Don't Miss!
- News ಇಂದು ಕರ್ನಾಟಕಕ್ಕೆ ಮೋದಿ :11 ಪ್ರಶ್ನೆಗಳ ಬಾಣ ಬಿಟ್ಟ ಸಿದ್ದರಾಮಯ್ಯ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಂದ್ಕಾಲದ ಕಿರುತೆರೆ ನಟರೇ ಇಂದು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಗಳು.!
ಕನ್ನಡ ಚಿತ್ರರಂಗದಲ್ಲಿ ಸದ್ಯ ಬಾಕ್ಸ್ ಆಫೀಸ್ ಉಡೀಸ್ ಮಾಡುತ್ತಿರುವ ಸ್ಟಾರ್ ಕಲಾವಿದರು ಯಾರು.? ಈ ಪ್ರಶ್ನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಗೋಲ್ಡನ್ ಸ್ಟಾರ್ ಗಣೇಶ್ ಎಂಬ ಉತ್ತರಗಳಂತೂ ಖಂಡಿತ ಬಂದೇ ಬರುತ್ತೆ.
ಇಂದು ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಗೆ ಅಧಿಪತಿಗಳಾಗಿರುವ, ಇಡೀ ಕನ್ನಡ ಚಿತ್ರರಂಗವನ್ನು ಆಳುತ್ತಿರುವ ಈ ಎಲ್ಲಾ ಸಕ್ಸಸ್ ಫುಲ್ ಹೀರೋಗಳು ಒಂದ್ಕಾಲದಲ್ಲಿ ಸಾಮಾನ್ಯ ಕಿರುತೆರೆ ನಟರು ಅನ್ನೋದು ನಿಮಗೆ ಗೊತ್ತಾ.?
ಹೌದು, ಕನ್ನಡ ಚಿತ್ರ ನಟ ಆಗಬೇಕು, ಸ್ಯಾಂಡಲ್ ವುಡ್ ನಲ್ಲಿ ಯಶಸ್ಸು ಪಡೆಯಬೇಕು ಎಂಬೆಲ್ಲ ಕನಸುಗಳನ್ನು ಹೊತ್ತು ಬಂದ ಈ ನಟರಿಗೆ ಮೊದಲು ಮಣೆ ಹಾಕಿದ್ದು ಕನ್ನಡ ಕಿರುತೆರೆ ಲೋಕ. ಕನ್ನಡ ಚಿತ್ರರಂಗಕ್ಕೆ ಕಿರುತೆರೆ ದುನಿಯಾ ಸಾಕಷ್ಟು ಪ್ರತಿಭಾವಂತ ಕಲಾವಿದರನ್ನು ನೀಡಿದೆ. ಟಿವಿ ಧಾರಾವಾಹಿಗಳಲ್ಲಿ ನಟಿಸಿ ನಂತರ ಬೆಳ್ಳಿತೆರೆಗೆ ಬಂದು ಯಶಸ್ಸು ಕಂಡ ನಾಯಕರ ಪಟ್ಟಿ ಇಲ್ಲಿದೆ ನೋಡಿ...
