ಜಗ್ಗೇಶ್-ಪರಿಮಳಾ ಪ್ರೇಮ್ ಕಹಾನಿ; ಅವತ್ತು ಬರೆದಿದ್ದ ಪ್ರೇಮಪತ್ರಗಳು ಇಲ್ಲಿವೆ ನೋಡಿ
ತೆರೆಮೇಲೆ ನಾಯಕ- ನಾಯಕಿ ಲವ್ ಮಾಡೋದು. ಪೋಷಕರನ್ನು ಒಪ್ಪಿಸಿ ಮದುವೆ ಆಗೋದು. ಅದಕ್ಕಾಗಿ ಹೋರಾಟ ಮಾಡುವುದು ಗೊತ್ತೇಯಿದೆ. ಆದರೆ ಕೆಲ ಸಿನಿಮಾ ತೆರೆಯರು ನಿಜ ಜೀವನದಲ್ಲಿ ಪ್ರೀತಿಸಿ ತಮ್ಮ ಪ್ರೀತಿಗಾಗಿ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಅದರಲ್ಲೂ ನವರಸ ನಾಯಕ ಜಗ್ಗೇಶ್ ಹಾಗೂ ಪರಿಮಳಾ ಅವರ ಲವ್ ಸ್ಟೋರಿ ಯಾವ ಸಿನಿಮಾಗಿಂತ ಕಮ್ಮಿಯಿಲ್ಲ.
'ಚೆಲುವಿನ ಚಿತ್ತಾರ' ಚಿತ್ರದಲ್ಲಿ ಗ್ಯಾರೇಜ್ ಹುಡುಗನನ್ನು ಹೈಸ್ಕೂಲ್ ಹುಡುಗಿ ಪ್ರೀತಿಸುವ ಕಥೆಯಿತ್ತು. ಬಳಿಕ ಕದ್ದು ಮುಚ್ಚಿ ಮದುವೆ ಆಗಿ ದುರಂತ ಅಂತ್ಯ ಕಾಣುವ ಕಥೆ ಅದು. ಹೆಚ್ಚು ಕಮ್ಮಿ ಜಗ್ಗೇಶ್- ಪರಿಮಳಾ ಅವರ ಲವ್ ಸ್ಟೋರಿ ಕೂಡ ಇದೇ ರೀತಿ ಇತ್ತು. ಜಗ್ಗಣ್ಣ ಇನ್ನು ಚಿತ್ರರಂಗಕ್ಕೆ ಬರದ ಸಮಯ ಅದು. ಪರಿಮಳಾ ಅವರು ಕಾನ್ವೆಂಟ್ ಓದುತ್ತಿದ್ದರು. ಆಗ ಅವರ ವಯಸ್ಸು 14-15 ವರ್ಷ. ಜಗ್ಗೇಶ್ ಅವರಿಗೆ 18 ಇರಬಹುದು.

ತಮಿಳು ಕುಟುಂಬದವರು ಪರಿಮಳಾ. ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದರು. ಜಗ್ಗೇಶ್ ಸ್ನೇಹಿತರ ಜೊತೆ ತಂಟೆ ತರಲೆ ಮಾಡಿಕೊಂಡು ಓಡಾಡುತ್ತಿದ್ದ ಸಮಯ ಅದು. ತಮ್ಮ ಅಡ್ಡಾದಲ್ಲಿ ಜಗ್ಗೇಶ್ ಸ್ನೇಹಿತರ ಜೊತೆ ಕೂತಿದ್ದಾಗ ಮೊದಲ ಬಾರಿಗೆ ಪರಿಮಳಾ ಅವರನ್ನು ನೋಡಿದ್ದರು. 'ಹಾಯ್ ಬೇಬಿ' ಎಂದು ಕೂಗಿಬಿಟ್ಟಿದ್ದರು. ಕೂಡಲೇ ಪರಿಮಳಾ ಅವರು ಚಪ್ಪಲಿ ಕೈಗೆ ತೆಗೆದುಕೊಂಡಿದ್ದು ನೋಡಿ ಜಗ್ಗೇಶ್ ಓಡಿ ಹೋಗಿದ್ದರಂತೆ. ಬಳಿಕ ಪರಿಮಳಾ ಅವರ ಶಾಲೆ ಬಳಿ ಹೋಗಿ ಜಗ್ಗೇಶ್ ನೋಡುತ್ತಿದಂತೆ. ಹೀಗೆ ಶುರುವಾಯಿತು ಇಬ್ಬರ ಲವ್ಸ್ಟೋರಿ.
