'ವಿಕ್ರಾಂತ್ ರೋಣ' ಚಿತ್ರದಿಂದ ನಿರ್ಮಾಪಕರಿಗೆ ನಷ್ಟವಾಗಿತ್ತಾ? ಯಾಕೀ ಗೊಂದಲ?
ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಬಂದ ಟೀಸರ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸೆಪ್ಟೆಂಬರ್ನಲ್ಲಿ ಸಿನಿಮಾ ರಿಲೀಸ್ ಎನ್ನಲಾಗುತ್ತಿದೆ. ಸುದೀಪ್ ನಟನೆಯ ಸಿನಿಮಾ ಬಂದೋಗಿ 2 ವರ್ಷವಾಯಿತು.
ಅಭಿಮಾನಿಗಳು ಮತ್ತೆ ತೆರೆಮೇಲೆ ಕಿಚ್ಚನನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಕೊನೆಯದಾಗಿ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಕಿಚ್ಚ ಅಬ್ಬರಿಸಿದ್ದರು. ಅನೂಪ್ ಭಂಡಾರಿ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ 2022ರ ಜುಲೈ 28ಕ್ಕೆ ತೆರೆಗೆ ಬಂದಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಅಂದರೆ ಸಿನಿಮಾ ತೆರೆಕಂಡು 2 ವರ್ಷ ಕಂಪ್ಲೀಟ್ ಆಗಿದೆ.

ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್ ಹಾಗೂ ಇನ್ವಿನೊ ಆರಿಜಿನ್ ಸಂಸ್ಥೆಗಳು ಜಂಟಿಯಾಗಿ ಚಿತ್ರವನ್ನು ನಿರ್ಮಿಸಿದ್ದವು. ಶಾಲಿನಿ ಮಂಜುನಾಥ್, ಜಾಕ್ ಮಂಜು ಹಾಗೂ ಅಲಂಕಾರ್ ಪಾಂಡಿಯನ್ ಚಿತ್ರಕ್ಕೆ ಹಣ ಹೂಡಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ತ್ರೀಡಿಯಲ್ಲೂ ಸಿನಿಮಾ ತೆರೆಗಪ್ಪಳಿಸಿತ್ತು. ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿತ್ತು.
'ವಿಕ್ರಾಂತ್ ರೋಣ' ಸಿನಿಮಾ ವಿಶ್ವದಾದ್ಯಂತ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಆದರೆ ನಿರ್ಮಾಪಕರಿಗೆ ಸಿನಿಮಾ ನಷ್ಟ ತಂದೊಡಿತ್ತು ಎನ್ನುವುದು ಗಾಂಧಿನಗರದ ಪಂಡಿತರ ಲೆಕ್ಕಾಚಾರ. ಕೊರೊನಾ ಸಂಕಷ್ಟ ಸಮಯದಲ್ಲಿ ಹೈದರಾಬಾದ್ ಅನ್ನಪೂರ್ಣ ಸ್ಟುಡಿಯೋದಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿತ್ತು. ದೊಡ್ಡಮಟ್ಟದಲ್ಲಿ ಕಾಡಿನ ಸೆಟ್ ಹಾಕಿ ಚಿತ್ರವನ್ನು ಸೆರೆ ಹಿಡಿದಿದ್ದರು.