ಕಿಚ್ಚ ಸುದೀಪ್
ದಯಾನಂದ ಸಾಗರ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಕಿಚ್ಚ ಸುದೀಪ್ ಅಂಡರ್ 17 ಮತ್ತು ಅಂಡರ್ 19 ಕ್ರಿಕೆಟ್ ನಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದರು. ನಟನೆ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕಿಚ್ಚ ಸುದೀಪ್ ಮುಂಬೈನಲ್ಲಿರುವ ರೋಷನ್ ತನೇಜಾ ಆಕ್ಟಿಂಗ್ ಸ್ಕೂಲ್ ನಲ್ಲಿ ತರಬೇತಿ ಪಡೆದಿದ್ದರು. ಇಂತಿಪ್ಪ ಸುದೀಪ್ ಮೊದಲು ಬಣ್ಣ ಹಚ್ಚಿದ್ದು ಉದಯ ಟಿವಿಯ 'ಪ್ರೇಮದ ಕಾದಂಬರಿ' ಧಾರಾವಾಹಿಗೆ. ಬಳಿಕ 'ತಾಯವ್ವ' ಮತ್ತು 'ಪ್ರತ್ಯರ್ಥ' ಚಿತ್ರಗಳಲ್ಲಿ ಸುದೀಪ್ ಅವಕಾಶ ಪಡೆದರು. ಅಸಲಿಗೆ, 'ತಾಯವ್ವ' ಚಿತ್ರಕ್ಕೂ ಮುನ್ನ 'ಬ್ರಹ್ಮ' ಮತ್ತು 'ಓ ಕುಸುಮ ಬಾಲೆ' ಚಿತ್ರಗಳಲ್ಲಿ ಸುದೀಪ್ ಅಭಿನಯಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾಗಳು ತೆರೆಗೆ ಬರಲಿಲ್ಲ. ಅವಕಾಶಗಳಿಗಾಗಿ ಹಾತೊರೆಯುತ್ತಿದ್ದ ಸುದೀಪ್ ಗೆ ದೊಡ್ಡ ಬ್ರೇಕ್ ಕೊಟ್ಟಿದ್ದು 'ಸ್ಪರ್ಶ' ಮತ್ತು 'ಹುಚ್ಚ' ಚಿತ್ರಗಳು. ಎರಡು ದಶಕಗಳಿಂದ ಗಾಂಧಿನಗರದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕನಾಗಿ ಸುದೀಪ್ ಜನಪ್ರಿಯತೆ ಪಡೆದಿದ್ದಾರೆ. ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರುವ ಸ್ಯಾಂಡಲ್ ವುಡ್ ನಟರ ಪೈಕಿ ಸುದೀಪ್ ಕೂಡ ಒಬ್ಬರು.
'ಅಭಿನಯ ಚಕ್ರವರ್ತಿ' ಸುದೀಪ್ ಗೆ 'ಐರನ್ ಲೆಗ್' ಎಂದವರು ಯಾರು?
ದರ್ಶನ್
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಅಂತಲೇ ಫೇಮಸ್ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ನಿಮಗೆಲ್ಲ ಗೊತ್ತಿರುವ ಹಾಗೆ ನಟ ದರ್ಶನ್ ಅಭಿನಯದ ಮೊದಲ ಚಿತ್ರ 'ಮೆಜೆಸ್ಟಿಕ್'. ಆದ್ರೆ 'ಮೆಜೆಸ್ಟಿಕ್' ಚಿತ್ರಕ್ಕೂ ಮುನ್ನವೇ 'ಮಹಾಭಾರತ' ಮತ್ತು 'ದೇವರ ಮಗ' ಚಿತ್ರಗಳಲ್ಲಿ ದರ್ಶನ್ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದರು. ಇದಕ್ಕೂ ಮೊದಲೇ 'ಚಂದ್ರಿಕಾ' ಸೀರಿಯಲ್ ಗಳಲ್ಲಿ ದರ್ಶನ್ ಕಾಣಿಸಿಕೊಂಡಿದ್ದರು. ತಂದೆಯ ಹಾಗೆ ಬೆಳ್ಳಿಪರದೆ ಮೇಲೆ ಮಿನುಗಬೇಕು ಎಂಬ ಆಸೆಯಿಂದ ಚಿತ್ರರಂಗಕ್ಕೆ ಬಂದ ದರ್ಶನ್ ಆಸಿಸ್ಟೆಂಟ್ ಕ್ಯಾಮರಾಮೆನ್ ಆಗಿಯೂ ಕೆಲಸ ಮಾಡಿದ್ದಾರೆ. 'ನೀನಾಸಂ'ನಲ್ಲಿ ನಟನೆಯ ತರಬೇತಿ ಪಡೆದಿರುವ ದರ್ಶನ್ ಗೆ ಸಿನಿಲೋಕಕ್ಕೂ ಮುನ್ನ ಕಿರುತೆರೆ ಲೋಕದ ಪರಿಚಯ ಇತ್ತು ಅನ್ನೋದು ಸತ್ಯ.
