Don't Miss!
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- News ಎನ್ಡಿಎ ಸೇರಿದ ಪ್ರಫುಲ್ ಪಟೇಲ್ ಮೇಲಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಿಬಿಐ ಎಳ್ಳುನೀರು!
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಖಳನಾಯಕ' ದರ್ಶನ್ ನಾಯಕನಾಗಿ ಬೆಳೆದ 'ಚಾಲೆಂಜಿಂಗ್' ಕಥೆ
ಕನ್ನಡದ ಖ್ಯಾತ ಕಲಾವಿದ ತೂಗುದೀಪ ಶ್ರೀನಿವಾಸ್ ಅವರ ಮಗ ಎನ್ನುವ ಕಾರಣಕ್ಕೆ ದರ್ಶನ್ಗೆ ಆರಂಭಿಕ ದಿನಗಳಲ್ಲಿ ರೆಡ್ ಕಾರ್ಪಟ್ ಸ್ವಾಗತ ಸಿಕ್ಕಿಲ್ಲ. ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡಿ, ಕಷ್ಟಗಳನ್ನು ಅನುಭವಿಸಿ, ಸವಾಲುಗಳನ್ನು ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದಾರೆ. ದರ್ಶನ್ ತಮ್ಮ ಹಳೆಯ ದಿನಗಳ ಬಗ್ಗೆ ನೆನಪು ಮಾಡಿಕೊಂಡ ಪ್ರತಿಬಾರಿಯೂ ''ನಮ್ಮ ತಂದೆ ಕೊಟ್ಟ ಲೂನಾ ಗಾಡಿಯಿಂದ ಲ್ಯಾಂಬೋರ್ಗಿನಿ ಕಾರ್ವರೆಗೂ ಬರೋಕೆ ನಾನು ಪಟ್ಟ ಕಷ್ಟ ನನಗೆ ಮಾತ್ರ ಗೊತ್ತು'' ಎಂದು ಅನೇಕ ಸಲ ಹೇಳಿಕೊಂಡಿದ್ದಾರೆ. ಹೌದು, ಅವರು ಹೇಳಿದಂತೆ ನಟ ದರ್ಶನ್ ನಡೆದು ಬಂದ ಹಾದಿಯಲ್ಲಿ ಪ್ರತಿ ಕ್ಷಣವೂ ಸವಾಲ್ ಎದುರಿಸಿದ್ದಾರೆ.
ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂಬ ಹಠ ಹೊಂದಿದ್ದ ದರ್ಶನ್ 'ನೀನಾಸಂ'ನಲ್ಲಿ ನಟನೆ ತರಬೇತಿ ಪಡೆದಕೊಂಡರು. ಅಂದಿನ ಖ್ಯಾತ ಛಾಯಾಗ್ರಾಹಕ ಬಿಸಿ ಗೌರಿಶಂಕರ್ ಬಳಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡರು. ಜೀವನೋಪಾಯಕ್ಕಾಗಿ ಅನೇಕ ಚಿತ್ರಗಳಲ್ಲಿ ಲೈಟ್ ಬಾಯ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಶಿವರಾಜ್ ಕುಮಾರ್ ಅವರ 'ಜನುಮದ ಜೋಡಿ' ಚಿತ್ರದಲ್ಲಿ ಲೈಟ್ ಬಾಯ್ ಆಗಿದ್ದೆ ಎಂದು ಈಗಲೂ ದರ್ಶನ್ ನೆನಪಿಸಿಕೊಳ್ಳುತ್ತಾರೆ.
ಡಿ ಬಾಸ್ ದರ್ಶನ್ ಹೀರೋ ಆಗಿ 19 ವರ್ಷ: ಅಂದು ಹೇಗಿತ್ತು 'ಮೆಜೆಸ್ಟಿಕ್' ದಾಸನ ಹವಾ?
