್ ಚಿತ್ರಗಳನ್ನು ಪಟ್ಟಿ ಮಾಡಿ ಎಂದರೆ ಕಸ್ತೂರಿ ನಿವಾಸ ಮೊದಲ ಸಾಲಿನಲ್ಲಿ ಇರುತ್ತೆ. ಈ ಸಿನಿಮಾ ನೋಡಿದ್ಮೇಲೆ ಅಣ್ಣಾವ್ರು ಬಿಟ್ಟರೆ ಬೇರೆ ಯಾರೂ ಈ ಪಾತ್ರಕ್ಕೆ ಸೂಕ್ತವಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.
ಆದರೆ, ಡಾ ರಾಜ್ ಕುಮಾರ್ ಗೂ ಮೊದಲು ಕಸ್ತೂರಿ ನಿವಾಸ ಸಿನಿಮಾವನ್ನು ಬೇರೆ ನಟ ಮಾಡಬೇಕಿತ್ತಂತೆ. ಆದರೆ, ಆ ನಟ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದರು. ಯಾರದು? ಮುಂದೆ ಓದಿ....

ಶಿವಾಜಿ ಗಣೇಶನ್ ಬೇಡ ಎಂದಿದ್ದರು
ಕಸ್ತೂರಿ ನಿವಾಸ ಚಿತ್ರಕ್ಕೆ ಕಥೆ ಬರೆದಿದ್ದು ಜಿ ಬಾಲಸುಬ್ರಮಣ್ಯಂ. ಆರಂಭದಲ್ಲಿ ತಮಿಳು ನಟ ಶಿವಾಜಿ ಗಣೇಶನ್ ಬಳಿ ಈ ಕಥೆ ಹೇಳಲಾಯಿತು. ಪೂರ್ತಿ ಕಥೆ ಕೇಳಿದ ನಂತರ ಶಿವಾಜಿ ಗಣೇಶನ್ ಈ ಸಿನಿಮಾ ಮಾಡಲ್ಲ ಎಂದು ತಿರಸ್ಕರಿಸಿದರು. ಕಥೆಯ ಕೊನೆಯಲ್ಲಿ ನಾಯಕ ಸಾಯುವ ದೃಶ್ಯವಿದೆ. ಇದನ್ನು ಸಿನಿಮಾ ಮಾಡಿದ್ರೆ ಓಡಲ್ಲ ಎಂಬ ಕಾರಣ ನೀಡಿದರು.

ಕಥೆ ಖರೀದಿಸಿದ ದೊರೆ-ಭಗವನ್
ಕಸ್ತೂರಿ ನಿವಾಸ ಕಥೆ ಶಿವಾಜಿ ಗಣೇಶನ್ ಬೇಡ ಎಂದು ಕೈಬಿಟ್ಟ ಮೇಲೆ ಈ ವಿಷಯ ಕನ್ನಡ ನಿರ್ದೇಶಕರಾದ ದೊರೆ-ಭಗವಾನ್ ಅವರಿಗೆ ತಿಳಿಯಿತು. ಕಥೆ ತುಂಬಾ ಇಷ್ಟ ಆದ ಕಾರಣ ಖರೀದಿ ಮಾಡಲು ನಿರ್ಧರಿಸಿದರು. ಈ ಚಿತ್ರವನ್ನು ರಾಜ್ ಕುಮಾರ್ ಜೊತೆ ಮಾಡಿದ್ರೆ ಸಿನಿಮಾ ಹಿಟ್ ಆಗುತ್ತೆ ಎಂದು ಭಾವಿಸಿದರು. ಆದರೂ, ಅಣ್ಣಾವ್ರು ಈ ಕಥೆ ಒಪ್ಪುತ್ತಾರಾ ಎಂಬ ಆತಂಕ ಇತ್ತು.

