ರಿಮೇಕ್ ರಾಜರು: ಇವರು ಕನ್ನಡದ ರಿಮೇಕ್ ಡೈರೆಕ್ಟರ್ ಗಳು
ರಿಮೇಕ್... ಬೇರೆ ಭಾಷೆಯಲ್ಲಿ ಬಂದ ಸಿನಿಮಾವನ್ನು ಮತ್ತೆ ನಿರ್ಮಾಣ ಮಾಡುವುದು. ಭಾಷೆ, ಕಲಾವಿದರು ಸೇರಿದಂತೆ ಸಣ್ಣ ಪುಟ್ಟ ಬದಲಾವಣೆಗಳ ಮೂಲಕ ಅದೇ ಕಥೆಯನ್ನು ಮತ್ತೆ ತೆರೆ ಮೇಲೆ ಹೇಳುವುದು.
ಕನ್ನಡದಲ್ಲಿ ಆಗಾಗ ರಿಮೇಕ್ ಸಿನಿಮಾಗಳು ಬರುತ್ತವೆ. ಕೆಲವು ಬಾರಿ ಅವುಗಳ ಪ್ರಮಾಣವೇ ಹೆಚ್ಚಾಗಿ ಬಿಡುತ್ತದೆ. ಒಂದು ಒಳ್ಳೆಯ ಕಥೆಯನ್ನು, ಒಳ್ಳೆಯ ಸಿನಿಮಾವನ್ನು ರಿಮೇಕ್ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಅನೇಕ ಬಾರಿ ಅರ್ಹತೆ ಇಲ್ಲದ ಸಿನಿಮಾಗಳೇ ರಿಮೇಕ್ ಆಗುತ್ತವೆ.
ಕನ್ನಡದ ಕೆಲವು ನಿರ್ದೇಶಕರು ರಿಮೇಕ್ ನಿರ್ದೇಶಕರು ಎಂದೇ ಗುರುತಿಸಿಕೊಂಡಿದ್ದಾರೆ. ಎಂ ಡಿ ಶ್ರೀಧರ್, ಕೆ ಮಾದೇಶ್, ಸಾಧು ಕೋಕಿಲ, ನಂದ ಕಿಶೋರ್, ಗುರು ದೇಶಪಾಂಡೆ, ಎಸ್ ನಾರಾಯಣ್ ರಿಮೇಕ್ ಸಿನಿಮಾಗಳನ್ನೇ ಹೆಚ್ಚಾಗಿ ಮಾಡುತ್ತಾರೆ. ನಟ ರವಿಚಂದ್ರನ್ ಹಾಗೂ ಸುದೀಪ್ ಕೂಡ ರಿಮೇಕ್ ಎಂಬ ಅಪವಾದದಿಂದ ಹೊರ ಬರಲು ಆಗಿಲ್ಲ.

ರಿಮೇಕ್ ರಾಜ ಕೆ ಮಾದೇಶ್
ನಿರ್ದೇಶಕ ಕೆ ಮಾದೇಶ್ ರಿಮೇಕ್ ರಾಜ ಎಂದೇ ಹೇಳಬಹುದು. ಅವರ ಮೊದಲ ಸಿನಿಮಾ 'ಗಜ'. ಈ ಸಿನಿಮಾ ತೆಲುಗಿನ 'ಭದ್ರ' ಸಿನಿಮಾದ ರಿಮೇಕ್. ಆ ನಂತರ ಬಂದ 'ರಾಮ್', 'ಬೃಂದಾವನ', 'ಪವರ್ ಸ್ಟಾರ್', 'ಹುಡುಗರು', 'ರಾಜ್ ವಿಷ್ಣು' ಎಲ್ಲ ಸಿನಿಮಾಗಳು ಕೂಡ ರಿಮೇಕ್ ಸಿನಿಮಾಗಳೇ. ರಿಮೇಕ್ ಮಾಡಿದರೂ, ತಮ್ಮ ಸ್ಟೈಲ್ ನಲ್ಲಿ ಮಾಡುತ್ತಿದ್ದ ಮಾದೇಶ್ ಗೆಲ್ಲುತ್ತಿದ್ದಾರೆ.