ಸಿನಿಮಾ 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡವೇ ಘೋಷಿಸಿತ್ತು. ಆದರೂ ಚಿತ್ರದಿಂದ ನಿರ್ಮಾಪಕರಿಗೆ ನಷ್ಟವಾಗಿದೆ ಎನ್ನುವ ಆರೋಪ ಕೇಳಿಬಂದು ಭಾರೀ ಗೊಂದಲ ಮೂಡಿತ್ತು. ನಿರ್ಮಾಪಕ ಜಾಕ್ ಮಂಜುಗೆ 'ವಿಕ್ರಾಂತ್ ರೋಣ' ನಷ್ಟವಾಗಿತ್ತಂತೆ ಅವರು ನನಗೆ ಕರೆ ಮಾಡಿ ಹೇಳಿಕೊಂಡಿದ್ದರು ಎಂದು ನಿರ್ಮಾಪಕ ರೆಹಮಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಅದೆಲ್ಲಾ ಸುಳ್ಳು ಎಂದು ಜಾಕ್ ಮಂಜು ನಿರ್ಮಾಪಕರ ಸಂಘಕ್ಕೆ ಪತ್ರ ಬರೆದಿದ್ದರು. ಸುದೀರ್ಘ ಪತ್ರದಲ್ಲಿ ಜಾಕ್ ಮಂಜು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.
"ನನಗೆ ಸುದೀಪ್ ನಾಯಕತ್ವದ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ'ದಿಂದ ಯಾವುದೇ ನಷ್ಟವಾಗಿಲ್ಲ. ತನ್ನ ಕೋಟಿಗಟ್ಟಲೇ ಸಂಭಾವನೆ ಪಡೆಯದೇ ಸುದೀಪ್ ಎಂದಿನಂತೆ ನನ್ನ ಕೈ ಹಿಡಿದಿದ್ದಾರೆ. ಅದಿರಲಿ, ಅದು ನಮ್ಮ ಮನೆಯ ಸಹೋದರರ ವಿಷಯ" ಎಂದು ಜಾಕ್ ಮಂಜು ಪತ್ರದಲ್ಲಿ ತಿಳಿಸಿದ್ದರು.
ರೆಹಮಾನ್ ಅವರು ಹೇಳುತ್ತಿರುವುದು ಹಾಸ್ಯಾಸ್ಪದ. ಇದು ನನ್ನ ಸಹೋದರರಾದ ಸುದೀಪ್ ಮತ್ತು ನನ್ನ ನಡುವೆ ತಂದಿಟ್ಟು ಅಣ್ಣ-ತಮ್ಮಂದಿರನ್ನು ಮತ್ತು ಅವರ ಅಭಿಮಾನಿಗಳನ್ನು ನನ್ನಿಂದ ದೂರ ಮಾಡುವ ಕುತಂತ್ರ ಅಲ್ಲವೇ? ಇದಕ್ಕೇ ಹೇಳಿದ್ದು ಶ್ರೀಯುತರಾದ ಸುದೀಪ್ ಅವರು ಪ್ರತಿಕ್ರಿಯಿಸಲು ಯೋಗ್ಯವಾದರೆ ಮಾತ್ರ ಉತ್ತರಿಸುತ್ತಾರೆಂದು. ನನ್ನ ಎಲ್ಲ ಕಷ್ಟ-ನಷ್ಟ ಹೇಳಿಕೊಳ್ಳಲು ಹಿತೈಷಿಗಳಿದ್ದಾರೆ. ನಿರ್ಮಾಪಕರ ಸಂಘದ ಖಾವಂದರುಗಳಾದ ತಾವಿದ್ದೀರಿ. ಎಲ್ಲ ಬಿಟ್ಟು, ರೆಹಮಾನ್ರಿಗೆ ಕರೆ ಮಾಡಿದೆನೇ? ನಾನೇ ನನ್ನ ಕೈಯಾರೆ, ಆಸ್ಪತ್ರೆ, ಮನೆ ಮುಂತಾದ ತುರ್ತು ಪರಿಸ್ಥಿತಿಗಳಲ್ಲಿ ಸುದೀಪ್ ಅವರು ನೀಡಿದ ಸಹಾಯವನ್ನು ರೆಹಮಾನ್ರಿಗೆ ತಲುಪಿಸಿ ಜೀವಂತ ಸಾಕ್ಷಿಯಾಗಿದ್ದೇನೆ" ಎಂದು ಬರೆದಿದ್ದರು.
'ವಿಕ್ರಾಂತ್ ರೋಣ' ಭಾರೀ ಬಜೆಟ್ ಸಿನಿಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ಕೆಲವೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು ಡಿಜಿಟಲ್ ರೈಟ್ಸ್, ಆಡಿಯೋ ರೈಟ್ಸ್ ಕೂಡ ಒಳ್ಳೆ ಮೊತ್ತಕ್ಕೆ ಮಾರಾಟವಾಗಿತ್ತು. ಓಟಿಟಿಯಲ್ಲಿ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು ಆದರೂ ಸಿನಿಮಾದಿಂದ ನಷ್ಟವಾಯಿತು ಎನ್ನುವ ಗೊಂದಲ ಯಾಕೆ ಸೃಷ್ಟಿಯಾಯಿತು? ಎನ್ನುವುದು ಗೊತ್ತಿಲ್ಲ. ಆದರೆ ಜಾಕ್ ಮಂಜು ಇತ್ತೀಚೆಗೆ ನಟ ಸುದೀಪ್ ಜೊತೆ ಅಂತರ ಕಾಯ್ದುಕೊಂಡಿದ್ದಾರೆ.


Click it and Unblock the Notifications











