ಲಾಭಕ್ಕೆ ಎಲ್ರೂ ಬರ್ತಿದ್ರು, ನಷ್ಟಕ್ಕೆ ಯಾರೂ ಬರಲಿಲ್ಲ: ಸೋತು ಗೆದ್ದ ರಿಷಬ್ ಕಥೆ
ಕೋರಮಂಗಲ, ವಿಲ್ಸನ್ ಗಾರ್ಡನ್ ಸುತ್ತ ಮುತ್ತ ಏರಿಯಾದಲ್ಲಿ ಮಿನರಲ್ ವಾಟರ್ ಬಿಸಿನೆಸ್ ಮಾಡ್ತಿದ್ದ ರಿಷಬ್ ಶೆಟ್ಟಿ ಈಗ ಕನ್ನಡದ ಸ್ಟಾರ್ ನಿರ್ದೇಶಕ ಮತ್ತು ನಟ. ರಿಷಬ್ ನಿರ್ದೇಶಿಸಿ, ನಿರ್ಮಿಸಿದ 'ಸರ್ಕಾರಿ ಹಿ ಪ್ರಾ ಶಾಲೆ ಕಾಸರಗೋಡು' ಸಿನಿಮಾ ಅತ್ಯುತ್ತಮ ಮಕ್ಕಳ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ಎಲ್ಲರಿಗೂ ತಿಳಿದಿರುವಂತೆ ರಿಷಬ್ ಶೆಟ್ಟಿ ಅವರ ಹೆಸರು. ಆದರೆ, ಹುಟ್ಟಿದಾಗ ಮನೆಯಲ್ಲಿ ಇಟ್ಟ ಹೆಸರು ಪ್ರಶಾಂತ್ ಶೆಟ್ಟಿ. ಕುಂದಾಪುರ ತಾಲ್ಲೂಕಿನ ಕೊಡಚಾದ್ರಿ ಬೆಟ್ಟದ ಪಕ್ಕ ಕೆರಾಡಿ ಊರಿನವರು. ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಏನೂ ಇರಲಿಲ್ಲ. ಬಡ್ಡಿ ಕಟ್ಟಲು ಪರದಾಡಬೇಕಿದ್ದ ದುಸ್ಥಿತಿ ಕಂಡವರು. ತರ್ಲೆ, ತಲೆ ಹರಟೆ ಮಾಡಿಕೊಂಡು ಬೆಳೆದ ರಿಷಬ್ ಶೆಟ್ಟಿಗೆ ಡಾ ರಾಜ್ ಕುಮಾರ್ ಮೊದಲ ಸ್ಫೂರ್ತಿ.
ಉಪೇಂದ್ರ ನಿರ್ದೇಶನ, ನಟನೆಯ ಕ್ರೇಜ್ ಬಗ್ಗೆ ಊರಿನವರು ಹೇಳಿ ಹೇಳಿ ತಿಳಿದುಕೊಂಡಿದ್ದರು. ಅಲ್ಲಿಂದ ಉಪ್ಪಿ ಹೆಸರು ಕೇಳಿದ್ರೆ ನಿದ್ದೆಯಲ್ಲು ಎದ್ದು ಕುಳಿತುಕೊಳ್ಳುವ ಮಟ್ಟಕ್ಕೆ ಪ್ರಭಾವಿತನಾಗಿದ್ದರು. ಅವರಂತೆ ಆಗ್ಬೇಕು ಹಠ ಮನಸ್ಸಿಲ್ಲಿ ಉಳಿದುಕೊಂಡಿತ್ತು. ಬೆಂಗಳೂರಿನಲ್ಲಿ ಮಿನರಲ್ ವಾಟರ್ ಬಿಸಿನೆಸ್ ಜೊತೆ ಜೊತೆಗೆ ಡಿಪ್ಲೋಮಾ ಕೋರ್ಸ್ (ಫಿಲ್ಮ್ ಮೇಕಿಂಗ್) ಮಾಡಿದರು.

