ಬಡವರು ನಾವು, ನಮ್ಮಿಂದ ಏನು ಸಾಧ್ಯವಾಗಲ್ಲ ಎನ್ನುವವರಿಗೆ ನಟ ಜಗ್ಗೇಶ್ ಕಿವಿಮಾತು
ಸ್ಯಾಂಡಲ್ವುಡ್ ಅತ್ಯಂತ ಪ್ರೀತಿ ಪಾತ್ರ ನಟ ಜಗ್ಗೇಶ್. ಸಿನಿಮಾ ಹಿನ್ನೆಲೆ ಇಲ್ಲದೇ ಬಂದು ಸಾಧನೆಯ ಶಿಖರ ಏರಿದ್ದಾರೆ. ಇತ್ತೀಚೆಗೆ ಅವರು ತಮ್ಮ ಯುವ ದಿನಗಳ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಇದರೊಂದಿಗೆ ಅವರು ಬರೆದಿದ್ದ ಮಾತುಗಳು ಸಾವಿರಾರು ಜನರಿಗೆ ಸ್ಫೂರ್ತಿ ನೀಡಿವೆ. ಬಡತನದ ಕಾರಣ ನೀಡಿ ನಮ್ಮಿಂದ ಏನೂ ಸಾಧ್ಯವಿಲ್ಲ ಎಂದು ಕೈ ಚೆಲ್ಲುವವರಿಗೆ ಜಗ್ಗೇಶ್ ಕೊಟ್ಟ ಕಿವಿಮಾತು ನಿಜಕ್ಕೂ ಪ್ರತಿಯೊಬ್ಬರಿಗೂ ದಾರಿ ದೀಪ.
ಬಡತನ ಹೆಸರು ಹೇಳಿ ಸಾಧಿಸಲು ಕೆಲವರು ಹಿಂದೇಟು ಹಾಕುತ್ತಾರೆ. ರಾಯರು ನಮ್ಮ ಜೊತೆ ಇದ್ದಾರೆ. ಪರಶ್ರಮ ಪಟ್ಟರೆ ಯಶಸ್ಸು ಕಂಡಿತ ಸಿಗುತ್ತದೆ ಎಂದು ಜಗ್ಗೇಶ್ ಯುವ ಜನತೆಗೆ ಕಿವಿಮಾತು ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. "ನನಗೆ ಸಿಗುವ ಇಂದಿನ ಯುವಪೀಳಿಗೆ ಮಕ್ಕಳು ಕೇಳುವ ಪ್ರಶ್ನೆಗಳು "ನಾವು ಬಡವರು, ನಮ್ಮಂಥವರಿಗೆ ಬೆಲೆ ಇಲ್ಲಾ, ನಾವು ಹೇಗೆ ಗೆಲ್ಲೋದು,ನಮಗೆ ಯಾರು ಕೈ ಹಿಡಿಯರು,ಎಲ್ಲಿಹೋದರು ಅಪಮಾನ, ಹೇಗೆ ಬದುಕೋದು. ಸ್ನೇಹಿತರೆ ಈ ಚಿತ್ರ ಗಮನವಿಟ್ಟು ನೋಡಿ ಯುವಕನಾಗಿದ್ದಾಗ ನನಗು ನಿಮ್ಮ ಪ್ರಶ್ನೆಗಳೆ ಹೃದಯದಲ್ಲಿ ಮೂಡಿ ಒಬ್ಬನೆ ತಲೆ ಚಚ್ಚಿ ಹುಚ್ಚನಂತೆ ಅಳುತ್ತಿದ್ದೆ" ಎಂದು ತಮ್ಮದೇ ಉದಾಹರಣೆ ಕೊಟ್ಟಿದ್ದಾರೆ ಜಗ್ಗಣ್ಣ.

