ಬಬ್ರುವಾಹನನ ಚಿತ್ರಾಂಗದೆ ಸರೋಜಾದೇವಿಗೆ ರಾಜ್ ಹೇಳಿದ್ದೇನು..? ಅಣ್ಣಾವ್ರ ಎದುರು ಆರತಿ ಕಣ್ಣೀರಿಟ್ಟಿದ್ದೇಕೆ..?
ಡಾ.ರಾಜ್ ಕುಮಾರ್.. ಅಂದು ಕನ್ನಡ ಚಿತ್ರರಂಗಕ್ಕೆ ವರವಾಗಿ ಬಂದ ವರನಟ. ಅಭಿನಯದ ಹಾಗೂ ಸೌಜನ್ಯದಿಂದಾಗಿಯೇ ಅಪಾರಕೀರ್ತಿ ಗಳಿಸಿ, ಭವ್ಯ ನಾಡಲ್ಲಿ ಮೆರೆದ ಈ ಧೀಮಂತ ನಾಯಕ ಚಿತ್ರರಂಗದ ತಮ್ಮ ಸಹೋದ್ಯೋಗಿಗಳಲ್ಲಿ ಯಾವತ್ತು ಚಿಕ್ಕವರು.. ದೊಡ್ಡವರು ಎಂಬ ಭೇದ ಭಾವ ಮಾಡಲಿಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಡಾ.ರಾಜ್ ಇದ್ದಲ್ಲಿ ಸಮಾನ ಸಹಪಂಕ್ತಿ ಭೋಜನದ ವ್ಯವಸ್ಥೆಯಾಗುತ್ತಿತ್ತು. ತಾವೊಬ್ಬ ಸೂಪರ್ ಸ್ಟಾರ್ ಎಂದುಕೊಂಡು ಪ್ರತ್ಯೇಕ ಊಟದ ವ್ಯವಸ್ಥೆಯನ್ನ ಡಾ.ರಾಜ್ ಕುಮಾರ್ ಯಾವತ್ತೂ ಮಾಡಿಸಿಕೊಳ್ಳುತ್ತಿರಲಿಲ್ಲ. ರಾಜ್ ಕುಮಾರ್ ಅವರಲ್ಲಿದ್ದ ಈ ಸರಳತೆ ವಿನಯತೆಯ ಕುರಿತು ಹಲವು ವರ್ಷಗಳ ಹಿಂದೆ ಪದ್ಮಭೂಷಣ ಡಾ|| ಬಿ.ಸರೋಜಾದೇವಿ ಅವರು ಚಿತ್ರೀಕರಣದ ಸಮಯದಲ್ಲಿ ಮರೆಯಲಾಗದ ಘಟನೆಯೊಂದನ್ನ ಹಂಚಿಕೊಂಡಿದ್ದರು.
ಅದು ಬಬ್ರುವಾಹನ ಸಿನಿಮಾ ಚಿತ್ರೀಕರಣ. ಸರೋಜಾದೇವಿಯವರು ಚಿತ್ರಾಂಗದೆ ಪಾತ್ರದ ಉಡುಪುಗಳನ್ನು ಧರಿಸಿಯಾಗಿದೆ. ಕುರ್ಚಿಯಲ್ಲಿ ಕೂತು ಊಟ ಮಾಡುತ್ತಿದ್ದಾರೆ. ರಾಜಕುಮಾರ್ ಬಂದವರು ಎಲ್ಲರ ಜೊತೆ ನೆಲದ ಮೇಲೆ ಊಟಕ್ಕೆ ಕೂತುಕೊಳ್ಳುತ್ತಾರೆ. ಆಗ ಸರೋಜಾದೇವಿಯವರು ನಾನು ಇದೆಲ್ಲ ಕಾಸ್ಟೂಮ್ ಹಾಕ್ಕೊಂಡ್ ಬಿಟ್ಟಿದ್ದೀನಿ ಅಲ್ಲಿ ನಿಮ್ ಜೊತೆ ಕೂತ್ಕೊಳ್ಳೋಕಾಗಲ್ಲ ಎಂದು ಸಂಕೋಚದಿಂದ ಹೇಳುತ್ತಾರೆ. ಆಗ ರಾಜಕುಮಾರ್ ಛೆ! ಛೆ! ಅದೆಲ್ಲ ಚಿಂತೆ ಮಾಡ್ಬೇಡಿ. ಆ ವೇಷದಲ್ಲಿ ನೀವು ಕುರ್ಚಿ ಮೇಲೆ ಕೂತ್ಕೊಬೇಕು. ಅದೇ ಚೆಂದ. ಮಾಡಿ, ಸಂಕೋಚವಿಲ್ದೆ ಊಟ ಮಾಡಿ ಎನ್ನುತ್ತಾರೆ. ತಾವು ಮಾತ್ರ ಎಲ್ಲರ ಸಾಲಿನಲ್ಲಿ ಕೂತು ಊಟ ಮುಗಿಸುತ್ತಾರೆ. ಈ ಪ್ರಸಂಗವನ್ನು ಸ್ವತಃ ಸರೋಜಾದೇವಿಯವರೇ ಹೇಳಿ, ರಾಜ್ ವ್ಯಕ್ತಿತ್ವದ ಸರಳತೆ ಮತ್ತು ನಿಷ್ಕಪಟತೆಯನ್ನು ಹೊಗಳಿದ್ದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು.

