ಕಂಗನಾ-ಹೇಮಾ ಮಾಲಿನಿ-ಪವನ್ ಕಲ್ಯಾಣ್ ; ಯಾರಿಗೆಲ್ಲ ಸಿಕ್ತು ಮತದಾರನ ಆಶೀರ್ವಾದ ...!
ಕುತೂಹಲಕ್ಕೆ ತೆರೆ ಬಿದ್ದಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಗೆದ್ದವರು ಸಂಭ್ರಮದ ಅಲೆಯಲ್ಲಿದ್ದರೆ, ಸೋತವರಿಗೆ ಸುಣ್ಣ ಸಿಕ್ಕಿದೆ. ಇನ್ನೂ ಈ ಬಾರಿಯ ಲೋಕಸಭಾ ಚುನಾವಣೆಯ ಈ ಫಲಿತಾಂಶ ಬಣ್ಣದ ಪ್ರಪಂಚಕ್ಕೆ ಮರೆಯಲಾಗದಂತದ್ದು. ಯಾಕೆಂದರೆ.. ಚಿತ್ರರಂಗದಿಂದ ರಾಜಕೀಯದ ಚದುರಂಗ ಆಡಲು ತೆರಳಿದ್ದ ಅನೇಕರು ಗೆದ್ದು ಬಂದಿದ್ದಾರೆ. ನಸು ನಕ್ಕಿದ್ದಾರೆ. ಆ ಪೈಕಿ ಕಂಗನಾ ರಣಾವತ್ ಪ್ರಮುಖರು.
ಹೌದು, ರಾಜಕೀಯದಲ್ಲಿ ಕಂಗನಾ ಪಾಲಿಗೆ ಮೊದಲ ಚುಂಬನ ದಂತ ಭಗ್ನವಾಗಲಿಲ್ಲ. ಹಿಮಾಚಲದ ಜನ ಕಂಗನಾ ಕೈ ಬಿಡಲಿಲ್ಲ. ಬದಲಿಗೆ ಅಭೂತಪೂರ್ವ ಸ್ವಾಗತ ಕೋರಿ, ಕೊರಳಿಗೆ ಗೆಲುವಿನ ಹಾರವನ್ನ ಹಾಕಿದ್ದಾರೆ. ಲಕ್ಷಕ್ಕೂ ಅಧಿಕ ಮತಗಳಿಂದ ಕಂಗನಾ ರಣಾವತ್ ಗೆದ್ದಿದ್ದಾರೆ.

ಇನ್ನೂ ಕಂಗನಾ ರಣಾವತ್ ಸೆಣಸಾಡಿದ್ದು ಮಾಮೂಲಿ ವ್ಯಕ್ತಿಯ ಜೊತೆಯಲ್ಲ. ಬದಲಿಗೆ 6 ಬಾರಿ ಸಿಎಂ ಆಗಿದ್ದ ವೀರಭದ್ರ ಸಿಂಗ್ ಹಾಗೂ ಹಾಲಿ ಮಂಡಿ ಸಂಸದೆ ಪ್ರತಿಭಾ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರ ಜೊತೆ. ಈ ಕಾರಣಕ್ಕೆ ಈ ಗೆಲುವು ಕಂಗನಾ ಪಾಲಿಗೆ ತುಂಬಾನೇ ವಿಶೇಷ.