ತನ್ನಿಂದ ಏನು ಸಾಧ್ಯವಿಲ್ಲ ಎಂದು ಕೂತಾಗ ಅಮ್ಮ ತೋರಿದ ದಾಗಿ ಹಾಗು ಹೇಳಿದ ಮಾತನನ್ನು ಮೆಲುಕು ಹಾಕಿದ್ದಾರೆ. "ರಾಯರಿದ್ದಾರೆ" ಅವರನ್ನ ಗಟ್ಟಿಯಾಗಿ ಹಿಡಿ ಸಿಕ್ಕ ಕೆಲಸ ಶ್ರದ್ಧೆಯಿಂದ ಮಾಡು, ಶುದ್ಧವಾಗಿ ಬಾಳು, ಈಗ ನೀನು ಸಸಿ ಅವರ ಕೃಪೆ ಸಿಕ್ಕರೆ ಮರವಾಗಿ ನೆರಳುಕೊಡುವೆ ಎಂದು ಅಮ್ಮ ಹೇಳಿದ ಮಾತು ಚಾಚು ತಪ್ಪದೆ ಇಳಿವಯಸ್ಸಲ್ಲು ಪಾಲಿಸುತ್ತಿರುವೆ.. ಅಂದಿನ ಮಂತ್ರಾಲಯದ ತುಂಗೆಯಲ್ಲಿ ತಿರುಕನ ಕನಸು ಪೋಟೋ ನೋಡಿ.. ನೀವು ಧೈರ್ಯ ತಂದು ಎದ್ದು ನಿಲ್ಲಿ ರಾಯರ ಮೇಲೆ ಆಣೆ ನೀವು ಗೆದ್ದು ನಿಲ್ಲುತ್ತೀರಿ ಒಂದುದಿನ" ಎಂದು ಬರೆದು "ಒಂದಲ್ಲಾ ಒಂದು ದಿವಸ ಆಗುತೀನಿ.. ನಾನು ನಾಡೆಲ್ಲಾ ಮೆಚ್ಚುವಂತ ಹಮ್ಮೀರ" ತಮ್ಮದೇ ಸಿನಿಮಾ ಹಾಡಿನ ಸಾಲು ಪೋಸ್ಟ್ ಮಾಡಿದ್ದಾರೆ.
ನಟ ಜಗ್ಗೇಶ್ ಬಾಲ್ಯ ಸುಖಕರವಾಗಿರಲಿಲ್ಲ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದವರು. ಸಣ್ಣ ಕುಟುಂಬ ಆದರೆ ದೊಡ್ಡ ಕನಸುಗಳ ನಡುವೆ ಬೆಳೆದವರು. ನಟನಾಗಬೇಕು ಎಂಬ ಹಂಬಲ ಅವರಲ್ಲಿತ್ತು. ಆದರೆ ಅದು 1980ರ ದಶಕ. ಆಗ ಚಿತ್ರರಂಗದಲ್ಲಿ ಘಟಾನುಘಟಿಗಳ ಕಾಲ. ಅಂತಹ ಸಮಯದಲ್ಲಿ ಒಂದು ಹಿನ್ನೆಲೆ ಇಲ್ಲದ ಹುಡುಗನ ಕನಸಿಗೆ ಬೆಲೆ ಇರಲಿಲ್ಲ.
ಅಪಮಾನ, ಸಿಟ್ಟು, ರೋಷ, ದ್ವೇಷವೇ ಅವರ ಜೀವನವಾಗಿತ್ತು. ಯಾರೂ ಅವರ ಕನಸಿಗೆ ಬೆಂಬಲ ನೀಡಲಿಲ್ಲ. ಈ ಕಹಿ ಅನುಭವಗಳನ್ನು ಸ್ವತಃ ಜಗ್ಗೇಶ ಹಲವು ಸಂದರ್ಭಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರು ಎಂದಿಗೂ ಕೈ ಚೆಲ್ಲಲಿಲ್ಲ. ಈ ನೋವುಗಳೇ ಅವರಿಗೆ ಸಾಧನೆಯ ಹಠ ನೀಡಿದವು.
ಸಿನಿಮಾದಲ್ಲಿ ಅವಕಾಶ ಸಿಗಲು ಜಗ್ಗೇಶ್ ಸಾಕಷ್ಟು ಕಷ್ಟಪಟ್ಟರು. ಮೊದಲಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ನಂತರ ಖಳನಾಯಕ ಮತ್ತು ಪೋಷಕ ನಟನಾಗಿ ಸಣ್ಣ ಪಾತ್ರಗಳನ್ನು ಮಾಡಿದರು. ಬಡತನದ ಮಾತು, ಅಪಹಾಸ್ಯಗಳು ಅವರ ಬೆನ್ನು ಬಿಡಲಿಲ್ಲ. ಆದರೆ ಅವರು ಪ್ರತಿ ಅಪಮಾನವನ್ನು ಮೆಟ್ಟಿಲನ್ನಾಗಿ ಮಾಡಿಕೊಂಡರು.
