2020 ಫ್ಲ್ಯಾಶ್ ಬ್ಯಾಕ್; ಈ ವರ್ಷ ಮೋಡದ ಮರೆಗೆ ಸರಿದ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದ ತಾರೆಯರು
2020..ಕೊರೊನಾ ಲಾಕ್ ಡೌನ್ ನಿಂದ ವರ್ಷ ಕಳೆದಿದ್ದೇ ಗೊತ್ತಾಗಿಲ್ಲ. ಈ ವರ್ಷ ಇನ್ನೇನು ಮುಗಿಯುತ್ತಾ ಬಂತು. ಚಿತ್ರರಂಗದ ಮಟ್ಟಿಗೆ ಈ ವರ್ಷ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಬಣ್ಣದ ಲೋಕ ಈ ವರ್ಷ ಅನೇಕ ತಾರೆಯರನ್ನು ಕಳೆದುಕೊಂಡಿದೆ.
ತಮಿಳು, ತೆಲುಗು ಮತ್ತು ಮಲಯಾಳಂನ ಹಲವು ಪ್ರತಿಭಾವಂತರು ಈ ವರ್ಷ ಇಹಲೋಕ ತ್ಯಜಿಸಿದರು. ಕೊರೊನಾದಿಂದ ಮೃತಪಟ್ಟರು ಒಂದೆಡೆಯಾದರೆ, ಇನ್ನು ಅನೇಕರು ಜೀವನ ಸಾಕು ಎಂದು ಆತ್ಮಹತ್ಯೆ ಮಾಡಿಕೊಂಡವರು ಇದ್ದಾರೆ. 2020ರಲ್ಲಿ ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ ಚಿತ್ರರಂಗ ಕಂಡ ಸಾವು ನೋವಿನ ಕಹಿ ನೆನಪು ನಿಮ್ಮ ಮುಂದೆ...

ಮಲಯಾಳಂನ ಹಿರಿಯ ನಟಿ ಜಮೀಲಾ ಮಲಿಕ್
ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಜಮೀಲಾ ಮಲಿಕ್ ಜನವರಿ 29ರಂದು ವಿಧಿವಶರಾಗಿದ್ದಾರೆ. 73 ವರ್ಷ ವಯಸ್ಸಿನ ಹಿರಿಯ ನಟಿ ಕೇರಳದ ತಿರುವನಂತಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ವಿಭಿನ್ನ ಮತ್ತು ಪ್ರಯೋಗಾತ್ಮಕ ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಸ್ಥಾನಪಡೆದುಕೊಂಡಿದ್ದ ಜಮೀಲಾ, ಮಲಯಾಳಂ ಮಾತ್ರವಲ್ಲದೇ, ತೆಲುಗು ಮತ್ತು ತಮಿಳು ಭಾಷೆಯ ಚಿತ್ರಗಳಲ್ಲೂ ನಟಿಸಿದ್ದರು.

ಹಿರಿಯ ಗಾಯಕ ಟಿ ಎಸ್ ರಾಘವೇಂದ್ರ
ಹಿರಿಯ ನಟ ಹಾಗೂ ಗಾಯಕ ಟಿ ಎಸ್ ರಾಘವೇಂದ್ರ ಜನವರಿ 30ರಂದು ಕೊನೆಯುಸಿರೆಳೆದರು. ಕೆ. ಬಾಲಚಂದಿರನ್ ನಿರ್ದೇಶನದ ಸಿಂಧು-ಭರವಿ ಚಿತ್ರದಲ್ಲಿ ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಯಿತು. ವಿಕ್ರಮ ಜಮಮನಾಯಗಂ, ಹರಿಚಂದ್ರ, ನೀ ವರುವಾಯ್ ಎನಾ ಅಂತಹ ಪ್ರಮುಖ ಸಿನಿಮಾಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ರಿಲೀಸ್ ಆಗಿದ್ದ ಪೊನ್ ಮೆಗರೈ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ.

