Independence day 2024: ಭವ್ಯ ಭಾರತ ನಿರ್ಮಾಣಕ್ಕೆ ಒಗ್ಗಟ್ಟು ಎಂಬ ಸಿಮೆಂಟು ಬೇಕು..
ಆಗಸ್ಟ್ 15 ಅನ್ನು ಭಾರತೀಯರಾದ ನಾವು ಸ್ವಾತಂತ್ರ್ಯ ದಿವಸ ಅಂತ ಕರೆಯುವುದಕ್ಕಿಂತ ಹೆಚ್ಚಾಗಿ ಸ್ವಾತಂತ್ರೋತ್ಸವ ಎಂದೇ ಕರೆಯುತ್ತೇವೆ . ಭಾರತ ಹತ್ತಾರು ಧರ್ಮ ನೂರಾರು ಜಾತಿಗಳಿರುವ ಜಾತ್ಯತೀತ ದೇಶ. ಇಲ್ಲಿನ ಮನೆಗಳಲ್ಲಿ ಪ್ರತಿಯೊಂದು ಧರ್ಮದವರು ತಮ್ಮ ತಮ್ಮ ಹಬ್ಬಗಳನ್ನು ಪ್ರತ್ಯೇಕವಾಗಿ ಆಚರಿಸಿದರೂ ಒಟ್ಟಾಗಿ ಈ ನೆಲದಲ್ಲಿ ಆಚರಿಸುವುದು ಸ್ವಾತಂತ್ರ್ಯ ದಿನವನ್ನೇ .
ನಮ್ಮ ಊರ ಹಬ್ಬಗಳಿಗೆ, ನಾಡ ಹಬ್ಬಗಳ ಹಿಂದೆ ಇತಿಹಾಸವಿದ್ದರೆ ಈ ನಮ್ಮ ರಾಷ್ಟ್ರೀಯ ಹಬ್ಬದ ಹಿಂದೆ ದೊಡ್ಡ ಬಲಿದಾನವೇ ಇದೆ . 1947 ಆಗಸ್ಟ್ 15 ಭಾರತ ಆಂಗ್ಲರ ಅದೀನದಿಂದ ನಾವು ಅವರ ಗುಲಾಮಗಿರಿಯಿಂದ ಹೊರಬಂದ ದಿನ, ಇಂದಿಗೆ ಭರ್ತಿ 78 ವರ್ಷ.

ಭಾರತಕ್ಕೆ ಈ ಸ್ವಾತಂತ್ರ್ಯ ಸುಖಾ ಸುಮ್ಮನೆ ಬಂದದ್ದಲ್ಲ ಹಲವು ವರ್ಷಗಳು ಬಹಳಷ್ಟು ನಾಯಕರ ಸುದೀರ್ಘ ಹೋರಾಟ ಮತ್ತು ಬಲಿದಾನದ ಫಲಿತ . ಸಾಂಬಾರು ಪದಾರ್ಥಗಳು ಭಾರತದಲ್ಲಿ ಲಭ್ಯವೆಂದು ಅದರ ವ್ಯಾಪಾರಕ್ಕೆ ಬಂದ ಅಂಗ್ರೇಜಿಗಳು ಭಾರತದ ಅರಸೊತ್ತಿಗೆಯ ಲಗಾಮುಹಿಡಿದದ್ದು ಕ್ರಮೇಣ ಅಧಿಕಾರಕ್ಕೇರಿದ್ದು ನಮ್ಮವರ ಆಂತರಿಕ ಕಚ್ಚಾಟದಿಂದಲೆ ಹೊರತು ಅವರ ಸಾಹಸ ಧೈರ್ಯದಿಂದಲ್ಲ.
ಭಾರತೀಯರಲ್ಲಿ ಮೊದಲು ಸ್ವರಾಜ್ಯದ ಅರಿವು ಮೂಡಿಸಿದ್ದು ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮ, ಅಲ್ಲೂರಿ ಸೀತಾರಾಮನಂತ ಸ್ವಾಭಿಮಾನಿ ಸೇನಾನಿಗಳು . ವಿಪರ್ಯಾಸ ಏನೆಂದರೆ ಇವರ ಶೌರ್ಯ ತಂತ್ರ ಪರಂಗಿಯವರ ಕ್ರೌರ್ಯ ಕುತಂತ್ರದೆದರು ಮಾಸಿದ್ದು ಸುಳ್ಳಲ್ಲ.

