'ಜಾಕಿ' ಸಿನಿಮಾ ಹಿಂದಿನ ಕತೆ: ರಾಘಣ್ಣ ಆ ದಾರಿ, ದುನಿಯಾ ಸೂರಿ ಈ ದಾರಿ!
ಪುನೀತ್ ರಾಜ್ಕುಮಾರ್ ನಟನೆಯ 'ಜಾಕಿ' ಸಿನಿಮಾ ಪುನೀತ್ ವೃತ್ತಿ ಬದುಕಿನ ಅತ್ಯುತ್ತಮ ಹಿಟ್ ಸಿನಿಮಾಗಳಲ್ಲಿ ಒಂದು. ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾದ ಹಾಡುಗಳು ಈಗಲೂ ಸಿನಿ ಪ್ರೇಮಿಗಳ ನಾಲಗೆ ತುದಿಯಲ್ಲಿವೆ.
Recommended Video
'ಜಾಕಿ' ಸಿನಿಮಾವನ್ನು ನಿರ್ಮಾಣ ಮಾಡಿದ್ದು ದೊಡ್ಮನೆ ಕುಟುಂಬವೇ. 'ಪೂರ್ಣಿಮಾ ಎಂಟರ್ಪ್ರೈಸಸ್' ನಿರ್ಮಾಣ ಸಂಸ್ಥೆಯಿಂದ ಸಿನಿಮಾ ನಿರ್ಮಾಣ ಮಾಡಲಾಯಿತು. ಆದರೆ ಈ ಸಿನಿಮಾ ಆಗಿದ್ದು ಸರಳವಾಗಿ ಅಲ್ಲ ಬದಲಿಗೆ ತೆರೆ ಮರೆಯಲ್ಲಿ ಸಾಕಷ್ಟು ತಿಕ್ಕಾಟಗಳ ಬಳಿಕವೇ ಸಿನಿಮಾ ಪ್ರಾರಂಭವಾಗಿತ್ತು.
'ಜಾಕಿ' ಸಿನಿಮಾದಲ್ಲಿ ಪರಂಗಿ ಸೀನನ ಪಾತ್ರದಲ್ಲಿ ನಟಿಸಿರುವ ವಿಕಾಸ್ 'ಜಾಕಿ' ಸಿನಿಮಾಕ್ಕೆ ಸಹ ನಿರ್ದೇಶಕ ಸಹ ಆಗಿದ್ದರು. ದುನಿಯಾ ಸೂರಿಗೆ ಗೆಳೆಯರೂ ಆಗಿದ್ದ ವಿಕಾಸ್, 'ಜಾಕಿ' ಸಿನಿಮಾ ಆದ ಬಗೆ ಹೇಗೆನ್ನುವುದನ್ನು 'ಫಿಲ್ಮಿಬೀಟ್ ಕನ್ನಡ'ದ ಜೊತೆ ಹಂಚಿಕೊಂಡಿದ್ದಾರೆ. ದುನಿಯಾ ಸೂರಿ ಹಾಗೂ ರಾಘವೇಂದ್ರ ರಾಜ್ಕುಮಾರ್ ಅವರುಗಳು ಇಬ್ಬರ ಯೋಚನೆಯೂ ವಿರುದ್ಧ ದಿಕ್ಕಿನಲ್ಲಿದ್ದರೂ 'ಜಾಕಿ' ಸಿನಿಮಾಕ್ಕೆ ಇಬ್ಬರೂ ಒಂದು ಸಹಮತಕ್ಕೆ ಬಂದಿದ್ದು ಹೇಗೆಂಬುದನ್ನು ಅವರು ವಿವರಿಸಿದ್ದಾರೆ.