ತಮಿಳಿನ ಹಿರಿಯ ನಿರ್ದೇಶಕ, ನಟ ವಿಶ್ವನಾಥ್
ತಮಿಳು ಸಿನಿಮಾರಂಗದ ಹಿರಿಯ ನಟ ಮತ್ತು ನಿರ್ದೇಶಕ ಎ.ಆರ್ ವಿಶ್ವನಾಥ್ ನಿಧನಹೊಂದಿದ್ದು ಇದೇ ವರ್ಷ. 74 ವರ್ಷದ ವಿಶ್ವನಾಥ್ ಮಾರ್ಚ್ 24ರಂದು ಚೆನ್ನೈನಲ್ಲಿ ನಿಧನರಾದರು. ವಿಶು ಹೆಸರಿನಿಂದ ಖ್ಯಾತಿಗಳಿಸಿದ್ದ ವಿಶ್ವನಾಥ್ ನಟನೆ ಮತ್ತು ನಿರ್ದೇಶನದ ಜೊತೆಗೆ ನಾಟಕ, ನಿರೂಪಕ ಸೇರಿದಂತೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿದ್ದರು.

ತಮಿಳು ನಟ ಮತ್ತು ವೈದ್ಯ ಸೇತುರಾಮ್
ತಮಿಳಿನ ನಟ ಮತ್ತು ವೈದ್ಯರಾಗಿದ್ದ ಡಾ.ಸೇತುರಾಮ್ ನಿಧನಹೊಂದಿದ್ದು ಇದೇ ವರ್ಷ. ಚರ್ಮರೋಗ ತಜ್ಞರಾಗಿದ್ದ ಸೇತುರಾಮ್ 36ನೇ ವಯಸ್ಸಿನಲ್ಲೇ ಬಾರದಲೋಕಕ್ಕೆ ಪಯಣ ಬೆಳೆಸಿದರು. ಸೇತು ಎಂದೇ ಖ್ಯಾತಿಗಳಿಸಿದ್ದ ನಟ 2013ರಲ್ಲಿ ಕನ್ನ ಲಡ್ಡು ತಿನ್ನ ಆಸಯ್ಯ ಸಿನಿಮಾಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.

ತಮಿಳು ನಿರ್ದೇಶಕ ಎವಿ ಅರುಣ್ ಪ್ರಸಾದ್
ತಮಿಳಿನ ಯುವ ನಿರ್ದೇಶಕ ಎ.ವಿ ಅರುಣ್ ಪ್ರಸಾದ್ ಅಲಿಯಾಸ್ ವೆಂಕಟ್ ಪಕ್ಕರ್ ನಿಧನಹೊಂದಿದ್ದು ಇದೇ ವರ್ಷ. ಮೇ 15ರಂದು ರಸ್ತೆ ಅಪಘಾತದಲ್ಲಿ ಮೃಪಟ್ಟಿದರು. ಬೈಕ್ ನಲ್ಲಿ ತೆರಳುತ್ತಿದ್ದಾಗ ಲಾರಿಯೊಂದಿಗೆ ಮುಖಾಮುಖಿ ಡಿಕ್ಕಿಯಾಗಿ ಸ್ಳಳದಲ್ಲೇ ಮೃತಪಟ್ಟಿದರು. ಜಿ.ವಿ. ಪ್ರಕಾಶ್ ಮತ್ತು ಗಾಯತ್ರಿ ಸುರೇಶ್ ಪ್ರಮುಖ ತಾರಾಗಣದಲ್ಲಿರುವ '4ಜಿ' ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು. ಅವರ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಿರಲಿಲ್ಲ.

