ಸಂಪ್ರದಾಯವಾದಿಗಳ ನಡುವೆ ಗೆದ್ದ ಜಯಂತಿ ಎಂಬ ಗಟ್ಟಿಗಿತ್ತಿ
ಕನ್ನಡ ಸಿನಿಮಾಗಳಲ್ಲಿ ನಾಯಕಿಯರು ಮಾಡ್ರನ್ ಆಗಲು ಆರಂಭಿಸಿದ್ದು 1960ರ ದಶಕದಲ್ಲಿ. ಆ ವರೆಗೆ 'ಗೌರಮ್ಮ'ಗಳಂತೆ ಮಾತ್ರವೇ ಚಿತ್ರಿತವಾಗುತ್ತಿದ್ದ ನಾಯಕಿಯರ ಪಾತ್ರಕ್ಕೆ ಗಟ್ಟಿತನ, ಗ್ಲಾಮರ್ ತಂದ ಪ್ರಮುಖರಲ್ಲಿ ಒಬ್ಬರು ನಟಿ ಜಯಂತಿ.
ಮಹಿಳೆಯರು ಸಿನಿಮಾಗಳಲ್ಲಿ ನಟಿಸುವುದೇ ಅಪಮಾನಕರ ಎನ್ನಲಾಗುತ್ತಿದ್ದ ಕಾಲದಲ್ಲಿ ಜಯಂತಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದವರು. ಮಹಿಳಾ ಸಶಕ್ತೀಕರಣದ ಮಾತುಗಳು ಜೋರಾಗಿ ಕೇಳಿಬರುತ್ತಿದ್ದ 60ರ ದಶಕದಲ್ಲಿ ಜಯಂತಿ ಮೊದಲ ಸಿನಿಮಾದಲ್ಲಿ ನಟಿಸಿದರು. ಸಿನಿಮಾಗಳಲ್ಲಿ ನಾಯಕಿಯರನ್ನು ಹೆಚ್ಚು ಮಾಡ್ರನ್ ಆಗಿ ಬಿಂಬಿಸುವ ಯತ್ನಗಳು ಕನ್ನಡದಲ್ಲಿ ಆಗಷ್ಟೆ ಆರಂಭವಾಗಿತ್ತು. ಆದರೆ ಬೋಲ್ಡ್ ಪಾತ್ರಗಳಲ್ಲಿ ನಟಿಸುವಷ್ಟು ಧೈರ್ಯ ಆಗಿನ ನಟಿಯರಿಗೆ ಇನ್ನೂ ಬಂದಿರಲಿಲ್ಲ.
ಜಯಂತಿ ನಟಿಸಿದ ಮೂರನೇ ಸಿನಿಮಾ 'ಮಿಸ್.ಲೀಲಾವತಿ'. ಆ ಕಾಲಕ್ಕೆ ಬಹಳ ಗಂಭೀರ ಮತ್ತು ವಿವಾದಾತ್ಮಕ ಎನ್ನಬಹುದಾದ ವಿಷಯವನ್ನು ಒಳಗೊಂಡಿತ್ತು. ಸಿನಿಮಾದ ನಾಯಕಿಯು ಮದುವೆ ಎಂಬ ವ್ಯವಸ್ಥೆಯ ವಿರೋಧಿ. ಅಷ್ಟು ಮಾತ್ರವಲ್ಲದೆ ವಿವಾಹಪೂರ್ವ ಲೈಂಗಿಕತೆ ಬೇಡುವ, ಅದು ಸರಿಯೆಂದು ವಾದ ಮಾಡುವ ಗಟ್ಟಿಗಿತ್ತಿ. ತಮ್ಮ ನಟನಾ ವೃತ್ತಿಯ ಆರಂಭದಲ್ಲಿಯೇ ಇಂಥಹದ್ದೊಂದು ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದರು ಜಯಂತಿ.

