Don't Miss!
- News ಬಕ್ರಾ ಮಾಡಲು ಇಲ್ಲಿಗೆ ಬಂದಿದ್ದೀರಾ?, ಬೆಳಗಾವಿಗೆ ನಿಮ್ಮ ಕೊಡುಗೆ ಏನು?: ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2020ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ 26 ಸ್ಯಾಂಡಲ್ವುಡ್ ತಾರೆಯರು
2020ನೇ ವರ್ಷ ಸ್ಯಾಂಡಲ್ವುಡ್ ಪಾಲಿಗೆ ದುರಂತ. ಯುವ ನಟ-ನಟಿಯರು, ಹಿರಿಯ ನಟರು, ಹಿರಿಯ ಚಿತ್ರೋಧ್ಯಮಿಗಳನ್ನು ಕಳೆದುಕೊಳ್ಳಬೇಕಾಯಿತು. ಒಂದು ಕಡೆ ಕೊರೊನಾ ವೈರಸ್ ಎಂಬ ರೋಗ ಜನರನ್ನು ಕೊಲ್ಲುತ್ತಿದ್ದರೆ, ಮತ್ತೊಂದೆಡೆ ಕನ್ನಡ ಚಿತ್ರರಂಗದ ಸುಮಾರು ಜನರು ಇಹಲೋಕ ತ್ಯಜಿಸಿದರು.
ಯುವ ನಟ ಚಿರಂಜೀವಿ ಸರ್ಜಾ, ಹಾಸ್ಯ ನಟ ಬುಲೆಟ್ ಪ್ರಕಾಶ್, ಮೈಕಲ್ ಮಧು, ಕಿರುತೆರೆ ನಟಿ ಮೇಬಿನಾ ಮೈಕಲ್, ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ ಸುಮಾರು ಕಲಾವಿದರನ್ನು ಈ ವರ್ಷ ದೂರು ಮಾಡಿಕೊಳ್ಳಬೇಕಾಯಿತು. ಈ ವರ್ಷ ನಮ್ಮಗಲಿದ ಕಲಾಬಂಧುಗಳ ಪಟ್ಟಿಯನ್ನೊಮ್ಮೆ ನೋಡೋಣ. ಮುಂದೆ ಓದಿ....
ನಟ-ಪತ್ರಕರ್ತ ರವಿಬೆಳಗೆರೆ
ಖ್ಯಾತ ಪತ್ರಕರ್ತ, ನಟ ರವಿ ಬೆಳಗೆರೆ ನವೆಂಬರ್ 12ರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾದರು. ರವಿ ಶ್ರೀವತ್ಸ ನಿರ್ದೇಶನದ 'ಗಂಡ ಹೆಂಡತಿ' ಸಿನಿಮಾ ಮೂಲಕ ರವಿ ಬೆಳಗೆರೆ ಬೆಳ್ಳೆ ಪರದೆ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು. ಬಳಿಕ ಶಿವರಾಜ್ ಕುಮಾರ್ ಅಭಿನಯದ ಮಾದೇಶ, ವಾರಸ್ದಾರ, ಡೆಡ್ಲಿ ಸೋಮ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಡುರಾತ್ರಿ ಬೆಳಗೆರೆಗೆ ಏನಾಯ್ತು: ತಂದೆಯ ಕೊನೆಯ ಕ್ಷಣ ವಿವರಿಸಿದ ಮಗ ಕರ್ಣ
ನಿರ್ದೇಶಕ ಶಾಹುರಾಜ್ ಶಿಂಧೆ
ದರ್ಶನ್ ನಟನೆಯ 'ಸ್ನೇಹನಾ ಪ್ರೀತಿನಾ' ನಿರ್ದೇಶಿಸಿದ್ದ ಶಾಹುರಾಜ್ ಶಿಂಧೆ ನವೆಂಬರ್ 19 ರಂದು ಬೆಳಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅರ್ಜುನ್, ಪ್ರೇಮ ಚಂದ್ರಮ ಚಿತ್ರಗಳನ್ನು ನಿರ್ದೇಶಸಿದ್ದಾರೆ. ಸುಮಾರು 9 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದ ಶಾಹುರಾಜ್ ಶಿಂಧೆ 'ರಂಗ ಮಂದಿರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರೀಕರಣ ಮುಕ್ತಾಯವಾಗಿದೆ, ಆದ್ರೆ, ಬಿಡುಗಡೆಯಾಗಿಲ್ಲ.