ದುನಿಯಾ ಸೂರಿಗೆ ಕತೆ ಹೇಳಿ ಅಭ್ಯಾಸವೇ ಇರಲಿಲ್ಲ: ವಿಕಾಸ್
''ಜಾಕಿ' ಸಿನಿಮಾ ನನಗೆ ಬಹಳಷ್ಟು ಕಲಿಸಿದೆ. 'ಜಾಕಿ' ಸಿನಿಮಾದ ಕತೆಯನ್ನು ರಾಘಣ್ಣನವರಿಗೆ ಒಪ್ಪಿಸಬೇಕಿತ್ತು. ಆದರೆ ಸೂರಿ ಆ ವರೆಗೆ ಯಾರಿಗೂ ಕತೆಯೇ ಹೇಳಿರಲಿಲ್ಲ. ಕತೆ ಒಪ್ಪಿಸಿ, ಅನುಮತಿ ಪಡೆದು ಅಭ್ಯಾಸ ಸೂರಿಗೆ ಇರಲಿಲ್ಲ. ಆದರೆ ದೊಡ್ಮನೆಯಲ್ಲಿ ಕತೆಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಚಿತ್ರಕತೆ ಪೂರ್ಣವಾಗುವವರೆಗೆ, ಆ ಚಿತ್ರಕತೆ ಅವರಿಗೆ ತೃಪ್ತಿಯಾಗವವರೆಗೆ ಚಿತ್ರೀಕರಣಕ್ಕೆ ಹೋಗುವುದೇ ಇಲ್ಲ. ಚಿತ್ರಿಕತೆ ತೃಪ್ತಿಯಾದ ಬಳಿಕ ಚಿತ್ರೀಕರಣ ಬೇಗನೆ ಮುಗಿಸಿಬಿಡುತ್ತಾರೆ. ಇದು ದೊಡ್ಮನೆಯ ಸಿನಿಮಾ ಶಿಸ್ತು. ಆದರೆ ಸೂರಿ ಇದಕ್ಕೆ ವಿರುದ್ಧವಾದ ವ್ಯಕ್ತಿತ್ವ ಹೊಂದಿದ್ದವರು'' ಎಂದರು ವಿಕಾಸ್.

''ತಾಯಿ ಸೆಂಟಿಮೆಂಟ್ ಇರಲೆಂಬುದು ರಾಘಣ್ಣನ ಬಯಕೆಯಾಗಿತ್ತು''
''ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್ ಇರಲೆನ್ನುವುದು ರಾಘವೇಂದ್ರ ರಾಜ್ಕುಮಾರ್ ಅವರ ಆಸೆಯಾಗಿತ್ತು. ಆದರೆ ನಾಯಕ ಪಾತ್ರ ಜಾಕಿ ಅನಾಥನಾಗಿರಲಿ ಎಂಬುದು ದುನಿಯಾ ಸೂರಿ ಇಚ್ಛೆ. ಆದರೆ ರಾಘಣ್ಣ ಕೇಳಿದ್ದು ಮೌಲ್ಯಯುತವಾದ ವಿಷಯ ಆಗಿತ್ತು. ಸಿನಿಮಾದಲ್ಲಿ ನಾಯಕ ಏನೇ ಮಾಡಿದರೂ ಯಾರಿಗಾದರೂ ತನ್ನನ್ನು ತಾನು ಸಾಬೀತು ಮಾಡಿಕೊಳ್ಳಲು ಮಾಡಬೇಕು. ತಾಯಿಗೊ, ಪ್ರೇಯಸಿಗೋ, ತಂದೆಗೋ ಹೀಗೆ ನಾಯಕ ಆ ನಾಯಕತ್ವದ ಕೆಲಸಗಳನ್ನು ಮಾಡಲು ಒಂದು ಪಾತ್ರ ಪ್ರೇರಣೆ ಒದಗಿಸಬೇಕು ಎಂಬುದು ರಾಘಣ್ಣನ ಯೋಚನೆಯಾಗಿತ್ತು. ಇದನ್ನು ಅವರು ಉದಾಹರಣೆ ಸಹಿತ ವಿವರಿಸಿದರು. ಆ ವಿಷಯ ನನಗೆ ಅಲ್ಲಿ ಕಲಿಯಲು ಸಿಕ್ಕಿತು'' ಎಂದರು ವಿಕಾಸ್.