ವಿರೋಧವನ್ನೂ ಎದುರಿಸಿದ್ದರು ಜಯಂತಿ
'ಮಿಸ್ ಲೀಲಾವತಿ' ಪಾತ್ರ ಸಿನಿಮಾದಲ್ಲಿ ನಟಿಸಲು ಹಿರಿಯ ನಟಿ ಸಾವುಕಾರ್ ಜಾನಕಿ ನಿರಾಕರಿಸಿದಾಗ ನಿರ್ದೇಶಕ ಎಂ.ಆರ್.ವಿಠಲ್, ಜಯಂತಿಯವರನ್ನು ಆ ಪಾತ್ರದಲ್ಲಿ ನಟಿಸುವಂತೆ ಒಪ್ಪಿಸಿದ್ದರು. ಸಿನಿಮಾದಲ್ಲಿ ಟಿ-ಶರ್ಟ್, ಸ್ಕರ್ಟ್, ನೈಟಿಗಳನ್ನು ತೊಟ್ಟ ಜಯಂತಿಯನ್ನು ಸಂಪ್ರದಾಯಸ್ಥ ಮನಸ್ಸುಳ್ಳವರು ತೀವ್ರವಾಗಿ ವಿರೋಧಿಸಿದ್ದರು. ಸಿನಿಮಾದಲ್ಲಿ ಚರ್ಚಿಸಲಾದ ವಿಷಯವೂ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.

ಸ್ವಿಮ್ಮಿಂಗ್ ಸೂಟ್ ಧರಿಸಿದ ಮೊದಲ ನಟಿ ಜಯಂತಿ
ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಸ್ವಿಮ್ಮಿಂಗ್ ಸೂಟ್ ಧರಿಸಿ ತೆರೆಯ ಮೇಲೆ ಕಾಣಿಸಿಕೊಂಡ ಶ್ರೇಯವೂ ಜಯಂತಿಯವರಿಗೆ ಸಲ್ಲಬೇಕು. ಜಯಂತಿ ಬಹಳ ಸಫೂರವಾದ ದೇಹವುಳ್ಳ ನಟಿಯೇನೂ ಆಗಿರಲಿಲ್ಲ. ಆದರೂ ಆಕೆ ಸ್ವಿಮ್ಮಿಂಗ್ ಸೂಟ್ ಧರಿಸಿ ಈಜುಕೊಳಕ್ಕೆ ಇಳಿದು ನಟಿಸಿದ್ದರು. ಮಾಡ್ರನ್ ಡ್ರೆಸ್ಗಳನ್ನು ತೊಡುವುದು ಜಯಂತಿಯವರಿಗೆ ಎಂದೂ ಕಷ್ಟ ಎನಿಸಿರಲಿಲ್ಲವಂತೆ ಅದಕ್ಕೆ ಕಾರಣ ಜಯಂತಿಯವರ ತಾಯಿ.

ಮಗನ ರೀತಿಯಲ್ಲಿಯೇ ನನ್ನನ್ನು ಬೆಳೆಸಿದರು: ಜಯಂತಿ
''ನನ್ನ ತಾಯಿ ನನ್ನನ್ನು ಗಂಡು ಮಗನ ರೀತಿಯಾಗಿಯೇ ಬೆಳೆಸಿದ್ದರು, ಗಂಡು ಮಕ್ಕಳಂತೆ ನನಗೆ ಉಡುಗೆ ತೊಡುಗೆ ಹಾಕುತ್ತಿದ್ದರು. ಹಾಗಾಗಿ ನನಗೆ ಟಿ ಶರ್ಟ್, ಸ್ಕರ್ಟ್ ಇನ್ನಿತರೆ ಉಡುಗೊಗೆಗಳನ್ನು ತೊಟ್ಟುಕೊಳ್ಳುವುದು ಮುಜಗರ ಎಂದು ಅನ್ನಿಸಲಿಲ್ಲ. ಮಾಡ್ರನ್ ಆಗಿಯೇ ಬೆಳೆದನಾದ್ದರಿಂದ ಅಂಥಹಾ ಪಾತ್ರಗಳಲ್ಲಿ ನಟಿಸುವುದು ಕಷ್ಟವೇನೂ ಆಗಲಿಲ್ಲ'' ಎಂದು ಜಯಂತಿ ಸಂದರ್ಶನವೊಂದರಲ್ಲಿ ಹೇಳಿದ್ದರು.