ಹಿರಿಯ ಗಾಯಕ ಎಲ್.ರಾಘವನ್
ಕನ್ನಡ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಹಾಡಿದ್ದ ಖ್ಯಾತ ಗಾಯಕ ಎ.ಎಲ್. ರಾಘವನ್ (87) ಕೊನೆಯುಸಿರೆಳೆದಿದ್ದು ಇದೇ ವರ್ಷ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಮಾರ್ಚ್ ತಿಂಗಳಲ್ಲಿ ಎ.ಎಲ್.ರಾಘವನ್ ನಿಧನರಾದರು. ತಮಿಳಿನಲ್ಲಿ ಹೆಸರಾಂತ ಗಾಯಕರಾಗಿದ್ದ ಅವರು, 'ನೆಂಜಿರಿಕ್ಕುಮ್ ವರೈ' ಚಿತ್ರದ 'ಎಂಗಿರುಂಧಲಮ್ ವಾಳಗಾ' ಮಾಧುರ್ಯಪೂರ್ಣ ದುಃಖದ ಹಾಡಿನ ಮೂಲಕ ಜನಪ್ರಿಯತೆ ಪಡೆದಿದ್ದರು.

ಮಲಯಾಳಂ ಹಿರಿಯ ನಟ ಭಾಗವತರ್
ಮಲಯಾಳಂ ಚಿತ್ರರಂಗದ ಅತ್ಯಂತ ಹಿರಿಯ ನಟ ಪಪ್ಪುಕುಟ್ಟಿ ಭಾಗವತರ್ (107) ನಿಧನ ಹೊಂದಿದ್ದು ಇದೇ ವರ್ಷ. ಭಾಗವತರ್ ಅವರು 'ಕೇರಳ ಸೈಗಲ್' ಎಂದೇ ಖ್ಯಾತರಾಗಿದ್ದರು. 1913ರ ಮಾರ್ಚ್ 29ರಂದು ವ್ಯಪ್ಪಿನ್ ಮಾಲಿಪ್ಪುರಂ ಚಕ್ಕಲಕ್ಕಳ್ ಮೈಕಲ್ ಮತ್ತು ಅನ್ನಮ್ಮಾ ಅವರ ಮಗನಾಗಿ ಜನಿಸಿದ್ದ ಭಾಗವತರ್ ಅವರ ಮೂಲ ಹೆಸರು ಎಂ.ಸಿ. ಜೋಸೆಫ್. 1950ರಲ್ಲಿ ತೆರೆಕಂಡ 'ಪ್ರಸನ್ನ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಸುಮಾರು 25 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ನಿರ್ಮಾಪಕ ಕಮಲಾಕರ ರೆಡ್ಡಿ
ತೆಲುಗಿನ ಸೂಪರ್ ಹಿಟ್ 'ಅರ್ಜುನ್ ರೆಡ್ಡಿ' ಸಿನಿಮಾದ ಸಹ ನಿರ್ಮಾಪಕ ಹಾಗೂ ತೆಲುಗು ಸಿನಿರಂಗದ ಖ್ಯಾತ ವಿತರಕ ಕಮಲಾಕರ ರೆಡ್ಡಿ ನಿಧನ ಹೊಂದಿದ್ದು ಇದೇ ವರ್ಷ. ಆಗಸ್ಟ್ 20ರಂದು ಕಮಲಾಕರ ರೆಡ್ಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದರು. ಕಮಲಾಕರ ರೆಡ್ಡಿ ಹಾಗೂ ನಂದಗೋಪಾಲ ರೆಡ್ಡಿ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಹಾಗಾಗಿ ಇಬ್ಬರೂ ಸಹ ಖಾಸಗಿ ಆಂಬುಲೆನ್ಸ್ ನಲ್ಲಿ ನೆಲ್ಲೂರಿನಿಂದ ಹೈದರಾಬಾದ್ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದರು. ಈ ವೇಳೆ ಮಾರ್ಗಮಧ್ಯದಲ್ಲಿ ಸಂಭವಿಸಿದ ಅಪಘಾತ ಕೊನೆಯುಸಿರೆಳೆದಿದ್ದಾರೆ.

