ಅಪ್ಪು ಸಿಕ್ಸ್ಪ್ಯಾಕ್ ನೋಡಿ ಹುಬ್ಬೇರಿಸಿದ ಫ್ಯಾನ್ಸ್; ಫೋಟೊ ವೈರಲ್
ಪುನೀತ್ ರಾಜ್ಕುಮಾರ್ ಫಿಟ್ನೆಸ್ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಸದ್ಯ ಅಪ್ಪು ಸಿಕ್ಸ್ಪ್ಯಾಕ್ ತೋರಿಸುತ್ತ ಕ್ಲಿಕ್ಕಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. ಈ ಫೋಟೊ ಯಾವುದು? ಯಾವಾಗ ಕ್ಲಿಕ್ಕಿಸಿದ್ದು ಎಂದು ಹುಡುಕಾಡುತ್ತಿದ್ದಾರೆ. ಅಪ್ಪು ಶರ್ಟ್ಲೆಸ್ ಆಗಿ ಹುರಿಗಟ್ಟಿದ ದೇಹವನ್ನು ಪ್ರದರ್ಶಿಸಿರುವುದು ನೋಡಬಹುದು.
ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್. ಸದಾ ಲವಲವಿಕೆಯಿಂದ ಇರುತ್ತಿದ್ದ ಅಪ್ಪು ವರ್ಕೌಟ್ ಮಾತ್ರ ಎಂದು ಮಿಸ್ ಮಾಡುತ್ತಿರಲಿಲ್ಲ. ಲಾಕ್ಡೌನ್ ಸಮಯದಲ್ಲೂ ವರ್ಕೌಟ್ ಮಾಡುತ್ತಾ ಎಲ್ಲರನ್ನು ಪ್ರೇರೇಪಿಸಿದ್ದರು. ಇಷ್ಟೊಂದು ಫಿಟ್ನೆಸ್ ಫ್ರೀಕ್ ಆಗಿದ್ದ ಅಪ್ಪು ಹೃದಯಾಘಾತದಿಂದ ನಿಧನರಾಗಿದ್ದನ್ನು ಇಂದಿಗೂ ಅಭಿಮಾನಿಗಳಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬಾಡಿ ಬಿಲ್ಡಿಂಗ್, ಸಿಕ್ಸ್ಪ್ಯಾಕ್ ಮಾಡುವುದರಿಂದ ಪುನೀತ್ ರಾಜ್ಕುಮಾರ್ ಅವರಿಗೆ ಅಪಾರ ಆಸಕ್ತಿ ಇತ್ತು. ಚಿಕ್ಕಂದಿನಿಂದಲೂ ಭೋಜನಪ್ರಿಯರಾಗಿದ್ದ ಪುನೀತ್ ಹೀರೊ ಆಗಿ ಚಿತ್ರರಂಗಕ್ಕೆ ಬಂದಮೇಲೆ ತಿಂದಿದ್ದನ್ನು ಕರಗಿಸಬೇಕು ಎಂದು ಹಠ ಹಿಡಿಯುತ್ತಿದ್ದರು. 'ದುನಿಯಾ' ಸಿನಿಮಾ ನೋಡಿ ಸೂರಿ ಜೊತೆ ಸಿನಿಮಾ ಮಾಡಲು ಮನಸ್ಸು ಮಾಡಿದ್ದರು. ಅದರಲ್ಲೂ 'ಜಂಗ್ಲಿ' ಚಿತ್ರದಲ್ಲಿ ದುನಿಯಾ ವಿಜಯ್ ಸಿಕ್ಸ್ಪ್ಯಾಕ್ ನೋಡಿ ಹುಬ್ಬೇರಿಸಿದ್ದರು.
ಸೂರಿ ಸಿನಿಮಾಗಳನ್ನು ನಾಯಕ ನಟರ ಸಿಕ್ಸ್ಪ್ಯಾಕ್ ಬಾಡಿಯನ್ನು ಚೆನ್ನಾಗಿ ಪ್ರಸೆಂಟ್ ಮಾಡುತ್ತಾರೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು. 'ಅಣ್ಣಾಬಾಂಡ್' ಚಿತ್ರದ ವೇಳೆಗೆ ತಾವು ಕೂಡ ಸಿಕ್ಸ್ಪ್ಯಾಕ್ ಮಾಡಿ ಶರ್ಟ್ಲೆಸ್ ಆಗಿ ಕಾಣಿಸಿಕೊಂಡರು. 'ಅಣ್ಣಾಬಾಂಡ್' ಚಿತ್ರದಲ್ಲಿ ಅಪ್ಪು ಸಿಕ್ಸ್ಪ್ಯಾಕ್ ತೋರಿಸುವ ಸಾಕಷ್ಟು ಫೋಟೊಗಳು ವೈರಲ್ ಆಗಿವೆ. ಚಿತ್ರದ ಆಕ್ಷನ್ ಸನ್ನಿವೇಶಗಳಲ್ಲಿ ಕೂಡ ಶರ್ಟ್ಲೆಸ್ ಆಗಿ ಅಬ್ಬರಿಸಿದ್ದರು.