ಛಾಯಾಗ್ರಾಹಕ ಅರುಣ್ ಕುಮಾರ್
ಸಿನಿಮಾ ಛಾಯಾಗ್ರಾಹಕ ಅರುಣ್ ಕುಮಾರ್ ನವೆಂಬರ್ 30 ರಂದು ಸಂಜೆ ನಿಧನ ಹೊಂದಿದ್ದಾರೆ. ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದ 51 ವರ್ಷದ ಅರುಣ್ ಕುಮಾರ್ ಲೋ ಬಿಪಿಯಿಂದ ಇಹಲೋಕ ತ್ಯಜಿಸಿದ್ದಾರೆ. 'ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ಚಿತ್ರದ ಛಾಯಾಗ್ರಾಹಕರಾಗಿ ಅರುಣ್ ಕುಮಾರ್ ಕೆಲಸ ಮಾಡಿದ್ದರು.
ಹಿರಿಯ ರಂಗಕರ್ಮಿ ಎಚ್.ಜಿ ಸೋಮಶೇಖರ್ ರಾವ್
ಹಿರಿಯ ರಂಗಭೂಮಿ ಕಲಾವಿದ ಮತ್ತು ನಟ ಎಚ್.ಜಿ ಸೋಮಶೇಖರ್ ರಾವ್ ನವೆಂಬರ್ 4 ರಂದು ನಿಧನ ಹೊಂದಿದರು. 1981ರಲ್ಲಿ ಟಿ.ಎಸ್ ರಂಗ ನಿರ್ದೇಶನದ 'ಸಾವಿತ್ರಿ' ಸಿನಿಮಾ ಮೂಲಕ ಸೋಮಶೇಖರ್ ರಾವ್ ಚಿತ್ರರಂಗವನ್ನು ಪ್ರವೇಶಿಸಿದ್ದರು. ರವಿ ನಿರ್ದೇಶನದ 'ಮಿಥಿಲೆಯ ಸೀತೆಯರು' ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು.
ನಿರ್ಮಾಪಕ ದಿನೇಶ್ ಗಾಂಧಿ
ಸ್ಯಾಂಡಲ್ ವುಡ್ ನಟ ಮತ್ತು ನಿರ್ಮಾಪಕ ದಿನೇಶ್ ಗಾಂಧಿ ಅಕ್ಟೋಬರ್ 31 ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ರವಿಚಂದ್ರನ್ ನಟನೆಯ ಹೂ ಮತ್ತು ಮಲ್ಲಿಖಾರ್ಜುನ ಹಾಗೂ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿನೇಶ್ ಗಾಂಧಿ ನಟನಾಗಿಯೂ ಗುರುಸಿಕೊಂಡಿದ್ದರು.
ನಿರ್ದೇಶಕ ಜಿ.ಮೂರ್ತಿ
ಕನ್ನಡದ ಹಿರಿಯ ಕಲಾನಿರ್ದೇಶಕ, ನಿರ್ದೇಶಕ ಮತ್ತು ನಿರ್ಮಾಪಕ ಜಿ.ಮೂರ್ತಿ ಅಕ್ಟೋಬರ್ 24 ರಂದು ನಿಧನರಾದರು. 'ಚಂದ್ರಚಕೋರಿ' ಮತ್ತು 'ಕುರುನಾಡು' ಚಿತ್ರಗಳ ಅತ್ಯುತ್ತಮ ಕಲಾನಿರ್ದೇಶನಕ್ಕಾಗಿ ಬಾರಿ ರಾಜ್ಯಪ್ರಶಸ್ತಿ ಸಂದಿದೆ. ಜಿ.ಮೂರ್ತಿ ನಿರ್ದೇಶನದ 'ಶಂಕರ ಪುಣ್ಯಕೋಟಿ' ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ (2008-09) ಗೌರವ ಸಂದಿದೆ.
ನಿರ್ಮಾಪಕ ಎಚ್ ಕೆ ಶ್ರೀನಿವಾಸ್
ಕನ್ನಡದ ಹಿರಿಯ ನಿರ್ಮಾಪಕ ಎಚ್ ಕೆ ಶ್ರೀನಿವಾಸ್ (ಬೇಕರಿ ಶಿವ) ಹೃದಯಾಘಾತದಿಂದ ಅಕ್ಟೋಬರ್ 24 ರಂದು ನಿಧನರಾದರು. ಪಟ್ಟಣ್ಣಕ್ಕೆ ಬಂದ ಪುಟ್ಟ, ಗುಂಡನ ಮದುವೆ, ಚಂದನ ಚಿಗುರು, ಮಾಯಾ ಮುಸುಕು, ಕರುನಾಡು, ಅಂತಹ ಚಿತ್ರಗಳನ್ನು ಶ್ರೀನಿವಾಸ್ ಅವರು ನಿರ್ಮಿಸಿದ್ದರು. ಎಚ್ ಕೆ ಶ್ರೀನಿವಾಸ್ ನಿರ್ಮಿಸಿದ್ದ ಗುರುಕುಲ ಚಿತ್ರಕ್ಕಾಗಿ 'ಅತ್ಯುತ್ತಮ ಮಕ್ಕಳ ಚಿತ್ರ'' ಎಂದು ರಾಜ್ಯ ಪ್ರಶಸ್ತಿ ಸಹ ಲಭಿಸಿತ್ತು.
ಹಿರಿಯ ನಟ ಕೃಷ್ಣ ನಾಡಿಗ್
ಹಿರಿಯ ನಟ ಮತ್ತು ಬರಹಗಾರ ಕೃಷ್ಣ ನಾಡಿಗ್ ಅಕ್ಟೋಬರ್ 17 ರಂದು ಹೃದಯಾಘಾತದಿಂದ ನಿಧನರಾದರು. ಸುಮಾರು ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಅವರು ಸಾಕಷ್ಟು ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕಲಾವಿದರಾಗಿಯೂ ಹೆಚ್ಚು ಜನಪ್ರಿಯರಾಗಿದ್ದಾರೆ. ಪಲ್ಲವಿ ಅನು ಪಲ್ಲವಿ, ಮಹಾದೇವಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ ರಾಜನ್ ವಿಧಿವಶ
ಕನ್ನಡ ಹಾಗೂ ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರಾಜನ್ ಅಕ್ಟೋಬರ್ 12 ರಂದು ವಿಧಿವಶರಾದರು. ರಾಜನ್ ಮತ್ತು ನಾಗೇಂದ್ರ ಸುಮಾರು 375ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿದ್ದ ಈ ಜೋಡಿ ಕನ್ನಡದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ನ್ಯಾಯವೇ ದೇವರು, ಗಂಧದ ಗುಡಿ, ದೇವರ ಗುಡಿ, ಭಾಗ್ಯವಂತರು, ಎರಡು ಕನಸು, ನಾ ನಿನ್ನಾ ಮರೆಯಲಾರೆ, ನಾ ನಿನ್ನಾ ಬಿಡಲಾರೆ, ಹೊಂಬಿಸಿಲು, ಬಯಲು ದಾರಿ, ಪಾವನಾ ಗಂಗಾ, ಗಿರಿ ಕನ್ಯೆ ಅಂತಹ ಚಿತ್ರಗಳಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು.
ಖ್ಯಾತ ಸಂಗೀತ ನಿರ್ದೇಶಕ ರಾಜನ್ (ರಾಜನ್-ನಾಗೇಂದ್ರ) ವಿಧಿವಶ
ನಿರ್ದೇಶಕ ವಿಜಯ ರೆಡ್ಡಿ
ಮಯೂರ, ಶ್ರೀನಿವಾಸ ಕಲ್ಯಾಣ, ನಾ ನಿನ್ನ ಮರೆಯಲಾರೆ, ಸನಾದಿ ಅಪ್ಪಣ್ಣ, ಗಂಧದ ಗುಡಿ, ಬಡವರ ಬಂಧು, ಹುಲಿಯ ಹಾಲಿನ ಮೇವು, ನೀ ನನ್ನ ಗೆಲ್ಲಲಾರೆ, ಭಕ್ತ ಪ್ರಹಲ್ಲಾದ ಇಂಥಹಾ ಸದಾ ಸ್ಮರಣೀಯ ಕನ್ನಡ ಚಿತ್ರಗಳನ್ನು ನೀಡಿದ ಖ್ಯಾತ ಸಿನಿಮಾ ನಿರ್ದೇಶಕ ವಿಜಯ ರೆಡ್ಡಿ ಅಕ್ಟೋಬರ್ 10 ರಂದು ನಿಧನರಾದರು.