ಮಲಯಾಳಂನ ಖ್ಯಾತ ನಿರ್ದೇಶಕ-ನಿರ್ಮಾಪಕ ಎಬಿ ರಾಜ್
ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ ಎಬಿ ರಾಜ್ ಅಲಿಯಾಸ್ ರಾಜ್ ಆಂಟನಿ (95 ವರ್ಷ) ಭಾಸ್ಕರ್ ಆಗಸ್ಟ್ 23 ರಂದು ಚೆನ್ನೈನಲ್ಲಿ ನಿಧನರಾಗಿದರು. 1940ರ ದಶಕದ ಉತ್ತರಾರ್ಧದಲ್ಲಿ ಟಿ.ಆರ್.ಸುಂದರಾಮ್ ಮಾರ್ಗದರ್ಶನದಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಆರಂಭಿಸಿದ್ದರು. 1951ರಲ್ಲಿ ಶ್ರೀಲಂಕಾಕ್ಕೆ ಹೋದ ರಾಜ್ 10 ವರ್ಷಗಳ ಕಾಲ ತಂಗಿದ್ದರು. ಎಬಿ ರಾಜ್ ಅವರು ಸುಮಾರು 11 ಸಿಂಹಳೀಯ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ ಎಂದು ತಿಳಿದುಬಂದಿದೆ.

ಹಾಸ್ಯ ನಟ ಜಯಪ್ರಕಾಶ್ ರೆಡ್ಡಿ
ತೆಲುಗು ಸಿನಿಮಾರಂಗದ ಖ್ಯಾತ ಹಾಸ್ಯ ನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ಈ ವರ್ಷವೇ ನಿಧನರಾಗಿದ್ದಾರೆ. 74 ವರ್ಷದ ಜಯಪ್ರಕಾಶ್ ಸೆಪ್ಟಂಬರ್ 8ರಂದು ಆಂಧ್ರ ಪ್ರದೇಶದ ಗುಂಟೂರಿನ ತಮ್ಮ ನಿವಾಸದಲ್ಲಿ ಸಾವನ್ನಪ್ಪಿದರು. ಬಾತ್ ರೂಮಿನಲ್ಲಿ ಕುಸಿದು ಬಿದ್ದ ಜಯಪ್ರಕಾಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮೊದಲೇ ಕೊನೆಯುಸಿರೆಳೆದಿದ್ದಾರೆ. 1988ರಲ್ಲಿ 'ಬ್ರಹ್ಮ ಪುತ್ರಡು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಜಯಪ್ರಕಾಶ್ 100ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಟಿ ಶ್ರಾವಣಿ ಕೊಂಡಪಲ್ಲಿ
ತೆಲುಗು ಕಿರುತೆರೆಯ ಖ್ಯಾತ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಇದೇ ವರ್ಷ. ಹೈದರಾಬಾದ್ ನ ತನ್ನ ನಿವಾಸದಲ್ಲಿ ಶ್ರಾವಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26 ವರ್ಷದ ನಟಿ ಶ್ರಾವಣಿ ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ಮೂಲದವರು. ಶ್ರಾವಣಿ ಬಣ್ಣದ ಲೋಕಕ್ಕೆ ಕಾಲಿಟ್ಟು 8 ವರ್ಷಗಳಾಗಿದೆ. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ತೆಲುಗು ಕಿರುತೆರೆ ಪ್ರಿಯರ ಮನೆ ಮಾತಾಗಿದ್ದರು.

ಹಾಸ್ಯ ನಟ ವಿಡಿವೇಲು ಬಾಲಾಜಿ
ತಮಿಳು ಕಿರುತೆರೆಯ ಖ್ಯಾತ ಹಾಸ್ಯ ನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ನಿಧನ ಹೊಂದಿದ್ದು ಇದೇ ವರ್ಷ. 45 ವರ್ಷದ ನಟ ಬಾಲಾಜಿ ಸೆಪ್ಟಂಬರ್ 10 ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವೆಂಟಿಲೇಟರ್ ನಲ್ಲಿ ಬಾಲಾಜಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಖಾಸಗಿ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ, ಕುಟುಂಬದವರು ಬಾಲಾಜಿಯನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ನಟ ವಿಜಯ್ ಸೇತುಪತಿ ವಡಿವೇಲು ಬಾಲಾಜಿ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.

