'ದಿ ಕಾಶ್ಮೀರ್ ಫೈಲ್ಸ್' ನೈಜ ಇತಿಹಾಸವೆ? ಇತಿಹಾಸದ ಒಂದು ಮುಖವೆ?
ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಸಿಖ್ಖರ ಮಾರಣ ಹೋಮದ ಸಮಯದಲ್ಲಿ ಟಿವಿಯಲ್ಲಿ 'ಬಾಬಿ' ಸಿನಿಮಾ ಪ್ರಸಾರವಾಗುತ್ತಿತ್ತಂತೆ!
ಸಿನಿಮಾಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ (ಕು)ತಂತ್ರ ಹೊಸದೇನಲ್ಲ, ಬಹಳ ಹಳೆಯದ್ದೆ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಸಿನಿಮಾಗಳ ಶಕ್ತಿಯನ್ನು ಅರಿತ ನಾಯಕರು ಆ ನಂತರದ ದಿನಗಳಲ್ಲಿ ತಮ್ಮ ರಾಜಕೀಯ ಲಾಭಕ್ಕೆ ಸಿನಿಮಾ ಮಾಧ್ಯಮವನ್ನು ಚೆನ್ನಾಗಿಯೆ ಬಳಿಸಿಕೊಂಡರು. ಈಗಲೂ ಬಳಸಿಕೊಳ್ಳುತ್ತಿದ್ದಾರೆ. ಈಗಂತೂ ಹೆಚ್ಚು ಪರಿಣಾಮಕಾರಿಯಾಗಿ ಅದನ್ನು ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿಯೇ ರಾಜಕೀಯ ನಾಯಕರ ಹೆಸರಲ್ಲೇ ಸಿನಿಮಾಗಳು ಬರುತ್ತಿವೆ, ಎದುರಾಳಿ ಪಕ್ಷದ ನಾಯಕರನ್ನು ಗೇಲಿ ಮಾಡಲು ಸಹ ಸಿನಿಮಾಗಳನ್ನು ಮಾಡಲಾಗುತ್ತಿದೆ.
ಇದೀಗ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಿಡುಗಡೆ ಆಗಿದ್ದು ಸಿನಿಮಾವು 'ಪ್ರೊಪಾಗಾಂಡ' ಸಿನಿಮಾ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ. ಮತ್ತೊಂದೆಡೆಯಿಂದ ಇದು ನೈಜ ಇತಿಹಾಸದ ಚಿತ್ರಣವೆಂಬ ವಾದವೂ ಇದೆ. ಕಲೆಗೆ ರಾಜಾಶ್ರಯವೂ ಸಿಕ್ಕಿರುವ ಕಾರಣ ಈ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಂತೂ ಇದ್ದೇ ಇದೆ.

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು, 1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಶ್ಮೀರಿ ಪಂಡಿತರ ಹತ್ಯಾಕಾಂಡ ಹಾಗೂ ವಲಸೆ ಕುರಿತಾದ ಕತೆಯನ್ನು ಹೊಂದಿದೆ. ಮುಸ್ಲಿಂ ಪ್ರತ್ಯೇಕತಾವಾದಿಗಳು ಹೇಗೆ ಕಶ್ಮೀರಿ ಪಂಡಿತರನ್ನು ಕೊಂದರು, ರಾಜ್ಯದಿಂದ ಹೊರಗಟ್ಟಿದರು ಎಂಬುದರ ಭಾವುಕ ಚಿತ್ರಣ ಸಿನಿಮಾದಲ್ಲಿದೆ.