ಕತೆಯ ಬಗ್ಗೆ ಇಬ್ಬರ ನಿಲವು ಬೇರೆ: ವಿಕಾಸ್
''ಸಾಂಪ್ರದಾಯಿಕ ಕತೆಯನ್ನಿಟ್ಟುಕೊಂಡು, ಸಾಂಪ್ರದಾಯಿಕ ಪದ್ಧತಿಯಲ್ಲಿ ಸಿನಿಮಾ ಮಾಡುವ ಬಗ್ಗೆ ರಾಘಣ್ಣ ಮಾತನಾಡುತ್ತಿದ್ದರೆ, ದುನಿಯಾ ಸೂರಿ ಹೊಸ ರೀತಿಯಲ್ಲಿ ಕತೆ ಹೇಳುತ್ತಿದ್ದರು. ಅವರಿಬ್ಬರ ಚರ್ಚೆ ಬಹಳ ಮಜವಾಗಿರುತ್ತಿತ್ತು. ನಾನು ಇಬ್ಬರ ನಡುವೆ ಸಿಕ್ಕಿಕೊಂಡಿದ್ದೆ. ಆದರೆ ಎರಡೂ ರೀತಿಯ ಕತೆ, ಸಿನಿಮಾ ಮೇಕಿಂಗ್ ನನಗೆ ಆ ಸಿನಿಮಾದಲ್ಲಿ ಅರ್ಥವಾಯಿತು'' ಎಂದು ಸಿನಿಮಾದ ಕತೆಯ ಚರ್ಚೆಯ ಬಗ್ಗೆ ನೆನಪಿಸಿಕೊಂಡರು ವಿಕಾಸ್.

''ರಾಘಣ್ಣ-ದುನಿಯಾ ಸೂರಿ ಇಬ್ಬರೂ ಬಹಳ ಭಿನ್ನ ಪ್ರಪಂಚ ಕಂಡವರು''
''ದೊಡ್ಮನೆಯವರು ಸಿನಿಮಾವನ್ನು ಹೇಗೆ ನೋಡುತ್ತಾರೆ ಎಂಬುದು ನನಗೆ ನನ್ನ ಗೆಳೆಯನಿಂದ ಗೊತ್ತಿತ್ತು. ನನಗೆ ಸೂರಿ ಬಗ್ಗೆಯೂ ಗೊತ್ತಿತ್ತು. ಸೂರಿ ಬಹಳ ತಳಮಟ್ಟದಿಂದ ಬಂದವ. ಅವನು ನೋಡಿರುವ ಪ್ರಪಂಚವೇ ಬೇರೆ ರೀತಿಯದ್ದು. ರಾಘವೇಂದ್ರ ರಾಜ್ಕುಮಾರ್ ಹಾಗೂ ಸೂರಿ ಅವರಿಬ್ಬರೂ ಭಿನ್ನ-ಭಿನ್ನ ಪ್ರಪಂಚವನ್ನು ನೋಡಿದವರು. ಕತೆಯ ಬಗ್ಗೆ ಇಬ್ಬರಿಗೂ ಬೇರೆ-ಬೇರೆ ಅಭಿಪ್ರಾಯವಿತ್ತು. ಇಬ್ಬರ ನಡುವೆ ನಾನು ಮಧ್ಯಸ್ಥಿಕೆ ವಹಿಸಿದ್ದೆ. ಸೂರಿ ಹೇಳಿದ ವಿಷಯವನ್ನು ಅವರಿಗೆ ಒಪ್ಪಿಸುವುದು, ರಾಘಣ್ಣ ಹೇಳಿದ್ದನ್ನು ಸೂರಿಗೆ ಒಪ್ಪಿಸುವುದು ನನ್ನ ಕೆಲಸವಾಗಿಬಿಟ್ಟಿತ್ತು'' ಎಂದು ನಕ್ಕರು ವಿಕಾಸ್.


Click it and Unblock the Notifications











