"ನಾನು ಗರ್ಭಿಣಿ ಆಗಿದ್ದಾಗ್ಲೆ ಡಿವೋರ್ಸ್ ಆಯ್ತು.. ಆ ವ್ಯಕ್ತಿ ನನ್ನ ಮಗಳ ಮುಖ ನೋಡಿಲ್ಲ"; ವಾಣಿಶ್ರೀ
ಕನ್ನಡ ಚಿತ್ರನಟಿ, ಕಿರುತೆರೆ ನಟಿ ವಾಣಿಶ್ರೀ ಚಿರಪರಿಚಿತ ಹೆಸರು. ನಾಯಕಿಯಾಗಿ ಹೆಚ್ಚು ನಟಿಸದೇ ಇದ್ದರೂ ಪೋಷಕ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ದಿಗ್ಗಜ ಕಲಾವಿದರ ಜೊತೆ ತೆರೆಹಂಚಿಕೊಂಡವರು. 300ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವತ್ತಿಗೂ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
90ರ ದಶಕದಲ್ಲೇ ವಾಣಿಶ್ರೀ ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದರು. ದೂರದರ್ಶನದ ಧಾರಾವಾಹಿಗಳಲ್ಲಿ ನಟಿಸಿದ್ದರು. 'ಓಂ' ಚಿತ್ರದಲ್ಲಿ ಶಿವಣ್ಣನ ಸಹೋದರಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ಹೂಮಳೆ', 'ಸ್ವಸ್ತಿಕ್', ಸ್ಪರ್ಶ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಾಣಿಶ್ರೀ ಮಾತನಾಡಿದ್ದಾರೆ. ತಮ್ಮ ಬಣ್ಣದ ಬದುಕು ಹಾಗೂ ವೈಯಕ್ತಿಕ ಜೀವನದ ಬಗ್ಗೆ ವಿವರಿಸಿದ್ದಾರೆ.

ಪೋಷಕರ ನೋಡಿ ಮಾಡಿದ ಮದುವೆ ಜೀವನದಲ್ಲಿ ಸಮಸ್ಯೆ ಎದುರಾದಾಗ ಪತಿಯಿಂದ ದೂರಾಗಿ ಸ್ವತಂತ್ರವಾಗಿ ಮಗಳನ್ನು ಸಾಕಿ ಬೆಳೆಸಿದ್ದಾರೆ. ಈ ವಿಚಾರವನ್ನು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ. ಅದಾಗಲೇ ಒಂದು ಮದುವೆ ಆಗಿದ್ದರೂ ಸುಳ್ಳು ಹೇಳಿ ತಮ್ಮನ್ನು ಆ ವ್ಯಕ್ತಿ ಮದುವೆ ಆಗಿದ್ದರು ಎಂದು ತಿಳಿಸಿದ್ದಾರೆ. ನನ್ನ ಮಗಳಿಗೆ ಈಗ 21 ವರ್ಷ, ಈವರೆಗೆ ಆಕೆಯ ಮುಖವನ್ನು ನನ್ನ ಮಾಜಿ ಪತಿ ನೋಡಿಲ್ಲ ಎಂದು ವಾಣಿಶ್ರೀ ಹೇಳಿದ್ದಾರೆ.
ನಾನು ಯಾವುದಕ್ಕೂ ಜಗ್ಗಲ್ಲ. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಲ್ಲ. ನಾನಾಯ್ತು ನನ್ನ ಕೆಲಸ ಆಯಿತು ಅಂತ ಇರ್ತೀನಿ, ನಾನು ನನ್ನ ಮಗಳು ಖುಷಿ ಇಷ್ಟೇ ಜೀವನ ಎಂದು ವಾಣಿಶ್ರೀ ಹೇಳಿದ್ದಾರೆ. ಇಷ್ಟು ಧೈರ್ಯ, ಆತ್ಮಸ್ಥೈರ್ಯ ಹೇಗೆ ಬಂತು ಎನ್ನುವ ಪ್ರಶ್ನೆಗೆ ವಾಣಿಶ್ರೀ ತಮ್ಮ ಜೀವನ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಅಂತಹ ಸನ್ನಿವೇಶವೇ ನನ್ನನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡಿತು ಎಂದಿದ್ದಾರೆ.