ಹೀಗಾಗಿಯೇ ಮಂಡಿಯಲ್ಲಿ ವಿಕ್ರಮಾದಿತ್ಯ ಸಿಂಗ್ ಅವರನ್ನ ಮಂಡಿಯೂರುವಂತೆ ಮಾಡಿದ ಕಂಗನಾ ಇದು ಸನಾತನ ಧರ್ಮಕ್ಕೆ ಸಂದ ಜಯ ಅಂದಿದ್ದಾರೆ. ಈ ಬೆಂಬಲ, ಪ್ರೀತಿ ಮತ್ತು ವಿಶ್ವಾಸಕ್ಕಾಗಿ ನಾನು ಮಂಡಿ ಜನರಿಗೆ ಸದಾ ಋಣಿಯಾಗಿರುವೆ ಎಂದಿರುವ ಕಂಗನಾ, ಇದು ನಿಮ್ಮೆಲ್ಲರ ಗೆಲುವು, ಇದು ಪ್ರಧಾನಿ ಮೋದಿಜಿ ಮತ್ತು ಬಿಜೆಪಿ ಮೇಲಿನ ನಂಬಿಕೆಗೆ ಸಿಕ್ಕ ಜಯ,ಇದು ಮಹಿಳೆಯ ಗೌರವಕ್ಕೆ ಸಿಕ್ಕ ಜಯ ಎಂದು ತಮ್ಮ ಮನದ ಮಾತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಕಂಗನಾ ಹೊರತು ಪಡಿಸಿದರೆ ಬಾಲಿವುಡ್ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮೂರನೇ ಬಾರಿ ಗೆಲುವಿನ ಬಾವುಟ ಹಾರಿಸಿದ್ದಾರೆ. ಮಥುರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಖೇಶ್ ಧಂಗರ್ ವಿರುದ್ಧ ಭಾರೀ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಇನ್ನೂ ಹೇಮಾ ಮಾಲಿನಿ ಮೇಲೆ ಕೇವಲ ಚುನಾವಣೆ ಸಮಯದಲ್ಲಿ ಮಾತ್ರವೇ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಂಬ ಆರೋಪ ಇದೆ. ಆದರೂ ಮತದಾರ ಇವರ ಕಿವಿಗೆ ಕಮಲ ಮುಡಿಸಿದ್ದು ಅಚ್ಚರಿ
ಕಂಗನಾ ಮತ್ತು ಹೇಮಾ ಮಾಲಿನಿಯ ಜೊತೆ ರಾಮಾಯಣ ಧಾರಾವಾಹಿಯ ರಾಮ ಅರುಣ್ ಗೋವಿಲ್ ಕೂಡ ಗೆದ್ದಿದ್ದಾರೆ. ಇನ್ನೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನ ಟೀಕಿಸಿ ಬಿಜೆಪಿಗೆ ಗುಡ್ ಬೈ ಹೇಳಿ ಹೊರ ಬಂದಿದ್ದ ಬಾಲಿವುಡ್ನ ಹಿರಿಯ ಜೀವ ಶತ್ರುಜ್ಞ ಸಿಂಹ ಟಿಎಂಸಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಸ್ಟಾರ್ ಅಭ್ಯರ್ಥಿ ಮತ್ತು ಮಲಯಾಳಂ ನಟ ಸುರೇಶ್ ಗೋಪಿ ಕೇರಳದ ತ್ರಿಶೂರ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಕೇರಳದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದಂತೆ ಆಗಿದೆ. ಇನ್ನೂ ಆಂಧ್ರದ ಪವರ್ ಸ್ಟಾರ್ ಮತ್ತು ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್ ಕೂಡ ಪೀಠಾಪುರಂ ಕ್ಷೇತ್ರದಿಂದ ಗೆದ್ದಿದ್ದಾರೆ. ಇತಿಹಾಸವನ್ನ ಸೃಷ್ಟಿಸಿದ್ದಾರೆ. ಕೇವಲ ಪವನ್ ಕಲ್ಯಾಣ್ ಮಾತ್ರ ಅಲ್ಲ ಜನಸೇನಾ ಪಕ್ಷದ 21 ಅಭ್ಯರ್ಥಿಗಳು ಸಹ ಗೆಲುವು ಪಡೆದಿದ್ದು ಈ ಲೋಕಸಭಾ ಚುನಾವಣೆಯ ಮತ್ತೊಂದು ಬ್ರೇಕಿಂಗ್ ಸುದ್ದಿ.
ತೆಲುಗು ಚಿತ್ರರಂಗದ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ, ಟಿಡಿಪಿ ಪಕ್ಷದ ಅಭ್ಯರ್ಥಿಯಾಗಿ ಹಿಂದೂಪುರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದು ಅವರಿಗೆ ಮೂರನೇ ಗೆಲುವು ಅನ್ನುವುದು ವಿಶೇಷ.


Click it and Unblock the Notifications