ಎಸ್ ನಾರಾಯಣ್ ಅವರ ಕೃಪೆಯಿಂದ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆದುಕೊಂಡ ದರ್ಶನ್ ಮುಖಕ್ಕೆ ಮೊದಲ ಸಲ ಬಣ್ಣ ಹಚ್ಚುತ್ತಾರೆ. ಅಷ್ಟೊತ್ತಿಗಾಗಲೇ ಖ್ಯಾತ ನಿರ್ದೇಶಕರಾಗಿದ್ದ ಎಸ್ ನಾರಾಯಣ್ 'ಮಹಾಭಾರತ' ಎನ್ನುವ ಚಿತ್ರಕ್ಕೆ ಚಾಲನೆ ಕೊಟ್ಟರು. ವಿನೋದ್ ರಾಜ್ ನಾಯಕನಟರಾಗಿ ಅಭಿನಯಿಸಿದ ಸಿನಿಮಾ ಇದು. ಈ ಚಿತ್ರದಲ್ಲಿ ದರ್ಶನ್ ಪ್ರಪ್ರಥಮ ಭಾರಿಗೆ ನಟಿಸಿದರು. ಪ್ರೊಡಕ್ಷನ್, ಲೈಟ್ಬಾಯ್, ಧಾರಾವಾಹಿ, ಜಾಹೀರಾತು, ಕಾರ್ಟೂನ್ ಚಿತ್ರಗಳಿಗೆ ಡಬ್ಬಿಂಗ್ ಹೀಗೆ ಕಷ್ಟಪಡ್ತಿದ್ದ ದರ್ಶನ್ಗೆ ಮೊದಲ ಸಲ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಕ್ತು.
ದರ್ಶನ್ 'ಮದಕರಿ ನಾಯಕ' ಅಪ್ಡೇಟ್ ನೀಡಿದ ರಾಜೇಂದ್ರ ಸಿಂಗ್ ಬಾಬು
ಅಂದು ವಿನೋದ್ ರಾಜ್ ಎದುರು ಖಳನಾಯಕನಾಗಿ ಮಿಂಚಿದ ಚಿಗುರು ಮೀಸೆಯ ಯುವಕ, ಇಂದು ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ಎನಿಸಿಕೊಂಡಿದ್ದಾರೆ. ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಡಿ ಬಾಸ್ ಆಗಿದ್ದಾರೆ. ಮುಂದೆ ಓದಿ...
1997ರಲ್ಲಿ ಬಂದ 'ಮಹಾಭಾರತ'
ವಿನೋದ್ ರಾಜ್ ಅದಾಗಲೇ ಗುರುತಿಸಿಕೊಂಡಿದ್ದ ನಟ. ಎಸ್ ನಾರಾಯಣ್ ಸಹ ಸ್ಟಾರ್ ನಿರ್ದೇಶಕ ಆಗಿದ್ದರು. ಇವರಿಬ್ಬರ ಕಾಂಬಿನೇಷನ್ನಲ್ಲಿ ಬಂದ ಸಿನಿಮಾ ಮಹಾಭಾರತ. 1997ರ ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು. ಈ ಚಿತ್ರದ ಖಳನಾಯಕ ಅಥವಾ ನೆಗೆಟಿವ್ ಪಾತ್ರದಲ್ಲಿ ದರ್ಶನ್ ಸಹ ನಟಿಸಿದ್ದರು. ಇದು ದರ್ಶನ್ ಅವರಿಗೆ ಮೊದಲ ಸಿನಿಮಾ. ಕಾಲೇಜ್ ಹುಡುಗನಾಗಿ ಅಭಿನಯಿಸಿದ್ದ ದರ್ಶನ್, ವಿನೋದ್ ರಾಜ್ ಎದುರು ವಿಲನ್ ಆಗಿ ಮಿಂಚಿದ್ದರು.
ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟನೆ
'ಮಹಾಭಾರತ' ಸಿನಿಮಾ ಬಳಿಕವೂ ಹಲವು ಚಿತ್ರಗಳಲ್ಲಿ ಪೋಷಕ ನಟನೆ ಮಾಡಿದರು. ಸ್ಟಾರ್ ನಟರ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರ ನಿಭಾಯಿಸಿದರು. ಶಿವರಾಜ್ ಕುಮಾರ್-ಅಂಬರೀಶ್ ನಟಿಸಿದ್ದ 'ದೇವರಮಗ' ಚಿತ್ರದಲ್ಲೂ ದರ್ಶನ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದರು. ತಮಿಳಿನಲ್ಲಿ ವಿಜಯಕಾಂತ್ ನಟಿಸಿದ್ದ 'ವಲ್ಲರಸು' ಸಿನಿಮಾದಲ್ಲಿಯೂ ಒಂದು ಪಾತ್ರ ಮಾಡಿದ್ದರು. ರಾಮ್ ಕುಮಾರ್, ಮೋಹನ್ ನಟಿಸಿದ್ದ 'ಎಲ್ಲರ ಮನೆ ದೋಸೆನೂ', 'ಮಿಸ್ಟರ್ ಹರಿಶ್ಚಂದ್ರ', 'ಭೂತಯ್ಯನ ಮಕ್ಕಳು' ಚಿತ್ರಗಳಲ್ಲಿಯೂ ದರ್ಶನ್ ಕಾಣಿಸಿಕೊಂಡಿದ್ದರು.