ಸದ್ಯ ವೈರಲ್ ಆಗುತ್ತಿರುವ ಫೋಟೊ ಕೂಡ 'ಅಣ್ಣಾಬಾಂಡ್' ಚಿತ್ರದ ಸಮಯದಲ್ಲಿ ಕ್ಲಿಕ್ಕಿಸಿರುವ ಫೋಟೊ. ಈ ಚಿತ್ರಕ್ಕಾಗಿ ಸಿಕ್ಸ್ಪ್ಯಾಕ್ ಮಾಡಲು ಅಪ್ಪು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮುಖ್ಯವಾಗಿ ಡಯೆಟ್ ವಿಚಾರದಲ್ಲಿ ಪುನೀತ್ ಸಾಕಷ್ಟು ಕೇರ್ ತಗೊಂಡಿದ್ದರು. ರೆಸ್ಟೋರೆಂಟ್ ಆಗಲಿ ರಸ್ತೆ ಬದಿಯ ಹೋಟೆಲ್ ಆಗಲಿ ಊಟ ಚೆನ್ನಾಗಿದೆ ಅಂದ್ರೆ ಅಪ್ಪು ತಿನ್ನುತ್ತಿದ್ದರು. ಅದರಲ್ಲೂ ಮಾಂಸಾಹಾರ ಪ್ರಿಯರಾಗಿದ್ದರು. ಆದರೆ ಸಿಕ್ಸ್ಪ್ಯಾಕ್ ಅಂತ ಬಂದಾಗ ಸಾಕಷ್ಟು ಡಯೆಟ್ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಪುನೀತ್ ಬಾಯಿಕಟ್ಟಲು ಪಟ್ಟ ಪಾಡು ಅಷ್ಟಿಷ್ಟಲ್ಲ.

ಪುನೀತ್ ರಾಜ್ಕುಮಾರ್ ಸಿಕ್ಸ್ಪ್ಯಾಕ್ಗಾಗಿ ಡಯೆಟ್ನಲ್ಲಿದ್ದ ಸಮಯದಲ್ಲೇ ನಡೆದ ಘಟನೆವೊಂದನ್ನು ಆಪ್ತರೊಬ್ಬರು ಹಂಚಿಕೊಂಡಿದ್ದಾರೆ. ಒಮ್ಮೆ ಯಾವುದೋ ಜಾಗದಲ್ಲಿ ಅಪ್ಪು ಮಾತನಾಡುತ್ತ ಇದ್ದರಂತೆ. ಅದೇ ಸಮಯದಲ್ಲಿ ಅವರಿದ್ದ ಜಾಗದಿಂದ ಕೆಲವೇ ಮೀಟರ್ ದೂರದಲ್ಲಿ ಯಾರೋ ಎಗ್ರೈಸ್ ಅಂಗಡಿ ಇತ್ತಂತೆ. ಅಂದು ಸಂಜೆ ಎಗ್ರೈಸ್ ಘಮಲು ಅಪ್ಪು ಮೂಗಿಗೆ ಬಡಿದಿತ್ತಂತೆ. ಅಯ್ಯೋ ಎಗ್ರೈಸ್ ಘಮಲು ಇಷ್ಟು ಚೆನ್ನಾಗಿದೆ. ಆದರೆ ಏನು ಮಾಡೋದು ಡಯೆಟ್ನಲ್ಲಿದ್ದೀನಿ, ತಿನ್ನುವಂತಿಲ್ಲ ಎಂದು ಅಪ್ಪು ಬೇಸರಗೊಂಡಿದ್ದರಂತೆ.
ಫಿಟ್ನೆಸ್ ವಿಚಾರದಲ್ಲಿ ಪುನೀತ್ ಸಿಕ್ಕಾಪಟ್ಟೆ ಕಟ್ಟುನಿಟ್ಟಾಗಿ ಇರುತ್ತಿದ್ದರು. ರಾತ್ರಿ ಭರ್ಜರಿ ಊಟ ಮಾಡಿದರೆ ಬೆಳಗ್ಗೆ ಎದ್ದು ಸೈಕ್ಲಿಂಗ್, ಜಾಗಿಂಗ್ ಅಂತೆಲ್ಲಾ ತಿಂದಿದ್ದನ್ನು ಕರಗಿಸಬೇಕು ಎನ್ನುತ್ತಿದ್ದರು. ಪುನೀತ್ ತಮ್ಮ ಭೋಜನ ಪ್ರೀತಿ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಹೇಳಿಕೊಂಡಿದ್ದರು. 'ದ್ವಿತ್ವ' ಚಿತ್ರಕ್ಕಾಗಿ ಅಪ್ಪು ವರ್ಕೌಟ್ ಮಾಡುತ್ತಿದ್ದರು. ಅವರ ಹೃದಯಾಘಾತಕ್ಕೆ ಅತಿಯಾದ ವ್ಯಾಯಾಮ ಕೂಡ ಕಾರಣ ಎಂದು ಆ ಸಮಯದಲ್ಲಿ ಕೆಲವರು ವಾದಿಸಿದ್ದರು.


Click it and Unblock the Notifications











