Jackie Re-release: 'ಜಾಕಿ' ಚಿತ್ರದ ಇಡ್ಲಿ ಚಟ್ನಿ ಚಿಲ್ಟು ಪೂಜಾರಿ ಈಗ ಹೇಗಿದ್ದಾರೆ ಗೊತ್ತಾ? ಫುಲ್ ಫೇಮಸ್ ಕಣ್ರೀ
ಪುನೀತ್ ರಾಜ್ಕುಮಾರ್ ಅಭಿನಯದ 'ಜಾಕಿ' ಚಿತ್ರವನ್ನು ಕನ್ನಡ ಸಿನಿಕರು ಮರೆಯಲು ಸಾಧ್ಯವಿಲ್ಲ. ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾ 14 ವರ್ಷಗಳಿಂದ ಸಂಚಲನ ಸೃಷ್ಟಿಸಿತ್ತು. ಪೂರ್ಣಿಮಾ ಎಂಟರ್ಪ್ರೈಸಸರ್ ಬ್ಯಾನರ್ನಲ್ಲಿ ಪಾರ್ವತಮ್ಮ ರಾಜ್ಕುಮಾರ್ ಸಿನಿಮಾ ನಿರ್ಮಿಸಿದ್ದರು.
ಈ ವರ್ಷ ಅಪ್ಪು ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಾಕಿ' ಸಿನಿಮಾ ಹೊಸ ರೂಪದಲ್ಲಿ ರೀ ರಿಲೀಸ್ ಆಗುತ್ತಿದೆ. ಕೆಆರ್ಜಿ ಸ್ಟುಡಿಯೋಸ್ ಸಂಸ್ಥೆ ದೊಡ್ಟಮಟ್ಟದಲ್ಲಿ ಸಿನಿಮಾವನ್ನು ಮತ್ತೆ ತೆರೆಗೆ ತರಲು ತಯಾರಿ ನಡೆಸಿದೆ. ಮಾರ್ಚ್ 15ಕ್ಕೆ ಸಿನಿಮಾ 100 ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ತೆರೆಕಾಣಲಿದೆ, ವಿದೇಶಗಳಲ್ಲಿ ಕೂಡ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಮತ್ತೆ ಜಾಕಿಯನ್ನು ಬೆಳ್ಳಿ ಪರದೆಯಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

'ಜಾಕಿ' ಚಿತ್ರದ ಪ್ರತಿ ಹಾಡು, ಸನ್ನಿವೇಶ, ಪಾತ್ರಗಳು ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಸೀದಾಸಾದ ಹೈದನಾಗಿ ಪುನೀತ್ ರಾಜ್ಕುಮಾರ್ ರಗಡ್ ಲುಕ್ನಲ್ಲಿ ನಟಿಸಿ ಗೆದ್ದಿದ್ದರು. ಆರಂಭದಿಂದ ಪೊಲೀಸರನ್ನು ಕಂಡರೆ ಓಡಿ ಹೋಗುವ ಜಾಕಿ ಕೊನೆಗೆ ಪೊಲೀಸ್ ಇನ್ಫಾರ್ಮರ್ ಆಗಿ ಕೆಲಸ ಮಾಡುವ ಕಥೆ ಚಿತ್ರದಲ್ಲಿದೆ. ಬೆಳ್ಳಿಗೆರೆಯ ಜಾಕಿ ತಾನು ಮಾಡದ ತಪ್ಪನ್ನು ಸರಿಪಡೆಸಿಕೊಳ್ಳಲು ಬೆಂಗಳೂರಿನವರೆಗೂ ಬಂದು ಏನೆಲ್ಲಾ ಆಗಿ ಕೊನೆಗೆ ಶುಭಂ ಕಾರ್ಡ್ ಬೀಳುತ್ತದೆ.
ಜಾಕಿ ತಾಯಿಯಾಗಿ ಹಿರಿಯ ನಟಿ ಸುಮಿತ್ರ, ಪ್ರೇಯಸಿಯಾಗಿ ಲಕ್ಷ್ಮಿ ಆಗಿ ಭಾವನಾ ಕಾಣಿಸಿಕೊಂಡಿದ್ದರು. ಇನ್ನು ಕಲಾಸಿಪಾಳ್ಯದ ಪೊಲೀಸ್ ಕಾನ್ಸ್ಸ್ಟೇಬರ್ ಮೀಸೆ ಭೀಮಣ್ಣ ಆಗಿ ರಂಗಾಯಣ ರಘು ಲವಲವಿಕೆಯ ನಟನೆ ಚಿತ್ರಕ್ಕೆ ಪ್ಲಸ್ ಆಗಿತ್ತು. ಮೀಸೆ ಭೀಮಣ್ಣ ಮಗನ ಪಾತ್ರದಲ್ಲಿ ಬಾಲನಟನಾಗಿ ಅನಿರುದ್ಧ ಶಾಸ್ತ್ರಿ ಅಂದು ನಟಿಸಿದ್ದರು. ಕೇವರಲ ಒಂದೆರಡು ಸನ್ನಿವೇಶಗಳಲ್ಲಿ ಕೆಲವೇ ಸೆಕೆಂಡ್ಗಳ ಕಾಲ ಬಂದು ಹೋಗುವ ಈ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.