ಯಶ್
ಇಂದು ರಾಕಿಂಗ್ ಸ್ಟಾರ್ ಆಗಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಗುರುತಿಸಿಕೊಂಡಿರುವ ನಟ ಯಶ್. ಇವತ್ತು ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ಹೊಂದಿರುವ ಯಶ್ ಒಂದ್ಕಾಲದಲ್ಲಿ ಸೀರಿಯಲ್ ನಟ. ಚಿತ್ರರಂಗ ಪ್ರವೇಶಿಸುವ ಮುನ್ನ 'ನಂದಗೋಕುಲ', 'ಪ್ರೀತಿ ಇಲ್ಲದ ಮೇಲೆ' ಸೀರಿಯಲ್ ಗಳಲ್ಲಿ ಯಶ್ ನಟಿಸಿದ್ದರು. 'ಬಿಂದಾಸ್ ಹುಡುಗಿ' ಸಿನಿಮಾ ಮೂಲಕ ಚಂದನವನದ ಪ್ರವೇಶ ಮಾಡಿದ ಯಶ್ 'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಕೆ.ಜಿ.ಎಫ್' ಅಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ರಮೇಶ್ ಅರವಿಂದ್
ಸಿನಿಮಾ ರಂಗದಲ್ಲಿ ನಟ ರಮೇಶ್ ಅರವಿಂದ್ 'ತ್ಯಾಗರಾಜ' ಅಂತಲೇ ಫೇಮಸ್. ಅದಕ್ಕೆ ಕಾರಣ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಕೆಲ ಪಾತ್ರಗಳು. ವಯಸ್ಸು 54 ದಾಟಿದ್ದರೂ, ರಮೇಶ್ ಅರವಿಂದ್ ಈಗಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದಾರೆ. ಕನ್ನಡ ಮಾತ್ರ ಅಲ್ಲ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲೂ ಯಶಸ್ಸು ಪಡೆದಿರುವ ರಮೇಶ್ ಅರವಿಂದ್... ಬೆಳ್ಳಿತೆರೆಗೆ ಕಾಲಿಡುವ ಮುನ್ನ ಬೆಂಗಳೂರು ದೂರದರ್ಶನ ವಾಹಿನಿಯಲ್ಲಿ ನಿರೂಪಕರಾಗಿದ್ದರು. 'ಪರಿಚಯ' ಎಂಬ ಕಾರ್ಯಕ್ರಮವನ್ನ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದರು. ಹಾಗ್ನೋಡಿದ್ರೆ, ಇಂಜಿನಿಯರಿಂಗ್ ಓದುತ್ತಿರುವಾಗಲೇ, ಕೆಲ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿದ್ದರು. 'ಕಮಲ್ ಹಾಸನ್' ಅಭಿನಯದ 'ಸಾಗರ ಸಂಗಮಮ್' ಸಕ್ಸಸ್ ಸೆಲೆಬ್ರೇಷನ್ ಫಂಕ್ಷನ್ ನಲ್ಲೂ ರಮೇಶ್ ಅರವಿಂದ್ ನಿರೂಪಕರಾಗಿದ್ದರು. ಬಳಿಕ ಕಿರುತೆರೆಗೆ ಕಾಲಿಟ್ಟು 'ಪರಿಚಯ' ಶೋನಲ್ಲಿ ಕಾಣಿಸಿಕೊಂಡ ರಮೇಶ್ ಅರವಿಂದ್ ಮುಂದೆ 'ಮೌನ ಗೀತೆ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ರಮೇಶ್ ಅರವಿಂದ್ ಸಿನಿ ಲೋಕದಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ.
ಪ್ರಕಾಶ್ ರಾಜ್
ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ.. ಇಷ್ಟೂ ಚಿತ್ರರಂಗಗಳಲ್ಲಿ ಹೆಚ್ಚು ಡಿಮ್ಯಾಂಡ್ ಇರುವ ಖಳನಟ ಪ್ರಕಾಶ್ ರಾಜ್. ಹುಟ್ಟಿ ಬೆಳೆದಿದ್ದೆಲ್ಲ ಕರ್ನಾಟಕದಲ್ಲೇ ಆದರೂ, ಪ್ರಕಾಶ್ ರಾಜ್ ಗೆ ಪರಭಾಷೆಯಲ್ಲಿ ಬೇಡಿಕೆ ಜಾಸ್ತಿ. ಇಂತಿಪ್ಪ ಪ್ರಕಾಶ್ ರಾಜ್ ಬೆಳ್ಳಿತೆರೆ ಮೇಲೆ ಮಿನುಗುವ ಮುನ್ನ ದೂರದರ್ಶನ ವಾಹಿನಿಯ 'ಬಿಸಿಲು ಕುದುರೆ' ಮತ್ತು 'ಗುಡ್ಡದ ಭೂತ' ಧಾರಾವಾಹಿಗಳಲ್ಲಿ ನಟಿಸಿದ್ದರು. ಬಳಿಕ 'ರಣಧೀರ', 'ರಾಮಾಚಾರಿ', 'ನಿಷ್ಕರ್ಷ', 'ಲಾಕಪ್ ಡೆತ್' ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಪೋಷಿಸಿದ ಪ್ರಕಾಶ್ ರಾಜ್ ಮುಂದೆ ಕಾಲಿವುಡ್ ಗೆ ಹಾರಿದರು. ಕೆ.ಬಾಲಚಂದರ್ ಕಣ್ಣಿಗೆ ಬಿದ್ದ ಮೇಲೆ ಪ್ರಕಾಶ್ ರಾಜ್ ಅದೃಷ್ಟ ಖುಲಾಯಿಸಿತು. ಇಂದು ಪ್ರಕಾಶ್ ರಾಜ್ ಬರೀ ನಟನಾಗಿ ಮಾತ್ರ ಅಲ್ಲ ನಿರ್ದೇಶಕ, ನಿರ್ಮಾಪಕನಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಶ್ರೀನಗರ ಕಿಟ್ಟಿ
'ಚಂದ್ರ ಚಕೋರಿ', 'ವಿಷ್ಣು ಸೇನಾ' ಮುಂತಾದ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ...
'ಇಂತಿ ನಿನ್ನ ಪ್ರೀತಿಯ', 'ಸಂಜು ವೆಡ್ಸ್ ಗೀತಾ' ಚಿತ್ರಗಳಲ್ಲಿ ಹೀರೋ ಆಗಿ ಶ್ರೀನಿಗರ ಕಿಟ್ಟಿ ಮಿಂಚಿರುವುದನ್ನು ನೀವೆಲ್ಲ ನೋಡಿದ್ದೀರಾ. ಆದರೆ ಸ್ಯಾಂಡಲ್ ವುಡ್ ಗೆ ಕಾಲಿಡುವ ಮೊದಲು ಶ್ರೀನಗರ ಕಿಟ್ಟಿ ಕೂಡ ಕಿರುತೆರೆ ಲೋಕವನ್ನ ಒಂದು ರೌಂಡ್ ಹಾಕಿ ಬಂದಿದ್ದರು ಅನ್ನೋದು ನಿಮಗೆ ಗೊತ್ತಾ.? ಬಾಲನಟನಾಗಿ 'ಮಲೆನಾಡಿನ ಚಿತ್ರಗಳು', 'ದೊಡ್ಡಮನೆ' ಧಾರಾವಾಹಿಗಳಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದರು. ಇನ್ನೂ ವಿದ್ಯಾಭ್ಯಾಸ ಕಂಪ್ಲೀಟ್ ಆದ್ಮೇಲೆ 'ಚಂದ್ರಿಕಾ', 'ಪ್ರೀತಿಗಾಗಿ', 'ಆನಂದ ಸಾಗರ', 'ಮನೆ ಮನೆ ಕಥೆ' ಸೀರಿಯಲ್ ಗಳಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸಿದ್ದರು. ಇಷ್ಟೆಲ್ಲ ಧಾರಾವಾಹಿಗಳಲ್ಲಿ ಮಿಂಚಿದ ಮೇಲೆ ಶ್ರೀನಿಗರ ಕಿಟ್ಟಿಗೆ ಸ್ಯಾಂಡಲ್ ವುಡ್ ನಿಂದ ಬುಲಾವ್ ಬಂದಿದ್ದು.
ಗಣೇಶ್
ಗಣೇಶ್ 'ಗೋಲ್ಡನ್ ಸ್ಟಾರ್' ಆಗುವ ಮುನ್ನ 'ಕಾಮಿಡಿ ಟೈಮ್' ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು. ಹಾಗ್ನೋಡಿದ್ರೆ, 'ಕಾಮಿಡಿ ಟೈಮ್ ಗಣೇಶ್' ಅಂತಲೇ ಅವರು ಮೊದಲು ಫೇಮಸ್ ಆಗಿದ್ದು. ಉದಯ ಟಿವಿಯ ಈ ಹಾಸ್ಯ ಪ್ರೋಗ್ರಾಂನಿಂದ ಜನಪ್ರಿಯತೆ ಪಡೆಯುವ ಮುನ್ನ ಸಿಹಿ ಕಹಿ ಚಂದ್ರು ನಿರ್ದೇಶನದ 'ಪಾಪಾ ಪಾಂಡು' ಧಾರಾವಾಹಿಯಲ್ಲಿ ಗಣೇಶ್ ನಟಿಸಿದ್ದರು. ಹಾಗೇ, 'ಯದ್ವಾ ತದ್ವಾ', 'ವಠಾರ' ಸೀರಿಯಲ್ ಗಳಲ್ಲೂ ಗಣೇಶ್ ಕಾಣಿಸಿಕೊಂಡಿದ್ದರು. ಯಶಸ್ವಿ ಹೀರೋ ಆಗಬೇಕು ಎಂಬ ಗಣೇಶ್ ಕನಸು 'ಚೆಲ್ಲಾಟ' ಮತ್ತು 'ಮುಂಗಾರು ಮಳೆ' ಸಿನಿಮಾಗಳ ಮೂಲಕ ನನಸಾಯಿತು.
ದುನಿಯಾ ವಿಜಯ್
ಕನ್ನಡ ಚಿತ್ರರಂಗದ ಯಶಸ್ವಿ ಹೀರೋಗಳ ಪೈಕಿ ದುನಿಯಾ ವಿಜಯ್ ಕೂಡ ಒಬ್ಬರು. 'ದುನಿಯಾ' ಸಿನಿಮಾ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿದವರು ದುನಿಯಾ ವಿಜಯ್. ಚಿತ್ರರಂಗಕ್ಕೆ ಕಾಲಿಡುವ ಮುನ್ನ ನಟ ದುನಿಯಾ ವಿಜಯ್ 'ಪಾಪಾ ಪಾಂಡು' ಸೀರಿಯಲ್ ನಲ್ಲಿ ಪುಟ್ಟ ಪಾತ್ರ ಪೋಷಿಸಿದ್ದರು. ಬಳಿಕ 'ರಂಗ ಎಸ್.ಎಸ್.ಎಲ್.ಸಿ', 'ಜೋಗಿ', 'ಶ್ರೀ' ಸಿನಿಮಾಗಳಲ್ಲಿ ಹೀಗೆ ಬಂದು ಹಾಗೆ ಹೋಗಿದ್ದ ವಿಜಯ್ ನಸೀಬು ಬದಲಿಸಿದ್ದು ಸೂರಿಯ 'ದುನಿಯಾ'.
ರಿಷಿ
'ಆಪರೇಷನ್ ಅಲಮೇಲಮ್ಮ', 'ಕವಲುದಾರಿ' ಎಂಬ ಯಶಸ್ವಿ ಚಿತ್ರಗಳನ್ನು ನೀಡಿ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಟ ರಿಷಿ ಕೂಡ ಸೀರಿಯಲ್ ದುನಿಯಾದಿಂದ ಬಂದವರೇ.! ಚಿತ್ರರಂಗಕ್ಕೆ ಕಾಲಿಡುವ ಮುನ್ನ 'ಅನುರೂಪ' ಎಂಬ ಧಾರಾವಾಹಿಯಲ್ಲಿ ರಿಷಿ ನಟಿಸಿದ್ದರು.
ಇನ್ನೂ ಹಲವರಿದ್ದಾರೆ
ಇವರಷ್ಟೇ ಅಲ್ಲ.. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಂದನ್, ಚಂದು ಗೌಡ, 'ಅಗ್ನಿಸಾಕ್ಷಿ' ಸೀರಿಯಲ್ ಖ್ಯಾತಿಯ ವಿಜಯ್ ಸೂರ್ಯ, 'ಕೃಷ್ಣ ರುಕ್ಮಿಣಿ' ಸೀರಿಯಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಸೇರಿದಂತೆ ಹಲವರು ಟಿವಿಯಿಂದ ಸಿನಿಮಾಗೆ ಜಂಪ್ ಆಗಿ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಒಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಸೀರಿಯಲ್ ಲೋಕ ನೀಡಿರುವ ಕೊಡುಗೆ ಅಪಾರ.