ತಂದೆ ಕ್ರಿಶ್ಚಿಯನ್, ತಾಯಿ- ಪತ್ನಿ ಹಿಂದೂ; ಜೋಸೆಫ್ ವಿಜಯ್ ಧರ್ಮದ ಬಗ್ಗೆ ಯಾಕೀ ಚರ್ಚೆ?
ತಮಿಳು ನಟ ವಿಜಯ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಬರೀ ತಮಿಳುನಾಡಿನಲ್ಲೇ ದಳಪತಿ ಸಿನಿಮಾಗಳು 200 ಕೋಟಿ ರೂ. ಕಲೆಕ್ಷನ್ ಮಾಡುತ್ತವೆ. ಅದೇ ಕಾರಣಕ್ಕೆ ಇತ್ತೀಚೆಗೆ ಸೂಪರ್ ಸ್ಟಾರ್ ಯಾರು ಎನ್ನುವ ಚರ್ಚೆ ಕಾಲಿವುಡ್ನಲ್ಲಿ ಶುರುವಾಗಿತ್ತು.
ಬಾಲನಟನಾಗಿ ಚಿತ್ರರಂಗಕ್ಕೆ ಬಂದ ವಿಜಯ್ ಬಳಿಕ ಹೀರೊ ಆಗಿ ಪ್ರೇಕ್ಷಕರ ಮುಂದೆ ಬಂದರು. ಆರಂಭದಲ್ಲಿ ರೊಮ್ಯಾಂಟಿಕ್ ಹೀರೊ ಆಗಿ ನಟಿಸಿದ್ದೆ ಹೆಚ್ಚು. ತಮ್ಮ ಲುಕ್ಸ್ ಕಾರಣಕ್ಕೆ ಮೊದ ಮೊದಲು ಟ್ರೋಲ್ ಆಗಿದ್ದು ಉಂಟು. ಆದರೆ ಬರಬರುತ್ತಾ ವಿಜಯ್ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ಇದೀಗ ತಮಿಳುನಾಡಿನಲ್ಲಿ ರಜನಿಕಾಂತ್ ಬಳಿಕ ಆ ಮಟ್ಟಿಗಿನ ಸ್ಟಾರ್ಡಮ್, ಕ್ರೇಜ್ ಇರುವ ಮತ್ತೊಬ್ಬ ನಟ ಎನಿಸಿಕೊಂಡಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದಳಪತಿ ವಿಜಯ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಇನ್ನು ವಿಜಯ್ ಜಾತಿ ಹಾಗೂ ಧರ್ಮದ ಬಗ್ಗೆ ಆಗಾಗ್ಗೆ ಚರ್ಚೆ ನಡೆಯುತ್ತದೆ. ಇದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ದ್ವೇಷಕಾರಿ ಪೋಸ್ಟ್ಗಳು ವೈರಲ್ ಆಗುತ್ತವೆ. ಅದರಲ್ಲೂ 'ಮರ್ಸೆಲ್' ಸಿನಿಮಾ ಬಿಡುಗಡೆ ವೇಳೆ ವಿವಾದ ಶುರುವಾಗಿತ್ತು. "ನಮಗೆ ದೇಗುಲಗಳು ಬೇಕಾಗಿಲ್ಲ, ನಮಗೆ ಆಸ್ಪತ್ರೆಗಳು ಬೇಕು" ಎನ್ನುವ ಅರ್ಥವಿರುವ ಡೈಲಾಗ್ ಭಾರೀ ಚರ್ಚೆ ಹುಟ್ಟುಹಾಕಿತ್ತು.
ವಿಜಯ್ ಕ್ರಿಶ್ಚಿಯನ್, ಹಾಗಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಗುವಂತಹ ಡೈಲಾಗ್ ಅವರ ಸಿನಿಮಾದಲ್ಲಿದೆ ಎನ್ನುವ ಮಾತುಗಳು ಕೇಳಿಬಂತು. ವಿಜಯ್ ತಮ್ಮ ಸಿನಿಮಾಗಳ ಮೂಲಕ ಕ್ರಿಶ್ವಿಯನ್ ವಿಚಾರಧಾರೆಗಳನ್ನು ಹರಡುತ್ತಿದ್ದಾರೆ, ಅದಕ್ಕಾಗಿ ವಿದೇಶದಿಂದ ಹಣ ಸಿಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ತಮಿಳುನಾಡು ಬಿಜೆಪಿ ಮುಖಂಡರೊಬ್ಬರು ವಿಜಯ್ ಚುನಾವಣಾ ಗುರುತಿನ ಚೀಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 'ವಿಜಯ್ ಒಬ್ಬ ಕ್ರಿಶ್ಚಿಯನ್' ಹಾಗಾಗಿ ಹಿಂದುಪರ ಪಕ್ಷಗಳು, ವ್ಯಕ್ತಿಗಳ ಮೇಲೆ ಅವರಿಗೆ ದ್ವೇಷ ಎಂದು ಸೂಚ್ಯವಾಗಿ ಹೇಳಿದ್ದರು. ಇದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.
