ತೂಗುದೀಪ ಫಾರ್ಮ್ಹೌಸ್ನಲ್ಲಿ ಸುಗ್ಗಿ ಸಂಭ್ರಮ; ಯಾರೆಲ್ಲಾ ಭಾಗಿ ಆಗಿದ್ರು, ಹೈಲೆಟ್ ಏನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಿಂಪ್ಲಿಸಿಟಿಯಿಂದ ಸದಾ ಅಭಿಮಾನಿಗಳ ಮನಗೆಲ್ಲುತ್ತಾರೆ. ಸ್ನೇಹಿತರ, ಆಪ್ತರ ಜೊತೆಗಿದ್ದರೆ ಸ್ಟಾರ್ ಎನ್ನುವ ಹಮ್ಮುಬಿಮ್ಮು ಇರುವುದಿಲ್ಲ. ಇನ್ನು ಮೈಸೂರಿನ ತಮ್ಮ ಫಾರ್ಮ್ಹೌಸ್ಗೆ ಹೋಗಿಬಿಟ್ಟರೆ ತಮ್ಮದೇ ಲೋಕದಲ್ಲಿ ಕಳೆದು ಹೋಗುತ್ತಾರೆ. ಇನ್ನು ಪ್ರತಿವರ್ಷ ಫಾರ್ಮ್ ಹೌಸ್ನಲ್ಲಿ ಸಂಕ್ರಾಂತಿ ಸಂಭ್ರಮ ಜೋರಾಗಿರುತ್ತದೆ.
ನಟ ದರ್ಶನ್ಗೆ ಸುಗ್ಗಿಹಬ್ಬ ದೊಡ್ಡ ಹಬ್ಬ. ಕಾರಣ ಒಂದ್ಕಾಲದಲ್ಲಿ ಹಸು ಕಟ್ಟಿ ಹಾಲು ಮಾಡಿ ಬದುಕು ನಡೆಸಿದ ದರ್ಶನ್ ಇವತ್ತಿಗೂ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ದೇಶ ವಿದೇಶದ ಪ್ರಾಣಿ ಪಕ್ಷಿಗಳ ಜೊತೆಗೆ ದೇಶದ ವಿವಿಧ ಭಾಗದ ವಿವಿಧ ತಳಿಗಳ ರಾಸುಗಳು ತೂಗುದೀಪ ಫಾರ್ಮ್ಹೌಸ್ನಲ್ಲಿವೆ. ಆನೆ, ಹುಲಿಗಳನ್ನು ಸಾಕುವ ಆಸೆ ಇದೆ ಆದರೆ ಭಾರತದಲ್ಲಿ ಅದಕ್ಕೆ ಅನುಮತಿ ಇಲ್ಲ ಎಂದು ದರ್ಶನ್ ಆಗಾಗ್ಗೆ ಹೇಳುತ್ತಿರುತ್ತಾರೆ.

