'ಸಲಾರ್', 'ಡಂಕಿ' ಬೆನ್ನಲ್ಲೇ ಬರ್ತಿದ್ದಾನೆ 'ಕಾಟೇರ': ಕನ್ನಡ ಚಿತ್ರದ ಸತ್ವ ಪರೀಕ್ಷೆ ನಡೆಯುತ್ತಾ?
ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಕನ್ನಡ ಸಿನಿಮಾಗಳು ಮೂಲೆಗುಂಪಾಗುತ್ತಿದೆ, ಸ್ಟಾರ್ ನಟರ ಚಿತ್ರಗಳು ಬರದೇ ಕನ್ನಡ ಪ್ರೇಕ್ಷಕರು ಬೇರೆ ಭಾಷೆಯ ಚಿತ್ರಗಳನ್ನು ನೋಡುತ್ತಿದ್ದಾರೆ, ದೊಡ್ಡ ಸಿನಿಮಾಗಳು ಬಂದರೆ ಪ್ರೇಕ್ಷಕರು ಕಂಡಿತ ಚಿತ್ರಮಂದಿರಕ್ಕೆ ಬರ್ತಾರೆ ಎನ್ನುವ ಚರ್ಚೆ ಇತ್ತೀಚೆಗೆ ಹೆಚ್ಚಾಗಿದೆ. ಇದೆಲ್ಲದರ ನಡುವೆ 'ಕಾಟೇರ' ಸಿನಿಮಾ ಬಿಡುಗಡೆಯಾಗುತ್ತಿದೆ.
ಈ ವರ್ಷ ಕನ್ನಡ ಚಿತ್ರರಂಗ ಸಾಧನೆ ಹೇಳಿಕೊಳ್ಳುವಂತಿಲ್ಲ. ಒಂದೇ ಒಂದು ಬ್ಲಾಕ್ಬಸ್ಟರ್ ಸಿನಿಮಾ ಇಲ್ಲ, ಅಂದ್ರೆ ಅಚ್ಚರಿ ಎನ್ನಿಸಬಹುದು. ಇದ್ದಿದ್ದರಲ್ಲಿ ಒಂದೆರಡು ಸಿನಿಮಾಗಳು ಹಿಟ್ ಆಗಿದ್ದು ಬಿಟ್ಟರೆ ಈ ವರ್ಷ ಕನ್ನಡ ಸಿನಿಮಾಗಳು ಭಾರೀ ನಷ್ಟ ಅನುಭವಿಸಿವೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮುಗ್ಗರಿಸಿದ್ದವು.

ಮುಂದಿನ ವರ್ಷ ಬರುತ್ತೆ ಎಂದುಕೊಂಡಿದ್ದ 'ಕಾಟೇರ' ಸಿನಿಮಾ ಈ ವರ್ಷವೇ ಬಿಡುಗಡೆಗೆ ಸಿದ್ಧವಾಗಿದೆ. ದಿಢೀರನೇ ಸಿನಿಮಾ ರಿಲೀಸ್ ಡೇಟ್ ಘೋಷಿಸಿ ಚಿತ್ರತಂಡ ಶಾಕ್ ಕೊಟ್ಟಿದೆ. ಅದರಲ್ಲೂ ಪ್ರಭಾಸ್ ನಟನೆಯ 'ಸಲಾರ್' ಹಾಗೂ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾಗಳು ರಿಲೀಸ್ ಬೆನ್ನಲ್ಲೇ 'ಕಾಟೇರ' ತೆರೆಗೆ ಬರ್ತಿರೋದು ಈಗ ಭಾರೀ ಚರ್ಚೆ ಹುಟ್ಟಾಕ್ಕಿದೆ.