ಸಹಾಯಕ ನಿರ್ದೇಶಕರಾಗಿ ಕೆಲಸ ಆರಂಭಿಸಿದ್ದರು
ಪರಿಚಯಸ್ಥರ ಮೂಲಕ ಎಎಂಆರ್ ರಮೇಶ್ ಅವರನ್ನು ಭೇಟಿ ಮಾಡಿ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡರು. ಆಗ ರಮೇಶ್ 'ಸೈನೈಡ್' ಸಿನಿಮಾ ನಿರ್ದೇಶಿಸುತ್ತಿದ್ದರು. ನಂತರ ಜಾಕ್ ಮಂಜು ಅವರ ಮೂಲಕ ರವಿ ಶ್ರೀವತ್ಸ ಜೊತೆ ಸೇರಿದರು. ರವಿ ಶ್ರೀವತ್ಸ 'ಗಂಡ ಹೆಂಡತಿ' ಸಿನಿಮಾ ಮಾಡ್ತಿದ್ದರು. ಈ ಸೆಟ್ನಲ್ಲಿ ಕ್ಲಾಪ್ ಬಾಯ್ ಆಗಿ ರಿಷಬ್ ಕೆಲಸ ಮಾಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ರವಿ ಶ್ರೀವತ್ಸ ನನ್ನ ತಲೆಗೆ ಹೊಡೆದಿದ್ದರು ಎಂದು ಅನುಶ್ರೀ ಯೂಟ್ಯೂಬ್ ಚಾನಲ್ಗೆ ನೀಡಿರುವ ಸಂರ್ದಶನದಲ್ಲಿ ರಿಷಬ್ ನೆನಪಿಸಿಕೊಂಡಿದ್ದಾರೆ.

ಹೀರೋ ಆಗಿ ಆಯ್ಕೆಯಾದ ಚಿತ್ರಗಳು ಆರಂಭವೇ ಆಗಲಿಲ್ಲ
ರಿಷಬ್ ಚಿತ್ರರಂಗಕ್ಕೆ ಬಂದಾಗ ಹೀರೋ ಆಗ್ಬೇಕು ಎಂಬ ಆಸೆ ಹೊಂದಿದ್ದರು. ಈ ಆರು ವರ್ಷದ ಅಂತರದಲ್ಲಿ ಸುಮಾರು ಆರೇಳು ಚಿತ್ರಗಳಲ್ಲಿ ರಿಷಬ್ ನಾಯಕನಾಗಿ ಆಯ್ಕೆಯಾಗಿದ್ದರು. ಒಂದಲ್ಲ ಒಂದು ಕಾರಣಕ್ಕೆ ಆ ಸಿನಿಮಾಗಳು ಆರಂಭವಾಗುತ್ತಲೇ ಇರಲಿಲ್ಲ.

ಸೋತಾಗ ಎಲ್ಲರೂ ಟೀಕಿಸಿದರು
ಒಂದು ಕಡೆ ಸಿನಿಮಾ ರಂಗದಲ್ಲಿ ಒಳ್ಳೆಯ ಸಮಯ ಸಿಕ್ತಿಲ್ಲ, ಈ ಕಡೆ ವಾಟರ್ ಬಿಸಿನೆಸ್ ಅಲ್ಲಿಗೆ ನಿಂತಿದೆ. ಆಗ ಒಂದು ದೊಡ್ಡದೊಂದು ಬಂಡವಾಳ ಸಿದ್ದ ಮಾಡಿ ಹೋಟೆಲ್ ಬಿಸಿನೆಸ್ ಶುರು ಮಾಡಿದರು. ಆದರೆ, ಅದು ಅಂದುಕೊಂಡಂತೆ ಆಗಲಿಲ್ಲ. ಪೂರ್ತಿ ನಷ್ಟ ಅನುಭವಿಸಬೇಕಾಯಿತು. ಇದಾದ ಬಳಿಕ ಬಹಳಷ್ಟು ಟೀಕೆಗಳು, ಮಾತುಗಳನ್ನು ಕೇಳಬೇಕಾಯಿತು. ಸಿನಿಮಾದಲ್ಲಿ ದುಡ್ಡು ಹಾಕಿ ಕಳೆದುಕೊಂಡು ಬಿಟ್ಟ ಅಂತ ಮಾತಾಡಿದ್ರು. ಬಹಳ ಕೆಟ್ಟದಾಗಿ ನಡೆಸಿಕೊಂಡಿರುವುದು ಇದೆ.