ಇನ್ನು ಈ ವರ್ಷ ಎರಡು ದಿನಗಳ ಕಾಲ ಮೈಸೂರಿನ ಟೀ. ನರಸೀಪುರ ರಸ್ತೆಯ ಫಾರ್ಮ್ ಹೌಸ್ನಲ್ಲಿ ಸುಗ್ಗಿ ಸಂಭ್ರಮ ಮನೆ ಮಾಡಿತ್ತು. ಮಗ ವಿನೀಶ್, ಸ್ನೇಹಿತರು, ಆಪ್ತರ ಜೊತೆ ಚಾಲೆಂಜಿಂಗ್ ಸ್ಟಾರ್ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಸ್ಪೆಷಲ್ ವಿಡಿಯೋ ರಿಲೀಸ್ ಆಗಿದೆ. ಹಾಸ್ಯ ನಟ ಚಿಕ್ಕಣ್ಣ ಕೂಡ ಈ ಬಾರಿ ಸಾಥ್ ಕೊಟ್ಟಿದ್ದಾರೆ.
ಭಾನುವಾರ ಸಂಜೆಯೇ ದರ್ಶನ್ ಆಪ್ತರೆಲ್ಲಾ ಫಾರ್ಮ್ಹೌಸ್ ಸೇರಿಕೊಂಡಿದ್ದರು. ಮೊದಲು ಚಕ್ಕಡಿ ಬಂಡಿಗಳನ್ನು ಕಟ್ಟಿಕೊಂಡು ದರ್ಶನ್ ಆಪ್ತರ ಜೊತೆ ಸುತ್ತಾಡಿ ಬಂದಿದ್ದಾರೆ. ಕತ್ತಲಾಗುತ್ತಿದ್ದಂತೆ ಎಲ್ಲರೂ ಫಾರ್ಮ್ಹೌಸ್ಗೆ ಮರಳಿ ಬಂದು ಅಲ್ಲೇ ಮಲಗಿ ನಿದ್ದೆ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ಅಸಲಿ ಹಬ್ಬ ಶುರುವಾಗಿದೆ. ಕುದುರೆ, ಹಸುಗಳು, ಎತ್ತುಗಳು, ಕುರಿಗಳು ಹೀಗೆ ಎಲ್ಲಾ ರಾಸುಗಳನ್ನು ತೊಳೆದು, ಸಿಂಗರಿಸಿ ಪೂಜೆ ಸಲ್ಲಿಸಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮಸಿದ್ದಾರೆ.
ದರ್ಶನ್ ಪುತ್ರ ವಿನೀಶ್, ಅಕ್ಕನ ಮಗ ಚಂದು, ನಟ ಯಶಸ್ ಸೂರ್ಯ, ಚಿಕ್ಕಣ್ಣ, ಸೂರಜ್ ಹೀಗೆ ಹಲವರು ಪೂಜೆಯಲ್ಲಿ ಭಾಗಿ ಆಗಿದ್ದಾರೆ. ಸ್ನೇಹಿತರ ಜೊತೆ ವಿನೀಶ್ ಕೂಡ ಹಬ್ಬ ಆಚರಿಸಿ ಸಂಭ್ರಮಿಸಿದ್ದಾನೆ. ದರ್ಶನ್ ಜರಿ ಶರ್ಟು, ಪಂಚೆಯಲ್ಲಿ ಮಿಂಚಿದ್ದಾರೆ. ಸಂಜೆ ವೇಳೆಗೆ ಕಿಚ್ಚು ಹಚ್ಚಿ ರಾಸುಗಳನ್ನು ಹಾಯಿಸಲಾಗಿದೆ.

ಕೆಲ ದಿನಗಳ ಹಿಂದೆ ದರ್ಶನ್ ಕಾಂಕ್ರಿಜ್ ತಳಿಯ ಗೋವುಗಳನ್ನು ಖರೀದಿಸಿ ತಂದಿದ್ದರು. ಈ ವರ್ಷ ತೂಗುದೀಪ ಫಾರ್ಮ್ಹೌಸ್ ಸಂಕ್ರಾಂತಿ ಸಂಭ್ರಮದಲ್ಲಿ ಈ ರಾಸುಗಳೇ ಹೈಲೆಟ್ ಆಗಿದ್ದವು. 'ಕಾಟೇರ' ಸೂಪರ್ ಸಕ್ಸಸ್ ಈ ವರ್ಷ ದರ್ಶನ್ ಸುಗ್ಗಿ ಸಂಭ್ರಮ ಡಬಲ್ ಮಾಡಿದ್ದು ಸುಳ್ಳಲ್ಲ. ಡಿಸೆಂಬರ್ 29ಕ್ಕೆ ಬಿಡುಗಡೆಯಾದ ಸಿನಿಮಾ 20 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹಲವೆಡೆ ಸಿನಿಮಾ ಇನ್ನು ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
18 ದಿನಕ್ಕೆ 'ಕಾಟೇರ' ಸಿನಿಮಾ 190 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ. 18ನೇ ದಿನ ಶಹಾಪುರದ ಚಿತ್ರಮಂದಿರದಲ್ಲಿ ಮಧ್ಯರಾತ್ರಿ 2 ಗಂಟೆ ಶೋ ಹೌಸ್ಫುಲ್ ಆಗಿರುವುದು ಎಲ್ಲರ ಹುಬ್ಬೇರಿಸಿದೆ. ಬರೀ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಿ ಸಿನಿಮಾ ಈ ಪಾಟಿ ಸದ್ದು ಮಾಡುತ್ತಿರುವುದು ವಿಶೇಷ. ಶೀಘ್ರದಲ್ಲೇ ತೆಲುಗು, ತಮಿಳಿಗೂ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಕೆಲಸಗಳು ನಡೀತಿದೆ.
'ಕಾಟೇರ' ಬಳಿಕ ದರ್ಶನ್ 'ಡೆವಿಲ್' ಸಿನಿಮಾ ಒಪ್ಪಿಕೊಂಡಿದ್ದಾರೆ. ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ವರ್ಷಾಂತ್ಯಕ್ಕೆ ತೆರೆಮೇಲೆ ಡೆವಿಲ್ ಆಗಿ ಚಾಲೆಂಜಿಂಗ್ ಸ್ಟಾರ್ ಅಬ್ಬರಿಸಲಿದ್ದಾರೆ.


Click it and Unblock the Notifications