"ನಾನು ಕೆಲಸ ಮಾಡಲು ಆರಂಭಿಸಿದ ದಿನದಿಂದಲೂ ಸ್ವತಂತ್ರ ಮಹಿಳೆಯಾಗಿದ್ದೇನೆ. ನಾನು ನನ್ನದೇ ಹಣದಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಿದೆ. ನಾನು ಯಾರೊಟ್ಟಿಗೂ ಪ್ರೀತಿಲಿ ಬಿದ್ದಿಲ್ಲ, ಓಡಿ ಹೋಗಲಿಲ್ಲ. ಅಫೇರ್ಸ್ ಇರಲಿಲ್ಲ. ನಾನು ಮದುವೆಯಾಗಿದ್ದ ವ್ಯಕ್ತಿಯಿಂದ ನನಗೆ ಪ್ರೀತಿ, ವಿಶ್ವಾಸ ಸಿಗಲಿಲ್ಲ. ನನಗೆ ಬಹಳ ನೋವಾಗಿತ್ತು. ನಾನು 5 ತಿಂಗಳ ಗರ್ಭಿಣಿ ಆಗಿದ್ದ ಸಮಯ ಅದು. ಆತನ ವಿರುದ್ಧ ನಾನ್ ಬೇಲಬಲ್ ವಾರಂಟ್ ಇತ್ತು. ನಮ್ಮ ಮದುವೆಗಿಂತ 2 ವರ್ಷದ ಹಿಂದೆ ಬೇರೊಬ್ಬಳ ಜೊತೆ ಆ ವ್ಯಕ್ತಿಗೆ ಮದುವೆ ಆಗಿದ್ದ ವಿಷಯ ಗೊತ್ತಾಯಿತು. ಅದೆಲ್ಲ ನನ್ನನ್ನು ಗಟ್ಟಿಗೊಳಿಸಿತು ಅನ್ನಿಸುತ್ತೆ" ಎಂದು ವಾಣಿಶ್ರೀ ಹೇಳಿದ್ದಾರೆ.
"ಮಗಳಿಗೆ ಆಗ 5 ತಿಂಗಳು. ನಾನು ಮನೆಬಿಟ್ಟು ಹೊರಗೆ ಬಂದೆ. ಯಾವುದೇ ಆಭರಣ, ಹಣ ಏನು ತೆಗೆದುಕೊಳ್ಳಲಿಲ್ಲ. ಏಕಾಏಕಿ ಮನೆಯಿಂದ ಹೊರ ಬಂದೆ. ಈವರೆಗೆ ಆ ವ್ಯಕ್ತಿ ನನ್ನ ಮಗಳು ಖುಷಿಯನ್ನು ನೋಡಿಲ್ಲ. ಒಮ್ಮೆ ರೆಸ್ಟೋರೆಂಟ್ಗೆ ಮಗಳನ್ನು ಕರೆದುಕೊಂಡು ಹೋಗಿದ್ದಾಗ ಅಲ್ಲಿ ಆ ವ್ಯಕ್ತಿಯನ್ನು ನೋಡಿದೆ. ಆಗ ಖುಷಿಗೆ 2ನೇ ತರಗತಿಗೆ ಹೋಗ್ತಿದ್ಲು. ನಿಮ್ಮ ಅಪ್ಪ ಅಲ್ಲಿದ್ದಾರೆ. ಬೇಕಿದ್ದರೆ ಹೋಗಿ ನೋಡು ಅಂದೆ. ಅವಳು ಹೋಗಿ ನೋಡಿ ಬಂದಳು. ಏನು ಹೇಳಲಿಲ್ಲ ಅಷ್ಟೇ" ಎಂದು ವಾಣಿಶ್ರೀ ತಿಳಿಸಿದ್ದಾರೆ.
ನಾನು ಆ ವ್ಯಕ್ತಿಯ ಹಿಂದೆ ಮುಂದೆ ಏನು ಕೇಳದೇ ಮದುವೆ ಆಗಿದ್ದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ನನ್ನದೊಂದು ಸಂದರ್ಶನ ನೋಡಿ ಆ ವ್ಯಕ್ತಿ ಮದುವೆ ಆಗುವಂತೆ ಮನೆಗೆ ಹುಡುಗಿ ಕೇಳಿಕೊಂಡು ಬಂದಿದ್ದರು. ಯಾವುದೇ ಜೀವನಾಂಶವನ್ನು ನಾನು ಕೇಳಲಿಲ್ಲ. ಆತ ಆಗ ಬ್ಯುಸಿನೆಸ್ ಮಾಡುತ್ತಿದ್ದರು. ಏನು ಜೀವನಾಂಶ ಕೊಡುತ್ತಾರೆ. ಅದಕ್ಕಾಗಿ ನಾನು ಹೋರಾಟ ಮಾಡಬೇಕಿತ್ತು. ಅದ್ಯಾವುದೂ ಬೇಡ ಎಂದು ಬಿಟ್ಟೆ ಎಂದು ವಾಣಿಶ್ರೀ ಆ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.


Click it and Unblock the Notifications