ಜಗ್ಗೇಶ್- ಪರಿಮಳಾ ಪ್ರೀತಿಸುವ ವಿಚಾರ ಮನೆಗಳಲ್ಲಿ ಗೊತ್ತಾಗಿತ್ತು. ಪರಿಮಳಾ ತಂದೆ ಪೊಲೀಸ್ ಕಂಪ್ಲೇಟ್ ಕೊಟ್ಟಿದ್ದರು. ಬಳಿಕ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಕೊನೆಗೆ ಸುಪ್ರೀಂ ಕೋರ್ಟ್ವರೆಗೂ ಈ ಪ್ರಕರಣ ಹೋಗಿತ್ತು. ಅದು 1983-84ರ ಸಮಯ. ಮೊಬೈಲ್ ಫೋನ್ ಇಲ್ಲದ ಕಾಲ. ಲ್ಯಾಂಡ್ಲೈನ್ ಫೋನ್ ಕೂಡ ವಿರಳವಾಗಿದ್ದ ಸಮಯ. ಆಗ ಪತ್ರಗಳಲ್ಲೇ ಪ್ರೇಮಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು.
ಜಗ್ಗೇಶ್ ಹಾಗೂ ಪರಿಮಳಾ ದಂಪತಿ ಅಂದು ಬರೆದಿದ್ದ ಪ್ರೇಮ ಪತ್ರಗಳನ್ನು ಇಂದಿಗೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಜಗ್ಗೇಶ್ ಬಂದಿದ್ದಾಗ ಅದನ್ನು ತೋರಿಸಲಾಗಿತ್ತು. ಅಷ್ಟೇ ಕೆಲ ವರ್ಷಗಳ ಹಿಂದೆ ತಮ್ಮ 32ನೇ ವಿವಾಹ ವಾರ್ಷಿಕೋತ್ಸವ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೂಡ ಆ ಪತ್ರಗಳನ್ನು ಜಗ್ಗಣ್ಣ ಹಂಚಿಕೊಂಡಿದ್ದರು. ಒಮ್ಮೆ ನಾನು ವಿಷ ಕುಡಿಯುತ್ತೇನೆ ಎಂದು ಪರಿಮಳಾ ಪತ್ರದಲ್ಲಿ ಬರೆದು ಜಗ್ಗೇಶ್ ಅವರಿಗೆ ತಲುಪಿಸಿದ್ದರು.
ತಮ್ಮ ಪ್ರೀತಿ ವಿಚಾರ ಪರಿಮಳಾ ಅವರ ಪೋಷಕರಿಗೆ ಗೊತ್ತಾದಾಗ ಆಕೆ ಗಾಬರಿಯಿಂದ ಬರೆದ ಪತ್ರ ಇದು ಎಂದು ಕ್ಯಾಪ್ಷನ್ ಕೊಟ್ಟಿದ್ದರು. ನಮ್ಮ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಅಪ್ಪ ಮನೆಗೆ ಬಂದರೆ ನನ್ನನ್ನು ಕೊಂದೇ ಬಿಡುತ್ತಾರೆ. ದಯವಿಟ್ಟು ನನ್ನನ್ನು ಕಾಪಾಡು ಇಲ್ಲದಿದ್ದರೆ ನಾನು ವಿಷ ಕುಡಿಯುತ್ತೇನೆ" ಎಂದು ಪರಿಮಳಾ ಅವರು ಆ ಪತ್ರದಲ್ಲಿ ಬರೆದಿದ್ದರು.
ಜಗ್ಗೇಶ್ ಅವರು ಬರೆದ ಸಾಕಷ್ಟು ಪತ್ರಗಳನ್ನು ಪರಿಮಳಾ ಅವರಿಗೆ ತಲುಪಿಸಲು ಸಾಧ್ಯವಾಗಿರಲಿಲ್ಲವಂತೆ. ಆ ಪತ್ರಗಳನ್ನು ಇಂದಿಗೂ ಭದ್ರವಾಗಿಟ್ಟುಕೊಂಡಿದ್ದಾರೆ. ಕದ್ದುಮುಚ್ಚಿ ಜಗ್ಗೇಶ್-ಪರಿಮಳಾ ಮದುವೆಯಾಗಿದ್ದರು. ಆ ವಿಚಾರ ಗೊತ್ತಾಗಿ ಪರಿಮಳಾ ಅವರಿಗೆ ತಂದೆ ಹೊಡೆದು ಮದ್ರಾಸ್ ಕರೆದುಕೊಂಡು ಹೋಗಿಬಿಟ್ಟಿದ್ದರು. ಆಗ ಕೂಡ ಇಬ್ಬರೂ ಪತ್ರಗಳಲ್ಲಿ ಸಂಪರ್ಕದಲ್ಲಿದ್ದರು. ಮದ್ರಾಸ್ನಿಂದ ಪರಿಮಳಾ ಅವರು ಮಾಯಸಂದ್ರದಲ್ಲಿದ್ದ ಜಗ್ಗೇಶ್ ಅವರಿಗೆ ಪತ್ರ ಬರೆಯುತ್ತಿದ್ದರು. ಅಂದಹಾಗೆ ಜಗ್ಗೇಶ್ ಅವರ ಬಾಲ್ಯದ ಹೆಸರು ಈಶ್ವರ್ ಗೌಡ. ಬಳಿಕ ಹೆಸರು ಬದಲಿಸಿಕೊಂಡಿದ್ದರು.


Click it and Unblock the Notifications