ಬಳಿಕ ಜೋಸೆಫ್ ವಿಜಯ್ ಅಂತ್ಲೇ ಕೆಲವರು ಸಂಬೋಧಿಸಲು ಆರಂಭಿಸಿದರು. ಆದರೆ ವಿಜಯ್ ಮಾತ್ರ ಈ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ತಂದೆ ಎಸ್. ಎ ಚಂದ್ರಶೇಖರ್ ಮಾತ್ರ ಸಾಕಷ್ಟು ಬಾರಿ ಈ ವಿಷಯ ಪ್ರಸ್ತಾಪಿಸಿ ಆಕ್ರೋಶ ಹೊರ ಹಾಕಿದ್ದಾರೆ. ಹೌದು ನಾನು ಕ್ರಿಶ್ಚಿಯನ್, ನನ್ನ ಪತ್ನಿ ಶೋಭಾ ಹಿಂದೂ, ನನ್ನ ಸೊಸೆ ಸಂಗೀತಾ ಕೂಡ ಹಿಂದೂ. ಅದರಲ್ಲಿ ತಪ್ಪೇನಿದೆ. ನಾವು ಯಾವುದೇ ಧರ್ಮ, ಜಾತಿ ನೋಡಲ್ಲ. ನಮಗೆ ಎಲ್ಲಾ ಒಂದೇ. ಮೊದಲು ಈ ಜಾತಿ, ಧರ್ಮಗಳನ್ನು ಒಡೆದು ಹಾಕಬೇಕು. ನಾವೆಲ್ಲಾ ಮನುಷ್ಯ ಜಾತಿ, ತಮಿಳರು ಎಂದಿದ್ದರು.

ವಿಜಯ್ ಮನೆಯಲ್ಲಿ ದೊಡ್ಡ ಪೂಜಾ ಮಂದಿರ ಇದೆ. ಅತ್ತೆ, ಸೊಸೆ ಅಲ್ಲಿ ಪೂಜೆ ಮಾಡುತ್ತಾರೆ ಎನ್ನಲಾಗುತ್ತದೆ. ಇತ್ತೀಚೆಗೆ ತಮ್ಮ ತಾಯಿಗಾಗಿ ವಿಜಯ್ ಚೆನ್ನೈನ ಕೊರಟೂರಿನಲ್ಲಿರುವ ತಮ್ಮ ಸ್ವಂತ ಜಮೀನಿನಲ್ಲಿ ಸಾಯಿಬಾಬ ಮಂದಿರವನ್ನು ಕಟ್ಟಿಸಿಕೊಟ್ಟಿದ್ದಾರೆ. ದೇವಸ್ಥಾನದ ಉದ್ಘಾಟನೆ ಪೂಜೆಯಲ್ಲಿ ಸಹ ಭಾಗಿ ಆಗಿದ್ದರು. ನಟ ವಿಜಯ್ ತಮ್ಮ ಅಭಿಮಾನಿಯನ್ನೇ ಪ್ರೀತಿಸಿ ಮದುವೆ ಆಗಿದ್ದಾರೆ. ಆದರೂ ವಿಜಯ್ ಧರ್ಮದ ಬಗ್ಗೆ ಚರ್ಚೆ ಮಾತ್ರ ನಿಂತಿಲ್ಲ.
1996ರಲ್ಲಿ ವಿಜಯ್ ನಟನೆಯ 'ಪೂವೆ ಉನಕ್ಕಾಗ' ಸಿನಿಮಾ ನೋಡಿ ಸಂಗೀತಾ ಫಿದಾ ಆಗಿದ್ದರು. ಯುಕೆಯಲ್ಲಿದ್ದ ಆಕೆ ನೆಚ್ಚಿನ ನಟನನ್ನು ನೋಡಲು ಚೆನ್ನೈಗೆ ಬರುತ್ತಿದ್ದರು. ಒಮ್ಮೆ ಸಿನಿಮಾ ಶೂಟಿಂಗ್ ಸೆಟ್ಗೆ ಹೋಗಿ ವಿಜಯ್ ಭೇಟಿ ಮಾಡಿದ್ದರು. ವಿಷಯ ತಿಳಿದು ವಿಜಯ್ ಅಚ್ಚರಿಗೊಂಡಿದ್ದರು. ಮುಂದೆ ವಿಜಯ್ ನೋಡಲು ಆಕೆ ಆಗಾಗ್ಗೆ ಚೆನ್ನೈಗೆ ಬರುತ್ತಿದ್ದಳು. ಬಳಿಕ ಸ್ನೇಹ ಶುರುವಾಗಿತ್ತು. ಕೊನೆಗೆ ವಿಜಯ್ ತಂದೆ ಸಂಗೀತಾರನ್ನು ಮನೆಗೆ ಕರೆಸಿ ಮದುವೆ ವಿಷಯ ಮಾತನಾಡಿದ್ದರು. 1999 ಆಗಸ್ಟ್ 25ರಂದು ವಿಜಯ್- ಸಂಗೀತಾ ಮದುವೆ ನಡೆದಿತ್ತು.
ಸದ್ಯ ವಿಜಯ್ 'ಗೋಟ್'(GOAT) ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಮಿಂಚಿದ್ದಾರೆ. ಸಣ್ಣ ಟೀಸರ್ ಬಿಟ್ಟು ಚಿತ್ರತಂಡ ವಿಜಯ್ಗೆ ಹುಟ್ಟುಹಬ್ಬದ ಶುಭ ಕೋರಿದೆ. 'ತಮಿಳಿಗ ವೆಟ್ರಿ ಕಳಗಂ' ಎನ್ನುವ ರಾಜಕೀಯ ಪಕ್ಷವನ್ನು ಕೂಡ ವಿಜಯ್ ಘೋಷಿಸಿದ್ದಾರೆ. ಶೀಘ್ರದಲ್ಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಲಿದ್ದಾರೆ.


Click it and Unblock the Notifications











