ನವರಸನಾಯಕ ಜಗ್ಗೇಶ್ಗೆ ಅನಂತ್ ನಾಗ್ ಹೇಳಿದ್ದ 'ಮಾತು' ಭಯಂಕರ; 'ಆಪತ್ಭಾಂಧವ' ಆಗಿದ್ಹೇಗೆ ಅಂಬಿ?
ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ಸ್ಪೆಷಲ್ ಡೈಲಾಗ್ ಡೆಲಿವರಿಯ ಚಾಕಚಕ್ಯತೆಯಿಂದಲೇ ಕಮಾಲು ಮಾಡಿರುವವರು ಜಗ್ಗೇಶ್. ಹೀರೋಯಿಸಂ ಅಂದರೆ ಜನರಿಗಿದ್ದ ಕಲ್ಪನೆಯನ್ನೂ ಮೀರಿ ಮತ್ತೊಂದು ಬಗೆಯಲ್ಲಿ ಕನ್ನಡಿಗರನ್ನು ಆವರಿಸಿಕೊಂಡಿದ್ದ ನವರಸ ನಾಯಕ ಜಗ್ಗೇಶ್ ಅವರಿಗೆ ರೆಬಲ್ ಸ್ಟಾರ್ ಅಂಬರೀಶ್ ಹಿಂದೊಮ್ಮೆ ಸಹಾಯ ಹಸ್ತ ಚಾಚಿದ್ದರು ಅನ್ನುವ ವಿಚಾರ ನಿಮಗೆ ಗೊತ್ತಾ..?
ಯಸ್, ನಿಮಗೆ ಗೊತ್ತೋ ಗೊತ್ತಿಲ್ಲವೋ ಬಹುಶಃ ಅಂಬರೀಶ್ ಸಹಾಯಹಸ್ತ ಚಾಚದಿದ್ದರೆ, ಜಗ್ಗೇಶ್ ಎಂಬ ನವರಸ ನಾಯಕ ಚಿತ್ರರಂಗದಲ್ಲಿ ಜನ್ಮ ಪಡೆಯುತ್ತಿದ್ದರೋ ಇಲ್ಲವೋ..? ಯಾಕೆಂದರೆ, ಆರಂಭದಲ್ಲಿ ಜಗ್ಗೇಶ್ ಕೈಹಿಡಿದದ್ದು ಕೂಡಾ ಇದೇ ಅಂಬರೀಶ್.

ಆಗಿನ್ನೂ ಜಗ್ಗೇಶ್ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರು. ನೂರಿನ್ನೂರು ರುಪಾಯಿ ಸಂಭಾವನೆಯ ಸಣ್ಣ ಪುಟ್ಟ ಪಾತ್ರಗಳು ದೊರೆಯುವುದೂ ಜಗ್ಗೇಶ್ ಪಾಲಿಗೆ ದುರ್ಲಭವಾಗಿತ್ತು. ಆದರೆ ಅಂಬರೀಶ್ ಜಗ್ಗೇಶ್ಗೆ ಫೋನ್ ಮಾಡಿ ಇವತ್ತು ಪ್ರೊಡಕ್ಷನ್ ಕಡೆಯಿಂದ ಫೋನ್ ಬರುತ್ತೆ. ಇಷ್ಟೇ ಸಾವಿರ ಸಂಭಾವನೆ ಕೇಳು ಎಂದುಬಿಡುತ್ತಿದ್ದರಂತೆ.