ಮಲಯಾಳಂ ನಟ ಪ್ರಬೀಶ್ ಚಕ್ಕಲಕ್ಕಲ್
ಮಲಯಾಳಂ ನಟ ಪ್ರಬೀಶ್ ಚಕ್ಕಲಕ್ಕಲ್ (44) ಚಿತ್ರೀಕರಣ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದು ಇದೇ ವರ್ಷ. ಕೇರಳದ ಕೊಚ್ಚಿಯಲ್ಲಿ 'ಕೊಚಿನ್ ಕೊಲಾಜ್' ಚಿತ್ರದ ಚಿತ್ರೀಕರಣ ಮಾಡುತ್ತಿರುವ ವೇಳೆ ಈ ಘಟನೆ ಸಂಭವಿಸಿತ್ತು. ಕೂಡಲೇ ಪ್ರಬೀಶ್ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮೊದಲೇ ನಟ ಪ್ರಬೀಶ್ ಕೊನೆಯುಸಿರೆಳೆದಿದರು.

ಹಾಸ್ಯ ನಟ ವೇಣುಗೋಪಾಲ್
ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟ ಕೊಸುರಿ ವೇಣುಗೋಪಾಲ್ ನಿಧನ ಹೊಂದಿದ್ದು ಇದೇ ವರ್ಷ. ಕೋವಿಡ್-19 ನಿಂದ ಬಳಲುತ್ತಿದ್ದ ವೇಣುಗೋಪಾಲ್ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಸೆಪ್ಟಂಬರ್ 24ರಂದು ಕೊನೆಯುಸಿರೆಳೆದಿದ್ದಾರೆ. ಕೆಲಸದ ಜೊತೆಗೆ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದರು. ನಿವೃತ್ತರಾದ ಬಳಿಕ ನಟನೆಯಲ್ಲಿ ಸಕ್ರೀಯರಾಗಿದ್ದರು.

ತಮಿಳಿನ ನಿರ್ಮಾಪಕ ಎಸ್ ಕೆ ಕೃಷ್ಣಕಾಂತ್
ತಮಿಳು ಸಿನಿಮಾರಂಗದ ಖ್ಯಾತ ನಿರ್ಮಾಪಕ ಕೃಷ್ಣಕಾಂತ್ ನಿಧನಹೊಂದಿದ್ದು ಇದ ವರ್ಷ. 52 ವರ್ಷದ ಕೃಷ್ಣಕಾಂತ್ ಹೃದಯಾಘಾತದಿಂದ ಸೆಪ್ಟಂಬರ್ 30ರಂದು ಕೊನೆಯುಸಿರೆಳೆದಿದ್ದಾರೆ. ತಮಿಳಿನ ಕ್ಯಾತ ನಟರಾದ ಧನುಶ್, ಸೂರ್ಯಾ, ಚಿಯಾನ್ ವಿಕ್ರಂ, ಸಿಂಭು ಇನ್ನೂ ಹಲವು ಸ್ಟಾರ್ ನಟರ ಸಿನಿಮಾ ಸಿನಿಮಾಗಳನ್ನು ಎಸ್ಕೆ ಕೃಷ್ಣಕಾಂತ್ ನಿರ್ಮಿಸಿದ್ದಾರೆ.