'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾಕ್ಕೆ ಪ್ರಶಸ್ತಿ
ಜಯಂತಿಯವರ ಧೈರ್ಯಕ್ಕೆ ಮತ್ತೊಂದು ಸಾಕ್ಷಿ 'ಎಡಕಲ್ಲು ಗುಡ್ಡದ ಮೇಲೆ' ಸಿನಿಮಾ. ಆ ಸಿನಿಮಾದಲ್ಲಿ ವಿವಾಹಿತ ಮಹಿಳೆಯಾದರೂ ಪರಪುರಷನಿಗೆ ಆಕರ್ಷಿತಗೊಂಡು ತನ್ನನ್ನು ಅರ್ಪಿಸಿಕೊಳ್ಳುವ ಮಹಿಳೆಯ ಪಾತ್ರದಲ್ಲಿ ಜಯಂತಿ ನಟಿಸಿದ್ದರು. ಆ ಸಿನಿಮಾದಲ್ಲಿ ಅವರದ್ದು ಋಣಾತ್ಮಕ ಪಾತ್ರ ಮತ್ತೊಬ್ಬ ನಟಿ ಆರತಿಯದ್ದು ನಾಯಕಿಯ ಪಾತ್ರ. ಆಗಿನ ಬಹುತೇಕ ನಟಿಯರು ನಟಿಸಲು ತಕರಾರು ತೆಗೆಯುತ್ತಿದ್ದ ಪಾತ್ರದಲ್ಲಿ ಜಯಂತಿ ನಟಿಸಿ ಸೈ ಎನಿಸಿಕೊಂಡರು. ಆ ಸಿನಿಮಾದಲ್ಲಿನ ನಟನೆಗಾಗಿ ಪ್ರಶಸ್ತಿಯನ್ನೂ ಪಡೆದುಕೊಂಡರು.

'ಮಸಣದ ಹೂ' ಸಿನಿಮಾದಲ್ಲಿ ವೇಶ್ಯೆಯ ಪಾತ್ರ
ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸಣದ ಹೂ' ಸಿನಿಮಾದಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು ಜಯಂತಿ ಆ ಪಾತ್ರದಲ್ಲೂ ಸೈ ಎನಿಸಿಕೊಂಡರು. ತಮ್ಮ ವಾರಗೆಯ ಬಹುತೇಕ ನಟಿಯರು ಮಡಿವಂತಿಕೆ ಪಾತ್ರಗಳಲ್ಲಿ ನಟಿಸುತ್ತಿದ್ದರೆ ಜಯಂತಿ ಮಡಿವಂತಿಕೆ ಎಲ್ಲೆಗಳನ್ನು ದಾಟಿ ಬೋಲ್ಡ್ ಆದ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸಿ ಭೇಷ್ ಎನಿಸಿಕೊಂಡರು.

ನಿಜ ಜೀವನದಲ್ಲೂ ಜಯಂತಿ ಗಟ್ಟಿಗಿತ್ತಿ
ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಜಯಂತಿ ಗಟ್ಟಿಗಿತ್ತಿಯೇ. ತಮ್ಮ ಮನಸ್ಸಿನ ಮಾತು ಕೇಳಿ, ಸಮಾಜದ ನಿಂದೆಗಳಿಗೆ ತಲೆಕಡೆಸಿಕೊಳ್ಳದೆ ಮದುವೆಯಾದ ಪತಿಯಿಂದ ದೂರ ಸರಿದು ಮಗನನ್ನು ಒಬ್ಬರೇ ಸಾಕಿ ಬೆಳೆಸಿದರು. ರಾಜ್ ಕುಮಾರ್ ಅಪಹರಣವಾದಾಗ ವ್ಯಾನ್ ಮೇಲೆ ನಿಂತು ಮೈಕ್ನಲ್ಲಿ ಅಭಿಮಾನಿಗಳನ್ನು, ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಜಯಂತಿಯವರ ಧೈರ್ಯವನ್ನು ಹಲವರು ಮರೆತಿಲ್ಲ. ಕಳೆದ ವರ್ಷ ಅನಾರೋಗ್ಯದಿಂದ ಆಸ್ಪತ್ರೆ ಸೇರಿ ಇನ್ನೇನು ಹೊರಟೇ ಹೋದರು ಎಂದು ಕುಟುಂಬದವರೇ ಕೈಚೆಲ್ಲಿದ್ದಾಗ ವೈದ್ಯರಿಗೇ ಆಶ್ಚರ್ಯವಾಗುವಂತೆ ಚೇತರಿಸಿಕೊಂಡು ಎದ್ದು ಬಂದು ತಾವು ಹೋರಾಟಗಾರ್ತಿ ಎಂದು ತೋರಿಸಿದ್ದರು. ಆದರೆ ಇಂದು ಅಂತಿಮವಾಗಿ ಕಾಲನ ಕರೆಗೆ ಓಗೊಟ್ಟಿದ್ದಾರೆ.


Click it and Unblock the Notifications