ಇದೇನಿದು ಇನ್ನೂರೋ ಮುನ್ನೂರೋ ಸಿಕ್ಕರೇ ಹೆಚ್ಚು. ಆದರೆ ಅಂಬರೀಶಣ್ಣ ಸಾವಿರಾರು ರೂಪಾಯಿ ಕೇಳು ಎನ್ನುತ್ತಿದ್ದಾರಲ್ಲ ಎಂದು ಜಗ್ಗೇಶ್ಗೆ ಆಶ್ಚರ್ಯವಾಗುತ್ತಿತ್ತಂತೆ. ಅತ್ತ ಅಂಬರೀಶ್ ಈ ಪಾತ್ರಕ್ಕೆ ಜಗ್ಗೇಶ್ ಅನ್ನೋ ನಟನೇ ಬೇಕು ಎಂದು ನಿರ್ಮಾಪಕರ ಬಳಿ ಆಜ್ಞೆ ಮಾಡಿಬಿಡುತ್ತಿದ್ದರು. ಅಂಬಿಯ ಇಂಥ ಟ್ರಿಕ್ಸುಗಳಿಂದಾಗಿ ಜಗ್ಗೇಶ್ ಎಷ್ಟೇ ಹಣ ಡಿಮ್ಯಾಂಡ್ ಮಾಡಿದರೂ ಅವರಿಗೆ ಅವಕಾಶ ಗ್ಯಾರೆಂಟಿ... ಹೀಗೆ ತನ್ನೊಟ್ಟಿಗಿರುವವರೂ ಕೈತುಂಬಾ ಸಂಪಾದಿಸಬೇಕು ಎಂಬ ಅಪರೂಪದ ಕಾಳಜಿಯನ್ನೊಂದಿದ್ದ ಅಂಬರೀಷ್ ಅವರ ಮೇಲೆ ಜಗ್ಗೇಶ್ ಅವರಿಗೆ ಅವತ್ತು ಗೌರವ ಇತ್ತು ಇವತ್ತು ಗೌರವ ಇದೆ.
ಇನ್ನೂ ಕೇವಲ ಅಂಬರೀಶ್ ಮಾತ್ರ ಅಲ್ಲ, ನವರಸನಾಯಕ ಜಗ್ಗೇಶ್ ಕಂಡರೆ ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೂ ಎಲ್ಲಿಲ್ಲದ ಅಕ್ಕರೆ. ಖುದ್ದು ಜಗ್ಗೇಶ್ ಹಿಂದೆ ಈ ಮಾತನ್ನ ಹೇಳಿದ್ದು ಇದೆ. ಅನಂತ್ ನಾಗ್ ಕೊಟ್ಟಿದ್ದ ಸಲಹೆಯನ್ನ ಜಗ್ಗೇಶ್ ನೆನಸಿಕೊಂಡಿದ್ದು ಇದೆ.
ಹೌದು. ಅಸಲಿಗೆ ಜಗ್ಗೇಶ್ ಅವರಿಗೆ ಹಿಂದೊಮ್ಮೆ ಅನಂತ್ ನಾಗ್ ಸಲಹೆಯನ್ನ ನೀಡಿದ್ದರು. ಆ ಸಲಹೆ ಏನು ಅನ್ನುವುದು ಇವತ್ತು ಕೂಡ ನಿಗೂಢವಾದರೂ, ಹಿಂದೊಮ್ಮೆ ಜಗ್ಗೇಶ್, ಅನಂತ್ ನಾಗ್ ಹೇಳಿದ್ದ ಭಯಂಕರ ಮಾತನ್ನ ನೆನಪಿಸಿಕೊಂಡಿದ್ದರು. ನಾನು ಶೇಷಾದ್ರಿಪುರ ಕಾಲೇಜಿನಲ್ಲಿ ಪಿಯುಸಿ ಓದುವಾಗ 'ಸ್ವಸ್ತಿಕ್' ಚಿತ್ರಮಂದಿರದಲ್ಲಿ 'ಚಂದನದ ಗೊಂಬೆ', ಗೀತಾಂಜಲಿಯಲ್ಲಿ 'ಕನ್ನೇಶ್ವರ ರಾಮ', 'ನಾ ನಿನ್ನ ಬಿಡಲಾರೆ', 'ಅನುಪಮಾ' ಸೇರಿದಂತೆ ಅನೇಕ ಚಿತ್ರಗಳನ್ನು ನೋಡಿ ಅವರನ್ನು ತುಂಬಾ ಇಷ್ಟಪಟ್ಟಿದ್ದೆ ಎಂದಿದ್ದ ಜಗ್ಗೇಶ್ 1983ರಲ್ಲಿ 'ಶ್ವೇತ ಗುಲಾಬಿ' ಚಿತ್ರದಲ್ಲಿ ಖಳಪಾತ್ರ ಮಾಡಿದ್ದೇ ಎಂದು ಆ ದಿನಗಳನ್ನ ಮೆಲುಕು ಹಾಕಿದ್ದರು
