ಮನೇಲಿ ಅಂತರ್ಜಾತಿ ವಿವಾಹಕ್ಕೆ ಒಪ್ಪಿರಲಿಲ್ಲ, ವೇಣುನ ಸ್ಟೇಷನ್ನಲ್ಲಿ ಕೂರಿಸಿದ್ರು; ತಾರಾ ಲವ್ ಸ್ಟೋರಿ
ಕನ್ನಡ ಚಿತ್ರನಟಿ ತಾರಾ ಹಾಗೂ ಛಾಯಾಗ್ರಾಹಕ ವೇಣು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ತಾರಾ ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ವೇಣು ಪರಿಚಯ ಸ್ನೇಹ, ಪ್ರೀತಿ ಆಗಿತ್ತು. ಬಳಿಕ ತಾರಾ ಅವರ ಮನೆಯಲ್ಲಿ ವಿಷಯ ಗೊತ್ತಾಗಿ ಬಹಳ ರಾದ್ಧಾಂತವಾಗಿತ್ತು. ವೇಣು ಒಂದು ದಿನ ಪೊಲೀಸ್ ಸ್ಟೇಷನ್ನಲ್ಲಿ ಕೂರುವಂತಾಗಿತ್ತು. 17 ವರ್ಷಗಳ ಬಳಿಕ ಇಬ್ಬರೂ ಮದುವೆ ಆಗುವಂತಾಯಿತು.
ವೇಣು ಹಾಗೂ ತಾರಾ ದಂಪತಿಗೆ ಒಬ್ಬ ಮಗ ಇದ್ದಾರೆ. ಜೆಪಿ ನಗರದಲ್ಲಿ ವಾಸವಿದ್ದ ನಟಿ ತಾರಾ ಕುಟುಂಬ ಈಗ ಜಯನಗರಕ್ಕೆ ವಾಸ್ತವ್ಯ ಬದಲಿಸಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಾರಾ ಭಾಗಿ ಆಗಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ. ತಮ್ಮ ವೈಯಕ್ತಿಕ ಹಾಗೂ ಸಿನಿಮಾ ಜೀವನದ ಬಗ್ಗೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ. ಈ ವೇಳೆ ವೇಣು ಜೊತೆಗಿನ ಲವ್ ಸ್ಟೋರಿ ಕೂಡ ವಿವರಿಸಿದ್ದಾರೆ.

1986ರಲ್ಲಿ ನಾನು ಚಿತ್ರರಂಗಕ್ಕೆ ಬಂದೆ. 1988ರಲ್ಲಿ ನನಗೆ ವೇಣು ಪರಿಚಯ ಆಗಿತ್ತು. ಆಗ ಅವ್ರು ಪ್ರೆಸ್ ಫೋಟೊಗ್ರಫರ್ ಆಗಿದ್ರು ಎಂದು ತಾರಾ ನೆನಪಿಸಿಕೊಂಡಿದ್ದಾರೆ. ಪ್ರಜಾವಾಣಿ ಪತ್ರಿಕೆಗೆ ಸ್ಟಿಲ್ ಫೋಟೊಗ್ರಫರ್ ಆಗಿದ್ರು. ಪತ್ರಿಕಾ ಪ್ರಕಟಣೆಗೆ ಕಂಠೀರವ ಸ್ಟುಡಿಯೋದಲ್ಲಿ ನನ್ನ ಫೋಟೊಗಳನ್ನು ಸೆರೆ ಹಿಡಿದಿದ್ರು. ಮುಂದೆ ಬಾಲಕೃಷ್ಣ ಕಾಕತ್ಕರ್ ಪತ್ರಿಕೆ ಆರಂಭಿಸಿದಾಗ ವೇಣು ಅಲ್ಲಿ ಕೆಲಸಕ್ಕೆ ಸೇರಿದ್ರು. ಆಗ ನಮ್ಮ ಹಳ್ಳಿಗೆ ಕೂಡ ಬಂದು ವೇಣು ಫೋಟೊ ಹಿಡಿದಿದ್ರು. ಅದೇ ಸಮಯದಲ್ಲಿ ಇಬ್ಬರ ನಡುವೆ ಒಡನಾಟ ಶುರುವಾಗಿತ್ತು. ಆದ್ರೆ ಮೊಬೈಲ್ ಫೋನ್ ಇರ್ಲಿಲ್ಲ. ಮನೆಯಲ್ಲಿ ಇದ್ದಿದ್ದು ಒಂದೇ ಒಂದು ಲ್ಯಾಂಡ್ಲೈನ್ ಫೋನ್. ಮನೆಯಲ್ಲಿ 22 ಜನ ಇದ್ವಿ. ಎಲ್ಲರಿಗೂ ಅದೇ ಫೋನ್ಗೆ ಕಾಲ್ ಬರ್ತಿತ್ತು. ಹಾಗಾಗಿ ಇಬ್ಬರೂ ಮಾತನಾಡುವುದು ಮತ್ತಷ್ಟು ಕಷ್ಟವಾಗ್ತಿತ್ತು" ಎಂದು ತಾರಾ ಮೆಲುಕು ಹಾಕಿದ್ದಾರೆ.