ಸರಿಸುಮಾರು ಇನ್ನೂರು ವರ್ಷ ಬಿಳಿಯರ ಬಾವುಟದ ಕೆಳಗೆ ಗುಲಾಮಗಿರಿಯೆ ನಮ್ಮ ಅಸ್ಮಿತೆ ಎಂಬಂತೆ ಬದುಕುತಿದ್ದ ನಮ್ಮ ಸಂಕುಲಕ್ಕೆ ಮಂಗಲ್ ಪಾಂಡೆ ಎಂಬ ಸಿಪಾಯಿ ಹಚ್ಚಿದ ಕಿಡಿ ಮತ್ತೆ ದೇಶದಾದ್ಯಂತ ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗುವಂತೆ ಮಾಡಿತು. ಈ ಕಿಡಿ ಜ್ವಾಲೆಯಾಗಿ ಉರಿಯಲು ಹೆಚ್ಚು ಸಮಯ ಹಿಡಿಯಲಿಲ್ಲ ಲಜಪತ್ರಾಯ್, ಚಂದ್ರಶೇಖರ ಆಜಾದ್, ಬಿಪಿನ್ ಚಂದ್ರಪಾಲ್, ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್, ರಾಜ್ಗುರುರಂತಹ ಕಟ್ಟರ್ ದೇಶಭಕ್ತರು ತಮ್ಮನೆತ್ತರನ್ನೆ ತೈಲವಾಗಿಸಿ ಸ್ವಾತಂತ್ರ್ಯ ಜ್ಯೋತಿಯನ್ನ ಎತ್ತಿ ಹಿಡಿದರು.
ರಕ್ತಕ್ಕೆ ರಕ್ತ ಎಂಬ ಇವರ ಹೋರಾಟಕ್ಕೆ ಪರಂಗಿಗಳು ಪಟ್ಟ ಪಟ್ಟು ಎರಡು ಬಿಡದೆ ಸತಾಯಿಸುತ್ತಿದ್ದಾಗ. ಭಾರತೀಯರ ಪಾಲಿಗೆ ಅವಧೂತನಂತೆ ಬಂದವರೇ ಕರಮಚಂದ್ ಗಾಂಧಿ .ಶಾಂತಿ ಎಂಬ ಆಯುಧ ಹಿಡಿದು ಬ್ರಿಟಿಷರ ಎದುರು ಸಂಗ್ರಾಮಕ್ಕೆ ನಿಂತರು. ಈ ಮಹಾತ್ಮನ ಅಸಹಕಾರ ಚಳುವಳಿ, ದಂಡಿಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಹೀಗೆ ಹಲವು ಹರತಾಳುಗಳ ಮುಂದೆ ಬ್ರಿಟಿಷರು ಮಂಡಿಊರಲೇ ಬೇಕಾಯ್ತು ನಮ್ಮ ನೆಲ ನಮಗೆ ಬಿಟ್ಟುಕೊಡಲೇಬೇಕಾಯ್ತು. ಅದರ ಪರಿಣಾಮ ಭಾರತ ಸ್ವತಂತ್ರ ರಾಷ್ಟ್ರವಾಯಿತು.
ಒಗ್ಗಟ್ಟಿನ ಲೋಪದಿಂದ ಅಂದು ಸ್ವಾತಂತ್ರ್ಯ ಕೈ ತಪ್ಪಿತು ಪುನಃ ಅದು ನಮ್ಮ ಕೈ ಸೇರಲು ದೊಡ್ಡ ಮಟ್ಟದ ಹೋರಾಟ ಮಾಡಬೇಕಾಯ್ತು. ಮತ್ತದೇ ತಪ್ಪು ಯಾವತ್ತಿಗೂ ಆಗಬಾರದು ಎಲ್ಲರೂ ಒಗ್ಗಟ್ಟಿನಿಂದ ಸಹಬಾಳ್ವೆ ನಡೆಸಬೇಕು. ದೇಶದ ಜನ ಒಗ್ಗಟ್ಟಿನಿಂದ ಇದ್ದರೆ ಮಾತ್ರ ದೇಶ ಸದೃಢವಾಗಿರುತ್ತದೆ.


Click it and Unblock the Notifications