1989ರ ಸಮಯದಲ್ಲಿ ಪಾಕ್ನ ಐಎಸ್ಐ ಪ್ರೇರಣೆಯಿಂದ 'ಸ್ವತಂತ್ರ್ಯ ಕಾಶ್ಮೀರ'ದ ಕೂಗು ಜೋರಾಗಿ ಎದ್ದಿತು. ಉಗ್ರಗಾಮಿ ಸಂಘಟನೆ ಜೆಕೆಎಲ್ಎಫ್ ಹಿಂಸಾತ್ಮಕ ರಿತಿಯಲ್ಲಿ ಸ್ವತಂತ್ರ್ಯ ಕಾಶ್ಮೀರಕ್ಕೆ ಒತ್ತಾಯಿಸತೊಡಗಿತು. ಉಗ್ರಗಾಮಿಗಳಿಗೆ ಶಿಕ್ಷೆ ನೀಡಿದ ಜಡ್ಜ್ ಅನ್ನು ವಾದಿಸಿದ ಲಾಯರ್ಗಳನ್ನು ಪಾಕ್ ಮೂಲಕ ಜೆಕೆಎಲ್ಎಫ್ ಉಗ್ರರು ಹಾಡ ಹಗಲೆ ಕೊಂದರು, ಕೇಂದ್ರ ಗೃಹ ಸಚಿವರಾಗಿದ್ದ ಮುಫ್ತಿ ಮೊಹಮ್ಮದ್ ಸೈಯದ್ರ ಮಗಳು ರುಬಿಯಾ ಸೈಯ್ಯದ್ ಅನ್ನು ಅಪಹರಣ ಮಾಡಿದರು. (ಜಮ್ಮು ಕಾಶ್ಮೀರ ಸಿಎಂ ಆಗಿದ್ದ ಮೆಹಬೂಬಾ ಮುಫ್ತಿಯ ಸಹೋದರಿ ಈಕೆ) ಈ ಅಪಹರಣದ ಬಳಿಕವಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಕಾಶ್ಮೀರಿ ಪಂಡಿತರನ್ನು ಭಾರತೀಯ ಸೈನ್ಯದ ಮಾಹಿತಿದಾರರು ಎಂದು ಮೌಲ್ವಿಯೊಬ್ಬ ಘೋಷಿಸಿಬಿಟ್ಟ, ಅಷ್ಟೇ ಸಾಕಾಯಿತು ಹಿಂದುಗಳ ವಿರುದ್ಧ ಸತತ ದಾಳಿಗಳು ಪ್ರಾರಂಭವಾಗಲು.
ಈ ಸಮಯದಲ್ಲಿ ಕೇಂದ್ರದಲ್ಲಿ ವಿಪಿ ಸಿಂಗ್ ಪ್ರಧಾನಿ ಆಗಿದ್ದರು. ಬಿಜೆಪಿ ಸೇರಿದಂತೆ ಇತರೆ ಕೆಲವು ಪಕ್ಷಗಳ ಬೆಂಬಲ ವಿಸಿ ಸಿಂಗ್ರಿಗಿತ್ತು. ಜಮ್ಮು ಕಾಶ್ಮೀರದಲ್ಲಿ ಫಾರುಖ್ ಅಬ್ದುಲ್ಲ ಸಿಎಂ ಆಗಿದ್ದರು. ರಾಜ್ಯದಲ್ಲಿ ಪರಿಸ್ಥಿತಿ ಕೈಮೀರುತ್ತಿದೆ ಎನಿಸಿದಾಗ ಅಲ್ಲಿ ರಾಜ್ಯಪಾಲರ ಆಡಳಿತ ಹೇರಲಾಯ್ತು. ಆಗ ರಾಜ್ಯಪಾಲರಾಗಿದ್ದು ಬಿಜೆಪಿಯ ಜಗಮೋಹನ್ ಮಲ್ಹೋತ್ರಾ. ಯಾವ ರಾಜಕಾರಣಿಗಳು, ಸರ್ಕಾರಗಳು ಹಿಂದುಗಳ ವಲಸೆಯನ್ನು ತಡೆಯಲಾಗಲಿಲ್ಲ.

1990 ರ ಆರಂಭದಲ್ಲಿ ಲಕ್ಷಾಂತರ ಮಂದಿ ಕಾಶ್ಮೀರಿ ಪಂಡಿತರು ಜಮ್ಮು ಕಾಶ್ಮೀರ ಬಿಟ್ಟು ವಲಸೆ ಹೊರಟರು. ಹಲವರನ್ನು ಕೊಲ್ಲಲಾಯಿತು. ಕಶ್ಮೀರಿ ಪಂಡಿತ್ ಸರಸಂಘ ಪರಿಷದ್ 2007 ರಲ್ಲಿ ಮಾಡಿದ ಸಮೀಕ್ಷೆಯಂತೆ ಸುಮಾರು 339 ಮಂದಿ ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಲಾಯಿತು. '650 ಮಂದಿ ಕಶ್ಮೀರಿ ಪಂಡಿತರ ಹತ್ಯೆ ಆಗಿರಬಹುದು ಎಂಬ ಅಂದಾಜು ನಮಗಿದೆ' ಎಂದು ಕಶ್ಮೀರಿ ಪಂಡಿತ್ ಸರಸಂಘ ಪರಿಷದ್ ಅಧ್ಯಕ್ಷ ಸಂಜಯ್ ಟಿಕೂ ಆಗ ಹೇಳಿದ್ದರು. 3000-4000 ಮಂದಿ ಕಶ್ಮೀರಿ ಪಂಡಿತರ ಹತ್ಯೆ ಆಗಿತ್ತು ಎಂಬ ಸುಳ್ಳು ಸುದ್ದಿಯನ್ನು ನಾವು ಒಪ್ಪುವುದಿಲ್ಲ ಎಂದೂ ಸಹ ಸಂಜಯ್ ಹೇಳಿದ್ದರು. ಕಾಶ್ಮೀರದಲ್ಲಿ ಹತ್ಯೆಯಾದ ಹಿಂದುಗಳ ಸಂಖ್ಯೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ.