ಎಂ ಡಿ ಶ್ರೀಧರ್ ರಿಮೇಕ್ ಸಿನಿಮಾಗಳು
ನಿರ್ದೇಶಕ ಎಂ ಡಿ ಶ್ರೀಧರ್ ಕೂಡ ಹೆಚ್ಚು ರಿಮೇಕ್ ಸಿನಿಮಾಗಳ ಮೂಲವೇ ಗುರುತಿಸಿಕೊಂಡಿದ್ದಾರೆ. ಇದೀಗ ಅವರ 'ಒಡೆಯ' ಸಿನಿಮಾ ಕೂಡ 'ವೀರಂ' ಚಿತ್ರದ ರಿಮೇಕ್ ಆಗಿದೆ. ಈ ಹಿಂದೆ ಬಂದ 'ಪೋರ್ಕಿ', 'ಜಾಲಿ ಡೇಸ್', 'ಬುಲ್ ಬುಲ್', 'ಚೆಲ್ಲಾಟ' ಸಿನಿಮಾಗಳು ಬೇರೆ ಭಾಷೆಯ ರಿಮೇಕ್ ಸಿನಿಮಾಗಳು.

ರಿಮೇಕ್ ಚಿತ್ರಗಳಲ್ಲಿ ಮುಳುಗಿದ ಗುರು ದೇಶಪಾಂಡೆ
ಯಶ್ ನಟನೆಯ 'ರಾಜಾಹುಲಿ', 'ರುದ್ರತಾಂಡವ', 'ಜಾನ್ ಜಾನಿ ಜನಾರ್ಧನ್', 'ಸಂಹಾರ' ಇತ್ತೀಚಿಗೆ ಬಂದ 'ಪಡ್ಡೆಹುಲಿ' ಈ ಎಲ್ಲ ಸಿನಿಮಾಗಳು ಕೂಡ ಗುರು ದೇಶಪಾಂಡೆ ನಿರ್ದೇಶನದಲ್ಲಿ ಬಂದಿವೆ. ಆದರೆ, ಈ ಎಲ್ಲ ಸಿನಿಮಾಗಳು ಕೂಡ ರಿಮೇಕ್ ಆಗಿವೆ. ದಕ್ಷಿಣ ಭಾರತದ ಇತರ ಭಾಷೆಯ ಸಿನಿಮಾಗಳನ್ನು ಮತ್ತೆ ಕನ್ನಡಿಗರಿಗೆ ತೋರಿಸುವುದಲ್ಲಿ ಗುರು ದೇಶಪಾಂಡೆ ಎತ್ತಿದ ಕೈ.

ನಂದ ಕಿಶೋರ್ ರಿಮೇಕ್ ಗುಂಗು
ನಿರ್ದೇಶಕ ನಂದ ಕಿಶೋರ್ ಮೊದಲ ಸಿನಿಮಾ 'ವಿಕ್ಟರಿ'. 2013 ರಲ್ಲಿ ಬಂದ ಈ ಸಿನಿಮಾ ನಂತರ ತೆಲುಗಿಗೆ ರಿಮೇಕ್ ಆಗಿತ್ತು. ಆದರೆ, ಇತ್ತ ನಂದ ಕಿಶೋರ್ ತಾವೇ ರಿಮೇಕ್ ಮಾಡಲು ಶುರು ಮಾಡಿದರು. 'ಅಧ್ಯಕ್ಷ', 'ರನ್ನ', 'ಮುಕುಂದ ಮುರಾರಿ', 'ಬೃಹಸ್ಪತಿ' ಹೀಗೆ ಅವರ ರಿಮೇಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಯ್ತು. ಇದೀಗ ರಿಮೇಕ್ ಗುಂಗಿನಿಂದ ಆಚೆ ಬಂದು 'ಪೊಗರು' ಸಿನಿಮಾ ಮಾಡಿದ್ದಾರೆ.

