ಕನ್ನಡದ ಈ ಚಿತ್ರದಲ್ಲಿ ನಟಿಸಿದ್ದರು ಕಮಲ್ ಹಾಸನ್ಗೆ ಕ್ಲಾಸ್ ತೆಗೆದುಕೊಂಡ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ..!
ಕಮಲ್ ಹಾಸನ್ ಹಚ್ಚಿದ ಭಾಷಾ ಕಿಡಿಗೆ ಕನ್ನಡಿಗರ ಮನಸ್ಸು ಕಾಡುಬೇಗೆಯಂತೆ ಧಗಧಗಿಸುತ್ತಿದೆ. ಆಡಿದ ಮಾತುಗಳಿಗೆ ಕಮಲ್ ಹಾಸನ್ ಕೂಡಲೇ ಕ್ಷಮೆ ಕೇಳಬೇಕೆಂಬ ಕೂಗು ಅಷ್ಟದಿಕ್ಕುಗಳಿಂದ ಕೇಳಿ ಬರುತ್ತಿದೆ. ಆದರೆ ಕಮಲ್ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಬದಲಿಗೆ ತಾನಾಡಿದ್ದೇ ವೇದ ವಾಕ್ಯ ಎಂಬಂತೆ ದುರಂಹಕಾರದ ಪ್ರದರ್ಶನ ಮಾಡುತ್ತಿದ್ದಾರೆ. ಈ ಮೂಲಕ ಕನ್ನಡಿಗರ ಆಕ್ರೋಶವನ್ನು ಇನ್ನೂ ಹೆಚ್ಚಿಸುತ್ತಿದ್ದಾರೆ.
ಇಂಥಾ ಕಮಲ್ ಹಾಸನ್ ಗೆ ನಿನ್ನೆ ಹೈಕೋರ್ಟ್ನ ನ್ಯಾಯಮೂರ್ತಿ ನಾಗಪ್ರಸನ್ನ ಕೂಡ ಉಗಿದು ಉಪ್ಪಾಕಿದ್ದಾರೆ. ಕಮಲ್ ಹಾಸನ್ ಅವರೇನು ಭಾಷಾ ತಜ್ಞರೇ.. ಇತಿಹಾಸಕಾರರೇ.. ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ಕ್ಷಮೆಯಿಂದ ಎಲ್ಲಾ ಸಮಸ್ಯೆ ಮುಗಿದು ಹೋಗುತ್ತಿತ್ತು, ಯಾವುದೇ ನಾಗರೀಕರಿಗೆ ಭಾವನೆಗಳಿಗೆ ನೋವುಂಟು ಮಾಡುವ ಹಕ್ಕು ಇಲ್ಲ ಎಂದು ಖಂಡತುಂಡವಾಗಿ ಹೇಳಿದ್ಧಾರೆ.

ಜಲ, ನೆಲ, ಭಾಷೆ ಈ ಮೂರು ವಿಷಯಗಳು ಪ್ರತಿಯೊಬ್ಬ ನಾಗರೀಕನಿಗೂ ಮುಖ್ಯ. ಪಬ್ಲಿಕ್ ಫಿಗರ್ ಆಗಿದ್ದವರು ಇಂತಹ ಹೇಳಿಕೆ ಕೊಟ್ಟರೆ ಹೇಗೆ. ಯಾವುದೇ ಭಾಷೆ ಇನ್ನೊಂದು ಭಾಷೆಯಿಂದ ಹುಟ್ಟಿಲ್ಲ. ಅದಕ್ಕೆ ಸಾಕ್ಷಿ ಎಲ್ಲಿದೆ ? ಎಂದು ಪ್ರಶ್ನೆ ಕೇಳಿದ್ದಾರೆ. ಇದರಿಂದಲೇ ಸಾಮರಸ್ಯ ಹಾಳಾಗಿದೆ. ಕರ್ನಾಟಕದ ಜನತೆ ಏನು ಕೇಳಿದ್ದಾರೆ? ಕೇವಲ ಕ್ಷಮೆ ಅಲ್ಲವೇ? ಎಂದು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪ್ರಶ್ನೆ ಮಾಡಿದ್ದಾರೆ. ನಿಮ್ಮ ತಪ್ಪಿಗೆ ಪೊಲೀಸರು ಯಾಕೆ ಹೊಣೆ ಹೊರಬೇಕು ಎಂದು ಕೂಡ ಕೇಳಿದ್ದಾರೆ.
