ವಿಜಯಕಾಂತ್ ಜೊತೆ ತೆರೆಹಂಚಿಕೊಂಡಿದ್ರು ದರ್ಶನ್: ಯಾವ ಸಿನಿಮಾ? ಯಾವ ಪಾತ್ರ?
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳು ನಟ ಕ್ಯಾಪ್ಟನ್ ವಿಜಯಕಾಂತ್ ಇಂದು(ಡಿಸೆಂಬರ್ 28) ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಒಂದ್ಕಾಲದಲ್ಲಿ ತಮಿಳಿನ ಸ್ಟಾರ್ ನಟನಾಗಿ ಮೆರೆದ ವಿಜಯ್ಕಾಂತ್ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಕಾಲಿವುಡ್ ಕ್ಯಾಪ್ಟನ್ ಅಗಲಿಕೆಗೆ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಚಿತ್ರರಂಗದಲ್ಲಿ ಮಾತ್ರವಲ್ಲದೇ ತಮಿಳುನಾಡು ರಾಜಕೀಯರಂಗದಲ್ಲೂ ವಿಜಯಕಾಂತ್ ಗುರ್ತಿಸಿಕೊಂಡಿದ್ದರು. ಡಿಎಂಡಿಕೆ ಎನ್ನುವ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದರು. ದೀರ್ಘಕಾಲದ ಉಸಿರಾಟದ ಸಮಸ್ಯೆಯಿಂದ ವಿಜಯಕಾಂತ್ ಬಳಲುತ್ತಿದ್ದರು. ಇತ್ತೀಚೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದರು. ಮಂಗಳವಾರ ತಪಾಸಣೆಗೆ ತೆರಳಿದ್ದ ವೇಳೆ ನ್ಯೂಮೊನಿಯಾದಿಂದ ಬಳಲುತ್ತಿದ್ದ ಅವರನ್ನು ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಕೋವಿಡ್ ಟೆಸ್ಟ್ ವೇಳೆ ಪಾಸಿಟಿವ್ ಬಂದಿತ್ತು.

ವಿಜಯಕಾಂತ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. 80, 90ರ ದಶಕಗಳಲ್ಲಿ ತಮಿಳಿನ ಬಹುಬೇಡಿಕೆಯ ನಟರಾಗಿ ಗುರ್ತಿಸಿಕೊಂಡಿದ್ದರು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದ ವಿಜಯರಾಜ್ ತಮ್ಮ ಹೆಸರನ್ನು ವಿಜಯಕಾಂತ್ ಎಂದು ಬದಲಿಸಿಕೊಂಡು ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಆಕ್ಷನ್ ಹೀರೊ, ರೊಮ್ಯಾಂಟಿಕ್ ಹೀರೊ, ಹಳ್ಳಿಯ ಹೀರೊ(ಹಳ್ಳಿ ಹಿನ್ನೆಲೆಯ ಸಿನಿಮಾಗಳಲ್ಲಿ ನಟಿಸಿ) ಆಗಿ ತಮಿಳು ಸಿನಿರಸಿಕರ ಮನಗೆದ್ದರು. ಇದೇ ಜನಪ್ರಿಯತೆಯನ್ನು ಬಳಸಿಕೊಂಡು ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗಕ್ಕೆ ಧುಮುಕಿದ್ದರು. ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು.
ಒಂದ್ಕಾಲದಲ್ಲಿ ವಿಜಯಕಾಂತ್ ಕಾಲಿವುಡ್ನಲ್ಲಿ ಆಕ್ಷನ್ ಸಿನಿಮಾಗಳಿಂದ ಟ್ರೆಂಡ್ ಸೆಟ್ಟರ್ ಎನಿಸಿಕೊಂಡಿದ್ದರು. ರೋಷಾವೇಶದ ಡೈಲಾಗ್ಸ್, ಆಕ್ಷನ್ ಸೀಕ್ವೆನ್ಸ್ಗಳಿಂದ ಮಾಸ್ ಪ್ರೇಕ್ಷಕರ ಗಮನ ಸೆಳೆದರು. ಡ್ಯೂಪ್ ಇಲ್ಲದೇ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸಿ ಎಲ್ಲರ ಹುಬ್ಬೇರಿಸುತ್ತಿದ್ದರು. ಭ್ರಷ್ಟಾಚಾರದ ವಿರುದ್ಧ, ಅನ್ಯಾಯ ವಿರುದ್ಧ ಹೋರಾಡುವ ನಾಯಕನಾಗಿ, ಸೇಡು ತೀರಿಸಿಕೊಳ್ಳುವ ನಾಯಕನಾಗಿ ಸಾಕಷ್ಟು ಸಿನಿಮಾಗಳಲ್ಲಿ ವಿಜಯ್ಕಾಂತ್ ನಟಿಸಿ ಗೆದ್ದರು.

ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಜಯಕಾಂತ್ ಜೊತೆ ತಮಿಳು ಚಿತ್ರವೊಂದರಲ್ಲಿ ತೆರೆ ಹಂಚಿಕೊಂಡಿದ್ದರು. ಅಚ್ಚರಿ ಎನಿಸಿದರೂ ಇದು ನಿಜ. 2000 ಇಸವಿಯಲ್ಲಿ ದರ್ಶನ್ ಇನ್ನು ಹೀರೊ ಆಗಿರಲಿಲ್ಲ. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ಅದೇ ಸಮಯದಲ್ಲಿ ತಮಿಳಿನ 'ವಲ್ಲರಸು' ಚಿತ್ರದ ಪುಟ್ಟ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಚಿತ್ರದಲ್ಲಿ ಡಿಸಿಪಿ ವಲ್ಲರಸು ಆಗಿ ವಿಜಯಕಾಂತ್ ಅಬ್ಬರಿಸಿದ್ದರು. ಆತನ ಸಹಾಯಕ ಪಾಂಡಿಯನ್ ಆಗಿ ದರ್ಶನ್ ಕಾಣಿಸಿಕೊಂಡಿದ್ದರು. ದರ್ಶನ್ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ನಟಿಸಿರುವ ಒಂದೇ ಒಂದು ಸಿನಿಮಾ ಇದು.
1997ರಲ್ಲಿ 'ಮಹಾಭಾರತ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿ ದರ್ಶನ್ ಕ್ಯಾಮರಾ ಮುಂದೆ ಬಂದಿದ್ದರು. ಬಳಿಕ ಶಿವರಾಜ್ಕುಮಾರ್ ಜೊತೆ 'ದೇವರ ಮಗ' ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಅದೇ ಸಮಯದಲ್ಲಿ 'ವಲ್ಲರಸು' ಚಿತ್ರದ ಅವಕಾಶ ಸಿಕ್ಕಿತ್ತು. ಸಿನಿಮಾ ಕೂಡ ಹಿಟ್ ಆಗಿತ್ತು. ನಂತರ 3 ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ ದರ್ಶನ್ 2002ರಲ್ಲಿ 'ಮೆಜೆಸ್ಟಿಕ್' ಚಿತ್ರದ ಹೀರೊ ಆಗಿದ್ದರು.
ನೀನಾಸಂ ಬಳಿಕ ದರ್ಶನ್ ಚೆನ್ನೈನ ಅಡ್ಯಾರ್ ಆಕ್ಟಿಂಗ್ ಸ್ಕೂಲ್ನಲ್ಲಿ ನಟನೆಯ ಪಟ್ಟುಗಳನ್ನು ಕಲಿತಿದ್ದರು. ದರ್ಶನ್ ನಟ ದರ್ಶನ್ ಲೈಟ್ ಬಾಯ್ ಆಗಿ 150 ರೂ. ಸಂಬಳಕ್ಕೆ ದರ್ಶನ್ ಚಿತ್ರರಂಗ ಪ್ರವೇಶಿಸಿದರು. ಹಾಗಾಗಿ ದರ್ಶನ್ ಒಂದು ಹಂತಕ್ಕೆ ತಮಿಳು ಕೂಡ ಮಾತನಾಡಬಲ್ಲರು. ಅಡ್ಯಾರ್ ಆಕ್ಟಿಂಗ್ ಕ್ಲಾಸ್ನಲ್ಲಿ ಕಲಿತಿದ್ದರಿಂದ 'ವಲ್ಲರಸು' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಸದ್ಯ ತಮ್ಮ 56ನೇ ಸಿನಿಮಾ 'ಕಾಟೇರ' ಬಿಡುಗಡೆಗಾಗಿ ಕಾಯುತ್ತಿದ್ದಾರೆ.


Click it and Unblock the Notifications