ಕೊಡಗನೂರು ಜಯಕುಮಾರ್
ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಜ್ಯೂನಿಯರ್ ರಾಜ್ ಕುಮಾರ್ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಕೊಡಗನೂರು ಜಯಕುಮಾರ್ ಅಕ್ಟೋಬರ್ 6 ರಂದು ವಿಧಿವಶರಾದರು. ಕನ್ನಡ ಹಾಗೂ ತೆಲುಗು ಸೇರಿದಂತೆ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೊಡಗನೂರು ಜಯಕುಮಾರ್ ನಟಿಸಿದ್ದರು.
ನಿರ್ದೇಶಕ ನಾಗೇಶ್ ಬಾಬ
ಕನ್ನಡ ಹಿರಿಯ ಸಂಭಾಷಣೆಕಾರ, ನಿರ್ದೇಶಕ ಹಾಗೂ ನಿರ್ಮಾಪಕರಾಗಿದ್ದ ನಾಗೇಶ್ ಬಾಬ ಅಕ್ಟೋಬರ್ 6 ರಂದು ಸಾವನ್ನಪ್ಪಿದ್ದಾರೆ. 1957ರಲ್ಲಿ ಆರ್ ನಾಗೇಂದ್ರ ರಾವ್ ನಿರ್ದೇಶನದ 'ಪ್ರೇಮದ ಪುತ್ರಿ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ವೃತ್ತಿ ಆರಂಭಿಸಿದ ನಾಗೇಶ್ ಬಾಬ ನಂತರ 'ಬೆಟ್ಟದ ಕಳ್ಳ', 'ಪ್ರತಿಮಾ' ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. 'ಕೋಟಿ ಚೆನ್ನಯ' ಎಂಬ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕರಾಗಿ ಸಹ ದುಡಿದಿದ್ದಾರೆ.
ಎಸ್ಪಿ ಬಾಲಸುಬ್ರಹ್ಮಣ್ಯಂ ನಿಧನ
ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ದಿಗ್ಗಜ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೆಪ್ಟೆಂಬರ್ 25 ರಂದು ನಿಧನರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆ ಸೇರಿದಂತೆ ಸುಮಾರು 16 ಭಾಷೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್ಪಿಬಿ ಹಾಡಿದ್ದರು. ಅತಿ ಹೆಚ್ಚು ಹಾಡಿಗೆ ಧ್ವನಿಯಾಗಿದ್ದ ಎಸ್ಪಿಬಿ ಅವರು ಗಿನ್ನಿಸ್ ದಾಖಲೆಗೆ ಸಹ ಪಾತ್ರರಾಗಿದ್ದಾರೆ.
ರಾಕ್ಲೈನ್ ಸುಧಾಕರ್
ಕನ್ನಡದ ಖ್ಯಾತ ಹಾಸ್ಯನಟ ರಾಕ್ಲೈನ್ ಸುಧಾಕರ್ ಸೆಪ್ಟೆಂಬರ್ 24 ರಂದು ಶುಗರ್ಲೆಸ್ ಚಿತ್ರೀಕರಣ ಮಾಡುತ್ತಿರುವಾಗಲೇ ನಿಧನರಾದರು. 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸುಧಾಕರ್, ನಟಿಸಿದ್ದಾರೆ. 'ಡಕೋಟಾ ಎಕ್ಸ್ಪ್ರೆಸ್', ಪಂಚರಂಗಿ, ಪರಮಾತ್ಮ, ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ, ಲವ್ ಇನ್ ಮಂಡ್ಯ, ವಾಸ್ತು ಪ್ರಕಾರ, ಜೂಮ್, ಟೋಪಿವಾಲಾ, ಕೆಮಿಸ್ಟ್ರಿ ಆಫ್ ಕರಿಯಪ್ಪ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಿರಿಯ ನಟಿ ಕಿಶೋರಿ ಬಲ್ಲಾಳ್
ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಫೆಬ್ರವರಿ 18 ರಂದು ಉಸಿರಾಟದ ತೊಂದರೆಯಿಂದ ವಿಧಿವಶರಾದರು. 1960ರಲ್ಲಿ 'ಇವಳೆಂಥಾ ಹೆಂಡತಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದ ಕಿಶೋರಿ ಬಲ್ಲಾಳ್, ಸುಮಾರು 75ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹೆಸರಾಂತ ನಿರ್ದೇಶಕರು ಮತ್ತು ನಟರ ಜೊತೆಗೆ ಕೆಲಸ ಮಾಡಿದ್ದಾರೆ. ವೀರಬಾಹು, ಹನಿ ಹನಿ, ಸೂರ್ಯಕಾಂತಿ, ನಾನಿ, ಕಹಿ, ಶಿವಗಾಮಿ, ಅಕ್ಕ ತಂಗಿ, ನನ್ನುಸಿರೇ ಸೇರಿದಂತೆ ಸುಮಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ಬುಲೆಟ್ ಪ್ರಕಾಶ್ ನಿಧನ
ಕನ್ನಡದ ಪ್ರಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅನಾರೋಗ್ಯದ ಕಾರಣದಿಂದ ಏಪ್ರಿಲ್ 6 ರಂದು ನಿಧನರಾದರು. ಶಾಂತಿ ಕ್ರಾಂತಿ ಸಿನಿಮಾದ ಮೂಲಕ ಸಿನಿಮಾರಂಗ ಪ್ರವೇಶಿಸಿದ ಅವರು ಸುಮಾರು 300 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದರ್ಶನ್ ಸಿನಿಮಾಗಳಲ್ಲಿ ಅವರು ಖಾಯಂ ಹಾಸ್ಯ ಕಲಾವಿದರಾಗಿದ್ದರು.