ರಾರಾಜಿ ನಗರದಲ್ಲಿ ವೇಣು ಒಂದು ಫೋಟೊ ಸ್ಟುಡಿಯೋ ಇಟ್ಟುಕೊಂಡಿದ್ರು. ಅಲ್ಲೇ ಉಪ್ಪಿ ಸರ್, ವೇಣು, ದೇಸಾಯಿ ಸರ್ ಎಲ್ಲಾ ಭೇಟಿ ಆಗುತ್ತಿದ್ದರಂತೆ. ಅಲ್ಲಿ ಒಂದು ಲ್ಯಾಂಡ್ಲೈನ್ ಫೋನ್ ಇತ್ತು. ಅಲ್ಲಿಂದಲೇ ನಮ್ಮ ಮನೆಗೆ 3 ಮಿಸ್ ಕಾಲ್ ಕೊಡ್ತಿದ್ರು. 4ನೇ ಬಾರಿ ಕಾಲ್ ಮಾಡಿದಾಗ ನಾನು ರಿಸೀವ್ ಮಾಡ್ತಿದ್ದೆ. ಅದು ಕೋಡ್ ವರ್ಡ್ ಆಗಿತ್ತು. ಅಷ್ಟು ವರ್ಷಗಳಲ್ಲಿ ನಾವು ಎಲ್ಲಿಯೋ ಹೊರಗಡೆ ಭೇಟಿ ಸಹ ಮಾಡಿರಲಿಲ್ಲ. 'ಎ' ಚಿತ್ರದಲ್ಲಿ ವೇಣು ಛಾಯಾಗ್ರಾಹಕರಾಗಿದ್ರು. ಸ್ಟಿಲ್ ಫೋಟೊಗ್ರಾಫರ್ ಆಗಿದ್ದವರಿಗೆ ಸಿನಿಮಾ ಅವಕಾಶ ಕೊಟ್ಟಿದ್ದೆ ಉಪೇಂದ್ರ ಸರ್. ಅಷ್ಟರಲ್ಲಿ ನಮ್ಮ ಲವ್ ಬ್ರೇಕಪ್ ಆಗಿತ್ತು.. ಮನೆಯಲ್ಲಿ ವಿಷಯ ಗೊತ್ತಾಗಿ ಕಿರಿಕ್ ಆಗಿಬಿಟ್ಟಿತ್ತು ಎಂದು ತಾರಾ ಆ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ನಮ್ಮ ಮುಂದೆ ಸ್ಕೂಟರ್ನಲ್ಲಿ ವೇಣು ಓಡಾಡುತ್ತಿದ್ರು.. ನಾನು ಕಿಟಕಿಯಿಂದ ನೋಡ್ತಿದ್ದೆ.. ಅದು ಮನೆಯಲ್ಲಿ ಗೊತ್ತಾಗಿ ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ರು.. ಸಿದ್ದಾಪುರ ಪೊಲೀಸ್ ಸ್ಟೇಷನ್ನಲ್ಲಿ ವೇಣು ಅವ್ರನ್ನು ಒಂದು ದಿನ ಕೂರಿಸಿದ್ರು ಎಂದು ತಾರಾ ಹೇಳಿದ್ದಾರೆ. "ನಾನು ಆಗ ಇನ್ನು ಮೈನರ್ ಆಗಿದ್ದೆ. ಹಾಗಾಗಿ ದೊಡ್ಡ ಕೇಸ್ ಆಗುವ ಸಾಧ್ಯತೆ ಇತ್ತು. ವೇಣು ಸಹಪಾಠಿಗಳು ಸಮಸ್ಯೆಯಿಂದ ಬಿಡಿಸಿಕೊಂಡಿದ್ರು. ಬಳಿಕ ಕೆಲ ವರ್ಷ ನಮ್ಮಿಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ. ಅವ್ರು 'ಎ' ಸಿನ್ಮಾ ಕ್ಯಾಮರಾಮನ್ ಆಗಿದ್ದು ಗೊತ್ತಿಲ್ಲ. 'ಸ್ಪರ್ಶ' ಚಿತ್ರಕ್ಕೆ ಪ್ರಶಸ್ತಿ ಕೂಡ ಸಿಕ್ಕಿತ್ತು. ಆದ್ರೆ ನಾನು ಹೋಗುತ್ತಿದ್ದ ಕಾರ್ಯಕ್ರಮಕ್ಕೆ ಅವ್ರು ಅದೇ ರೀತಿ ಅವ್ರು ಇರ್ತಿದ್ದ ಕಾರ್ಯಕ್ರಮಕ್ಕೆ ನಾನು ಹೋಗದೇ ಮತ್ತೆ ಮುಖಾಮುಖಿ ಆಗಿರಲಿಲ್ಲ. 2004ರನಲ್ಲಿ 'ಈಶ' ಚಿತ್ರಕ್ಕೆ ನಾನು ಆಯ್ಕೆ ಆಗಿದ್ದೆ. ಆ ಚಿತ್ರಕ್ಕೆ ವೇಣು ಕ್ಯಾಮರಾಮನ್. ಅದೇ ಸಮಯದಲ್ಲಿ ಮತ್ತೆ ನಮ್ಮಿಬ್ಬರ ಭೇಟಿ ಆಗಿದ್ದು ಎಂದು ತಾರಾ ತಿಳಿಸಿದ್ದಾರೆ.