ದರ್ಶನ್ ಅಭಿಮಾನಿಗಳು ಕೂಡ ಇಷ್ಟು ಬೇಗ ಸಿನಿಮಾ ರಿಲೀಸ್ ಮಾಡಬೇಕಿತ್ತಾ? ಎರಡು ದೊಡ್ಡ ಸಿನಿಮಾಗಳ ಎದುರು ರಿಸ್ಕ್ ಬೇಕಾ? ಎನ್ನುವಂತೆ ಮಾತನಾಡಲು ಶುರು ಮಾಡಿದ್ದಾರೆ. ಇದೆಲ್ಲದರ ನಡುವೆಯೂ ಚಿತ್ರತಂಡ ಮಾತ್ರ ತಮ್ಮ ಸಿನಿಮಾ ಬಗ್ಗೆ ಬಹಳ ಕಾನ್ಫಿಡೆಂಟ್ ಆಗಿದೆ. ನಮ್ಮ ಸಿನಿಮಾ ನಮ್ಮದು, ನಮ್ಮ ಪ್ರೇಕ್ಷಕರು ನಮ್ಮಗಿರ್ತಾರೆ, ಬೇರೆ ಯಾವುದೇ ದೊಡ್ಡ ಸಿನಿಮಾ ಬಂದರೆ ನಮಗೇನು? ಪ್ರಭಾಸ್, ಶಾರುಖ್ ಖಾನ್ ಅಭಿಮಾನಿಗಳೇ ಬೇರೆ, ದರ್ಶನ್ ಅಭಿಮಾನಿಗಳೇ ಬೇರೆ ಎಂದು ಸಿನಿಮಾ ಬಿಡುಗಡೆಗೆ ಮುಂದಾಗಿದೆ.
ಒಂದು ತಿಂಗಳಲ್ಲಿ ಸಿನಿಮಾ ಪ್ರಚಾರ ಮಾಡೋಕೆ ಸಾಧ್ಯನಾ? ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ನಿರ್ದೇಶಕರು ಕಂಡಿತ ಸಾಧ್ಯ ಎಂದಿದ್ದಾರೆ. ಇದು ಸೋಶಿಯಲ್ ಮೀಡಿಯಾ ಜಮಾನ. ದರ್ಶನ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಗೊತ್ತಾದರೆ ಸಾಕು ಅಭಿಮಾನಿಗಳು ಫಸ್ಟ್ ಡೇ ಹಬ್ಬ ಮಾಡ್ತಾರೆ. ಸಿನಿಮಾ ಹೇಗಿದೆ? ಎನ್ನುವುದರ ಮೇಲೆ ಮುಂದಿನ ಫಲಿತಾಂಶ ನಿಂತಿರುತ್ತದೆ. ಥಲಾ ಅಜಿತ್, ದಳಪತಿ ವಿಜಯ್ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಸುದ್ದಿಗೋಷ್ಠಿ, ಈವೆಂಟ್ ಮಾಡುವುದಿಲ್ಲ. ಅವರ ಸಿನಿಮಾಗಳು ನೂರಾರು ಕೋಟಿ ಕಲೆಕ್ಷನ್ ಮಾಡುತ್ತವೆ.