ಜಾಕಿ ಮೀಸೆ ಭೀಮಣ್ಣ ಮನೆಗೆ ಹೋದಾಗ ಎದುರಿಗೆ ಸಿಲುಕುವ ಅವರ ಮಗನನ್ನು ಚಿಲ್ಟು ಪೂಜಾರಿ ಎಂದೇ ಜಾಕಿ ಮಾತನಾಡಿಸುತ್ತಾನೆ. ಇದೊಂದೇ ಸನ್ನಿವೇಶದಲ್ಲಿ ಅನಿರುದ್ಧ ಗಮನ ಸೆಳೆದಿದ್ದರು. ಭೀಮಣ್ಣನ ಮನೆಗೆ ಹೋಗಿ ಬಂದ ಬಳಿಕ ಜಾಕಿ ಮಾತನಾಡುತ್ತಾ "ಸರ್ ನಿಮ್ಮಮಗ ಇಡ್ಲಿ ತಿಂದು ಚಟ್ನಿನ ಹಣೆಗೆ ಎದೆಗೆಲ್ಲಾ ಹಚ್ಚಿಕೊಂಡುಬಿಟ್ಟಿದ್ದ" ಎಂದು ಅಪ್ಪು ಹೇಳಿದ್ದ ಡೈಲಾಗ್ಗೆ ಥಿಯೇಟರ್ಗಳಲ್ಲಿ ಶಿಳ್ಳೆ ಚಪ್ಪಾಳೆ ಬಿದ್ದಿತ್ತು. ಅದೊಂದೇ ಡೈಲಾಗ್ನಿಂದ ಅನಿರುದ್ಧ ಶಾಸ್ತ್ರಿ ಪ್ರೇಕ್ಷಕರ ನೆನಪಿನಲ್ಲಿ ಉಳಿದುಬಿಟ್ಟಿದ್ದಾರೆ.
ಈ ವಿಚಾರವನ್ನು ಸಾಕಷ್ಟು ಬಾರಿ ಅನಿರುದ್ಧ ಶಾಸ್ತ್ರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ಜಾಕಿ' ಸಿನಿಮಾ ರೀ ರಿಲೀಸ್ ಆಗುತ್ತಿರುವ ಸಮಯದಲ್ಲಿ ಚಿತ್ರದ ಸಣ್ಣ ಮೇಕಿಂಗ್ ಝಲಕ್ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. "ಮಾರ್ಚ್ 15ಕ್ಕೆ ಜಾಕಿ ಸಿನಿಮಾ ಮತ್ತೆ ಬರ್ತಿದೆ. ಅಪ್ಪು ಸರ್ ಎಂದೆಂದಿಗೂ ನಮ್ಮೊಂದಿಗೆ. ಅಪ್ಪು ಜೊತೆ ಜಾಕಿ, ವಂಶಿ ಸಿನಿಮಾಗಳಲ್ಲಿ ನಟಿಸಿದ್ದು ನನ್ನ ಅದೃಷ್ಟ" ಎಂದಿ ಬರೆದುಕೊಂಡಿದ್ದಾರೆ.
ಚಿಕ್ಕಂದಿಂದಲೂ ದೊಡ್ಡ ಗಾಯಕರಾಗಬೇಕು ಎಂದು ಕನಸು ಕಂಡವರು ಅನಿರುದ್ಧ ಶಾಸ್ತ್ರಿ. 'ಸರಿಗಮಪ' ಹಾಗೂ 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋಗಳಲ್ಲಿ ಕೂಡ ಚಿಕ್ಕಂದಿನಲ್ಲೇ ಸ್ಪರ್ಧಿಸಿ ಗಮನ ಸೆಳೆದಿದ್ದರು. ಕೆಲ ಸಿನಿಮಾಗಳಲ್ಲಿ ಬಾಲನಟನಾಗಿ ನಟಿಸಿ ಮೋಡಿ ಮಾಡಿದ್ದರು. ಇಂದು ಅನಿರುದ್ಧ ಶಾಸ್ತ್ರಿ ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕರಾಗಿ ಹೊರ ಹೊಮ್ಮಿದ್ದಾರೆ. ಹಲವು ಹಿಟ್ ಗೀತೆಗಳನ್ನು ಹಾಡುತ್ತಿದ್ದಾರೆ. ದರ್ಶನ್ ನಟನೆಯ 'ಕಾಟೇರ' ಚಿತ್ರದ ಥೀಮ್ ಸಾಂಗ್ ಹಾಡಿ ಇತ್ತೀಚೆಗೆ ಸದ್ದು ಮಾಡಿದ್ದರು. ಸೂಪರ್ ಹಿಟ್ 'ಜಾಕಿ' ಚಿತ್ರದ ರೀರಿಲೀಸ್ಗಾಗಿ ಸದ್ಯ ಕಾಯುತ್ತಿದ್ದಾರೆ.


Click it and Unblock the Notifications