ಸಂಕಲನಕಾರ ಕೋಲ ಭಾಸ್ಕರ್
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ತಂತ್ರಜ್ಞ, ಸಂಕಲನಕಾರ ಕೋಲ ಭಾಸ್ಕರ್ (55) ನಿಧನ ಹೊಂದಿದ್ದು ಇದೇ ವರ್ಷ. ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಸಂಕಲನಕಾರನಾಗಿ ಕಾರ್ಯನಿರ್ವಹಿಸಿದ್ದ ಭಾಸ್ಕರ್ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಖುಷಿ' ಚಿತ್ರಕ್ಕೆ ಸಂಕಲನ ಮಾಡಿದ್ದು ಇದೇ ಭಾಸ್ಕರ್, 7ಜಿ ಬೃಂದಾವನ ಕಾಲೋನಿ, ಆಡವಾರಿ ಮಾಟಲಕೂ ಅರ್ಥಾಲೇ ವೇರೆಲೆ, ಕಂಡೇನ್ ಕಾದಲೈ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ವಂಶಿ ರಾಜೇಶ್ ಕೊಂಡವೀಟಿ
ತೆಲುಗು ಚಿತ್ರರಂಗದ ಯುವ ಬರಹಗಾರ ವಂಶಿ ರಾಜೇಶ್ ಕೊಂಡವೀಟಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು ಇದೇ ವರ್ಷ. ನವೆಂಬರ್ 12 ರಂದು ರಾತ್ರಿ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಂಶಿ ರಾಜೇಶ್ ಕೊಂಡವೀಟಿ ಬಹಳ ವರ್ಷದಿಂದ ತೆಲುಗು ಇಂಡಸ್ಟ್ರಿಯಲ್ಲಿ ಬರಹಗಾರನಾಗಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ತೆರೆಕಂಡಿದ್ದ 'ಮಿಸ್ಟರ್' ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದರು. ರವಿತೇಜ ನಟನೆಯ ಅಮರ್ ಅಕ್ಬರ್ ಆಂಟೋನಿ ಚಿತ್ರದಲ್ಲಿ ಕೆಲಸ ಮಾಡಿದ್ದರು.

ನಟ ನಿರ್ಮಾಪಕ ಯಾದಾ ಕೃಷ್ಣ
ತೆಲುಗು ನಟ-ನಿರ್ಮಾಪಕ ಯಾದ ಕೃಷ್ಣ ಡಿಸೆಂಬರ್ 3 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 61 ವರ್ಷ ವಯಸ್ಸಾಗಿತ್ತು. 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದ ಯಾದಾ ಕೃಷ್ಣ, ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿಯೂ ನಟಿಸಿದ್ದರು. 1990 ರಲ್ಲಿ ನಟನೆ ಪ್ರಾರಂಭಿಸಿದ್ದ ಯಾದಾ ಕೃಷ್ಣ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಒಳ್ಳೆಯ ಹಾಸ್ಯ ಸಿನಿಮಾಗಳನ್ನು ಸಹ ಅವರು ತೆಲುಗು ಚಿತ್ರರಂಗಕ್ಕೆ ನೀಡಿದ್ದಾರೆ. ನಟನೆ ಜೊತೆಗೆ ಅವರು ಕೆಲವು ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.

ಕಿರುತೆರೆ ನಟಿ ವಿಜೆ ಚಿತ್ರಾ ಆತ್ಮಹತ್ಯೆ
ತಮಿಳು ಕಿರುತೆರೆ ಲೋಕದ ಜನಪ್ರಿಯ ನಟಿ ವಿಜೆ ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದು ಇದೇ ವರ್ಷ. 28 ವರ್ಷದ ಚಿತ್ರಾ ಚೆನ್ನೈನ ನಜರೆತ್ ಪೆಟ್ಟೈನ ಪಂಚತಾರಾ ಹೋಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮಿಳು ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದ್ದ ಪಾಂಡಿಯನ್ ಸ್ಟೋರ್ಸ್ ನ ಮುಲೈ ಪಾತ್ರದ ಮೂಲಕ ಚಿತ್ರಾ ಹೆಚ್ಚು ಖ್ಯಾತಿಗಳಿಸಿದ್ದರು. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸುವ ಜೊತೆೆಗೆ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.


Click it and Unblock the Notifications