ಜಮ್ಮು ಕಾಶ್ಮೀರದಲ್ಲಿ ಕೇವಲ ಕಶ್ಮೀರಿ ಪಂಡಿತರ ಹತ್ಯೆಗಳಷ್ಟೆ ಆಗಿರುವುದಲ್ಲ. ಕಾಶ್ಮೀರದ ಆ ಸುಂದರ ಕಣಿವೆಗಳು ಹಲವು ಧರ್ಮದವರ ರಕ್ತದ ರುಚಿ ಕಂಡಿದೆ. 1947 ರ ಜಮ್ಮು ಹತ್ಯಾಕಾಂಡ ಅದರಲ್ಲೊಂದು. ಭಾರತ ವಿಭಜನೆಯ ಸಂದರ್ಭದಲ್ಲಿ ಆದ ಈ ಹತ್ಯಾಕಾಂಡದಲ್ಲಿ ಸುಮಾರು 20,000ಕ್ಕೂ ಹೆಚ್ಚು ಮುಸ್ಲಿಮರ ಮಾರಣಹೋಮ ನಡೆಯಿತು ಎನ್ನುತ್ತದೆ ಮಾಹಿತಿ ಕಣಜ ವಿಕಿಪೀಡಿಯ. ವಿಭಜನೆಯ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಮಹಾರಾಜ ಹರಿ ಸಿಂಗ್ನ ಸೈನ್ಯ ಹಾಗೂ ಬೆಂಬಲಿಗ ಸಿಖ್ ಹಾಗೂ ಹಿಂದು ಧರ್ಮೀಯರು ಈ ಮಾರಣಹೋಮ ಮಾಡಿದರು ಎನ್ನಲಾಗುತ್ತದೆ. ಕಾಶ್ಮೀರ ಕಣಿವೆಯಲ್ಲಿ ಹಿಂದು-ಮುಸ್ಲಿಂ ನಡುವೆ ದ್ವೇಷದ ಎಳೆ ಬೆಳೆಯಲು ಕಾರಣವಾದ ಮಾರಣಹೋಮ ಇದು ಎಂದು ಇತಿಹಾಸಕಾರರು ಗುರುತಿಸುತ್ತಾರೆ.
ಈಗ ಬಿಡುಗಡೆ ಆಗಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಶ್ಮೀರಿ ಪಂಡಿತರ ಮೇಲೆ ಆದ ದೌರ್ಜನ್ಯದ ಕತೆ ಹೊಂದಿದೆ. ಆದರೆ ಅದರ ಜೊತೆಗೆ ರೀಡ್ ಬಿಟ್ವೀನ್ ದಿ ಲೈನ್ಸ್ ಮಾದರಿಯಲ್ಲಿ ರಾಜಕೀಯ ಪಕ್ಷದ ಐಡಿಯಾಲಜಿಗಳು, ಸಾಮಾಜಿಕ ಪಂಥವೊಂದರ ಬೆಂಬಲಿಗರ ಅವಹೇಳನವೂ ಇದೆ. ಹೀಗಾಗಿ ಈ ಸಿನಿಮಾವನ್ನು ಪ್ರೊಪಾಗಾಂಡಾ ಎಂದು ಟೀಕಿಸಲಾಗುತ್ತಿದೆ. ಆದರೆ ಸಿನಿಮಾದಲ್ಲಿ ಒಂದು ಭಾವುಕ ಕತೆಯಂತೂ ಇದೆ. ಅನುಪಮ್ ಖೇರ್ರ ಅದ್ಭುತ ನಟನೆ ಸಿನಿಮಾಕ್ಕೆ ಕಳಶ. ಆದರೆ ಇದು ನೈಜ ಇತಿಹಾಸ ಅಥವಾ ಇದಷ್ಟೆ ಇತಿಹಾಸ ಎಂಬ ಆಂಬೋಣವನ್ನು ಮತ್ತೊಮ್ಮೆ ಮಗದೊಮ್ಮೆ ಒರೆಗೆ ಹಚ್ಚಿ ನೋಡಬೇಕಿದೆ.


Click it and Unblock the Notifications