ಲೈಫು ಬದಲಿಸಿದ 'ಮೆಜೆಸ್ಟಿಕ್'
2002ರಲ್ಲಿ ತೆರೆಕಂಡ 'ಮೆಜೆಸ್ಟಿಕ್' ಚಿತ್ರದಲ್ಲಿ ದರ್ಶನ್ ಮೊದಲ ಸಲ ನಾಯಕನಟರಾದರು. ಪಿಎನ್ ಸತ್ಯ ನಿರ್ದೇಶನ ಹಾಗೂ ಎಂಜೆ ರಾಮಮೂರ್ತಿ ಈ ಚಿತ್ರ ನಿರ್ಮಿಸಿದ್ದರು. ಮೊದಲ ಚಿತ್ರದಲ್ಲೇ ಲಾಂಗ್ ಹಿಡಿದು ಎಂಟ್ರಿ ದರ್ಶನ್ಗೆ ಕನ್ನಡ ಪ್ರೇಕ್ಷಕರು ಫಿದಾ ಆದರು. ದಾಸನಾಗಿ ಬರಮಾಡಿಕೊಂಡರು. ಅಭಿಮಾನಿಗಳ ಪ್ರೀತಿ ಕಂಡ ದರ್ಶನ್ ಸಹ 'ನಾನು ನಿಮ್ಮ ಪ್ರೀತಿಯ ದಾಸ' ಎಂದು ಕೈಎತ್ತಿ ನಮಸ್ಕರಿಸಿದರು. ಮೆಜೆಸ್ಟಿಕ್ ಸಿನಿಮಾ ದೊಡ್ಡ ಹಿಟ್ ಆಯಿತು. ದರ್ಶನ್ ಹೀರೋ ಆಗಿ ನಿಂತರು. ಸಾಕಷ್ಟು ಆಫರ್ಗಳು ಬರಲು ಶುರುವಾಯಿತು.
ದಾಖಲೆ ಬರೆದ 'ಕರಿಯ'
ಮೆಜೆಸ್ಟಿಕ್ ಆದ್ಮೇಲೆ ಧ್ರುವ, ದಿಲ್, ನಿನಗೋಸ್ಕರ, ಕಿಟ್ಟಿ ಅಂತಹ ಸಿನಿಮಾಗಳಲ್ಲಿ ದರ್ಶನ್ ಅಭಿನಯಿಸಿದರು. ಆದರೆ, ಪ್ರೇಮ್ ನಿರ್ದೇಶನ ಮಾಡಿದ 'ಕರಿಯ' ಚಿತ್ರ ದಾಸನಿಗೆ ಮತ್ತೊಂದು ದೊಡ್ಡ ಸಕ್ಸಸ್ ಕೊಡ್ತು. ದರ್ಶನ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ರಿ-ರಿಲೀಸ್ ಆಗಿರುವ ಚಿತ್ರ ಕರಿಯ. ಈ ಚಿತ್ರದಲ್ಲೂ ದಾಸ ರೌಡಿಯಾಗಿಯೇ ನಟಿಸಿದ್ದರು.
ತುಂಬಾ ಸಿನಿಮಾಗಳು ಸೋತವು
ಆರಂಭದ ದಿನಗಳಲ್ಲಿ ದರ್ಶನ್ ಗೆಲುವಿಗಾಗಿ ಸಿನಿಮಾ ಮಾಡಲಿಲ್ಲ. ತಾನೊಬ್ಬ ನಟ, ಹೀರೋ ಎಂದು ಗುರುತಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಸಿನಿಮಾಗಳನ್ನು ಕೈಗೆತ್ತಿಕೊಂಡರು. ಹಿಟ್ ಆಗುತ್ತಾ, ಕಲೆಕ್ಷನ್ ಮಾಡುತ್ತಾ ಅಂತ ಯೋಚಿಸದೇ ಹಲವು ಸಿನಿಮಾ ಮಾಡಿದೆ ಎಂದು ಅನೇಕ ಸಲ ಸ್ವತಃ ದರ್ಶನ್ ಹೇಳಿಕೊಂಡಿದ್ದಾರೆ. ಮೆಜೆಸ್ಟಿಕ್, ಕರಿಯ ಅಂತಹ ಹಿಟ್ ನೋಡಿದ ಮೇಲೆ ಸತತವಾಗಿ ಸೋಲು ಸಹ ಕಾಣಬೇಕಾಯಿತು. ಅಲ್ಲೊಂದು ಇಲ್ಲೊಂದು ಗೆಲುವು ದರ್ಶನ್ ಪಾಲಿಗಿತ್ತು ಅಷ್ಟೇ.