ಮೊದಲು ಎರಡ್ಮೂರು ದಿನ ವೇಣು ಮಾತನಾಡಿಸಲಿಲ್ಲ. 15 ದಿನಗಳ ಬಳಿಕ ನಾನೇ ಮಾತನಾಡಿಸಿದೆ. ಮದುವೆ ಆಯ್ತಾ, ಮಕ್ಕಳು ಇದ್ದಾರಾ ಎಂದು ಕೇಳ್ದೆ. ಇಲ್ಲ ಅಂದ್ರು.. ನೀವು ಮದುವೆ ಆಗಿದ್ದೀರಾ ಅಂತ ಕೇಳಿದ್ರು ಇಲ್ಲ ಅಂದೆ. ಹಾಗಿದ್ರೆ ನಾವಿಬ್ರು ಮದುವೆ ಆಗಿಬಿಡೋಣ್ವಾ ಅಂದ್ರು. ನಾನು ನಕ್ಕು ಸುಮ್ಮನಾಗಿದ್ದೆ. ಬಳಿಕ ಬಹಳ ಸೀರಿಯಸ್ ಆಗಿಯೇ ಕೇಳಿದ್ರು. ಅಷ್ಟು ಸೀರಿಯಸ್ ಅಂದ್ರೆ ನಿಮ್ಮ ಮನೆಯವರನ್ನು ಕರ್ಕೊಂಡ್ ಬಂದು ನಮ್ಮ ಮನೆಯಲ್ಲಿ ಕೇಳು ಎಂದೆ. ಸರಿ ಎಂದು ಒಮ್ಮೆ ಫೋನ್ ಮಾಡಿ ನಾಳೆ ನಮ್ಮ ಅಣ್ಣ, ಅತ್ತಿಗೆ, ಅಮ್ಮ ಎಲ್ಲರೂ ನಿಮ್ಮ ಮನೆಗೆ ಬರ್ತೀವಿ ಅಂದ್ರು. ನಾನು ಮನೆಯಲ್ಲಿ ಹೇಳಿರಲಿಲ್ಲ. ಧೈರ್ಯ ಮಾಡಿ ಅಪ್ಪನ ಬಳಿ ವಿಷಯ ಹೇಳಿದೆ, ಯಾರು ಅಂದ್ರು, ಅದೇ ಅಪ್ಪ ಒಬ್ಬ ಫೋಟೊಗ್ರಾಫರ್ ಇದ್ನಲ್ಲ, ಅವ್ನು ಎಂದು ಹೇಳ್ದೆ. ನಮ್ಮ ಮನೆಯಲ್ಲಿ ಯಾರೂ ಲವ್ ಮ್ಯಾರೇಜ್ ಆಗಿರಲಿಲ್ಲ, ಅಂತರ್ಜಾತಿಯ ವಿವಾಹಕ್ಕೆ ಒಪ್ಪುತ್ತಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಕರ್ಕೊಂಡ್ ಬರ್ಲಿ ನೋಡೋಣ, ಮಾತಾಡೋಣ ಅಂದ್ರು ಎಂದು ವೇಣು ಮನೆಗೆ ಬಂದ ದಿನದ ಬಗ್ಗೆ ಹೇಳಿದ್ದಾರೆ.
ಅವ್ರ ಫ್ಯಾಮಿಲಿ ಮನೆಗೆ ಬಂದ್ರು. ನಾನು, ವೇಣು ಹೋಗಿ ಪರ್ಸನಲ್ ಆಗಿ ಮಾತನಾಡಲಿಲ್ಲ. ನಮ್ಮ ಅಪ್ಪ ಹಾಗೂ ವೇಣು ಇಬ್ಬರೂ ಮಾತನಾಡಲು ಹೋದ್ರು. ಅರ್ಧ ಗಂಟೆ ಬಳಿಕ ಬಂದು ನಮ್ಮ ನಿರ್ಧಾರ ಹೇಳ್ತೀವಿ ಎಂದು ಹೇಳಿ ಕಳಿಸಿಬಿಟ್ರು. ಅದಾಗಿ ತಿಂಗಳಿಗೆ ಎಂಜೇಜ್ಮೆಂಟ್ ಆಯ್ತು. ಎರಡು ತಿಂಗಳಲ್ಲಿ ಮದುವೆ ಆಗಿಬಿಡ್ತು ಎಂದು ತಾರಾ ತಮ್ಮ ಲವ್ ಸ್ಟೋರಿ ವಿವರಿಸಿದ್ದಾರೆ.


Click it and Unblock the Notifications