ಸಾಧು ಕೋಕಿಲ ರಿಮೇಕ್ ಮಾಡಿದ್ದಾರೆ
ಹಾಸ್ಯ ನಟ ಸಾಧು ಕೋಕಿಲ ಸಂಗೀತ ನಿರ್ದೇಶಕ ಕೂಡ ಹೌದು. ಅದರ ಜೊತೆಗೆ ಆಗಾಗ ಸಿನಿಮಾವನ್ನು ಸಹ ನಿರ್ದೇಶನ ಮಾಡುತ್ತಾರೆ. ಅವರ ನಿರ್ದೇಶನದಲ್ಲಿ ಬಂದ 'ರಕ್ತ ಕಣ್ಣೀರು', 'ಅನಾಥರು', 'ಸೂಪರ್ ರಂಗ', 'ಶೌರ್ಯ', 'ಭಲೇ ಜೋಡಿ' ಹೀಗೆ ಅನೇಕ ಸಿನಿಮಾಗಳು ರಿಮೇಕ್ ಆಗಿವೆ. ಆದರೆ, 'ತೀರ್ಥ' ಎಂಬ ಸಿನಿಮಾಗೆ ಅವರೇ ಕಥೆ ಬರೆದಿದ್ದರು.

ಎಸ್ ನಾರಾಯಣ್ ರಿಗೆ ಇದೆ ರಿಮೇಕ್ ನೆರಳು
ಎಸ್ ನಾರಾಯಣ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ. ಎಷ್ಟೋ ಮರೆಯಲಾಗದ ಸಿನಿಮಾಗಳನ್ನ ಅವರು ನೀಡಿದ್ದಾರೆ. ಆದರೆ, ಎಸ್ ನಾರಾಯಣ್ ಮೇಲೆ ರಿಮೇಕ್ ಅಪವಾದ ಇದೆ. 'ರವಿಮಾಮ', 'ಸೂರ್ಯವಂಶ', 'ಸಿಂಹಾದ್ರಿಯ ಸಿಂಹ', 'ಗಲಾಟೆ ಅಳಿಯಂದ್ರು', 'ಮೌರ್ಯ' ಹೀಗೆ 12 ಹೆಚ್ಚು ರಿಮೇಕ್ ಸಿನಿಮಾ ಮಾಡಿದ್ದಾರೆ. ಇದರೊಂದಿಗೆ, ಅವರು ಸ್ವಂತಿಕೆ ಸಿನಿಮಾವನ್ನೂ ನೀಡಿದ್ದಾರೆ ಎನ್ನುವುದನ್ನು ಮರೆಯಲು ಹಾಗಿಲ್ಲ.

ರವಿಚಂದ್ರನ್ ಮತ್ತು ಸುದೀಪ್
ಈ ನಿರ್ದೇಶಕರ ಜೊತೆಗೆ ನಟ ರವಿಚಂದ್ರನ್ ಹಾಗೂ ಸುದೀಪ್ ನಿರ್ದೇಶನದ ಅನೇಕ ಸಿನಿಮಾಗಳು ಕೂಡ ಬೇರೆ ಭಾಷೆಯಿಂದ ಬಂದಿವೆ. ರವಿಚಂದ್ರನ್ 'ರಣಧೀರ', 'ಅಂಜದ ಗಂಡು', 'ಯುದ್ಧಕಾಂಡ' 'ಯುಗ ಪುರುಷ' ಸೇರಿದಂತೆ ಅನೇಕ ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ. ಸುದೀಪ್ 'ಮೈ ಆಟೋಗ್ರಾಫ್', 'ಶಾಂತಿ ನಿವಾಸ', 'ವೀರ ಮದಕರಿ', 'ಕೆಂಪೇಗೌಡ', 'ಮಾಣಿಕ್ಯ' ಸಿನಿಮಾಗಳನ್ನು ರಿಮೇಕ್ ಆಗಿವೆ.


Click it and Unblock the Notifications