'ಕಲಾಸಿಪಾಳ್ಯ'ದಿಂದ ಬ್ರೇಕ್
ಒಂದು ಸಮಯದಲ್ಲಿ ಸಿಕ್ಕ ಸಿಕ್ಕ ಸಿನಿಮಾಗಳನ್ನೆಲ್ಲಾ ದರ್ಶನ್ ಮಾಡಿದರು. ನಮ್ಮ ಪ್ರೀತಿಯ ರಾಮು ನಟನೆ ಮೆಚ್ಚಿದರೂ ಸಿನಿಮಾ ಹಿಟ್ ಆಗಲಿಲ್ಲ. ಅಣ್ಣಾವ್ರು, ಧರ್ಮ, ದರ್ಶನ್, ಭಗವಾನ್ ಅಂತಹ ಚಿತ್ರಗಳು ಮೋಡಿ ಮಾಡಲಿಲ್ಲ. ಕಲಾಸಿಪಾಳ್ಯ ಹಿಟ್ ಆದ್ಮೇಲೆ ಇಂಡಸ್ಟ್ರಿಯಲ್ಲಿ ದರ್ಶನ್ ಟ್ರೆಂಡ್ ಶುರುವಾಯಿತು. ಅದೇ ಕಾನ್ಸೆಪ್ಟ್ನಲ್ಲಿ ಹಲವು ಚಿತ್ರಗಳು ಬಂದವು. ಅಯ್ಯ, ಶಾಸ್ತ್ರಿ, ಸ್ವಾಮಿ, ಮಂಡ್ಯ, ಸುಂಟರಗಾಳಿ, ದತ್ತ ಹೀಗೆ ಮಾಸ್ ಹೀರೋ ಆಗಿ ನಿಂತರು.
ವೈಯಕ್ತಿಕ ಜೀವನ-ಸಾರಥಿ ಸಿನಿಮಾ ಯಶಸ್ಸು
ಹೀಗೆ ಏಳು-ಬೀಳುಗಳೊಂದಿಗೆ ಸಾಗುತ್ತಿದ್ದ ದರ್ಶನ್ ಜೀವನದಲ್ಲಿ ಕೆಲವು ವೈಯಕ್ತಿಕ ಘಟನೆಗಳು ಬಹಳ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತು. ಪತ್ನಿ ಮೇಲೆ ಹಲ್ಲೆ ಆರೋಪದಡಿ ಜೈಲುವಾಸ ಸಹ ಅನುಭವಿಸಿ ಬಂದರು. ದರ್ಶನ್ ಜೈಲಿನಲ್ಲಿದ್ದಾಗಲೇ ತೆರೆಕಂಡ ಸಿನಿಮಾ ಸಾರಥಿ ಬಹಳ ದೊಡ್ಡ ಯಶಸ್ಸು ಸಾಧಿಸಿತು. ಜೈಲಿನಿಂದ ಬಿಡುಗಡೆಯಾದ ನಂತರ ಸಾರಥಿಯಾತ್ರೆ ಕೈಗೊಂಡು ಅಭಿಮಾನಿಗಳ ಆಶೀರ್ವಾದ ಪಡೆದುಕೊಂಡರು. ದರ್ಶನ್ ವೃತ್ತಿ ಜೀವನ ಮುಗಿತು ಎಂದುಕೊಂಡಿದ್ದವರಿಗೆ ಈ ಸಕ್ಸಸ್ ಅಚ್ಚರಿ ಉಂಟು ಮಾಡಿತು. ದರ್ಶನ್ ಈಸ್ ಬ್ಯಾಕ್ ಎನ್ನುವ ಗಟ್ಟಿ ಸಂದೇಶ ರವಾನಿಸಿತು.