ಅಣ್ಣಾವ್ರನ್ನು ಒಪ್ಪಿಸಿದ ವರದಪ್ಪ
ರಾಜ್ ಕುಮಾರ್ ಕಥೆ ಒಪ್ಪುತ್ತಾರಾ ಎಂಬ ಆತಂಕದಲ್ಲಿದ್ದ ದೊರೆ-ಭಗವಾನ್ ಗೆ ಸಹಾಯ ಮಾಡಿದ್ದು ರಾಜ್ ಸಹೋದರ ವರದಪ್ಪ ಮತ್ತು ಚಿ ಉದಯ್ ಶಂಕರ್. ನಂತರ ರಾಜ್ ಕೂಡ ಕಸ್ತೂರಿ ನಿವಾಸ ಕಥೆಗೆ ಗ್ರೀನ್ ಸಿಗ್ನಲ ನೀಡಿದರು. ಅನುಪಮ ಮೂವೀಸ್ ಈ ಚಿತ್ರ ನಿರ್ಮಾಣಕ್ಕೆ ಮುಂದಾಯ್ತು. ಕೆಸಿಎನ್ ಗೌಡರು ಬಂಡವಾಳ ಹಾಕಿದರು.

38 ಸಾವಿರ ರೂಪಾಯಿಗೆ ಕಥೆ ಖರೀದಿ
ತಮಿಳಿನಿಂದ ಈ ಕಥೆಯನ್ನು ಆಗಿನ ಸಮಯಕ್ಕೆ 38 ಸಾವಿರ ರೂಪಾಯಿ ನೀಡಿ ದೊರೆ-ಭಗವಾನ್ ಖರೀದಿಸಿದ್ದರು. ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಯಿತು. ಸಿನಿಮಾ ಶೂಟಿಂಗ್ ಕೂಡ ಅಂದುಕೊಂಡಂತೆ 19 ದಿನದಲ್ಲಿ ಆಯಿತು. ದಾಖಲೆಗಳ ಪ್ರಕಾರ ಕಸ್ತೂರಿ ಸಿನಿಮಾ ನಿರ್ಮಾಣ ತಗುಲಿದ ವೆಚ್ಚ 5 ಲಕ್ಷ. ಸುಮಾರು 16 ಚಿತ್ರಮಂದಿರಗಳಲ್ಲಿ ಶತದಿನ ಆಚರಿಸಿತು. ಅಣ್ಣಾವ್ರ ಅಭಿನಯ ಕಂಡು ಅಭಿಮಾನಿಗಳು ಸಂಭ್ರಮಿಸಿದರು.

ಶಿವಾಜಿ ಗಣೇಶನ್ ಬೇಡಿಕೆ
ಕನ್ನಡದಲ್ಲಿ ಕಸ್ತೂರಿ ನಿವಾಸ ಸಿನಿಮಾ ಹಿಟ್ ಆಗುತ್ತಿದ್ದಂತೆ ಮೊದಲು ಬೇಡ ಎಂದು ನಿರಾಕರಿಸಿದ್ದ ಶಿವಾಜಿ ಗಣೇಶನ್ ಮತ್ತೆ ಈ ಸಿನಿಮಾ ಮಾಡಲು ತೀರ್ಮಾನಿಸಿದರು. ಅಣ್ಣಾವ್ರ ಅಭಿನಯ ನೋಡಿ ಕೊಂಡಾಡಿದರು. 2 ಲಕ್ಷ ನೀಡಿ ರೀಮೇಕ್ ಹಕ್ಕು ಖರೀದಿಸಿದರು. ತಮಿಳಿನಲ್ಲಿ 'ಅವಂದಾನ್ ಮನಿಧನ್' ಹೆಸರಿನಲ್ಲಿ ಶಿವಾಜಿ ಗಣೇಶನ್ ಸಿನಿಮಾ ಮಾಡಿದರು. ಅಲ್ಲಿಯೂ ಆ ಚಿತ್ರ ಗೆದ್ದು ಬೀಗಿತು.


Click it and Unblock the Notifications











