ಪುಟ್ಫಾತ್ನಲ್ಲಿರುವ ಆ ಚಾಟ್ಸ್ ಶಾಪ್ಗೆ ಹೋಗ್ಬೇಕು ಎಂದಿದ್ಯಾಕೆ ದರ್ಶನ್? ಅದರ ವಿಶೇಷತೆ ಏನು?
ನಟ ದರ್ಶನ್ ಸಿನಿಮಾ ಶೂಟಿಂಗ್ ಬಿಟ್ಟು ಖಾಲಿ ಸಮಯದಲ್ಲಿ ಸ್ನೇಹಿತರು, ಕುಟುಂಬ ಸದಸ್ಯರ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಲೂನಾದಲ್ಲಿ ಓಡಾಡಿಕೊಂಡಿದ್ದ ದರ್ಶನ್ ಇವತ್ತು ಲ್ಯಾಂಬೊರ್ಗಿನಿ ಕಾರಿನಲ್ಲಿ ಓಡಾಡುವಂತಾಗಿದೆ. ದೊಡ್ಡ ದೊಡ್ಡ ಹೋಟೆಲ್, ರೆಸಾರ್ಟ್ಗಳಲ್ಲಿ ಊಟ, ಪಾರ್ಟಿ ಮಾಡುತ್ತಾರೆ. ಆದರೆ ಕೆಲ ದಿನಗಳಿಂದ ಫುಟ್ಪಾತ್ನಲ್ಲಿರೋ ಒಂದು ಚಾಟ್ಸ್ ಅಂಗಡಿಗೆ ಹೋಗಬೇಕು ಎಂದುಕೊಂಡಿದ್ದಾರೆ.
ಅಚ್ಚರಿ ಎನಿಸಿದರೂ ಇದು ಸತ್ಯ. ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕ ನಟರ ಸಾಲಿನಲ್ಲಿ ದರ್ಶನ್ ಇದ್ದಾರೆ. ಮೈಸೂರಿನಲ್ಲಿ ತಮ್ಮದೇ ಫಾರ್ಮ್ಹೌಸ್ ಹೊಂದಿದ್ದಾರೆ. ಸದಾ ಸ್ನೇಹಿತರ ಜೊತೆ ಟ್ರಿಪ್, ಟ್ರೆಕ್ಕಿಂಗ್ ಎಂದು ಸುತ್ತಾಡುತ್ತಿರುತ್ತಾರೆ. ಇತ್ತೀಚೆಗೆ ಆಪ್ತರ ಜೊತೆ ಬ್ರಿಟನ್ ಪ್ರವಾಸ ಕೈಗೊಂಡಿದ್ದರು. ಇಂತಿಪ್ಪ ದರ್ಶನ್ ಬೆಂಗಳೂರಿನಲ್ಲಿ ಸಣ್ಣ ಚಾಟ್ ಅಂಗಡಿಗೆ ಭೇಟಿ ಕೊಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.

ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಕೆಲವೇ ಕ್ಷಣಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಇನ್ನು ಪ್ರಚಾರದ ಭಾಗವಾಗಿ ದರ್ಶನ್ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇತ್ತೀಚೆಗೆ ತೂಗುದೀಪ ಡೈನಾಸ್ಟಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಈ ವೇಳೆ ಆ ಚಾಟ್ ಅಂಗಡಿ ಬಗ್ಗೆ ಮಾತನಾಡಿದ್ದಾರೆ.
ನಿಮಗೆ ನಿಮ್ಮ ಜೀವನದಲ್ಲಿ ಸ್ಪೂರ್ತಿ ತುಂಬುವ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ನಟ ದರ್ಶನ್ ಉತ್ತರಿಸಿದ್ದಾರೆ. "ನಮ್ಮ ತಂದೆಯನ್ನು ನೋಡಿ ಸಾಕಷ್ಟು ಕಲಿತ್ತಿದ್ದೀನಿ. ನಮ್ಮ ರೆಬಲ್ ಸ್ಟಾರ್ ಅವ್ರನ್ನು ನೋಡಿ ಕಲಿತ್ತಿದ್ದೀನಿ. ಎಲ್ಲಾ ಹಿರಿಯ ಕಲಾವಿದರನ್ನು ನೋಡಿ ಕಲಿತಿದ್ದೇನೆ. ಪ್ರತಿದಿನ ಕಲಿಯುವಂಥದ್ದು ಇದ್ದೇ ಇರುತ್ತದೆ. ಯಾರದರೂ ಒಬ್ಬರನ್ನು ನೋಡಿ ಕಲಿಯುವುದು ಇದ್ದೇ ಇರುತ್ತದೆ. ಯಾರೋ ಕೈ ಇಲ್ಲದವರು ದುಡಿಯುತ್ತಿರುತ್ತಾರೆ. ಭಿಕ್ಷೆ ಬೇಡುವುದು ಬಿಟ್ಟು ಸ್ವಾಭಿಮಾನದಿಂದ ಬದುಕುತ್ತಾರೆ. ಅವರನ್ನು ನೋಡಿ ಕಲಿಯುವುದು ಇದೆ"