ರಾಯಣ್ಣನಿಗೆ ರಾಜ್ಯ ಪ್ರಶಸ್ತಿ
ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿರುವ ಸಂಗೊಳ್ಳಿ ರಾಯಣ್ಣ ಬಹಳ ವಿಶೇಷವಾದ ಚಿತ್ರ. ಐತಿಹಾಸಿಕ ಚಿತ್ರ ಮಾಡಲು ಹಿಂಜರಿಯುತ್ತಿದ್ದ ಸಮಯದಲ್ಲಿ ಅಂತಹದೊಂದು ಕತೆ ಆಯ್ಕೆ ಮಾಡಿಕೊಂಡು ಗೆದ್ದ ತೋರಿಸಿದರು. ಈ ಚಿತ್ರದ ಅಭಿಯನಕ್ಕಾಗಿ ದರ್ಶನ್ ಅವರಿಗೆ 2012ನೇ ಸಾಲಿನಲ್ಲಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದ ಖ್ಯಾತ ಖಳನಟರಿಗೆ ಅರ್ಪಿಸಿದರು.
ಕುರುಕ್ಷೇತ್ರದಲ್ಲಿ ದುರ್ಯೋಧನ
ಅಣ್ಣಾವ್ರ ನಂತರ ಕನ್ನಡದಲ್ಲಿ ಪೌರಾಣಿಕ ಹಾಗೂ ಐತಿಹಾಸಿಕ ಸಿನಿಮಾಗಳು ಬರಲೇ ಇಲ್ಲ. ಅಂತಹ ಪ್ರಯತ್ನಕ್ಕೆ ಕೈ ಹಾಕಿದ್ದು ದರ್ಶನ್. 'ಸಂಗೊಳ್ಳಿ ರಾಯಣ್ಣ' ಚಿತ್ರದ ನಂತರ 'ಕುರುಕ್ಷೇತ್ರ' ಸಿನಿಮಾ ಕೈಗೆತ್ತಿಕೊಂಡರು. ಪೌರಾಣಿಕ ಕಥಾಹಂದರ ಈ ಸಿನಿಮಾದಲ್ಲಿ ದುರ್ಯೋಧನನಾಗಿ ಅಭಿನಯಿಸಿದರು. ಲಾಂಗ್ ಹಿಡಿದು ದಾಸ ಆಗೋಕು ರೆಡಿ, ಗದೆ ಹಿಡಿದು ದುರ್ಯೋಧನ ಆಗೋಕು ನಾನು ರೆಡಿ ಎಂದು ಸಾರಿ ಹೇಳಿದರು.
'ರಾಬರ್ಟ್' ಸಕ್ಸಸ್
'ಮಹಾಭಾರತ' ಚಿತ್ರದಿಂದ ಆರಂಭವಾದ ದರ್ಶನ್ ಸಿನಿಮಾ ಜರ್ನಿ ರಾಬರ್ಟ್ವರೆಗೂ ಬಂದಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ಬಂದ ಈ ಚಿತ್ರ ಮಾರ್ಚ್ ತಿಂಗಳಲ್ಲಿ ತೆರೆಕಂಡಿತ್ತು. ಕಮರ್ಷಿಯಲ್ ಆಗಿ ಹಿಟ್ ಆದ ಚಿತ್ರ ಕಲೆಕ್ಷನ್ನಲ್ಲೂ ದಾಖಲೆ ಬರೆದಿದೆ.
ದಾಸನ ಮುಂದಿನ ಚಿತ್ರಗಳು
ರಾಬರ್ಟ್ ಆದ್ಮೇಲೆ ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ 'ರಾಜವೀರ ಮದಕರಿ ನಾಯಕ' ಸಿನಿಮಾ ಮಾಡುತ್ತಿದ್ದಾರೆ. ಶೈಲಜಾ ನಾಗ್ ನಿರ್ಮಾಣದಲ್ಲಿ ಹೊಸ ಸಿನಿಮಾಗೆ ಚಾಲನೆ ಕೊಟ್ಟಿದ್ದಾರೆ. ಮಿಲನ ಪ್ರಕಾಶ್ ಹಾಗೂ ಎಂಜೆ ರಾಮಮೂರ್ತಿ ಜೊತೆಯಲ್ಲೂ ಹೊಸ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ.