ರಾಜ್ಯ ಪ್ರಶಸ್ತಿ ಪಡೆಯಬೇಕೆಂಬ ಕಲಾಮಯೂರಿ ಮಂಜುಳಾ ಕನಸು ನನಸಾಗಲೇ ಇಲ್ಲ, ಬೆಳ್ಳಿತೆರೆಯ ಬಜಾರಿಯ ದುರಂತ ಕಥೆ...!
ಕನ್ನಡ ಚಿತ್ರರಂಗದಲ್ಲಿ ಬೆಳ್ಳಿತೆರೆಯ ಬಜಾರಿ ಎಂದೇ ಖ್ಯಾತರಾದವರು ಮಂಜುಳಾ. ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಡಾ.ರಾಜ್ ಕುಮಾರ್ರವರಿಗೆ ಸರಿ ಸಮಾನವಾಗಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಮಂಜುಳಾ ಈ ಚಿತ್ರದ ನಂತರ ಹತ್ತಾರು ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಇಂದಿಗೂ ಮಂಜುಳಾ ಅವರನ್ನು ದುರ್ಗಿಯ ಪಾತ್ರದಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಾಗುವುದಿಲ್ಲ.
'ಸಂಪತ್ತಿಗೆ ಸವಾಲ್'ನಲ್ಲಿ ಹಳ್ಳಿಯ ಬಜಾರಿಯಾಗಿ, 'ಎರಡು ಕನಸು' ಚಿತ್ರದಲ್ಲಿ ಹದಿಹರೆಯದ ಪ್ರೇಮಿಯಾಗಿ, 'ನಿನಗಾಗಿ ನಾನು' ಚಿತ್ರದಲ್ಲಿ ಉನ್ಮತ್ತ ಚೆಲುವೆಯಾಗಿ, 'ಮಯೂರ'ದಲ್ಲಿ ರಾಜಕುಮಾರಿಯಾಗಿ ಚಿತ್ರರಸಿಕರ ಹೃದಯದಲ್ಲಿ ಮೋಹಕ ತರಂಗಗಳನ್ನೆಬ್ಬಿಸಿದ್ದ ಮಂಜುಳಾ ಸರಿಸುಮಾರು ಒಂದು ದಶಕದ ಕಾಲ ಕನ್ನಡ ಚಿತ್ರರಂಗದ ಮುಖ್ಯ ನಟಿಯಾಗಿ,
ಜನಪ್ರಿಯ ತಾರೆಯಾಗಿ ಮೆರೆದವರು ಮಂಜುಳಾ.

ಇನ್ನೂ ಚಿತ್ರರಂಗದಲ್ಲಿ ಖ್ಯಾತಿಯ ಶಿಖರವನ್ನೇರಿದರು ಕೂಡ ಮಂಜುಳಾ, ಪ್ರಭಾತ್ ಸಂಸ್ಥೆ ಕರೆದಾಗೆಲ್ಲ ಬಾಗಲಕೋಟೆ, ಕುಶಾಲನಗರಕ್ಕೆ ತೆರಳಿ ನಾಟಕಗಳಲ್ಲಿ ಪಾತ್ರವನ್ನು ಮಾಡುತ್ತಿದ್ದರು ಮಂಜುಳಾ. ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಮಂಜುಳಾ ತುಂಬಾ ಜನಪ್ರಿಯರಾಗಿದ್ದರು. ಇದಕ್ಕೆ ಒಂದು ಉದಾಹರಣೆ ಎಂಬಂತೆ 1982ರ ಏಪ್ರಿಲ್ ನಲ್ಲಿ ಹೆಚ್ಚು ಕಡಿಮೆ ಆರು ಸಾವಿರಕ್ಕೂ ಹೆಚ್ಚಿನ ಅಭಿಮಾನಿಗಳು ಸೇರಿ ನವಲಗುಂದದಲ್ಲಿ ಮಂಜುಳಾ ಅವರ ದೊಡ್ಡ ಮೆರವಣಿಗೆಯನ್ನು ಮಾಡಿದ್ದರು. 'ಕಲಾಮಯೂರಿ' ಬಿರುದನ್ನು ಕೊಟ್ಟು ಸನ್ಮಾನಿಸಿದ್ದರು.
ಆದರೆ, ತಮ್ಮ ಒಂದು ದಶಕಕ್ಕೂ ಮೀರಿದ ವೃತ್ತಿ ಬದುಕಿನಲ್ಲಿ ಸುಮಾರು ನೂರು ಸಿನಿಮಾಗಳನ್ನು ಮಂಜುಳಾ ಮಾಡಿದ್ದರೂ ಅವರಿಗೆ ಸಿಕ್ಕಿದ್ದು ಕೇವಲ ಒಂದು ಪ್ರಶಸ್ತಿ ಮಾತ್ರ. ಅದು ಎರಡು ಕನಸು ಚಿತ್ರದಲ್ಲಿನ ಅಭಿನಯಕ್ಕೆ ದೊರೆತ ಫಿಲ್ಮ್ ಫೇರ್ ಪ್ರಶಸ್ತಿ. ಈ ಪ್ರಶಸ್ತಿ ವಿಚಾರದಲ್ಲಿ ಮಂಜುಳಾ ಅವರಿಗೆ ನೋವು ಇತ್ತು. ರಾಜ್ಯ ಪ್ರಶಸ್ತಿ ಪಡೆಯುವ ಬಯಕೆ ಮಂಜುಳಾ ಅವರಿಗೆ ಇತ್ತು.

ತಮ್ಮ ಚಿತ್ರಕ್ಕೆ ಮತ್ತು ಪಾತ್ರಕ್ಕೆ ಪ್ರಶಂಸೆ ಮಹಾಪೂರ ಹರಿದು ಬಂದಾಗ ಈ ಬಾರಿಯಾದರೂ ರಾಜ್ಯ ಪ್ರಶಸ್ತಿ ಬರಬಹುದೆಂದೇ ಮಂಜುಳಾ ಕಾಯುತ್ತಿದ್ದರು. ಆ ನಂತರ ನಿರಾಸೆಗೊಳ್ಳುತ್ತಿದ್ದರು.
ಇನ್ನೂ ಮಹಾ ನೇರವಂತಿಕೆಯ ದಿಟ್ಟೆಯಾಗಿದ್ದ ಮಂಜುಳಾ ಸೂಕ್ಷ್ಮಮತಿ ಆಗಿದ್ದರು. ಬಜಾರಿಯಂತೆ ಕಾಣುತ್ತಿದ್ದ ಮಂಜುಳಾ ಭಾವುಕ ಜೀವಿಯಾಗಿದ್ದರು. ಮಂಜುಳಾ ಅವರ ಅಂತರಂಗವನ್ನು ಅರಿತಿದ್ದವರು ತೀರಾ ವಿರಳ. ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಾಥ್ ಅವರನ್ನು ಹೊರತು ಪಡಿಸಿ ಚಿತ್ರರಂಗದಲ್ಲಾಗಲಿ, ಹೊರಗಾಗಲಿ ಅವರಿಗೆ ಮನಸ್ಸು ಬಿಚ್ಚಿ ಮಾತನಾಡುವಂಥ ಗೆಳೆಯ ಅಥವಾ ಗೆಳತಿಯರಿರಲಿಲ್ಲ ಎಂಬ ಮಾತನ್ನು ಹಿಂದೆ ಚಿತ್ರರಂಗದ ಅನೇಕರು ಮಂಜುಳಾ ಅವರನ್ನು ನೆನಪು ಮಾಡಿಕೊಂಡು ಹೇಳಿದ್ದಾರೆ.
ಇನ್ನೂ ಗಂಡ ಅಮೃತಂ ಮದ್ರಾಸ್ನಿಂದ ಆಗೊಮ್ಮೆ ಈಗೊಮ್ಮೆ ಬಂದುಹೋಗುತ್ತಿದ್ದರು. ಮಂಜುಳಾರ ತಂಗಿಯರು, ತಮ್ಮಂದಿರು ಮದುವೆಯಾಗಿ ಅವರವರ ಬದುಕಿನ ದಾರಿ ಹಿಡಿದಿದ್ದರೆ, ಅವರ ತಂದೆ-ತಾಯಿ ಹೊನ್ನೇನಹಳ್ಳಿ ಸೇರಿಕೊಂಡಿದ್ದರು. ಈ ಎಲ್ಲ ಕಾರಣಗಳಿಂದ ನಿಜವಾದ ಪ್ರೀತಿ, ಸ್ನೇಹಗಳು ಮಂಜುಳಾರ ಪಾಲಿಗೆ ಕನಸಾಗಿದ್ದವು. ಜೀವನಪ್ರೀತಿಯ ಬುಗ್ಗೆಯಾಗಿದ್ದ ಮಂಜುಳಾ ಒಂದು ಹಿಡಿ ಪ್ರೀತಿಗಾಗಿ, ಸಾಂತ್ವನದ ನುಡಿಗಾಗಿ ಹಪಹಪಿಸುತ್ತಿದ್ದರು. ಈ ಪರಿಸ್ಥಿತಿಯನ್ನು ಮೀರಲೆಂದೋ ಏನೋ ಮಂಜುಳಾ ಅವರು ಹೊನ್ನೇನಹಳ್ಳಿಯ ಬಳಿ 20ಎಕರೆ ಜಮೀನು ಕೊಂಡಿದ್ದರು. ದೈವ ಭಕ್ತೆಯಾಗಿದ್ದ ಮಂಜುಳಾ ತಮ್ಮ ಊರಿನಲ್ಲಿ ಈಶ್ವರನ ದೇವಸ್ಥಾನವನ್ನೂ ಕೂಡ ಕಟ್ಟಿಸಿದ್ದರು.
ಇದೇ ಸಮಯದಲ್ಲಿ ಜೂನ್ 5 1984ರಂದು ಮಂಜುಳಾ ಅವರಿಗೆ ಗಂಡು ಮಗ ಜನಿಸಿದ. ಆ ಮಗುಗೆ ಮಂಜುಳಾ ಇಟ್ಟಿದ್ದ ಹೆಸರು ಅಭಿಷೇಕ್. ಮಗನ ಖುಷಿಯಲ್ಲಿಯೇ ತನ್ನ ಖುಷಿಯನ್ನು ಮಂಜುಳಾ ಕಾಣುತ್ತಿದ್ದಾಗ್ಲೇ ದುರಂತವೊಂದು ಸಂಭವಿಸಿತು. ಮಂಜುಳಾ ಅವರನ್ನು ಬಲಿ ಪಡೆಯಿತು. ಹೌದು, ಅದು 1986ರ ಸೆಪ್ಟೆಂಬರ್ ತಿಂಗಳ ಐದನೇ ತಾರೀಖಿನ ದಿನ. ಮಗುವಿಗಾಗಿ ಹಾಲು ಕಾಯಿಸಲು ಮಂಜುಳಾ ಅಡುಗೆ ಮನೆಗೆ ಹೋಗಿದ್ದರು. ಕೆಲವೇ ಕ್ಷಣದಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಮಂಜುಳಾ ತೀವ್ರವಾಗಿ ಸುಟ್ಟು ಹೋಗಿದ್ದರು. ಮೊದಲು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ನಂತರ ಸೇಂಟ್ಜಾನ್ಸ್ ಆಸ್ಪತ್ರೆಗೆ ವರ್ಗಾಯಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಒಂದು ವಾರ ಕಾಲ ಬದುಕು-ಸಾವಿನ ಹೋರಾಟ ನಡೆಸಿದ ಮಂಜುಳಾ ಬದುಕುಳಿಯಲಿಲ್ಲ. ತನ್ನ ಬಜಾರಿತನದಿಂದ ಎಂಥವರನ್ನೂ ಹೆದರಿಸುತ್ತಿದ್ದ ಮಂಜುಳಾ ಸಾವಿನ ವಿರುದ್ಧ ಸೆಣೆಸಲಾಗದೆ ಕೊನೆಗೆ ಸೆಪ್ಟೆಂಬರ್ 12ರಂದು ಸೋಲೊಪ್ಪಿಕೊಂಡರು. ಹೊನ್ನೇನಹಳ್ಳಿಯ ಅವರ ಪ್ರೀತಿಯ ತೋಟದಲ್ಲಿಯೇ ಮಣ್ಣಲ್ಲಿ ಮಣ್ಣಾದರು.
ಹೀಗೆ ಮಂಜುಳಾ ಕನ್ನಡಿಗರನ್ನು ಅಗಲಿ ಹತ್ ಹತ್ರ ನಲವತ್ತು ವರ್ಷಗಳಾಗುತ್ತ ಬರುತ್ತಿವೆ. ಆದರೆ. ಇವತ್ತು ಕೂಡ ಮಂಜುಳಾ ಸಾವಿನ ಕುರಿತು ಅನೇಕರಲ್ಲಿ ಅನುಮಾನ ಇದ್ದೇ ಇದೆ. ಅದು ಸಹಜವಾದ ಸಾವೋ, ಆತ್ಮಹತ್ಯೆಯೋ, ಕೊಲೆಯೋ ಎಂಬ ಪ್ರಶ್ನೆ ಆ ಕಾಲದ ಸಿನಿ ಪ್ರಿಯರನ್ನು ಇನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಕಾಲ ಕಾಲಕ್ಕೆ ಹಲವರು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ ಕೂಡ. ಆದರೂ ಕೂಡ ಅನುಮಾನ ಇನ್ನೂ ದೂರವಾಗಿಲ್ಲ.


Click it and Unblock the Notifications