"ಇತ್ತೀಚೆಗೆ ಒಂದು ವಿಡಿಯೋ ನೋಡಿದೆ. ನಾಗರಬಾವಿಯಲ್ಲಿ ಒಬ್ಬರು ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದಾರೆ. ಯೂಟ್ಯೂಬ್ನಲ್ಲಿ ಅವರ ವಿಡಿಯೋ ಇದೆ. ಅವರು ವಿಶೇಷ ಚೇತನ ವ್ಯಕ್ತಿ. ನಾನು ಇವರಿಗೆಲ್ಲಾ ಹೇಳುತ್ತಿರುತ್ತೇನೆ. ಮುಂದಿನ ಬಾರಿ ಅಲ್ಲಿ ಹೋಗಿ ತಿನ್ನೋಣ ಅಂತ. ಆತ ಭಿಕ್ಷೆ ಬೇಡದೆ ನಾಲ್ಕು ಜನರಿಗೆ ಕೆಲಸ ಕೊಟ್ಟಿದ್ದಾನಲ್ಲ. ಗ್ರೇಟ್ ಅಲ್ವಾ? ಆತನನ್ನು ಹುಡುಕಿಕೊಂಡು ಹೋಗಿ ನಾವೆಲ್ಲ ತಿಂದ್ರೆ ಇನ್ನು ನಾಲ್ಕು ಜನಕ್ಕೆ ಸ್ಫೂರ್ತಿ ಆಗುತ್ತಾನೆ."
"ಇಂತಹವರು ಬಹಳ ಜನ ಸಿಗುತ್ತಾರೆ. ಅದಕ್ಕಿಂತ ಸ್ಫೂರ್ತಿ ಬೇಕಾ? ಯಾರದ್ದೋ ಸ್ಫೂರ್ತಿ ತೆಗೆದುಕೊಳ್ಳುವುದಕ್ಕಿಂತ ನಮ್ಮ ಸುತ್ತಾ ಮುತ್ತಾ ಇರುವವರನ್ನು ನೋಡಬೇಕು ಅಷ್ಟೆ. ಆ ಅಂಗಡಿ ಹೆಸರು ಹೊಟ್ಟೆಪಾಡು ಚಾಟ್ಸ್ ಅಂತ" ಎಂದು ದರ್ಶನ್ ಹೇಳಿದ್ದಾರೆ.
ಇನ್ನು ನಟ ದರ್ಶನ್ ಹೇಳಿದ ಹೊಟ್ಟೆಪಾಟು ಚಾಟ್ಸ್ ಪಾನಿಪುರಿ ಅಂಗಡಿ ನಾಗರಬಾವಿ ಸೆಕೆಂಡ್ ಸ್ಟೇಜ್ ಪಾಪುರೆಡ್ಡಿ ಪಾಳ್ಯದಲ್ಲಿದೆ. ವೀರೇಶ್ ಎಂಬ ವಿಶೇಷ ಚೇತನ ವ್ಯಕ್ತಿ ಈ ಚಾಟ್ಸ್ ಅಂಗಡಿ ನಡೆಸುತ್ತಿದ್ದಾರೆ. 10 ವರ್ಷಗಳ ಹಿಂದೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದ ಇವರು ಮೊದಲಿಗೆ ಟ್ರಾವೆಲ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಆ ಕೆಲಸ ಬಿಟ್ಟು ಫ್ರಾಂಚೈಸಿ ಪಡೆದು ಹೋಟೆಲ್ ನಡೆಸುತ್ತಿದ್ದರು. ಕಾರಣಾರಂತಗಳಿಂದ ಅದನ್ನು ಬಿಟ್ಟು ಆಪ್ತರ ಸಹಾಯದಿಂದ ರಸ್ತೆ ಬದಿಯಲ್ಲಿ ಸ್ವಂತ ಚಾಟ್ಸ್ ಅಂಗಡಿ ತೆರೆದಿದ್ದಾರೆ.
ಅಂಗಡಿಗೆ 'ಹೊಟ್ಟೆಪಾಡು ಚಾಟ್ಸ್' ಎನ್ನುವ ವಿಭಿನ್ನ ಹೆಸರಿಟ್ಟಿರುವ ವೀರೇಶ್ ಪಾನಿಪುರಿ, ಮಸಾಲ ಪುರಿ, ಪುಟ್ಟು ಪುರಿ ಸೇರಿ 10 ರೀತಿಯ ಚಾಟ್ಸ್ ತಯಾರಿಸಿ ಕೊಡುತ್ತಾರೆ. ಆ ಸುತ್ತಾಮುತ್ತಲ ಭಾಗದಲ್ಲಿ ಈ ಅಂಗಡಿ ಬಹಳ ಜನಪ್ರಿಯವಾಗಿದೆ. ತಮ್ಮ ಅಂಗಡಿಯ ಮೇಲೆ ಕನ್ನಡ ಸಾಧಕರ ಫೋಟೊಗಳನ್ನು, ನುಡಿ ಮುತ್ತುಗಳನ್ನು ಹಾಕಿದ್ದಾರೆ. ವೀರೇಶ್ ತಮಗಿರುವ ನ್ಯೂನ್ಯತೆಯನ್ನು ಮರೆತು ಸಾಧಿಸಿ ಬದುಕುವ ಛಲ ಹೊಂದಿದ್ದಾರೆ.


Click it and Unblock the Notifications