ಹೀಗೆ ಕನ್ನಡದ ಪರವಾಗಿ ಕನ್ನಡಿಗರ ಪರವಾಗಿ ಕಮಲ್ ಹಾಸನ್ಗೆ ಕ್ಲಾಸ್ ತೆಗೆದುಕೊಂಡ ನ್ಯಾಯಮೂರ್ತಿ ನಾಗಪ್ರಸನ್ನ ಹಿಂದೊಮ್ಮೆ ಕನ್ನಡದ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ ಎನ್ನುವ ವಿಚಾರ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.
ಹೌದು, ಅಚ್ಚರಿಯಾದರು ಇದು ನಿಜಾ. 27 ವರ್ಷಗಳ ಹಿಂದೆ 'ಹೂ ಮಳೆ' ಚಿತ್ರ ಬಂದಿತ್ತು. ರಮೇಶ್ ಅರವಿಂದ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಇಷ್ಟೇ ಅಲ್ಲ ಚಿತ್ರಕಥೆ ಕೂಡ ರಮೇಶ್ ಅರವಿಂದ್ ಅವರದ್ದೇ ಆಗಿತ್ತು.
ನಾಗ್ತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು. ರಮೇಶ್ ಅರವಿಂದ್ ಅವರ ಅಭಿನಯಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ಇಳಯರಾಜಾ ಸಂಗೀತ ನಿರ್ದೇಶನದಲ್ಲಿ ಬಂದ ಈ ಚಿತ್ರದ ಶೀರ್ಷಿಕೆ ಗೀತೆಗೆ ಡಾ.ರಾಜ್ ಕುಮಾರ್ ತಮ್ಮ ಚಿನ್ನದ ಕಂಠ ಕುಣಿಸಿದ್ದರು.
ಸುಮನ್ ನಗರ್ಕರ್ ನಾಯಕಿ ಪಾತ್ರವನ್ನು ನಿರ್ವಹಿಸಿದ್ದರು. ದತ್ತಣ್ಣ, ಹಿರಿಯ ನಟಿ ಬಿ ವಿ ರಾಧಾ ಕೂಡ ಇದ್ದರು. ವಿಶೇಷ ಅಂದರೆ ಇದೇ ಚಿತ್ರದಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಕೂಡ ಬಣ್ಣ ಹಚ್ಚಿದ್ದರು. ನಾಯಕನ ತಂಗಿಯ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನುಳಿದಂತೆ ಸದ್ಯ ನ್ಯಾಯಾಲಯ ಕ್ಷಮೆ ಕೇಳುವಂತೆ ತಾಕೀತು ಮಾಡಿದ್ದರೂ ಕೂಡ ಕಮಲ್ ಹಾಸನ್ ಕ್ಷಮೆಯನ್ನು ಕೇಳಿಲ್ಲ. ಬದಲಿಗೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಮಾಡದಿರಲು ನಿರ್ಧಾರ ಮಾಡಿದ್ಧಾರೆ.ಮತ್ತೊಂದು ಕಡೆ ನಿನ್ನೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಕರ್ನಾಟಕ ಫಿಲ್ಮ್ ಚೇಂಬರ್ ಜೊತೆ ಕಮಲ್ ಹಾಸನ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳದ ಹೊರತು 'ಥಗ್ ಲೈಫ್' ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಒತ್ತಾಯ ಮಾಡುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಈ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದ್ದಾರೆ.


Click it and Unblock the Notifications