ಇನ್ನೂ.. ಆರತಿಯ ನಗು ಕಂಡ ಡಾ.ರಾಜ್ ಕುಮಾರ್ ಹರಿಯೋ ನದಿಯಾಗಿದ್ರು. ಅವರ ನಡೆ, ನುಡಿ, ಕಣ್ಣೋಟದ ಸೆಳೆತಕ್ಕೆ ಕಳೆದುಹೋಗಿದ್ರು. 1971ರಲ್ಲಿ ದೊರೆ ಭಗವಾನ್ ಆಕ್ಷನ್ ಕಟ್ ಹೇಳಿದ್ದ ಚಿತ್ರ ಕಸ್ತೂರಿ ನಿವಾಸ. ಚಿತ್ರ ಸೂಪರ್ ಹಿಟ್ ಆಗಿತ್ತು. ಜಿ.ಕೆ.ವೆಂಕಟೇಶ್ ಸಂಗೀತ ನೀಡಿದ್ದ ಚಿತ್ರದ ಹಾಡುಗಳು ಇಂದಿಗೂ ಜನಮಾನಸದಿಂದ ಅಳಿದಿಲ್ಲ.
ಆದರೆ ನಿಮಗೆ ಗೊತ್ತಾ .. ಇದೇ ಕಸ್ತೂರಿ ನಿವಾಸ ಚಿತ್ರದ ಸಮಯದಲ್ಲಿ ಆರತಿಯವರಿಗೆ ಆಗ ನೃತ್ಯದ ಅಭ್ಯಾಸ ಅಷ್ಟಾಗಿ ಇರಲಿಲ್ಲವಂತೆ. ಜೊತೆಗೆ ರಾಜಕುಮಾರ್ ಜೊತೆಗಿನ ಅಭಿನಯ ಎಂದಾಗ ಯಾರಿಗಾದರೂ ಆರಂಭದ ಅಳುಕು ಇರುತ್ತದೆ. ಈ ಚಿತ್ರದ ನೃತ್ಯ ನಿರ್ದೇಶಕರಾದ ಉಡುಪಿ ಜಯರಾಂ ಮತ್ತು ದೇವಿ ಅವರು ಆರತಿಯವರಿಗೆ ನೃತ್ಯಾಭಿನಯ ಹೇಳಿಕೊಟ್ಟರು. ತುಂಬಾ ಸಮಯವಾದರೂ ಅಂದುಕೊಂಡಂತೆ ನೃತ್ಯ ಬರದೇ ಇದ್ದಾಗ ಆರತಿಯವರು ಅತ್ತುಬಿಟ್ಟರು.

ಆಗ ರಾಜಕುಮಾರ್ ನೃತ್ಯ ನಿರ್ದೇಶಕರಿಗೆ ಯಾಕ್ರೀ ಆರತಿಯವರನ್ನು ಅಳುಸ್ತೀರಿ. ಹೊಸ ಅನುಭವ, ಮಾಡ್ತಾರೆ ಬಿಡಿ ಎಂದು, ಆರತಿಯವರ ಬಳಿ ಬಂದು ಆರತಿಯವರೆ ನಿಮಗೆ ಪಾರ್ಟು ಮಾಡೋಕೆ ಇಷ್ಟ ಇದೆ ತಾನೆ? ಎಂದು ಕೇಳುತ್ತಾರೆ. ಆರತಿ ಖಂಡಿತ ಇಷ್ಟ ಎನ್ನುತ್ತಾರೆ. ಆಗ ನಿರ್ದೇಶಕರಾದ ದೊರೆ-ಭಗವಾನ್ ಬಳಿ ಬಂದ ರಾಜಕುಮಾರ್ ದಯವಿಟ್ಟು ಶೂಟಿಂಗ್ ರದ್ದು ಮಾಡಿ. ಆರತಿ ಅವರಿಗೆ ಪ್ರತ್ಯೇಕವಾಗಿ ಅಭ್ಯಾಸ ಮಾಡಿಸಿ. ಎಲ್ಲರ ಎದುರು ಇಲ್ಲಿ ಸರಿ ಬರಲಿಲ್ಲ ಅಂತ ಸತಾಯ್ಸೋದ್ ಬೇಡ ಎಂದು ಹೇಳುತ್ತಾರೆ.
ಅಣ್ಣಾವ್ರ ಮಾತಿನಂತೆ ಚಿತ್ರೀಕರಣ ಅವತ್ತು ರದ್ದಾಗುತ್ತದೆ. ಆರತಿಯವರಿಗೆ ಪ್ರತ್ಯೇಕವಾಗಿ ನೃತ್ಯವನ್ನ ಹೇಳಿಕೊಡಲಾಗುತ್ತದೆ. ಮರುದಿನ ಆರತಿ ಸರಾಗವಾಗಿ ಅಭಿನಯಿಸುತ್ತಾರೆ. ಮುಂದೆ ಕಸ್ತೂರಿ ನಿವಾಸ ಚಿತ್ರವೂ ಯಶಸ್ವಿಯಾಗುತ್ತದೆ. ಹೀಗೆ ಹುಡುಕುತ್ತಾ ಹೋದರೆ ಕನ್ನಡದ ವರನಟ ಡಾ.ರಾಜಕುಮಾರ್ ಸಹಕಲಾವಿದರನ್ನು ಪ್ರೀತ್ಯಾದರಗಳಿಂದ ನಡೆಸಿಕೊಂಡ ಅನೇಕ ಉದಾಹರಣೆಗಳು ಇತಿಹಾಸದ ಪುಟಗಳಲ್ಲಿ ಸಿಗುತ್ತವೆ.


Click it and Unblock the Notifications