ದರ್ಶನ್ ಸಿನಿಮಾಗಳಿಗೆ ಹೆಚ್ಚು ದಿನ ಪ್ರಚಾರ ಬೇಕಿಲ್ಲ. ಒಳ್ಳೆ ಕಂಟೆಂಟ್ ಇದ್ದರೆ ಸಾಕು. ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತದೆ. ಈ ಹಿಂದೆ 'ರಾಬರ್ಟ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ದರ್ಶನ್ ಅಭಿಮಾನಿಗಳು ಮಾತ್ರವಲ್ಲ ಫ್ಯಾಮಿಲಿ ಆಡಿಯನ್ಸ್ ಕೂಡ ಸಿನಿಮಾ ನೋಡಲು ಮುಗಿಬಿದ್ದರು. 'ಸಲಾರ್' ಹಾಗೂ 'ಡಂಕಿ' ಸಿನಿಮಾಗಳಿಗೆ ಹೆದರುವ ಅವಶ್ಯಕತೆಯೂ ಇಲ್ಲ ಎನ್ನುವುದು ಕೆಲವರ ವಾದ. ಇತ್ತೀಚಿನ ದಿನಗಳಲ್ಲಿ 25 ದಿನ, 50 ದಿನ, 100 ದಿನ ಪ್ರದರ್ಶನ ಲೆಕ್ಕಾಚಾರ ಹೋಗಿದೆ. ಒಂದೆರಡು ವಾರಗಳಲ್ಲೇ ಬಾಕ್ಸಾಫೀಸ್ ಆಟ ಮುಗಿಯುತ್ತದೆ. 'ಸಲಾರ್', 'ಡಂಕಿ' ಸಿನಿಮಾಗಳು ದೊಡ್ಡಮಟ್ಟದಲ್ಲಿ ರಿಲೀಸ್ ಆಗುವುದರಿಂದ ಸಹಜವಾಗಿಯೇ 2ನೇ ವಾರಕ್ಕೆ ಸದ್ದು ಕಮ್ಮಿ ಆಗುತ್ತದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ.
ಎರಡು ದೊಡ್ಡ ಸಿನಿಮಾಗಳು ರಿಲೀಸ್ ಆಗುವುದರಿಂದ 'ಕಾಟೇರ' ಚಿತ್ರಕ್ಕೆ ಥಿಯೇಟರ್ ಸಿಗುತ್ತಾ? ಇಲ್ವಾ? ಎನ್ನುವುದು ಕೆಲವರ ಪ್ರಶ್ನೆ. ಚಿತ್ರದ ನಿರ್ಮಾಪಕರು ರಾಕ್ಲೈನ್ ವೆಂಕಟೇಶ್. ಹಲವು ವರ್ಷಗಳಿಂದ ಚಿತ್ರರಂಗದ ಒಳ-ಹೊರಗನ್ನು ನೋಡಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಈಗ ಅವರದ್ದೇ ಸಿನಿಮಾ ಬರ್ತಿರುವುದರಿಂದ ಥಿಯೇಟರ್ ಸಿಗಲ್ಲ ಎಂದು ಅಭಿಮಾನಿಗಳು ಭಯಪಡುವ ಅಗತ್ಯ ಇಲ್ಲ. ಸಿನಿಮಾ ಭರ್ಜರಿ ಪ್ರದರ್ಶನ ಕಂಡರೆ 'ಸಲಾರ್', 'ಡಂಕಿ' ಸ್ಕ್ರೀನ್ಗಳನ್ನು ಕಿತ್ತುಕೊಳ್ಳಬಹುದು.
'ಕಾಟೇರ' ಹಳ್ಳಿ ಸೊಗಡಿನ ಸಿನಿಮಾ. ಹಾಗಾಗಿ ಉತ್ತರ ಕರ್ನಾಟಕದಲ್ಲಿ ಸಹಜವಾಗಿಯೇ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲಿದೆ. ಬಿಕೆಟಿ ಸೆಂಟರ್ನಲ್ಲೂ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗವಿದೆ. ಹಾಗಾಗಿ ಡಿಸೆಂಬರ್ 29ಕ್ಕೆ 'ಕಾಟೇರ' ರಿಲೀಸ್ ದೊಡ್ಡ ರಿಸ್ಕ್ ಏನೂ ಅಲ್ಲ. ಆದರೆ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎಂದು ಕಾದುನೋಡಬೇಕಿದೆ. ಈಗಾಗಲೇ "ಕರ್ನಾಟಕ ಕನ್ನಡಿಗರ ಅಡ್ಡಾ ಅಂತ ಸಾಬೀತು ಮಾಡೋ ಟೈಮ್ ಬಂದಿದೆ" ಎನ್ನುವ ದರ್ಶನ್ ಅಭಿಮಾನಿಗಳ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