ಉಸಿರು ಮತ್ತು ಬದುಕು ಗೆದ್ದವ ಈ ಬಾರಿ ಮತ್ತೆ ಗೆಲ್ಲಲಿಲ್ಲ: ಬುಲೆಟ್ ಸಾವಿಗೆ ಗೆಳೆಯರ ಕಣ್ಣೀರು
ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್
'ಗೆಜ್ಜೆಪೂಜೆ', 'ಮಾರ್ಗದರ್ಶಿ' ಮತ್ತು 'ಉಪಾಸನೆ' ಚಿತ್ರಗಳಲ್ಲಿನ ಛಾಯಾಗ್ರಹಣಕ್ಕೆ ಮೂರು ಬಾರಿ ಅತ್ಯುತ್ತಮ ಛಾಯಾಗ್ರಾಹಕ ರಾಜ್ಯ ಪ್ರಶಸ್ತಿ ಪಡೆದಿದ್ದ ಹಿರಿಯ ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಮೇ 8 ರಂದು ಸಾವನ್ನಪ್ಪಿದರು.
ಮೈಕಲ್ ಮಧು ನಿಧನ
ಕನ್ನಡದ ಖ್ಯಾತ ಹಾಸ್ಯನಟ ಮೈಕಲ್ ಮಧು ಮೇ 14 ರಂದು ನಿಧನರಾದರು. ಮೈಕಲ್ ಮಧು ಅವರು ಓಂ, ಲವ್ ಟ್ರೇನಿಂಗ್ ಸ್ಕೂಲ್, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಪಾಪಿಗಳ ಲೋಕದಲ್ಲಿ, ಎಕೆ 47, ಎ, ಮಿನುಗು ತಾರೆ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಬುಲೆಟ್ ಪ್ರಕಾಶ್ಗೆ 'ಹ್ಯಾಪಿ ಜರ್ನಿ ಗೆಳೆಯ' ಎಂದಿದ್ದ ಮೈಕಲ್ ಮಧು ಗೆಳೆಯನನ್ನು ಹಿಂಬಾಲಿಸಿದರು
ಮೆಬಿನಾ ಮೈಕೆಲ್
'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಸೀಸನ್-4 ರಿಯಾಲಿಟಿ ಶೋನ ವಿಜೇತೆ ಮೆಬಿನಾ ಮೈಕೆಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಮೇ 26ರಂದು ಚನ್ನರಾಯಪಟ್ಟಣದ ಬೆಳ್ಳೂರು ಕ್ರಾಸ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು.