'ಇಬ್ಬನಿ ಕರಗಿತು' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸುಮಾರು 10 ವರ್ಷಗಳ ಕಾಲ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದರು. ಅಲ್ಲಿನ ತಿರಸ್ಕಾರ, ಕಷ್ಟಗಳನ್ನು ಸಹಿಸಿಕೊಂಡರು. ನವರಸ ನಾಯಕ ಜಗ್ಗೇಶ್ ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 1992ರಲ್ಲಿ. ಅದು ಉಪೇಂದ್ರ ನಿರ್ದೇಶನದ 'ತರ್ಲೆ ನನ್ ಮಗ' ಚಿತ್ರ. ಈ ಚಿತ್ರದ ಮೂಲಕ ನಾಯಕ ನಟನಾದರು. ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದರು. ಅವರ ವಿಶಿಷ್ಟ ಮ್ಯಾನರಿಸಂ, ಸಂಭಾಷಣೆ ಹೇಳುವ ಶೈಲಿ ಜನರಿಗೆ ಇಷ್ಟವಾಯಿತು. ಅವರು ಕೇವಲ ನಟರಾಗಿ ಉಳಿಯಲಿಲ್ಲ. ತಮ್ಮ ಪ್ರತಿಭೆಯನ್ನು ಹಲವು ಆಯಾಮಗಳಲ್ಲಿ ವಿಸ್ತರಿಸಿದರು.
'ತರ್ಲೆ ನನ್ ಮಗ' ಚಿತ್ರದ ನಂತರ ಜಗ್ಗೇಶ್ ಪ್ರಧಾನ ನಟರಾಗಿ ಹಿಂತಿರುಗಿ ನೋಡಲೇ ಇಲ್ಲ. 'ಭಂಡ ನನ್ನ ಗಂಡ', 'ಡಾಲರ್ಸ್', 'ಶುಕ್ರದೆಸೆ', 'ಗೇಮ್'ನಂತಹ ಯಶಸ್ವಿ ಚಲನಚಿತ್ರಗಳನ್ನು ನೀಡಿದರು. ಹಾಸ್ಯ, ಭಾವನೆಗಳನ್ನು ಅಸಾಮಾನ್ಯವಾಗಿ ಅಭಿನಯಿಸಿದ್ದಕ್ಕಾಗಿ ಕನ್ನಡ ಚಿತ್ರರಂಗ ಅವರಿಗೆ 'ನವರಸ ನಾಯಕ' ಎಂಬ ಪ್ರೀತಿಯ ಬಿರುದನ್ನು ನೀಡಿತು. ಕೇವಲ ಹಾಸ್ಯಕ್ಕೆ ಸೀಮಿತವಾಗದೆ, 'ಮಠ', 'ಎದ್ದೇಳು ಮಂಜುನಾಥ', 'ನೀರ್ದೋಸೆ'ಯಂತಹ ವಿಭಿನ್ನ ಪಾತ್ರಗಳ ಮೂಲಕ ತಮ್ಮ ಅಭಿನಯದ ಸಾಮರ್ಥ್ಯವನ್ನು ತೋರಿಸಿದರು. ಇದರ ಜೊತೆಗೆ, 'ಗುರು', 'ಮೇಕಪ್', 'ಮೆಲ್ಕೋಟೆ ಮಂಜ' ಚಲನಚಿತ್ರಗಳನ್ನು ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಯಶಸ್ವಿಯಾಗಿ ಮುನ್ನಡೆಸಿದರು.
ಜಗ್ಗೇಶ್ ಬರೀ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಲಿಲ್ಲ. ಅವರು ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾದರು. ಅವರು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅವರು ದೇಶದ ಅತ್ಯುನ್ನತ ಸಭೆಯಾದ ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಬಡತನದ ಹಳ್ಳಿಯಿಂದ ಬಂದ ಒಬ್ಬ ಸಾಮಾನ್ಯ ಮನುಷ್ಯ ದೇಶದ ರಾಜಧಾನಿ ದಿಲ್ಲಿಯನ್ನು ತಲುಪಿ, ಸಂಸದನಾದ ಎಂದರೆ ಇದೇ ಅಲ್ವಾ ನಿಜವಾದ ಸಾಧನೆ. ಈ ಯಶಸ್ಸಿನ ಪಯಣವು ಅನೇಕರಿಗೆ ಪ್ರೇರಣೆಯಾಗಿದೆ.


Click it and Unblock the Notifications