ಶ್ವೇತ ಗುಲಾಬಿ ಚಿತ್ರದ ಚಿತ್ರೀಕರಣದ ದಿನಗಳನ್ನ ನೆನೆಯುತ್ತಾ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುತ್ತಿರುವಾಗ ಅನಂತ್ ನಾಗ್ ಸರ್ ಒಬ್ಬರೇ ಕೂತು ವಾಚ್ ತಿರುಗಿಸುತ್ತಿದ್ದರು. ನಾನು ಮಾತನಾಡಿಸುವ ಆಸೆಯಿಂದ ಒಂದು ಪ್ರಶ್ನೆ ಕೇಳಿದೆ. ಅದಕ್ಕೆ ಅವರು ಕೊಟ್ಟ ಉತ್ತರಕ್ಕೆ ಹೆದರಿ ಅಲ್ಲಿಂದ ಓಡಿಹೋದೆ! ಆ ಉತ್ತರ ಮಾತ್ರ ಹೇಳಲಾರೆ. ಅದು ಭಯಂಕರ! ನಂತರ ನಾನು ನಾಯಕನಾಗಿ 'ಗಣೇಶ', 'ವಾಸ್ತುಪ್ರಕಾರ' ನಟಿಸುವಾಗ ಆ ಮಾತು ನೆನೆದು ಒಬ್ಬನೇ ಜೋರಾಗಿ ನಗುತ್ತಿದ್ದೆ ಎಂದು ಹಿಂದೊಮ್ಮೆ ಜಗ್ಗೇಶ್ ಹೇಳಿದ್ದರು.

ಒಟ್ಟಾರೆಯಾಗಿ ಜಗ್ಗೇಶ್ ವೃತ್ತಿಜೀವನದಲ್ಲಿ ನೆಲೆನಿಲ್ಲಲು ಪ್ರಮುಖವಾಗಿ ಕಾಳಜಿ ವಹಿಸಿದವರಲ್ಲಿ ಅಂಬರೀಶ್ ಪ್ರಮುಖರು. ತಮ್ಮ ಅನುಭವದಿಂದ ಜಗ್ಗೇಶ್ ಅವರಿಗೆ ಮಾರ್ಗದರ್ಶನ ನೀಡಿದವರಲ್ಲಿ ಅನಂತ್ ನಾಗ್ ಕೂಡ ಒಬ್ಬರು.
ಒಟ್ಟಿನಲ್ಲಿ ಈ ಎರಡು ದಶಕಗಳಲ್ಲಿ ಹಲವು ಬಗೆಯ ವೈವಿದ್ಯಮಯ ಪಾತ್ರಗಳನ್ನು ನೀಡಿದ್ದಾರೆ. ನಿರ್ಮಾಪಕರ ಪಾಲಿಗೆ 'ಕಲೆಕ್ಷನ್ ಕಿಂಗ್' ಆಗಿರುವ ಜಗ್ಗೇಶ್ ಅಂದಿನಿಂದ ಇಂದಿನವರೆಗೂ ನಿರ್ಮಾಪಕ ಹೂಡಿದ ಹಣಕ್ಕೆ ಮಿನಿಮಮ್ ಗ್ಯಾರೆಂಟಿ ನೀಡುವ ಏಕೈಕ ನಟ ಕೂಡ ಹೌದು. ಇಂಥ ಜಗ್ಗೇಶ್ ಅವರಿಗೆ ಮತ್ತೊಮ್ಮೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.


Click it and Unblock the Notifications