ಸ್ನೇಹಿತರು ಫೋನ್ ರಿಸೀವ್ ಮಾಡ್ತಿಲ್ಲ
ಆ ಸಮಯದಲ್ಲಿ ಫೋನ್ ಮಾಡಿದರೂ ರಿಸೀವ್ ಮಾಡದಿರುವ ಸ್ನೇಹಿತರಿದ್ದರು. ಆಮೇಲೆ ಅವರೇ ಫೋನ್ ಮಾಡಿರುವ ಉದಾಹರಣೆಗಳಿವೆ. ಸಂಬಂಧಿಕರ ಬಳಿಯೇ ಬಡ್ಡಿಗೆ ಹಣ ತೆಗೆದುಕೊಳ್ಳಬೇಕಾಯಿತು. ಆ ಬಡ್ಡಿ ಕಟ್ಟಲಾಗದೇ ಮತ್ತೊಬ್ಬರ ಬಳಿ ಬಡ್ಡಿಗೆ ಹಣ ತಂದುಕೊಡಬೇಕಾದ ಸ್ಥಿತಿ. ಸುಮಾರು ಆರೇಳು ವರ್ಷ ಹೀಗೆ ಬಡ್ಡಿಯಲ್ಲೆ ಜೀವನ ಮಾಡಿರುವ ಬಗ್ಗೆ ನೋವು ಹಂಚಿಕೊಂಡಿದ್ದಾರೆ.

ಸೋತಾಗ ಕುಗ್ಗಬಾರದು
ಸೋತಾಗ ಲೈಫ್ ಮುಗಿತು ಎಂದುಕೊಳ್ಳಬಾರದು. ಸಮಯ ಎಲ್ಲದಕ್ಕೂ ಉತ್ತರಿಸಿತ್ತು. ಸಮಯಕ್ಕಾಗಿ ಕಾಯಬೇಕು. ನಾವು ಮಾಡುವ ಕೆಲಸ ನಿಲ್ಲಿಸಬಾರದು ಎಂದು ಮುನ್ನುಗ್ಗಿರುವ ವ್ಯಕ್ತಿ ರಿಷಬ್. ಧಾರಾವಾಹಿಯಲ್ಲಿ ಕೆಲಸ ಮಾಡಿದ್ದಾರೆ, ನಿರ್ಮಾಪಕರ ಬಳಿ ಡ್ರೈವರ್ ಆಗಿ, ಹೋಟಲ್ ಕೆಲಸ, ಹೋಟೆಲ್ ಮಾಲಿಕ, ಸೇಲ್ಸ್ಮನ್ ಕೆಲಸನೂ ಮಾಡಿದ್ದಾರೆ.

ಹೆಸರು ಬದಲಿಸಿದ ಮೇಲೆ ಅದೃಷ್ಟ
ಸಂಖ್ಯಾಶಾಸ್ತ್ರದ ಪ್ರಕಾರ ಪ್ರಶಾಂತ್ ಶೆಟ್ಟಿ ಹೆಸರು ಬದಲಿಸಿದರೆ ಮಾಡುವ ಕೆಲಸದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ಭಾವನೆ ಬಂದ ಮೇಲೆ, ತಂದೆಯವರ ಸಲಹೆಯಂತೆ ರಿಷಬ್ ಶೆಟ್ಟಿ ಎಂದು ಮರುನಾಮಕರಣ ಮಾಡಿಕೊಂಡರಂತೆ. ಅದಾದ ಮೇಲೆ ನಿರ್ದೇಶಕ ಅರವಿಂದ್ ಕೌಶಿಕ್ ಪರಿಚಯ ಆಯ್ತು. ಅದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಪರಿಚಯವೂ ಆಯಿತು. ಸ್ವಲ್ಪ ದಿನಗಳ ಬಳಿಕ ತುಘ್ಲಕ್ ಸಿನಿಮಾ ಶುರುವಾಯಿತು.


Click it and Unblock the Notifications