ಚಿರು ಸರ್ಜಾ ನಿಧನ
ಜೂನ್ 7 ರಂದು ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟರು. ಚಿರಂಜೀವಿ ಸರ್ಜಾ ಅವರು 2018ರ ಮೇ 21 ರಂದು ಮೇಘನಾ ರಾಜ್ ಅವರೊಂದಿಗೆ ವಿವಾಹವಾಗಿದ್ದರು. ಮೇಘನಾ ರಾಜ್ ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮಗುವಿನ ಮುಖ ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ
ಮಿಮಿಕ್ರಿ ರಾಜ್ಗೋಪಾಲ್
ಕನ್ನಡದ ಹಾಸ್ಯ ನಟ ಮಿಮಿಕ್ರಿ ರಾಜ್ಗೋಪಾಲ್ (64) ಜುಲೈ 2 ರಂದು ನಿಧನರಾದರು. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರಗಳಲ್ಲಿಯೂ ಬಣ್ಣಹಚ್ಚಿದ್ದರು. ಕಾಪಿಕಟ್ಟೆ, ರಿಯಲ್ ಪೊಲೀಸ್, ಸಾಧಕರು, ಗೋಸಿ ಗ್ಯಾಂಗ್, ಸೂಪರ್ ಪೊಲೀಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಗ್ರಾಮಾಯಣ ನಿರ್ಮಾಪಕ
ನಟ ವಿನಯ್ ರಾಜ್ಕುಮಾರ್ ಅಭಿನಯದ ಗ್ರಾಮಾಯಣ ಸಿನಿಮಾದ ನಿರ್ಮಾಪಕ NLN.ಮೂರ್ತಿ ಅವರು ಜುಲೈ 4 ರಂದು ವಿಧಿವಶರಾಗಿದ್ದಾರೆ. ಈ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ.
ಯುವ ನಟ ಸುಶೀಲ್ ಗೌಡ
ದುನಿಯಾ ವಿಜಯ್ ನಾಯಕರಾಗಿರುವ 'ಸಲಗ' ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದ ಸುಶೀಲ್ ಗೌಡ ಸಿನಿಮಾ ಬಿಡುಗಡೆಗೂ ಮುನ್ನವೇ ಆತ್ಮಹತ್ಯೆಗೆ ಶರಣಾದರು. ಕಮರೊಟ್ಟು ಚೆಕ್ ಪೋಸ್ಟ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ಅವರು, 'ಲೋಟಸ್' ಎಂಬ ಫಿಟ್ನೆಸ್ ಕೇಂದ್ರ ನಡೆಸುತ್ತಿದ್ದರು.
ಹುಲಿವಾನ್ ಗಂಗಾಧರ್
ಹಿರಿಯ ನಟ ಹುಲಿವಾನ್ ಗಂಗಾಧರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 70 ವರ್ಷ ಗಂಗಾಧರ್ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ನಟ ಗಂಗಾಧರ್ 1500ಕ್ಕೂ ಹೆಚ್ಚು ನಾಟಕ, 118 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕಿರುತೆರೆಯಲ್ಲೂ ಸಖತ್ ಬ್ಯುಸಿಯಾಗಿದ್ದರು. ಉಲ್ಟಾ ಪಲ್ಟಾ, ಗ್ರಾಮ ದೇವತೆ, ಭೂಮಿ ತಾಯಿ ಚೊಚ್ಚಲ ಮಗ, ಅಪ್ಪು, ಕುರಿಗಳು ಸಾರ್ ಕುರಿಗಳು, ಶಬ್ದವೇಧಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಿರಿಯ ನಟ ಬಿ. ಶಾಂತಮ್ಮ
ಕನ್ನಡ ಚಿತ್ರರಂಗದ ಹಿರಿಯ ನಟ ಬಿ. ಶಾಂತಮ್ಮ (95) ಜುಲೈ 20 ರಂದು ಮೈಸೂರಿನಲ್ಲಿ ನಿಧನರಾದರು. 1956ರಲ್ಲಿ ಚಿತ್ರರಂಗ ಪ್ರವೇಶಿಸಿದ್ದ ಅವರು 160ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
ನಟ ಸಿದ್ದರಾಜ್ ಕಲ್ಯಾಣ್ಕರ್
ಖ್ಯಾತ ಹಿರಿಯ ನಟ ಸಿದ್ದರಾಜ್ ಕಲ್ಯಾಣ್ಕರ್ ಸೆಪ್ಟೆಂಬರ್ 8 ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಯಾರೆ ನೀ ಅಭಿಮಾನಿ, ಭೂಮಿ ಗೀತಾ, ಹೃದಯ ಹೃದಯ, ಬುದ್ಧಿವಂತ, ಸೂಪರ್ ಸಿನಿಮಾ ಸೇರಿದ್ದಂತೆ ಸುಮಾರು 75ಕ್ಕು ಹೆಚ್ಚು ಸಿನಿಮಾಗಳಲ್ಲಿ ಮತ್ತು 50ಕ್ಕು ಹೆಚ್ಚು ಧಾರಾವಾಹಿಗಳಲ್ಲಿ ಸಿದ್ದರಾಜ್ ಅಭಿನಯಿಸಿದ್ದಾರೆ.